ಅಮೃತ ಸರೋವರ ಅಂಗಳದಲ್ಲಿ ಹುತಾತ್ಮರ ಸ್ಮಾರಕದ ಶಿಲಾಫಲಕ ನಿರ್ಮಾಣ : ಜಿ. ಪಂ. ಸಿಇಓ ಡಾ. ಅನುರಾಧ ಕೆ‌ . ಎನ್.

ವಿಜಯ ದರ್ಪಣ ನ್ಯೂಸ್

ಬಿಜಿಎಸ್ ನಗರ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 14

 77ನೇ ಸಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿಯು, ಜಿಲ್ಲೆಯ 101 ಗ್ರಾಮ ಪಂಚಾಯಿತಿಗಳ ಅಮೃತ ಸರೋವರ ಅಂಗಳದಲ್ಲಿ ಹುತಾತ್ಮರ ಸ್ಮಾರಕದ ಶಿಲಾಫಲಕ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ ಕೆ‌ .ಎನ್. ಅವರು ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 155 ಜಲಮೂಲಗಳನ್ನು ಅಮೃತ ಸರೋವರಗಳಾಗಿ ಅಭಿವೃದ್ಧಿ ಪಡಿಸುವ ಗುರಿಯಲ್ಲಿ 104 ಅಮೃತ ಸರೋವರ ಕೆರೆಗಳ ಕಾಮಗಾರಿ ಪೂರ್ಣಗೊಂಡಿವೆ, ದೇವನಹಳ್ಳಿ ತಾಲ್ಲೂಕಿನಲ್ಲಿ 25, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 29, ಹೊಸಕೋಟೆ ತಾಲ್ಲೂಕಿನಲ್ಲಿ 30, ನೆಲಮಂಗಲ ತಾಲ್ಲೂಕಿನಲ್ಲಿ 20 ಅಮೃತ ಸರೋವರಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಟ್ಟು 101 ಗ್ರಾಮ ಪಂಚಾಯಿತಿಗಳ ವಿಶಿಷ್ಟ ಸ್ಮಾರಕ ಅನಾವರಣ ಗೊಳಿಸಲಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯ ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಸಿಬ್ಬಂದಿ, ಕೇ೦ದ್ರ ಸಶಸ್ತ್ರ ಪೊಲೀಸ್‌ ಪಡೆ, ರಾಜ್ಯ ಪೋಲಿಸ್‌ ಇಲಾಖೆಯಲ್ಲಿ

ಕರ್ತವ್ಯದ ವೇಳೆ ಪ್ರಾಣ ತ್ಯಾಗ ಮಾಡಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ವೀರರ ಹೆಸರನ್ನು ಶಿಲಾ ಫಲಕದಲ್ಲಿ ಕೆತ್ತನೆ ಮಾಡಿ ಅಮೃತ ಸರೋವರಗಳ ಬಳಿ ಅಳವಡಿಸಲಾಗುತ್ತಿದೆ. ಒಂದು ವೇಳೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವೀರರು ಲಭ್ಯವಿಲ್ಲದ ಕಡೆ ಸಾಮಾನ್ಯ ಸಮರ್ಪಣಾ ಶಿಲಾಫಲಕ ನಿರ್ಮಿಸಲಾಗುತ್ತಿದೆ.

ವಿನೂತನ ಕಾರ್ಯಕ್ರಮ

ಕೆರೆಗಳ ಸುತ್ತ ತಿರಂಗಾ ಯಾತ್ರೆ ಸೇರಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಅಮೃತ ಸರೋವರ ಕೆರೆ ದಂಡೆಯ ಮೇಲೆ ಗ್ರಾಮಸ್ಥರಿಗೆ ನಾನಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ.

ಮೊದಲಿಗೆ ತಿರಂಗಾ ಯಾತ್ರೆಯನ್ನು ಗ್ರಾಮದ ಸಮುದಾಯದವರೊಂದಿಗೆ ಬೆಳಗ್ಗೆ ಗ್ರಾಮಾದ್ಯಂತ ನಡೆಸಿ, ಅಮೃತಸರೋವರದ ಬಳಿ ಮುಕ್ತಾಯಗೊಳಿಸಲಾಗುತ್ತಿದೆ. ಬಳಿಕ ಅರಣ್ಯೀಕರಣ ಕೈಗೊಂಡ ಅಮೃತ ಸರೋವರ ಬಳಿ ಸಸಿಗಳನ್ನು ನೆಡುವುದು ಮತ್ತು ಅವುಗಳ ಆರೈಕೆ ಮತ್ತು ಸುಸ್ಥಿರತೆಗೆ ಪಣತೊಡಲಾಗುತ್ತದೆ.

ಸ್ವಚ್ಚತಾ ಪ್ರತಿಜ್ಞೆ

ಅಮೃತ ಸರೋವರ ಕೆರೆ ಅಂಗಳದಲ್ಲಿ ಆಗಮಿಸಿದ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಅಮೃತ ಸರೋವರ ಕೆರೆಯ ಸುತ್ತಮುತ್ತಲಿನ ಪರಿಸರವನ್ನು ಮತ್ತು ನೀರಿನ ಮಾಲಿನ್ಯ ತಡೆಗಟ್ಟುವ ಜವಾಬ್ದಾರಿಯ “ಸ್ವಚ್ಛತಾ ಪ್ರತಿಜ್ಞೆ” ಕೈಗೊಳ್ಳುವುದು.

ಮಕ್ಕಳಿಗೆ ಸಂಬಂಧಿಸಿದ ಚಟುವಟಿಕೆಗಳು/ ಸ್ಪರ್ಧೆಗಳು:

ಅಮೃತ ಸರೋವರ ತಾಣಗಳಲ್ಲಿ ಮಕ್ಕಳಿಗೆ ಚಿತ್ರಕಲೆ, ಘೋಷಣೆಗಳು, ಪ್ರಬಂಧ ಬರೆಯುವುದು, ರಂಗೋಲಿ, ಭಾಷಣ ಇತ್ಯಾದಿ ಸೇರಿದಂತೆ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಆಯೋಜಿಸುವುದು.

ಸಾಂಪ್ರದಾಯಿಕ ಗ್ರಾಮೀಣ ಆಟಗಳನ್ನು ಆಯೋಜಿಸಿ ಜಾನಪದ ಸಂಗೀತ, ನೃತ್ಯ, ಹಾಗೂ ಗ್ರಾಮೀಣ ಆಟಗಳಾದ ಖೋ-ಖೋ, ಲಗೋರಿ, ಹಗ್ಗ ಜಗ್ಗಾಟ, ಹಗ್ಗ ಜಿಗಿತ (ರೋಪ್ ಜಂಪಿಂಗ್), ಕುಂಟ ಓಟ, ಕುರ್ಚಿ ಓಟ ಇತ್ಯಾದಿಯನ್ನು ಅಮೃತ ಸರೋವರಗಳಲ್ಲಿ ಆಯೋಜಿಸುವುದು.

ಪ್ರಚಾರಕ್ಕೆ ಹ್ಯಾಶ್ ಟ್ಯಾಗ್ ಬಳಕೆ 

”ಮೇರಾ ಅಮೃತ ಸರೋವರ” ಎಂಬ ಹ್ಯಾಶ್ ಟ್ಯಾಗ್‌ನೊಂದಿಗೆ ಕಾರ್ಯಕ್ರಮದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲು ಮತ್ತು ಅಮೃತ ಸರೋವರ ನೀರಿನ ಬಳಕೆ ಸುತ್ತಲಿನ ನಿರ್ವಹಣೆಗೆ ಸಂಬಂಧಿಸಿದಂತೆ ಬಳಕೆದಾರರ ಗುಂಪಿಗೆ ಹಕ್ಕುಗಳ ಪ್ರಮಾಣ ಪತ್ರ ವಿತರಿಸಲು ಸೂಚಿಸಲಾಗಿದೆ.
‌ಜಿಲ್ಲೆಯಲ್ಲಿ ಅತ್ಯುತ್ತಮ ಅಮೃತ ಸರೋವರಗಳ ನಿರ್ಮಾಣವನ್ನು ಗುರುತಿಸಿ ಪ್ರಥಮ, ದ್ವಿತೀಯ ಮತ್ತು ತೃತೀಯ ಪ್ರಶಸ್ತಿ ನೀಡಲು ಜಿಲ್ಲಾ ಪಂಚಾಯತ್ ನಿಂದ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ ಕೆ‌ .ಎನ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.