ವಿಜಯ ದರ್ಪಣ ನ್ಯೂಸ್…
ರಾಷ್ಟ್ರೀಯ ಜಂತು ಹುಳು ನಿವಾರಣ ದಿನಾಚರಣೆ: ಸಚಿವ ಮುನಿಯಪ್ಪ ಅವರಿಂದ ಐಇಸಿ ಪೋಸ್ಟರ್ ಬಿಡುಗಡೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆ. 08:
ಜಂತು ಹುಳು ನಿವಾರಣ ಮಾತ್ರೆಗಳು ಸೇವಿಸುವುದರಿಂದ ರಕ್ತ ಹೀನತೆ, ಅಪೌಷ್ಟಿಕತೆ, ಸುಸ್ತಾಗುವಿಕೆ ತಡೆಗಟ್ಟುವ ಶಕ್ತಿ ಅಡಗಿದೆ. 01 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳು ಈ ಮಾತ್ರೆ ಸೇವಿಸಿ, ಆರೋಗ್ಯ ವೃದ್ದಿಸಿಕೊಳ್ಳಬೇಕು ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಕರೆ ನೀಡಿದರು.
ಜಿಲ್ಲೆಯಲ್ಲಿ ಆಗಸ್ಟ್ 10 ರಂದು ರಾಷ್ಟ್ರೀಯ ಜಂತು ಹುಳು ನಿವಾರಣ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಸಾರ್ವಜನಿಕ ಜಾಗೃತಿಗಾಗಿ ಐಇಸಿ ಪೋಸ್ಟರ್ ಅನ್ನು ಜಿಲ್ಲಾ ಪಂಚಾಯತ್ ಸಭಾಂಗಣದ ಎದುರು ಬಿಡುಗಡೆ ಮಾಡಿ, ಸಚಿವರು ಮಾತನಾಡಿದರು.
01 ರಿಂದ 19 ವರ್ಷದ ಎಲ್ಲಾ ಮಕ್ಕಳಿಗೆ ಹಾಗೂ ಹದಿಹರೆಯದವರಿಗೆ ‘ಆಲ್ ಬೆಂಡೋಜೋಲ್’ ಮಾತ್ರೆಗಳನ್ನು ನೀಡಲಾಗುವುದು. 01 ರಿಂದ 02 ವರ್ಷದ ಮಕ್ಕಳಿಗೆ ಅರ್ಧ ಮಾತ್ರೆ ಹಾಗೂ 02 ರಿಂದ 19 ವರ್ಷದವರಿಗೆ ಒಂದು ಪೂರ್ತಿ ಮಾತ್ರೆಯನ್ನು ಒಂದು ವಯಸ್ಸಿನಿಂದ ನೀಡಲಾಗುವುದು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 01 ರಿಂದ 19 ವಯಸ್ಸಿನ ಮಕ್ಕಳು ಹಾಗೂ ಹದಿಹರೆಯದವರು ಒಟ್ಟು 2,92,140 ಫಲಾನುಭವಿಗಳು ಇದ್ದು, ಇವರಿಗೆಲ್ಲ ಜಂತು ಹುಳು ನಿವಾರಣ ‘ಆಲ್ ಬೆಂಡೋಜೋಲ್’ ಮಾತ್ರೆಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಆರ್.ಸಿ.ಹೆಚ್ ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ ಮಂಜುನಾಥ್, ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ, ಜಿ.ಪಂ ಸಿಇಒ ಡಾ. ವಾಸಂತಿ ಅಮರ್,
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಜುನಾಥ್, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ. ಧರ್ಮೇಂದ್ರ ಹಾಗೂ ಮುಖಂಡರು ಉಪಸ್ಥಿತರಿದ್ದರು.
‘ಆಲ್ ಬೆಂಡೋಜೋಲ್’ ಜಂತು ಹುಳು ಮಾತ್ರೆಗಳನ್ನು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ, ಎಲ್ಲಾ ಶಾಲೆಗಳಲ್ಲಿ ಆಗಸ್ಟ್ 10 ರಂದು ಮಕ್ಕಳಿಗೆ ನೇರವಾಗಿ ನೀಡಲಾಗುವುದು.










