ವಿಜಯ ದರ್ಪಣ ನ್ಯೂಸ್…..
ಪ್ರಾಥಮಿಕ , ಪ್ರೌಢಶಾಲಾ ಹಂತದಲ್ಲಿಯೇ ಶೈಕ್ಷಣಿಕ ಬೇರನ್ನು ಗಟ್ಟಿಗೊಳಿಸಬೇಕು : ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್

ಬೆಂಗಳೂರು : ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿಯೇ ಶೈಕ್ಷಣಿಕ ಮತ್ತು ಸಾಮಾಜಿಕ ದೃಷ್ಟಿಯಲ್ಲಿ ಗಟ್ಟಿಯಾದ ಬುನಾದಿ ಹಾಕಬೇಕಿದೆ. ಅಮೇರಿಕಾದಂತಹ ದೊಡ್ಡ ದೊಡ್ಡ ರಾಷ್ಟ್ರಗಳಲ್ಲಿ ಪಿಯುಸಿವರೆಗೆ ವಿದ್ಯಾಭ್ಯಾಸ ಮುಗಿಸಿ ನಂತರ ತಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇರುತ್ತದೆ ಅಂತಹ ಕಡೆಗೆ ಹೋಗಿ ತರಬೇತಿ ಪಡೆದು ವೃತ್ತಿಪರತೆ ಹೊಂದುತ್ತಾರೆ ಎಂದು ಹಿರಿಯ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯ ಪಟ್ಟರು.

ಅವರು ಸಿದ್ಧನಹಳ್ಳಿಯ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ) ಅವರು ನಗರದ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಇವತ್ತು ಶಿಕ್ಷಣ,ಆರೋಗ್ಯ, ಉದ್ಯೋಗ ಉಳ್ಳವರ ಪಾಲಾಗುತ್ತಿವೆ. ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ, ಹಾಗಾಗಿ ಗ್ರಾಮೀಣ ಪ್ರದೇಶದ ಜನರು ಮತ್ತು ಅವರ ಮಕ್ಕಳ ಜೀವನ ಮಟ್ಟ ಸುಧಾರಿಸಲು ಆಳುವ ಸರ್ಕಾರಗಳು ಕೆಲವು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದರು.

ಸಮ್ಮೇಳನ ಅಧ್ಯಕ್ಷರಾದ ಸಾ.ಮ.ಶಿವಮಲ್ಲಯ್ಯ ಅವರು ತಮ್ಮ ಮೂವರು ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿ ಬೇರೆಯವರಿಗೂ ಮಾರ್ಗದರ್ಶನ ಆಗುವಂತಹ ರೀತಿಯಲ್ಲಿ ಮಕ್ಕಳ ಬದುಕನ್ನು ಕಟ್ಟಿಕೊಟ್ಟಿರುವುದು ಶ್ಲಾಘನೀಯ ಎಂದರು.

ಸಾ.ಮ.ಶಿವಮಲ್ಲಯ್ಯ ಅವರ *ಬಿತ್ತನೆ, ಹಾಗೂ ಎರಡು ನಾಟಕ* ಕೃತಿಗಳನ್ನು ಲೋಕಾರ್ಪಣೆ ಮಾಡಿದ ಪ್ರಜಾವಾಣಿ ಕನ್ನಡ ದಿನಪತ್ರಿಕೆ ಸಂಪಾದಕ ರವೀಂದ್ರ ಭಟ್ಟ ಅವರು ಗ್ರಾಮೀಣ ಪರಿಸರದಲ್ಲಿ ಬೆಳೆದ ಪ್ರತಿಯೊಬ್ಬರ ಬದುಕು ಉತ್ತಮವಾಗಿರುತ್ತದೆ, ಇವತ್ತು ಕಲೆ ಸಾಹಿತ್ಯ ಸಂಸ್ಕೃತಿ ಸಮಾಜ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕಲಿಯಬೇಕು, ಆಗಾಗ್ಗೆ ಸಮಾಜಕ್ಕೆ ಹೊಂದಿಕೊಂಡು ಹೋಗುವ ಗುಣ ಎಲ್ಲರದಾಗಬೇಕು ಎಂದರು.
ರೈತಾಪಿ ಜನರ ಕೃಷಿ ಜೀವನವನ್ನು ಸರಳವಾಗಿ ತೆರೆದಿಡುವ ಪ್ರಯತ್ನ ಈ ಎರಡೂ ಕೃತಿಗಳಿಂದ ಮಾಡಿದ್ದಾರೆ ಎಂದರು. ಸಾಹಿತಿ ಆಗುಂಬೆ ಎಸ್ ನಟರಾಜ್ ತಮ್ಮ ವೃತ್ತಿ ಜೀವನದ ಅನೇಕ ವಿಚಾರಗಳನ್ನು ಮೆಲುಕು ಹಾಕಿದರು.

ಕವಯಿತ್ರಿ ಆಶಾಶಿವು ಗೌಡ ಮಾತನಾಡಿ ಯಾರಲ್ಲಿ ಪ್ರತಿಭೆ ಇದೆಯೋ ಅಂತವರನ್ನು ವೇದಿಕೆ ಕೊಟ್ಟು ಬೆಳೆಸುವ ಗುಣ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಅದರ ಪದಾಧಿಕಾರಿಗಳು ಮಾಡುತ್ತಿರುವುದು ಎಲ್ಲರೂ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಸಮ್ಮೇಳನ ಅಧ್ಯಕ್ಷರಿಗೆ ಮತ್ತು ಅಭಿನಂದಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಡಾ.ಎಸ್.ರಾಮಲಿಂಗೇಶ್ವರ ಪ್ರಾಸ್ತಾವಿಕ ನುಡಿಗಳಾಡಿದರು, ಬೆಳಗ್ಗೆ ನಡೆದ ಧ್ವಜಾರೋಹಣವನ್ನು ಹಿರಿಯ ಗಾಯಕ, ಕವಿ, ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ ವಿ.ರೇಣುಕಾ ಪ್ರಸನ್ನ ಅವರು ನೆರವೇರಿಸಿದರು.

ನೆಲಮಂಗಲ ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಶ್ರೀ ಬಿ.ಆರ್.ಪ್ರದೀಪ್ ಕುಮಾರ್ ಪುಸ್ತಕ ಮಾರಾಟ ಮತ್ತು ಪ್ರದರ್ಶನ ಮಳಿಗೆಗೆ ಚಾಲನೆ ನೀಡಿದರು. ಕಾರ್ಯದರ್ಶಿ ಸಿ.ಹೇಮಾವತಿ, ಸಂಚಾಲಕ ಡಾ.ಕೃಷ್ಣಹಾನ್ ಬಾಳ್, ಹಿರಿಯ ಸಾಹಿತಿ ಕೆ.ಎಂ.ರೇವಣ್ಣ, ಕೃಷಿ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ ಎಂ.ವಿ. ಶಿವಪ್ರಸಾದ್, ಎಲ್.ಬಸವಲಿಂಗು, ನಾಗರಾಜ್ ಅರಬಘಟ್ಟ ಮುಂತಾದವರಿದ್ದರು .
ಉಪನ್ಯಾಸಕಿ ಡಾ.ಪ್ರತಿಮಾನಾಗರಾಜ್ ನಿರೂಪಿಸಿದರು, ಕವಯಿತ್ರಿ ಕೆ.ಟಿ.ಲತಾಬಾಣಾವರ ವಂದಿಸಿದರು.












