ವಿಜಯ ದರ್ಪಣ ನ್ಯೂಸ್….
20000 ಬಳೆಗಳಿಂದ ಶ್ರೀ ದ್ರೌಪದಿ ದೇವಿಗೆ ವಿಶೇಷ ಅಲಂಕಾರ
ಲೋಕಕಲ್ಯಾಣಾರ್ಥ ಹಾಗೂ ಸಕಲರ ಒಳಿತಿಗೆ ಪೂಜೆಗೆ ಮಹತ್ವ ಸ್ಥಾನ ಇದೆ : ಶ್ರೀ ಶ್ರೀ ಪ್ರಣವಾನಂದಪುರಿ ಮಹಾಸ್ವಾಮಿಗಳು

ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ಶಿವನಾಪುರ ಗ್ರಾಮದ ಶ್ರೀ ಆದಿಶಕ್ತಿ ಮಹಾ ಸಂಸ್ಥಾನ ಮಠ ವನ್ನಿಕುಲ ಕ್ಷತ್ರಿಯ ಗುರುಪೀಠದಲ್ಲಿ ಶ್ರೀ ಆದಿಶಕ್ತಿ ದ್ರೌಪದಿ ದೇವಿಯ ಜಯಂತೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಜಯಂತೋತ್ಸವದ ಅಂಗವಾಗಿ ಮಠದಲ್ಲಿರುವ ಶ್ರೀ ದ್ರೌಪದಿ ದೇವಿಯ ಮೂರ್ತಿಗೆ ಸುಮಾರು 20000 ಬಳೆಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು. ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ಮಠದ ವತಿಯಿಂದ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ದ್ರೌಪದಿ ದೇವಿಯ ಜಯಂತೋತ್ಸವದ ಮಹತ್ವದ ಕುರಿತು ಮಾತನಾಡಿದ ಶ್ರೀ ಆದಿಶಕ್ತಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಪ್ರಣವಾನಂದಪುರಿ ಮಹಾಸ್ವಾಮಿಗಳು,
ಮಹಾಭಾರತದ ಪ್ರಮುಖ ಕೇಂದ್ರ ಬಿಂದು ಹಾಗೂ ಆದಿಶಕ್ತಿಯ ಸ್ವರೂಪಳಾದ ದ್ರೌಪದಿ ದೇವಿಯ ಜಯಂತೋತ್ಸವವು ಹಿಂದೂ ಧರ್ಮದಲ್ಲಿ ಧರ್ಮ, ಧೈರ್ಯ ಮತ್ತು ದೈವಿಕ ಭಕ್ತಿಯ ಸಂಕೇತವಾಗಿ ಆಚರಿಸಲಾಗುವ ಅತ್ಯಂತ ಮಹತ್ವದ ದಿನವಾಗಿದೆ.

ದ್ರೌಪದಿ ದೇವಿಯು ಯಾವುದೇ ಸಾಮಾನ್ಯ ಜನ್ಮವನ್ನು ಪಡೆದವಳಲ್ಲ; ಆಕೆ ರಾಜ ದೃಪದನು ನಡೆಸಿದ ಪವಿತ್ರ ಯಾಗಕುಂಡದ ಅಗ್ನಿಯಿಂದ ನೇರವಾಗಿ ಉದ್ಭವಿಸಿದವಳು. ಆದ್ದರಿಂದ ಈ ದಿನವನ್ನು ಆಕೆಯ ಜನ್ಮದಿನ ಎನ್ನುವುದಕ್ಕಿಂತ ಪ್ರಕಟ ದಿನ ಅಥವಾ ಅವತಾರ ದಿನ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮ ಹಾಗೂ ಸಂಸ್ಕೃತಿಯಲ್ಲಿ ದೇವತಾ ಆರಾಧನೆ, ಪೂಜೆ ಹಾಗೂ ಧಾರ್ಮಿಕ ಆಚರಣೆಗಳಿಗೆ ವಿಶೇಷವಾದ ಮಹತ್ವವಿದೆ. ಲೋಕಕಲ್ಯಾಣ ಹಾಗೂ ಸರ್ವರಿಗೂ ಒಳಿತಾಗಲಿ ಎಂಬ ಸಂಕಲ್ಪದೊಂದಿಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಶ್ರೀ ದ್ರೌಪದಿ ದೇವಿಯ ಕೃಪೆಯಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಸಕಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು. ಜಯಂತೋತ್ಸವದಲ್ಲಿ ಮಠದ ಭಕ್ತರು, ವನ್ನಿಕುಲ ಕ್ಷತ್ರಿಯ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಸೇರಿದಂತೆ ಹಲವರು ಭಾಗವಹಿಸಿ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.









