ಕುವೆಂಪು……… ಸಾಹಿತ್ಯ – ವಿಶ್ವ ಮಾನವ ಪ್ರಜ್ಞೆ……
ವಿಜಯ ದರ್ಪಣ ನ್ಯೂಸ್…..
ಕುವೆಂಪು………
ಸಾಹಿತ್ಯ – ವಿಶ್ವ ಮಾನವ ಪ್ರಜ್ಞೆ……

ಅಕ್ಷರಗಳ ಸಂಶೋಧನೆ – ಬರವಣಿಗೆ – ಸಾಹಿತ್ಯ – ಕನ್ನಡ ಭಾಷೆ – ಮನುಜ ಮತ – ವಿಶ್ವಪಥ……..
ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಎಂಬ ಮಲೆನಾಡಿನ ವ್ಯಕ್ತಿಯೊಬ್ಬರು ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು – ಸಂಸ್ಕೃತಿಯನ್ನು – ಕನ್ನಡ ಮಣ್ಣಿನ ಸಾಂಸ್ಕೃತಿಕ ಪ್ರಜ್ಞೆಯನ್ನು ಮುಗಿಲೆತ್ತರಕ್ಕೆ ಏರಿಸಿ ಅದರ ಗಡಿಯನ್ನು ವಿಸ್ತರಿಸಿ ಭಾಷೆಯ ಮಹತ್ವ ಸಾರಿದವರು. ಅಕ್ಷರಗಳಲ್ಲಿ ಕೇವಲ ಭಾವನೆಗಳನ್ನು ಮಾತ್ರ ತುಂಬದೆ ಒಂದು ನಾಡಿನ ಮನುಷ್ಯ ಪ್ರಜ್ಞೆಯನ್ನು ಚಿಂತನೆಯಾಗಿಸಿ ವಿಶ್ವ ಮಾನವತೆಗೆ ದಾರಿ ತೋರಿದ ಅದ್ಬುತ ಚಿಂತಕ.
ಅವರ ಜನುಮದಿನದ ನೆನಪಿನ ನೆಪದಲ್ಲಿ ( ಡಿಸೆಂಬರ್ ೨೯ )ಒಂದಷ್ಟು ಅಕ್ಷರಗಳ ಆತ್ಮಾವಲೋಕನ……
ಬರವಣಿಗೆ…..
ಅಕ್ಷರಗಳ ಸಂಶೋಧನೆಯೊಂದಿಗೆ ಉಗಮವಾದ ಅದ್ಭುತ ಸೃಷ್ಟಿ ಈ ಬರವಣಿಗೆ. ಅಕ್ಷರಗಳಿಗಿಂತ ಮೊದಲು ಸಹ ಬರವಣಿಗೆ ಅಸ್ತಿತ್ವದಲ್ಲಿತ್ತು. ಆದರೆ ಚಿತ್ರ, ಸಂಜ್ಞೆ ಮುಂತಾದ ವಿಚಿತ್ರ, ವೈಶಿಷ್ಟ್ಯ ರೂಪದಲ್ಲಿ ಅದು ಬಳಕೆಯಲ್ಲಿತ್ತು.
ಬರವಣಿಗೆ ಅದೊಂದು ಬರೆಯುವ ಕ್ರಿಯೆ ಅಥವಾ ಅಭಿಪ್ರಾಯ ವ್ಯಕ್ತಪಡಿಸುವ ಮಾರ್ಗ ಅಥವಾ ಭಾವನೆಗಳ ದಾಖಲೀಕರಣ ಅಥವಾ ಅಕ್ಷರಗಳ ಜೋಡಣಾ ಸ್ವಾತಂತ್ರ್ಯ ಅಥವಾ ಭಾಷೆಯ ಕ್ರಮಬದ್ಧ ಉಪಯೋಗ ಅಥವಾ ಸಂಪರ್ಕ ಮಾಧ್ಯಮ ಅಥವಾ
ಮನುಷ್ಯನ ಒಂದು ಕಲಾ ಪ್ರಕಾರ ಹೀಗೆ ನಾನಾ ರೀತಿಯ ಉತ್ತರಗಳನ್ನು ಹುಡುಕಿ ಹೇಳಬಹುದು.
ಯಾವಾಗ ಬರಹ ಒಂದು ಕ್ರಮಬದ್ಧತೆಯನ್ನು ಪಡೆಯಿತೋ ನಂತರದಲ್ಲಿ ವಿವಿಧ ಭಾಷೆಗಳು ಬೆಳವಣಿಗೆ ಹೊಂದಿದವು. ಅಕ್ಷರ ಸಂಶೋಧನೆಗೂ ಮೊದಲು ಭಾಷೆಗಳು ಅಸ್ತಿತ್ವದಲ್ಲಿದ್ದವು. ಆದರೆ ಲಿಪಿ ಇರಲಿಲ್ಲ. ಲಿಪಿಯ ಉಗಮದ ನಂತರ ಭಾಷೆಗಳು ಮಹತ್ವ ಪಡೆದುಕೊಂಡವು.
ಲ್ಯಾಟಿನ್, ಪ್ರಾಕೃತ, ಪಾಲಿ, ಪಾರ್ಸಿ, ಸ್ಪಾನಿಷ್, ಚೀನೀ, ಅರಬ್ಬೀ, ಪರ್ಷಿಯನ್, ಹಿಬ್ರೂ, ಸಂಸ್ಕೃತ ಮುಂತಾದ ಭಾಷೆಗಳು ಅತ್ಯಂತ ಪ್ರಾಚೀನ ಎಂದು ಹೇಳಲಾಗುತ್ತದೆ. ನನಗೆ ಈ ವಿಷಯದಲ್ಲಿ ತುಂಬಾ ಸ್ಪಷ್ಟವಾಗಿ ಮತ್ತು ಆಳವಾಗಿ ತಿಳಿದಿಲ್ಲ. ಸಾಮಾನ್ಯ ಜ್ಞಾನ ಮಾತ್ರ ಇದೆ. ಖಚಿತವಾಗಿ ತಿಳಿದ ಭಾಷಾ ತಜ್ಞರು ಇನ್ನಷ್ಟು ಮಾಹಿತಿ ಹಂಚಿಕೊಳ್ಳಬಹುದು. ಏಕೆಂದರೆ ಎಷ್ಟೋ ಭಾಷೆಗಳು ನಾಶವಾಗಿದೆ. ಮತ್ತೆಷ್ಟೋ ಭಾಷೆಗಳ ದಾಖಲೆಗಳು, ಇತಿಹಾಸ ತಿಳಿಯದೇ ಇರಬಹುದು.
ಇತಿಹಾಸ ಏನೇ ಇರಲಿ ಬರವಣಿಗೆ ಎಂಬುದು ಮಾನವ ನಾಗರಿಕತೆಯ ಎಲ್ಲವನ್ನೂ ಅಡಗಿಸಿಕೊಂಡು ಅದನ್ನು ಇಲ್ಲಿಯವರೆಗೂ ಮುನ್ನಡೆಸಿಕೊಂಡು ಬಂದ ಅತ್ಯುತ್ತಮ ವಾಹಕ.
ಬರಹಗಳ ಮೂಲಗಳು, ರೀತಿಗಳು, ಉಪಕರಣಗಳು, ಪ್ರಕಾರಗಳು, ರೂಪಗಳು, ಉದ್ದೇಶಗಳು, ಲಿಪಿಗಳು, ಭಾಷೆಗಳು ಎಷ್ಟೇ ಇರಬಹುದು, ಆದರೆ ಬರಹ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಬರಹವಿಲ್ಲದೆಯೂ ಮನುಷ್ಯ ಬದುಕಬಹುದು ಮತ್ತು ಈಗಲೂ ಬಹಳಷ್ಟು ಜನ ಬದುಕುತ್ತಿದ್ದಾರೆ, ಅದು ಅನಿವಾರ್ಯವಲ್ಲ. ಆದರೆ ಬರಹವಿಲ್ಲದಿದ್ದರೆ ಮನುಷ್ಯ ಕಳೆದುಕೊಳ್ಳುತ್ತಿದ್ದುದು ಏನು ಎಂದು ಯೋಚಿಸಿದಾಗ ಬರಹದ ಮಹತ್ವ ಅರ್ಥವಾಗುತ್ತದೆ.
ಬರಹವನ್ನು ಆಕಾಶದ ಅನಂತತೆಗೆ ಹೋಲಿಸಬಹುದು. ಅಕ್ಷರಗಳೇ ಬರಹದ ಮೂಲವಾದರು ಇಂದು ಅದೇ ಅಕ್ಷರಗಳಲ್ಲಿ ಬರಹದ ಸರಿಯಾದ ಮತ್ತು ಸ್ಪಷ್ಟವಾದ ಅರ್ಥವನ್ನು ಹಿಡಿದಿಡುವುದು ಸಾಧ್ಯವಿಲ್ಲ. ಅದು ಅಕ್ಷರವನ್ನು ಮೀರಿ ಬೆಳೆದಿದೆ. ಮನುಷ್ಯನ ಭಾವನೆ ಮತ್ತು ಬುದ್ದಿಶಕ್ತಿ ಬೆಳವಣಿಯಲ್ಲಿ ಅಕ್ಷರ ಮತ್ತು ಭಾಷೆ ಕೇವಲ ಮೆಟ್ಟಿಲಿನಂತೆ ಕೆಲಸ ಮಾಡುತ್ತಿದೆ. ಆತನ ಮನಸ್ಸೇ ಆತನ ತಲೆಯ ಮೇಲೆ ಕಿರೀಟದಂತೆ ಬಂದು ಕುಳಿತಿದೆ.
ಎಲ್ಲಾ ಪರಿವರ್ತನೆಗಳ ಬಳಿಕ ಬರವಣಿಗೆ ” ಸಾಹಿತ್ಯ ” ಎಂಬ ಪ್ರಕಾರದಲ್ಲಿ ಹೆಚ್ಚು ಪ್ರಕಾಶಮಾನವಾಗಿ, ಜನಪ್ರಿಯವಾಗಿ ರಾರಾಜಿಸುತ್ತಿದೆ.
” ಖಡ್ಗಕ್ಕಿಂತ ಲೇಖನ ಹರಿತ ” ಎಂಬುದು ಹಳೆಯ ಮಾತು. ಈಗ ಬರಹಗಳು ಬಾಂಬು, ಬಂದೂಕುಗಳಿಗಿಂತ ಪ್ರಬಲವಾಗಿ ಕೆಲಸ ಮಾಡುತ್ತಿದೆ. ಕ್ರಾಂತಿಯ ಮೂಲದ್ರವ್ಯವಾಗಿಯೂ ಉಪಯೋಗಿಸಲಾಗುತ್ತಿದೆ.
ಬರಹ ನಮ್ಮನ್ನು ನಗಿಸುತ್ತದೆ, ಅಳಿಸುತ್ತದೆ, ಕೋಪವೂ ಸೇರಿ ನವ ರಸಗಳನ್ನು ಉತ್ಪತ್ತಿ ಮಾಡುತ್ತದೆ. ಹಾಗೆಯೇ ಬರಹ ಮೋಸ, ವಂಚನೆ, ದ್ರೋಹಗಳನ್ನು ಎಸಗುತ್ತದೆ.
ಕೆಲವು ಉತ್ಕೃಷ್ಟ ಬರಹಗಳು, ಕೆಲವು ಸಾಧಾರಣ ಬರಹಗಳು ಮತ್ತೆ ಕೆಲವನ್ನು ಕಳಪೆ ಬರಹಗಳು ಎಂಬುದಾಗಿಯೂ ವಿಂಗಡಿಸಲಾಗುತ್ತದೆ. ಇಲ್ಲಿ ಬರವಣಿಗೆಯ ಸಾಮರ್ಥ್ಯ ಮತ್ತು ಓದುಗರ ಸಾಮರ್ಥ್ಯ ಎರಡೂ ಪರೀಕ್ಷೆ ಒಳಪಡುತ್ತದೆ.
ಒಬ್ಬ ವ್ಯಕ್ತಿ ಬರಹಗಾರನಾಗಲು ಅರ್ಹತೆ ಮತ್ತು ಮಾನದಂಡಗಳೇನು ಎಂಬುದು ನಿರ್ದಿಷ್ಟವಾಗಿ ಇಲ್ಲ. ಆಸಕ್ತಿಯೇ ಮುಖ್ಯ. ಆ ಆಸಕ್ತಿ ಆತನ ಬರಹ ಶಕ್ತಿಯ ಮುಖಾಂತರ ಅರ್ಹತೆಯಾಗಿ ಪರಿವರ್ತನೆ ಹೊಂದುತ್ತದೆ.
ಆದರೆ ಬರಹ ಇಷ್ಟೊಂದು ಸರಳವಾಗಿಲ್ಲ. ಕೋಟಿ ಕೋಟಿ ಬರಹಗಾರರಿದ್ದಾರೆ. ವಿಶ್ವಮಟ್ಟದಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಮತ್ತು ಭಾರತದಲ್ಲಿ ಜ್ಞಾನಪೀಠ ಎಂಬ ಅತ್ಯುನ್ನತ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಇನ್ನೂ ಹಲವಾರು ಪ್ರಶಸ್ತಿ ಬಿರುದುಗಳು ಇವೆ.
ಬರವಣಿಗೆ ಹವ್ಯಾಸವು ಹೌದು, ವೃತ್ತಿಯೂ ಹೌದು, ಸಾಧನೆಯಾಗಿಯೂ ಗುರುತಿಸಲಾಗುತ್ತದೆ. ಬರಹಗಳಿಂದಲೇ ಬದುಕನ್ನು ಕಟ್ಟಿಕೊಂಡವರು ಇದ್ದಾರೆ, ಬರಹದಿಂದ ಹಣ ಅಧಿಕಾರ ಜನಪ್ರಿಯತೆ ಪಡೆದವರು ಇದ್ದಾರೆ, ಬರಹವನ್ನೇ ನಂಬಿ ಅನೇಕ ಕಷ್ಟ ನಷ್ಟಗಳಿಗೆ ಒಳಗಾದವರು ಸಹ ಸಾಕಷ್ಟು ಇದ್ದಾರೆ.
ಓದು ಬರಹಗಳು ಮನುಷ್ಯರನ್ನು ಹೆಚ್ಚು ನಾಗರಿಕವಾಗಿ ಮತ್ತು ಮಾನವೀಯವಾಗಿ ವರ್ತಿಸುವಂತೆ ಪ್ರೇರೇಪಿಸುತ್ತದೆ ಎಂಬ ಅಭಿಪ್ರಾಯವಿತ್ತು. ಆದರೆ ಅದು ಇತ್ತೀಚಿನ ಆಧುನಿಕ ಸಂದರ್ಭದಲ್ಲಿ ಅಷ್ಟೇನು ನಿಜವಲ್ಲ, ಬದಲಾಗಿ ಅವು ಆತನ ವ್ಯಕ್ತಿತ್ವವನ್ನು ಸಂಕುಚಿತ ಗೊಳಿಸುತ್ತಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿದೆ. ಓದು ಬರಹಗಳೇ ಬೇರೆ, ವಾಸ್ತವ ಬದುಕೇ ಬೇರೆ ಎಂದು ಕೆಲವರು ಹಾಸ್ಯ ಮಾಡುತ್ತಾರೆ.
ಮೊದಲಿಗೆ ಬರವಣಿಗೆ ಎಂಬುದು ಕೆಲವೇ ಕೆಲವು ಜನರ ಸ್ವತ್ತಾಗಿತ್ತು. ಮಾಧ್ಯಮಗಳ ಉಗಮದೊಂದಿಗೆ ಇನ್ನೂ ಹೆಚ್ಚು ಜನ ಬರಹಗಾರರಿಗೆ ವೇದಿಕೆ ದೊರೆಯಿತು. ಆದರೆ ಸಾಮಾಜಿಕ ಜಾಲತಾಣಗಳ ಅಭಿವೃದ್ಧಿಯೊಂದಿಗೆ ಬರವಣಿಗೆ ಸಾಮಾನ್ಯ ಜನರಿಗೂ ಬಾಗಿಲು ತೆರೆಯಿತು.
ಈಗ ಅಕ್ಷರ ಬಲ್ಲ, ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಮುಂತಾದ ವಸ್ತುಗಳನ್ನು ಹೊಂದಿರುವ ಎಲ್ಲರೂ ಏನಾದರೂ ಬರೆಯಲು ಪ್ರಾರಂಭಿಸಿದ್ದಾರೆ ಅಥವಾ ಕನಿಷ್ಠ ಕೆಲವು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನಾದರು ವ್ಯಕ್ತಪಡಿಸುತ್ತಾರೆ. ಇದೊಂದು ಕ್ರಾಂತಿಕಾರಕ ಬದಲಾವಣೆ.
ಆದರೆ ಬರೆಯುವ ರೀತಿ, ವಿಷಯಗಳು, ಉದ್ದೇಶಗಳು ಅನೇಕ ಒಳ್ಳೆಯ ಮೌಲ್ಯಗಳನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸುತ್ತಿದೆ. ಬರವಣಿಗೆ ವ್ಯಾಪಾರವಾಗಿದೆ, ಅಷ್ಟೇ ಅಲ್ಲ ಬರವಣಿಗೆ ವಿಷಯುಕ್ತ ಕತ್ತಿಯಾಗಿದೆ. ಬರಹಗಾರ ವಿಷ ಉಗುಳುವ ಹಾವಿನಂತಾಗಿದ್ದಾನೆ. ಬರಹಗಳು ನಿಯಂತ್ರಣ ಕಳೆದುಕೊಳ್ಳುತ್ತಿವೆ. ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ.
ಸಾಹಿತ್ಯವಾಗಿ ಬರಹ ಒಂದು ಅತ್ಯದ್ಭುತ ಪ್ರಯೋಗ. ಅದೇ ಪ್ರಯೋಗ ಮಾನವ ಜನಾಂಗದ ವಿನಾಶಕ್ಕೂ ಕಾರಣವಾಗುತ್ತಿದೆ. ಅದರ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಬರಹದ ಮುಖಾಂತರವೇ ಮನವಿ ಮಾಡಿಕೊಳ್ಳಬೇಕಾಗಿದೆ.
ಬರವಣಿಗೆ ಮತ್ತು ಬರಹಗಾರ,
ಬದುಕು ಮತ್ತು ಸಮಾಜದ ಶುದ್ಧ ಚಾರಿತ್ರ್ಯ ಮತ್ತು ವ್ಯಕ್ತಿತ್ವದ ಪ್ರತಿಬಿಂಬವಾಗುವ ಭವಿಷ್ಯದ ಕನಸು ಕಾಣುತ್ತಾ…….
ಬರವಣಿಗೆ ಸಾಹಿತ್ಯವಾಗಿ ಬೆಳವಣಿಗೆ ಹೊಂದುವ ಪ್ರಕ್ರಿಯೆ……..
ಕನ್ನಡ ಸಾಹಿತ್ಯ ಲೋಕದಲ್ಲಿ, ಇತಿಹಾಸದ ದಿಗ್ಗಜರ ಸಾಲಿನಲ್ಲಿ, ಮೇರು ಪರ್ವತದಂತೆ ಕಂಗೊಳಿಸುತ್ತಿರುವ ವ್ಯಕ್ತಿತ್ವ ಕುವೆಂಪು ಅವರದು……
ಸಾಹಿತ್ಯ ಎಂದರೇನು ?
ಸಾಹಿತಿ ಎಂದರೆ ಯಾರು ?
ಅಕ್ಷರಗಳ ಮಾಂತ್ರಿಕ ಶಕ್ತಿ ಹೇಗಿರುತ್ತದೆ ?
ಬರಹಗಳಲ್ಲಿ ಬದುಕಿನ ಸಂದೇಶ ಹೇಗೆ ನೀಡುವುದು ?
ಸಾಹಿತ್ಯದ ವಿವಿಧ ಪ್ರಕಾರಗಳ ಮೂಲಕ ಸಾಮಾಜಿಕ, ಸಾಂಸ್ಕೃತಿಕ ಪ್ರಭಾವ ಹೇಗೆ ಬೀರುತ್ತದೆ ?
ಮುಂತಾದ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಕುವೆಂಪು ಅವರನ್ನು ಹೆಸರಿಸಬಹುದು…..
ಕನ್ನಡ ಭಾಷೆಯನ್ನು
ವಿಸ್ತಾರಗೊಳಿಸುವಲ್ಲಿ, ಕನ್ನಡ ಸಾಹಿತ್ಯದ ಓದುಗರ ಚಿಂತನೆಗಳನ್ನು ವಿಶಾಲಕ್ಕೆ ಕೊಂಡೊಯ್ಯುವಲ್ಲಿ, ಕರ್ನಾಟಕದ ಕೀರ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವಲ್ಲಿ, ಸಾಮಾನ್ಯ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿ ಕುವೆಂಪು ಅವರ ಕೊಡುಗೆ ಸಾಕಷ್ಟಿದೆ…..
” ಮಂತ್ರ ಮಾಂಗಲ್ಯ ” ಎಂಬ ಸರಳ ವಿವಾಹ ಪದ್ದತಿಯನ್ನು ಪರಿಚಯಿಸುವಲ್ಲಿ ಮತ್ತು ವಿಶ್ವ ಮಾನವ ಪ್ರಜ್ಞೆ ಜಾಗೃತಗೊಳಿಸುವಲ್ಲಿ ಕುವೆಂಪು ಅವರ ಸಾಹಿತ್ಯ ಶ್ರೇಷ್ಠತೆಯನ್ನು ಗುರುತಿಸಬಹುದು……
ಈ ಸಂದರ್ಭದಲ್ಲಿ………
ಸಾಹಿತ್ಯ ಎಂದರೆ……
ಅಕ್ಷರಗಳೇ ? ಪದಗಳೇ ? ವಾಕ್ಯಗಳೇ ? ನಂಬಿಕೆಗಳೇ ? ಭಾವನೆಗಳೇ ? ಅನುಭವಗಳೇ ? ವ್ಯಾಕರಣವೇ ? ಛಂಧಸ್ಸೇ ? ಪ್ರಾಸವೇ ? ರಾಜಕೀಯವೇ ? ಸಾಮಾಜಿಕವೇ ? ಶಿಕ್ಷಣವೇ ? ಆಧ್ಯಾತ್ಮಿಕವೇ ? ಭಕ್ತಿಯೇ ? ವೈಚಾರಿಕತೆಯೇ ? ಕಲ್ಪನೆಯೇ ? ಪ್ರೀತಿಯೇ ? ದ್ವೇಷವೇ ? ಅಸೂಯೆಯೇ ? ಇತಿಹಾಸವೇ ? ವರ್ತಮಾನವೇ ? ಭವಿಷ್ಯವೇ ? ಭ್ರಮೆಯೇ ? ವಾಸ್ತವವೇ ? ಸ್ವಾಭಾವಿಕವೇ ? ಬರೆದದ್ದೆಲ್ಲವೂ ? ಗೀಚಿದ್ದೆಲ್ಲವೂ ? ಕಂಡಿದ್ದೆಲ್ಲವೂ ? ನೀತಿಗಳೇ ? ನಿಯಮಗಳೇ ? ಸ್ವಚ್ಚಂದವೇ ? ಸರಳವೇ ? ಸಂಕೀರ್ಣವೇ ? ಸಂಘರ್ಷವೇ ? ಮಾತುಗಳೇ ? ಮೌನವೇ ? ಶಬ್ದವೇ ? ಸಂಬಂಧಗಳೇ ? ಸಂಸ್ಕಾರಗಳೇ ?
ಶಾಸ್ತ್ರಗಳೇ ? ಕವಿತೆಯೇ ? ಕಥೆಯೇ ? ಕಾದಂಬರಿಯೇ ?
ನವರಸಗಳ ಪ್ರದರ್ಶನವೇ ? ಅರಿಷಡ್ವರ್ಗಗಳ ಅರಿವಿನ ವ್ಯಕ್ತಪಡಿಸುವಿಕೆಯೇ ? ಪಂಚೇದ್ರಿಯಗಳ ಸ್ಪರ್ಶದ ಗ್ರಹಿಕೆಯೇ ?……..
ಸಾಹಿತ್ಯವೆಂಬುದು…….
ಭಾಷೆಯ ಒಡಲು, ಭಾವನೆಗಳ ಕಡಲು, ಅಕ್ಷರಗಳ ಮಡಿಲು, ಕಲ್ಪನಾ ಲೋಕದ ಸವಾಲು, ಕ್ರಿಯಾತ್ಮಕತೆಯ ಒಲವು, ಮನುಷ್ಯನ ನಿಲುವು, ಪ್ರಾಸಗಳ ಚೆಲುವು, ವ್ಯಾಕರಣದ ತಿಳಿವು, ಛಂದಸ್ಸಿನ ಅರಿವು, ಮನಸ್ಸುಗಳ ಹರಿವು, ಜ್ಞಾನದ ಸುಳಿವು, ಜೀವಂತಿಕೆಯ ಕುರುಹು…..
ಈ ಎಲ್ಲದರ ಸಮ್ಮಿಲನ….
ಅದೇ ಸಾಹಿತ್ಯದ ಸಂಕಲನ….
ನಮ್ಮೆಲ್ಲರ ಶುಭ ಮಿಲನ…..
ಹಾಗೆಯೇ ಸಾಹಿತ್ಯದ ಶ್ರೇಷ್ಠತೆ ಎಲ್ಲಿ ? ಹೇಗೆ ?…..
ನೋವು ಮತ್ತು ನೊಬೆಲ್ ಸಾಹಿತ್ಯ ಪ್ರಶಸ್ತಿ…….
ವಿಶ್ವ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಎಂದು ನೊಬೆಲ್ ಪರಿಗಣಿಸಲ್ಪಟ್ಟಿದೆ………
ಹೆಚ್ಚು ಕಡಿಮೆ ಇಲ್ಲಿಯವರೆಗೂ ತನ್ನ ಮೂಲ ಆಶಯದ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದೆ……
( ಎಂದಿನಂತೆ ಒಂದಷ್ಟು ವಿವಾದ – ಅಸಮಾಧಾನ ಇದ್ದೇ ಇರುತ್ತದೆ )
ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಕೃತಿಗಳ ಸಾರಾಂಶಗಳನ್ನು ಓದುತ್ತಿರುವಾಗ ಗಮನಸೆಳೆಯುವ ಅಂಶವೆಂದರೆ ಬಹುತೇಕ ರಚನೆಗಳು ಅಂದರೆ ಶೇಕಡಾ 90% ಬರಹಗಳು ಶೋಷಣೆಯ, ಬಡತನದ, ಮೌಢ್ಯದ, ಅರಾಜಕತೆಯ, ದೌರ್ಜನ್ಯದ, ವ್ಯವಸ್ಥೆಯ ವಿರುದ್ಧದ, ಬದುಕಿನ ತಳಮಳಗಳ, ಅಸಹಾಯಕತೆಯ ವಿಷಯಗಳೇ ಕಂಡುಬರುತ್ತವೆ. ರಮ್ಯತೆಯ, ಆಧ್ಯಾತ್ಮದ, ಪ್ರೀತಿ ಪ್ರೇಮದ, ಪ್ರಾಕೃತಿಕ ಸೌಂದರ್ಯದ, ವೈಚಾರಿಕತೆಯ, ಕೌಟುಂಬಿಕ ಸಂಬಂಧಗಳ ವಿಷಯ ತುಂಬಾ ಕಡಿಮೆ ಇದೆ.
ಏಕೆ ಈ ಪ್ರಶಸ್ತಿ ಪುರಸ್ಕೃತ ಸಾಹಿತ್ಯವು ಹೆಚ್ಚಾಗಿ ನೋವನ್ನೇ ಅವಲಂಬಿಸಿದೆ ?
ಇಡೀ ವಿಶ್ವದಲ್ಲೇ ಅತಿಹೆಚ್ಚು ಪ್ರಸಾರ, ಜನಪ್ರಿಯತೆ, ಓದುಗರು, ಆರಾಧಕರು, ಅಭಿಮಾನಿಗಳು, ಅನುಯಾಯಿಗಳು ಇರುವುದು ಧಾರ್ಮಿಕ ಸಾಹಿತ್ಯಕ್ಕೆ……
ಅತಿಹೆಚ್ಚು ಬರೆಯಲ್ಪಡುವುದು ಪ್ರೀತಿ ಪ್ರೇಮಗಳಿಗೆ ಸಂಬಂಧಿಸಿದ ಸಾಹಿತ್ಯ. ಅದರಲ್ಲೂ ಯುವ ಬರಹಗಾರರ ನೆಚ್ಚಿನ ವಿಷಯವಿದು.
ಸಾಹಸ, ಶೃಂಗಾರ, ಹಾಸ್ಯ, ವಿಜ್ಞಾನ ಮುಂತಾದ ಸಾಹಿತ್ಯಗಳು ವಿಶೇಷವಾಗಿ ಅಲ್ಪ ಪ್ರಮಾಣದಲ್ಲಿ ಗುರುತಿಸಲ್ಪಡುತ್ತದೆ.
ಆದರೆ
ನೋವಿನ ಸಾಹಿತ್ಯ ಬಹುತೇಕ ಶ್ರೇಷ್ಠ ಸಾಹಿತ್ಯವಾಗಿ ಹೊರಹೊಮ್ಮುತ್ತದೆ – ಕಾಡುತ್ತದೆ – ಪ್ರಶಸ್ತಿ ಪಡೆಯುತ್ತದೆ. ನೋವು ಪ್ರೀತಿಯಲ್ಲಿ ಇರಬಹುದು, ಯುದ್ದದಲ್ಲಿ ಇರಬಹುದು, ಪ್ರಕೃತಿಯ ನಾಶದಲ್ಲಿ ಇರಬಹುದು, ಮಾನವೀಯ ಮೌಲ್ಯಗಳಲ್ಲಿ ನೋವಿನ ಅಂತರಾಳ ಎಲ್ಲರನ್ನೂ ತಟ್ಟುತ್ತದೆ.
ನೋವಿನ ತೀವ್ರತೆ ಅಳೆಯುವ ಯಾವುದೇ ಮಾಪನ ಇಲ್ಲ ನಿಜ. ನೋವು ಖಾಸಗಿಯಾಗಿರಬಹುದು, ಸಾಮೂಹಿಕವಾಗಿರಬಹುದು, ವೈಯಕ್ತಿಕವಾಗಿರಬಹುದು, ಸಾರ್ವಜನಿಕವಾಗಿರಬಹುದು. ಅದು ವ್ಯಕ್ತಿಯ ಮನಸ್ಸಿನ ಮೇಲೆ ಬೀರುವ ಪರಿಣಾಮಗಳ ಆಧಾರದಲ್ಲಿ ನಿರ್ಧರಿಸಲ್ಪಡುತ್ತದೆ. ಅದನ್ನು ಸ್ವೀಕರಿಸುವ ವ್ಯಕ್ತಿಯ ಮನಸ್ಥಿತಿಯ ಮೇಲೆ ಅವಲಂಭಿಸಿರುತ್ತದೆ. ಆದರೆ ಅದರಿಂದ ಮೂಡುವ ಭಾವನೆಗಳು ಕಲೆ ಸಂಗೀತ ಸಾಹಿತ್ಯ ಮುಂತಾದ ಪ್ರಕಾರಗಳಲ್ಲಿ ಪ್ರಕಟವಾದಾಗ ಓದುವವರು ನೋಡುವವರು ಕೇಳುವವರು ಭಾವ ತೀವ್ರತೆಗೆ ಒಳಗಾಗುತ್ತಾರೆ.
ಮನುಷ್ಯನ ವ್ಯಕ್ತಿತ್ವದಲ್ಲಿ ಆತನ ಜೀವಿತ ಕಾಲದಲ್ಲಿ ಅನೇಕ ಘಟನೆಗಳು ಸಂಭವಿಸಿ ಎಲ್ಲಾ ರೀತಿಯ ಭಾವನೆಗಳನ್ನು ಹೊಮ್ಮಿಸುತ್ತದೆ. ಅದರಲ್ಲಿ ನೋವಿನ ನೆನಪು ಮಾತ್ರ ಇತರ ಭಾವನೆಗಳ ಮೇಲೆ ಸವಾರಿ ಮಾಡುತ್ತದೆ. ಬೇಕಾದರೆ ಒಮ್ಮೆ ಅವಲೋಕಿಸಿ ನೋಡಿ ಪ್ರೀತಿ, ಸಂತೋಷ, ಕೋಪ, ಭಯ ಮುಂತಾದ ಇತರ ಭಾವನೆಗಳು ಇದ್ದರೂ ನೋವಿನ ಘಟನೆಗಳು ಮಾತ್ರ ಬೇಡ ಬೇಡವೆಂದರೂ ಮತ್ತೆ ಮತ್ತೆ ಕಾಡುತ್ತಲೇ ಇರುತ್ತವೆ. ಅದನ್ನೇ ಚಿಂತೆ ಎಂದು ಲೋಕದ ಆಡು ಭಾಷೆಯಲ್ಲಿ ಕರೆಯಲಾಗುತ್ತದೆ.
ಚಿತೆ ( ಬೆಂಕಿ ) ನಮ್ಮನ್ನು ಒಮ್ಮೆ ಸುಟ್ಟರೆ ಚಿಂತೆ ಇಡೀ ಬದುಕಿನ ಪ್ರತಿಕ್ಷಣವನ್ನು ಸುಡುತ್ತಲೇ ಇರುತ್ತದೆ.
ಹಲವಾರು ಹುಟ್ಟುಗಳ ನಡುವೆ ಒಂದು ಸಾವು, ಎಷ್ಟೋ ಸಂಬಂಧಗಳ ನಡುವೆ ಒಂದು ವಿರಹ, ಅನೇಕ ಲಾಭಗಳ ನಡುವೆ ಒಂದು ನಷ್ಟ, ಅಪಾರ ಹೊಗಳಿಕೆಗಳ ನಡುವೆ ಒಂದು ತೆಗಳಿಗೆ ನಮ್ಮನ್ನು ಅಲ್ಲಾಡಿಸಿಬಿಡುತ್ತದೆ. ಇರುವುದಕ್ಕಿಂತ ಇಲ್ಲದಿರುವುದರ ಕಡೆಯೇ ಮನಸ್ಸು ಸದಾ ಯೋಚಿಸುತ್ತದೆ.
ಆ ಕಾರಣದಿಂದಾಗಿಯೇ ನೋವಿನ ಸಾಹಿತ್ಯ ಓದುಗರೆದೆಯಲ್ಲಿ ಸೃಷ್ಟಿಸುವ ತಳಮಳ ಮತ್ತು ಅದರಿಂದ ಏಳುವ ಮಾನಸಿಕ ಅಲೆಗಳು ಅನಂತರದ ಪರಿಣಾಮಗಳು ಗಾಢ ಅನುಭವ ನೀಡುತ್ತದೆ. ನಮ್ಮ ವೈಯಕ್ತಿಕ ಬದುಕಿನೊಂದಿಗೆ ಸಮೀಕರಣಗೊಳ್ಳುತ್ತದೆ.
ದೀರ್ಘಕಾಲ ಉಳಿಯುತ್ತದೆ.
ಹಾಗೆಂದ ಮಾತ್ರಕ್ಕೆ ಬೇರೆ ಪ್ರಕಾರದ ಸಾಹಿತ್ಯ ಈ ಗುಣಲಕ್ಷಣಗಳನ್ನು ಹೊಂದಿಲ್ಲ ಎಂಬ ಅಭಿಪ್ರಾಯಕ್ಕೆ ಬರಬಾರದು. ಅದು ಓದುಗರ ಆಸಕ್ತಿಯನ್ನು ಅವಲಂಬಿಸಿರುತ್ತದೆ. ಅವರ ವಯಸ್ಸು, ಅವರ ಬದುಕಿನ ಸ್ಥಿತಿ ಗತಿಗಳು, ಬೆಳೆದ ಪರಿಸರ ಎಲ್ಲವೂ ಇದನ್ನು ನಿರ್ಧರಿಸುತ್ತದೆ.
ಆದರೆ ಒಟ್ಟಾರೆ ನೋವಿನ ಸಾಹಿತ್ಯ ಬರಹಗಳಲ್ಲಿ ಸೃಷ್ಟಿಸುವ ತವಕ ತಲ್ಲಣಗಳು ಇತರೆ ಸಾಹಿತ್ಯ ಪ್ರಕಾರಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂಬುದು ಸಾಮಾನ್ಯ ಸ್ಥಿತಿಯಲ್ಲಿ ಕಂಡುಬರುತ್ತದೆ. ನೋವಿನ ಮನಸ್ಥಿತಿಯಲ್ಲಿ ಇದ್ದವರಿಗಂತೂ ಇನ್ನೂ ಹೆಚ್ಚು ಕಾಡುತ್ತದೆ. ಓದುತ್ತಾ ಓದುತ್ತಾ ಕಣ್ಣೀರಾಗುತ್ತಾರೆ.
ಕಾಡದಿರು ನೀನು
ನೋವೆಂಬ ಮಾಯೆ,
ಎಷ್ಟೊಂದು ಹಿಂಸೆ
ನೆನಪುಗಳ ಭಾರ,
ಮುಂದಕ್ಕೂ ಚಲಿಸಲು ಬಿಡದೆ,
ಹಿಂತಿರುಗಲೂ ಅವಕಾಶ ನೀಡದೆ,
ಕಾಡದಿರು ನೀನು ನೋವೆಂಬ ಮಾಯೆ……….
ಸಾಹಿತ್ಯವನ್ನು ಅತ್ಯಂತ ವಿಶಾಲ ಅರ್ಥದಲ್ಲಿ ಗ್ರಹಿಸಬೇಕು. ಭಾಷೆಯ ಮೇಲಿನ ಹಿಡಿತ, ವಿಷಯಗಳ ವ್ಯಾಪ್ತಿ, ಅದು ಸಾಹಿತ್ಯ ಕ್ಷೇತ್ರ ಮತ್ತು ಜನಸಾಮಾನ್ಯರಲ್ಲಿ ಬೀರಿರುವ ಪ್ರಭಾವ, ಎಷ್ಟು ದೀರ್ಘಕಾಲದಿಂದ ಅದು ಉಳಿದು ಬಂದಿದೆ, ಪ್ರಶಸ್ತಿ ಮಾನದಂಡಗಳಲ್ಲಿ ಅದಕ್ಕಿರುವ ಸ್ಥಾನ, ಓದುವಾಗ ಆ ಸಾಹಿತ್ಯ ಓದುಗರ ಮನದಲ್ಲಿ ಮೂಡಿಸುವ ಭಾವ ತರಂಗಗಳು, ಸಾಹಿತ್ಯ ಪ್ರಕಾರಗಳು, ಭಾರತೀಯ ಮತ್ತು ವಿಶ್ವದ ಇತರ ಭಾಷೆಗಳ ಸಾಹಿತ್ಯದ ಆಳ ಅಗಲಗಳ ಮೂಲದಿಂದ ಪರಿಶೀಲನೆ, ಸಾಹಿತ್ಯದ ದೂರದೃಷ್ಟಿ, ಮಾನವೀಯ ಸ್ಪಂದನೆ, ಸಾಹಿತಿಯ ಒಟ್ಟು ವ್ಯಕ್ತಿತ್ವ ಮುಂತಾದ ಎಲ್ಲವನ್ನೂ ಒಳಗೊಂಡಿರಬೇಕು.
ದಾಖಲಾತಿಯ ಸಾಹಿತ್ಯ, ಹೊಗಳಿಕೆಯ ಸಾಹಿತ್ಯ, ಪೌರಾಣಿಕ ಸಾಹಿತ್ಯ, ಐತಿಹಾಸಿಕ ಸಾಹಿತ್ಯ, ಭಕ್ತಿ ಸಾಹಿತ್ಯ, ದಾಸ ಸಾಹಿತ್ಯ, ವಚನ ಸಾಹಿತ್ಯ, ನವ್ಯ ಸಾಹಿತ್ಯ, ನವೋದಯ ಸಾಹಿತ್ಯ, ನವ್ಯೋತ್ತರ ಸಾಹಿತ್ಯ, ಬಂಡಾಯ ಸಾಹಿತ್ಯ, ಮಹಿಳಾ ಸಾಹಿತ್ಯ, ಶಿಶು ಸಾಹಿತ್ಯ, ಜಾನಪದ ಸಾಹಿತ್ಯ, ಆಧ್ಯಾತ್ಮಿಕ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಹಾಸ್ಯ ಸಾಹಿತ್ಯ ಮುಂತಾದ ಎಲ್ಲಾ ಸಾಹಿತ್ಯ ಪ್ರಕಾರಗಳನ್ನು ಒಳಗೊಂಡು….
ಕಥೆ, ಕಾದಂಬರಿ, ಕಾವ್ಯ, ನಾಟಕ, ಪ್ರಬಂಧ, ಸಂಶೋಧನೆ, ಅನುವಾದ, ವಿಮರ್ಶೆ ಇತ್ಯಾದಿ ಎಲ್ಲವೂ ಸೇರಿ…..
ಕುವೆಂಪು ಅವರು ಕನ್ನಡ ಸಾಹಿತ್ಯ ಕ್ಷೇತ್ರದ ಮೇರು ಪರ್ವತ ಅಗುವುದು ಇಲ್ಲಿಯೇ….
ಸಾಂಕೇತಿಕವಾಗಿ ಹೇಳುವುದಾದರೆ……
ರಾಮಾಯಣ ದರ್ಶನಂ ಎಂಬ ಮಹಾಕಾವ್ಯ, ಜಯ ಭಾರತ ಜನನಿಯ ತನುಜಾತೆ ಎಂಬ ನಾಡಗೀತೆ, ನೇಗಿಲ ಯೋಗಿ ಎಂಬ ರೈತ ಗೀತೆ, ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ, ದೋಣಿ ಸಾಗಲಿ ಮುಂದೆ ಹೋಗಲಿ, ಎಲ್ಲಾದರು ಇರು ಎಂತಾದರೂ ಇರು, ಭಾರಿಸು ಕನ್ನಡ ಡಿಂಡಿಮವ ಎಂಬ ಭಾಷಾ ಮಹತ್ವದ ರಚನೆಗಳು, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಎಂಬ ಕಾದಂಬರಿಗಳು, ಶೂದ್ರ ತಪಸ್ವಿ, ಬೆರಳ್ಗೆ ಕೊರಳ್ ನಾಟಕಗಳು, ಎಲ್ಲಕ್ಕಿಂತ ಹೆಚ್ಚಾಗಿ ವಿಶ್ವದ ಮಾನವರೆಲ್ಲರೂ ಒಂದೇ ಎನ್ನುವ
” ವಿಶ್ವ ಮಾನವ ಪ್ರಜ್ಞೆ ” ಎತ್ತಿ ಹಿಡಿದ ಮಹಾನ್ ಸಾಹಿತಿ ಕುವೆಂಪು.
ಅವರನ್ನು ಅತ್ಯಂತ ಪ್ರೀತಿ, ಅಭಿಮಾನದಿಂದ ಸ್ಮರಿಸುತ್ತಾ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451………
9844013068…….
