ವಿಜಯ ದರ್ಪಣ ನ್ಯೂಸ್….
ಮಾವು-ಹಲಸು ಮೇಳದಲ್ಲಿ ಗ್ರಾಹಕರನ್ನು ಕಣ್ಮನ ಸೆಳೆಯುವ ವಿವಿಧ ತಳಿಯ ಮಾವು
——————————————
ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಹಣ್ಣುಗಳ ಮಾರಾಟ: ಕೆ.ಹೆಚ್ ಮುನಿಯಪ್ಪ

ದೇವನಹಳ್ಳಿ ಬೆಂ.ಗ್ರಾ.ಜಿಲ್ಲೆ.ಜೂನ್ 05:
ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ದೃಷ್ಟಿಯಿಂದ ಮಾವು-ಹಲಸು ಮೇಳ ಆಯೋಜಿಸಲಾಗಿದೆ. ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಹಣ್ಣುಗಳು ಲಭ್ಯವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಖರೀದಿಸಿ ಎಂದು ಸಂಪುಟ ದರ್ಜೆ ಸಚಿವರಾದ ಕೆ.ಹೆಚ್ ಮುನಿಯಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿ ಟೌನ್ ನ ರಾಣಿ ಕ್ರಾಸ್ ಬಳಿ ಆಯೋಜಿಸಿದ್ದ ಮೂರು ದಿನಗಳ ಜಿಲ್ಲಾ ಮಟ್ಟದ ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯ ಮಾವು, ಹಲಸು ಹಾಗೂ ಇತರೆ ಹಣ್ಣುಗಳನ್ನು ಬೆಳೆಯುತ್ತಿರುವ ರೈತರಿಗೆ ಮಾರುಕಟ್ಟೆ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಣ್ಣುಗಳು ಸಿಗುವಂತೆ ಮಾಡಲು ಮೇಳ ಆಯೋಜನೆ ಮಾಡಲಾಗಿದೆ.
ವಿವಿಧ ತಳಿಯ ಮಾವು, ಹಲಸು, ನೇರಳೆ ಹಾಗೂ ಇತರೆ ಹಣ್ಣುಗಳ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ನಿಗದಿ ಮಾಡಿರುವ ಬೆಲೆಯಲ್ಲಿ ರಿಯಾಯಿತಿ ದರದಲ್ಲಿ ಗ್ರಾಹಕರು ಹಣ್ಣುಗಳನ್ನು ಖರೀದಿ ಮಾಡಬಹುದಾಗಿದೆ ಎಂದರು.
ಮೇಳವು ಜೂನ್ 07 ವರೆಗೆ ಅಂದರೆ ಭಾನುವಾರದವರೆಗೆ ಇರಲಿದ್ದು, ಶನಿವಾರ, ಭಾನುವಾರ ರಜಾ ದಿನ ಸಂಧರ್ಭದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ರೈತರಿಂದ ನೇರವಾಗಿ ಹಣ್ಣುಗಳ ಖರೀದಿ ಮಾಡಲು ಉತ್ತಮ ಅವಕಾಶ ಇದಾಗಿದೆ ಎಂದು ಹೇಳಿದರು.
ಮಾವು ಒಂದು ಮಳೆಯಾಶ್ರಿತ ಬೆಳೆ. ಮಾವು ಫಸಲು ಆರಂಭವಾಗುವ ಸಂದರ್ಭದಲ್ಲಿ ರೈತರ ತೋಟಗಳಿಗೆ ತೋಟಗಾರಿಕೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಯಾವ ರೀತಿಯ ಔಷಧಿ ಸ್ಪ್ರೇ ಮಾಡಬೇಕು, ರೋಗ ನಿಯಂತ್ರಣ ಹೇಗೆ ಎಂಬುದರ ಬಗ್ಗೆ ಸಲಹೆ ಸೂಚನೆ ನೀಡಬೇಕು. ಉತ್ತಮ ಇಳುವರಿ ಬಂದು ಒಳ್ಳೆಯ ಬೆಲೆ ಸಿಕ್ಕರೆ ರೈತರಿಗೂ ಅನುಕೂಲ. ಹಾಗಾಗಿ ಅಧಿಕಾರಿಗಳು ಮಾವು ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಎಂದು ಹೇಳಿದರು.
ನಂತರ ಎಲ್ಲಾ ಮಳಿಗೆಗೆಳಿಗೆ ಸಚಿವರು ಭೇಟಿ ನೀಡಿ ರೈತರ ರೊಟ್ಟಿಗೆ ಸಮಾಲೋಚಿಸಿ ವಿವಿಧ ತಳಿಯ ಮಾವು, ಹಲಸು ಹಾಗೂ ಇತರೆ ಹಣ್ಣುಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಅವುಗಳ ರುಚಿ ಸವಿದರು.
ಸಸ್ಯ ಸಂತೆ
ಮೇಳದಲ್ಲಿ ಸಸ್ಯ ಸಂತೆ ಏರ್ಪಡಿಸಿದ್ದು ಜಿಲ್ಲೆಯ ಎಲ್ಲಾ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಿಂದ ವಿವಿಧ ಜಾತಿಯ ಹಣ್ಣಿನ ಕಸಿ/ಸಸಿ ಗಿಡಗಳನ್ನು ಅಲಂಕಾರಿಕ ಗಿಡಗಳನ್ನು ಪ್ರದರ್ಶನಕ್ಕೆ ಹಾಗೂ ಇಲಾಖೆ ನಿಗಧಿಪಡಿಸಿದ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಸಸ್ಯ ಸಂತೆ ಯಲ್ಲಿ ಮಾವು, ಸೀಬೆ, ತೆಂಗು, ನೆರಳೆ, ಕರಿಬೇವು, ನಿಂಬೆ, ಸಪೋಟ, ಮಲ್ಲಿಗೆ ಹಾಗೂ ಇತ್ಯಾದಿ ಕಸಿ/ಸಸಿಗಳು ಹಾಗೂ ಅಲಂಕಾರಿಕ ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ.
ಮೇಳದಲ್ಲಿ ಕಂಡು ಬಂದ ಬಗೆ ಬಗೆಯ ಮಾವು-ಹಲಸು ಹಣ್ಣುಗಳು

ಮಿಯಾ ಜಾಕಿ, ತೋತಾಪುರಿ, ಸೇಂದೂರ, ಬಂಗನಪಲ್ಲಿ, ಬಾದಾಮಿ, ರಸಪೂರಿ, ಮಲ್ಲಿಕಾ, ಕೇಸರ್, ದಶೇರಿ, ಕುಲ್ ಪಂದ್, ಹಿಮಾಪಸಂದ್,ಮಲಗೋವ, ಸಕ್ಕರೆಗುತ್ತಿ, ಡ್ರಾಗನ್ ಪ್ರೋಟ್ಸ್, ಸೀಬೆ, ಹಲಸು (ತೂಬಗೆರೆ), ನೇರಳೆ.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ, ಸಿಇಓ ಡಾ. ವಾಸಂತಿ ಅಮರ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಗುಣವಂತ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಕಲಾವತಿ, ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ರೈತರು,ಗ್ರಾಹಕರು ಇದ್ದರು.









