ವಿಜಯ ದರ್ಪಣ ನ್ಯೂಸ್…..
ಲೋಕಾಯುಕ್ತ ದಾಳಿ: ಸಹಾಯಕ ಔಷಧ ನಿಯಂತ್ರಕಿ ಬಂಧನ

ಕೋಲಾರದ ಸಹಾಯಕ ಔಷಧ ನಿಯಂತ್ರಕಿ ಜೆ. ಶ್ಯಾಮಲಾ, ನಿವೃತ್ತ ‘ಡಿ’ ಗ್ರೂಪ್ ನೌಕರ ಶ್ರೀನಿವಾಸ್ ಮತ್ತು ಚಾಲಕ ಮಹಾಂತೇಶ್ ಬಂಧಿತ ಆರೋಪಿಗಳು.
ಟೇಕಲ್ ಮೂಲದ ಔಷಧ ಅಂಗಡಿ ಮಾಲೀಕರೊಬ್ಬರು ತಮ್ಮ ಅಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪರವಾನಗಿ ನೀಡಲು ಅಧಿಕಾರಿ ಶ್ಯಾಮಲಾ ಅವರು ₹35,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ದೂರು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು ಬಲೆ ಬೀಸಿದ್ದರು.
ಮಂಗಳವಾರ ಟೇಕಲ್ನಲ್ಲಿ ಅಧಿಕಾರಿಯು ತಮ್ಮ ಕಾರಿನಲ್ಲಿಯೇ ಲಂಚದ ಹಣ ಪಡೆಯುತ್ತಿದ್ದಾಗ, ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಆಯಂಟೋನಿ ಜಾನ್ ನೇತೃತ್ವದ ತಂಡ ಏಕಾಏಕಿ ದಾಳಿ ನಡೆಸಿತು. ಲೋಕಾಯುಕ್ತ ಪೊಲೀಸರನ್ನು ಕಂಡ ತಕ್ಷಣ ಗಾಬರಿಗೊಂಡ ಶ್ಯಾಮಲಾ, ಹಣದೊಂದಿಗೆ ಕಾರಿನಲ್ಲಿ ಪರಾರಿಯಾದರು.
ಆರೋಪಿಗಳಿದ್ದ ಕಾರು ಬಂಗಾರಪೇಟೆ ರಸ್ತೆಯಲ್ಲಿ ಅತೀ ವೇಗವಾಗಿ ಸಾಗುತ್ತಿತ್ತು. ಲೋಕಾಯುಕ್ತ ತಂಡವು ಬಿಡದೇ ಸುಮಾರು 15 ಕಿ.ಮೀ ದೂರ ಬೆನ್ನಟ್ಟಿ, ಕೊನೆಗೆ ಸಿನಿಮಾ ಮಾದರಿಯಲ್ಲಿ ತಮ್ಮ ವಾಹನವನ್ನು ಅಡ್ಡಗಟ್ಟಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಯಿತು.
ಲಂಚ ಪಡೆಯುವಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಜೆ. ಶ್ಯಾಮಲಾ ಮತ್ತು ಅವರ ಇಬ್ಬರು ಸಹಚರರನ್ನು ಬಂಧಿಸಲಾಗಿದೆ,” ಎಂದು ಲೋಕಾಯುಕ್ತ ಎಸ್ಪಿ ಆಯಂಟೋನಿ ಜಾನ್ ತಿಳಿಸಿದ್ದಾರೆ.
ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಲಂಚದ ಹಣವನ್ನು ಜಪ್ತಿ ಮಾಡಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.





