ವಿಜಯ ದರ್ಪಣ ನ್ಯೂಸ್….
ಮರಳಿ ಅಧಿಕಾರಕ್ಕೆ ಬರಲು ಕಾರ್ಯಕರ್ತರ ಶಕ್ತಿಯೇ ಮುಖ್ಯ:ಡಿ ವಿ ಸದಾನಂದಗೌಡ

ತಾಂಡವಪುರ ಮೇ 25: ಒಬ್ಬ ಜನಪ್ರತಿನಿಧಿಯ ಶೇ.75ರಷ್ಟು ಶಕ್ತಿ ಕಾರ್ಯಕರ್ತರು ಹಾಗೂ ಪಕ್ಷ ಆಗಿರುತ್ತದೆ. ಮೈಸೂರಿನಲ್ಲಿ ಕಳೆದ ಚುನಾವಣೆಯಲ್ಲಿ ನೀವು ಕಳೆದುಕೊಂಡಿದ್ದನ್ನು ಮತ್ತೆ ಪಡೆದುಕೊಳ್ಳಲು ಕಾರ್ಯಕರ್ತರ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.
ನಗರದ ಹೊರ ವಲಯದ ಲಿಂಗದೇವರಕೊಪ್ಪಲಿನ ಪ್ರಜಾಪಿತ ಬ್ರಹ್ಮ ಕುಮಾರಿ ಆಶ್ರಮದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-2026 ಅಂಗವಾಗಿ ಬಿಜೆಪಿಯ ಮೈಸೂರು ನಗರದ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಅವರು ಮಾತನಾಡಿದರು. ಘೋಷಣೆ, ಅನುಷ್ಠಾನ ಆಧಾರಿತ ರಾಜಕಾರಣ ನಮ್ಮ ಧ್ಯೇಯ. ದೀನ್ ದಯಾಳ್ ಉಪಾಧ್ಯಾಯರ ಆಶಯದಂತೆ ಕೊನೆಯ ಜನರನ್ನೂ ತಲುಪಬೇಕು. ಶಿಸ್ತಿಲ್ಲದ ಪಕ್ಷ ಬೆಳೆಯಲು ಸಾಧ್ಯವಿಲ್ಲ. ಅಂತಹ ಪಕ್ಷ ದೃಶ್ಯದಲ್ಲಿ ಯಾವ ಸ್ಥಿತಿಗೆ ಬಂದಿದೆ ಎಂದು ನೋಡಿದ್ದೇವೆ. ಪಕ್ಷದ ಪ್ರತಿಯೊಬ್ಬನೂ ಗೌರವ ಪಡೆಯಲು ಪಕ್ಷದ ಮೂಲ ಸಿದ್ಧಾಂತ ತಿಳಿಯಬೇಕು ಎಂಬ ಕಾರಣಕ್ಕೆ ಪ್ರಶಿಕ್ಷಣ ವರ್ಗ ಆರಂಭವಾಗಿದೆ. ಪಕ್ಷದ ಕಾರ್ಯಕರ್ತ ಬಲಿಷ್ಠನಾದಾಗ ಪಕ್ಷ ಬಲಿಷ್ಠನಾಗುತ್ತಾನೆ ಎಂದರು.
ರಾಜಕಾರಣದಲ್ಲಿ ವಿಚಾರಗಳನ್ನು ಒಳಗಿಟ್ಟುಕೊಂಡು ಭಾವನಾತ್ಮಕ ಪ್ರತಿಕ್ರಿಯೆ ನೀಡಿದರೆ, ಕಾರ್ಯಕರ್ತ ಬೆಳವಣಿಗೆ ಆಗುವುದಿಲ್ಲ. ಬಿಜೆಪಿ ವಿಚಾರಕ್ಕೆ ಒತ್ತು ಕೊಟ್ಟು ಕೆಲಸ ಮಾಡಿಕೊಂಡು ಬಂದಿದೆ. ದೇಶ ಮೊದಲು ಎಂಬ ಪರಿಕಲ್ಪನೆಯಲ್ಲಿ ಕೆಲಸ ಮಾಡಿದೆ. ಅಯೋಧ್ಯೆ ಶ್ರೀರಾಮ ಮಂದಿರದ ನಿರ್ಮಾಣ. ಆರ್ಟಿಕಲ್ 370 ವಿಚಾರಗಳನ್ನು ಅಧಿಕಾರ ಇದ್ದಾಗ ಇಲ್ಲದಾಗಲೂ ಪ್ರತಿಪಾದಿಸಿದ್ದೆವು. ಸ್ವಾಭಿಮಾನಿ, ಸಮೃದ್ಧ ದೇಶದ ವಿಚಾರಕ್ಕೆ ಬದ್ದವಾದ ರಾಜಕೀಯ ನೀತಿ ಬರಲು ಬಿಜೆಪಿ ರೂಪುಗೊಂಡಿದ್ದಾಗಿ ಹೇಳಿದರು.ರಾಜಕಾರಣಿಗಳಿಗೂ ಪುನಶ್ಚೇತನ ಕಾರ್ಯಕ್ರಮ ಇರುತ್ತದೆ. ಬದಲಾವಣೆಗೆ ಅನುಗುಣವಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತಿಳಿಸುತ್ತೇವೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ಹಿರಿಯರ ವಿಚಾರಕ್ಕೆ ಬದ್ಧವಾಗಿ ನಾವು ಕೆಲಸ ಮಾಡಬೇಕು. ನೀವು ಜನರ ಬಳಿಗೆ ಯೋಜನೆ ತಲುಪಿಸಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಗಳು ಯಶಸ್ವಿಯಾಯಿತು ಎಂದರು.
ರಾಜಕೀಯ ಪಕ್ಷದ ಕಾರ್ಯಕರ್ತ ಹೀಗಿರಬೇಕೋ ಅಂತಹ ನಡವಳಿಕೆ ಇರಬೇಕು. ಎಲ್ಲರೂ ವಿವೇಕಾನಂದರು, ನರೇಂದ್ರ ಮೋದಿ ಆಗಲು ಸಾಧ್ಯವಿಲ್ಲ. ಆದರೆ ಸದ್ವಿಚಾರಗಳನ್ನು ಅಳವಡಿಸಿಕೊಂಡು ನಾಯಕತ್ವ ಬೆಳೆಸಿಕೊಳ್ಳಬೇಕು. ಹೊಗಳಿಕೆಯಲ್ಲಿ ಅಡಗಿರುವ ಸುಳ್ಳನ್ನು ಯಾರು ತಿಳಿದುಕೊಳ್ಳುತ್ತಾರೋ ಅವರು ಯಶಸ್ವಿಯಾಗುತ್ತಾರೆ. ಟೀಕೆಯಲ್ಲಿ ಅಡಗಿರುವ ಸುಳ್ಳು. ಹೊಗಳಿಕೆಯಲ್ಲಿನ ಸತ್ಯ ಎರಡನ್ನೂ ಗುರುತಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಬಿಜೆಪಿಯ ಬೇರು ಕಾರ್ಯಕರ್ತರು. ಅವರೇ ನಮ್ಮ ನಾಯಕರು. ಭಾರತೀಯ ಸಿದ್ಧಾಂತವೇ ನಮ್ಮ ಸಿದ್ದಾಂತ ಆಗಿರುವುದರಿಂದ ರಾಷ್ಟ್ರವೇ ನಮ್ಮನ್ನು ಒಪ್ಪಿಕೊಂಡಿದೆ. ವೈಯಕ್ತಿಕ ಆಕಾಂಕ್ಷೆಯ ಜೊತೆಗೆ ಸಿದ್ಧಾಂತದ ಗುರಿಯೊಂದಿಗೆ ಮುಂದುವರಿಯಬೇಕು. ದೇಶದಲ್ಲಿ ಬಲಿಷ್ಠವಾಗಿ ಇದ್ದರೂ, ಶ್ರೇಷ್ಠ ದೇಶ ನಿರ್ಮಾಣಕ್ಕೆ ಅನೇಕ ಸಮಸ್ಯೆ ಇದೆ. ಅದನ್ನು ಎದುರಿಸಲು ಕಾರ್ಯಕರ್ತರ ಶಕ್ತಿ ಅಗತ್ಯ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಅವರನ್ನು ಹೇಗೆ ಎದುರಿಸುತ್ತೇವೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ದುರಾಡಳಿತದ ಬಗ್ಗೆ ಜನರಿಗೆ ತಿಳಿಸಬೇಕಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಆಡಳಿತ ಬರುವ ಅವಕಾಶ ಇದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಮಾಜಿ ಸದಸ್ಯರಾದ ತೋಂಟದಾರ್ಯ, ಸಿದ್ದರಾಜು, ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಮೇಯರ್ ಗಳಾದ ಶಿವಕುಮಾರ್, ಸಂದೇಶ್ ಸ್ವಾಮಿ, ಮಹಿಳಾ ಮೋರ್ಚಾದ ಮಾಳವಿಕಾ ಅವಿನಾಶ್, ಹೇಮಾ ನಂದೀಶ್, ಅಲ್ಪಸಂಖ್ಯಾತರ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಅನಿಲ್ ಥಾಮಸ್, ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜೇಗೌಡ, ಮುಖಂಡರಾದ ಬಿ.ಎಂ.ರಘು, ಅರುಣ್ ಕುಮಾರ್ ಗೌಡ ಮೊದಲಾದವರು ಇದ್ದರು.
ಮತ್ತೆ ಅಧಿಕಾರಕ್ಕೆ ಬಿಜೆಪಿ ತರಲು ಸಲಹೆ ಕೊಟ್ಟಿದ್ದಾರೆ: ಸದಾನಂದಗೌಡ ಮೈಸೂರು:ನಬಿನ್ ಭೇಟಿಯಿಂದ ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ. ನಮ್ಮ ನಾಯಕರು ಯುವಕರಿಗೆ ರಾಷ್ಟ್ರೀಯ ಅಧ್ಯಕ್ಷ ಪಟ್ಟ ಕೊಟ್ಟಿದ್ದಾರೆ. ಚೀನಾದ ಕಮ್ಯುನಿಸ್ಟ್ ಪಾರ್ಟಿಗಿಂತ ನಮ್ಮದು ದೊಡ್ಡ ಪಕ್ಷ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಮತ್ತೆ ಅಧಿಕಾರ ಮರಳಿ ಪಡೆಯಲು ಕಾರ್ಯ ಪ್ರವೃತ್ತಿಯಾಗಬೇಕು. ಈ ನಿಟ್ಟಿನಲ್ಲಿ ನಿತಿನ್ ನಬಿನ್ ಸಲಹೆಗಳನ್ನು ಕೊಟ್ಟಿದ್ದಾರೆಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.
ಮೈಸೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ರಾಜ್ಯ ಭೇಟಿ ವಿಚಾರ ಕುರಿತು ಮೇಲಿನಂತೆ ಪ್ರತಿಕ್ರಯಿಸಿದರು. ಬಳಿಕ ನಾನು ಈಗಾಗಲೇ ಚುನಾವಣೆ ರಾಜಕಾರಣದಿಂದ ನಿವೃತ್ತಿಯಾಗಿದ್ದೇನೆ. ಪಕ್ಷ ಬೇರೆ ಯಾವ ಜವಾಬ್ದಾರಿ ಕೊಟ್ಟರೂ ನಿರ್ವಹಿಸುತ್ತೇನೆ. ರಾಜ್ಯ ಸಭೆಗೆ ನಾನು ಕೂಡ ಆಕಾಂಕ್ಷಿ ಎಂದು ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ. ಪಕ್ಷದ ಹೈ ಕಮಾಂಡ್ ತೀರ್ಮಾನಕ್ಕೆ ನಾನು ಬದ್ಧವಾಗಿದ್ದೇನೆಂದರು. ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಪ್ರತಿಕ್ರಯಿಸಿ, ಬದಲಾವಣೆ ನಾವು ಮಾಡೋದ್ದಲ್ಲ. ನಮ್ಮ ಹೈ ಕಮಾಂಡ್ ಬದಲಾವಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ. ಈಗಾಗಲೇ ರಾಜ್ಯಾಧ್ಯಕ್ಷ ವಿಜಯೇಂದ್ರ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರ ಕಾಲಾವಧಿ ಮುಗಿಯಲಿ. ಬಳಿಕ ನಮ್ಮ ವರಿಷ್ಠರು ಬದಲಾವಣೆ ಅವಶ್ಯಕತೆ ಇದ್ರೆ ನಾಲ್ಕು ಗೋಡೆಗಳ ಮಧ್ಯೆ ತೀರ್ಮಾನ ಮಾಡುತ್ತಾರೆ. ಇದರಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಏನಿಲ್ಲವೆಂದರು.
ಪೆಟ್ರೋಲ್ ಡೀಸೆಲ್ ದರ ಏರಿಕೆ ವಿಚಾರವಾಗಿ ಪ್ರತಿಕ್ರಯಿಸಿ, ಜಗತ್ತಿನಲ್ಲಿ ಸ್ವಲ್ಪ ಬಿಕ್ಕಟ್ಟು ಎದುರಾಗಿದೆ. ಹಾಗಾಗಿ ಸ್ವಲ್ಪ ಮಟ್ಟಿಗೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ ಏರಿಕೆಯಾಗಿದೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಎಸ್ಐಆರ್ ವಿರೋಧಿಸುತ್ತಿರುವ ವಿಚಾರವಾಗಿ ಪ್ರತಿಕ್ರಯಿಸಿ, ರಾಜ್ಯದಲ್ಲಿ ಬ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಗೆ ಜನರು ಬೇಸತ್ತಿದ್ದಾರೆ. ಈಗ ಚುನಾವಣೆ ನಡೆದರೆ ಕಾಂಗ್ರೆಸ್ 50 ಸೀಟು ಗೆಲ್ಲೋದು ಕಷ್ಟ, ಹೀಗಾಗಿ ಕಾಂಗ್ರೆಸ್ ಎಲ್ಲವನ್ನೂ ವಿರೋಧ ಮಾಡುತ್ತಿದೆ. ಜನರೇ ಕಾಂಗ್ರೆಸ್ ಗೆ ಉತ್ತರ ಕೊಡುವ ಕೆಲಸ ಮಾಡುತ್ತಾರೆಂದರು.








