ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಾವಿರ ಮಂದಿಗೆ ವಿಶೇಷ ಹೋಳಿಗೆ ಊಟ
ತಾವರೆಕೆರೆ : ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹೊಸಕೋಟೆ ತಾಲ್ಲೂಕು ಕಚೇರಿ ಆವರಣದಲ್ಲಿ ಆಯೋಜಕರಾದ ಎಚ್ ಎಮ್ ಸುಬ್ಬರಾಜು ಹಾಗೂ ರಾಜಗೋಪಾಲ್ ಅವರ ನೇತೃತ್ವದಲ್ಲಿ ಸುಮಾರು ಒಂದು ಸಾವಿರ ಜನರಿಗೆ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮಕ್ಕೆ ಶಾಸಕ ಶರತ್ ಬಚ್ಚೇಗೌಡ ಅವರು ಚಾಲನೆ ನೀಡಿ, ಮಾತನಾಡಿದರು. ಶ್ರೀಕೃಷ್ಣನ ಜೀವನ ಸಂದೇಶಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದ್ದು, ಧರ್ಮ, ಸತ್ಯ, ಕರ್ತವ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಇಂತಹ ಕಾರ್ಯಗಳಲ್ಲಿ ವಿನಾಕಾರಣ ದುಂಡು ವೆಚ್ಚ ಮಾಡುವುದನ್ನು ಬಿಟ್ಟು ಈ ರೀತಿಯ ಇತರರಿಗೆ ಮಾದರಿಯಾಗುವಂತಹ ಕಾರ್ಯಗಳನ್ನು ಮಾಡುವುದರಿಂದ ದೂರದಿಂದ ಬರುವಂತಹ ಜನರಿಗೆ ಒಳ್ಳೆಯ ಊಟ ದೊರೆತಂತಾಗುತ್ತದೆ ಹಾಗೂ ಶ್ರೀ ಕೃಷ್ಣ ಪರಮಾತ್ಮನ ಆದರ್ಶಗಳಿಗೆ ಒಂದು ಉತ್ತಮ ಸ್ಥಾನ ಮಾನ ನೀಡಿದಂತಾಗುತ್ತದೆ ಎಂದು ಹೇಳಿದರು.
ಯೋಜನಾ ಪ್ರಾಧಿಕಾರದ ಸದಸ್ಯ ಎಚ್ ಎಮ್ ಸುಬ್ಬರಾಜು ಮಾತನಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕೇವಲ ಧಾರ್ಮಿಕ ಆಚರಣೆ ಯಾಗಿರದೆ ಶ್ರೀ ಕೃಷ್ಣನ ಜೀವನದರ್ಶನಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ದಿನಕ್ಕೆ ಒಂದು ಅರ್ಥ ಬರುತ್ತದೆ. ಭಗವದ್ಗೀತೆಯ ಮೂಲಕ ಶ್ರೀ ಕೃಷ್ಣ ನೀಡಿರುವ ಕರ್ತವ್ಯ ಸತ್ಯ ಧರ್ಮ ಹಾಗೂ ನಿಸ್ವಾರ್ಥ ಸೇವೆಯ ಸಂದೇಶಗಳು ಇಂದಿಗೂ ಜೀವಂತವಾಗಿದೆ. ದಾಸೋಹ ಕುಟೀರ ಪ್ರಾರಂಭವಾಗಿ ಒಂದು ತಿಂಗಳ ಆದರು ಪ್ರತಿನಿತ್ಯವೂ ತಾಲೂಕು ಕಚೇರಿಗೆ ಕಾರ್ಯನಿಮಿತ ಬರುವಂತಹ ಜನರಿಗೆ ಊಟದ ವ್ಯವಸ್ಥೆ ನಡೆಯುತ್ತಲೇ ಇದೆ ಇದಕ್ಕೆ ಮೂಲ ಕಾರಣಕರ್ತರು ನಮ್ಮ ಶಾಸಕರು ಎಂದು ತಿಳಿಸಿದರು.
ಜನ್ಮಾಷ್ಟಮಿಯ ಅಂಗವಾಗಿ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಹೋಳಿಗೆ ಹಾಗೂ ಮುಳಬಾಗಿಲು ದೋಸೆ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಅಭಿಮಾನಿಗಳು ಹಾಗೂ ವಿವಿಧ ಕ್ಷೇತ್ರಗಳ ಮುಖಂಡರು ಭಾಗವಹಿಸಿ ವಿಶೇಷ ಊಟವನ್ನು ಸವಿದರು.
ಆಯೋಜಕರಾದ ರಾಜಗೋಪಾಲ್ (ಗೋಪಿ) ಮಾತನಾಡಿ, ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಎಲ್ಲರೂ ಒಗ್ಗಟ್ಟಿನಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ಈ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದೆ. ಜನರಿಗೆ ಸತ್ಕಾರ ಮತ್ತು ಅನ್ನದಾಸೋಹದ ಮೂಲಕ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುವುದು ಸಂತೋಷದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತ ನೀಲಾಲೋಚನ ಪ್ರಭು, ತಾಲೂಕು ಯಾದವರ ಸಂಘದ ಅಧ್ಯಕ್ಷ ಆನಂದಪ್ಪ, ಯುವ ಘಟಕದ ಅಧ್ಯಕ್ಷರಾದ ಸಂತೋಷ್ ವಿಜಿ ಕುಮಾರ್, ಟಿ ಎಸ್ ರಾಜಶೇಖರ್, ಉದ್ಯಮಿಗಳಾದ ಗಂಗಾಧರ್ ಶೆಟ್ಟಿ, ಮುನಿರಾಜು, ಕೆಪಿಸಿಸಿ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಹರೀಶ್ ಚಕ್ರವರ್ತಿ, ಪಿಕೆಎಸ್ ಶ್ರೀನಿವಾಸ್, ವಿಟ್ಟಲ್, ಮಂಜುನಾಥ್ ಹಾಗೂ ತಾಲೂಕು ಯಾದವ ಸಮುದಾಯದ ಮುಖಂಡರುಗಳು ಸ್ಥಳೀಯ ನಾಯಕರು ಹಾಜರಿದ್ದರು.