ವಿಜಯ ದರ್ಪಣ ನ್ಯೂಸ್…..
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 60 ವಿದ್ಯಾರ್ಥಿಗಳಿಂದ ಭರತನಾಟ್ಯ ವೈಭವ

ಬೆಂಗಳೂರು:: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆನಂದ ಗೋವಿಂದ ದೇವಸ್ಥಾನ, ದೊಡ್ಡಾಲದಮರ ಸಮೀಪ ಭಕ್ತಿ ಮತ್ತು ಕಲೆಯ ಸಮ್ಮಿಲನದ ಅದ್ಭುತ ನೃತ್ಯ ಕಾರ್ಯಕ್ರಮ ಜರುಗಿತು.
ಅಂಧ್ರಹಳ್ಳಿ, ಡಿ ಗ್ರೂಪ್ ಲೇಔಟ್ ನ ಪ್ರತಿಷ್ಠಿತ ನೃತ್ಯ ಸಂಸ್ಥೆ *”ನಾಟ್ಯ ಸನ್ನಿಧಿ”* ಯ 60 ಮಂದಿ ವಿದ್ಯಾರ್ಥಿಗಳು ಈ ವಿಶೇಷ ಭರತನಾಟ್ಯ ಪ್ರದರ್ಶನದಲ್ಲಿ ಭಾಗವಹಿಸಿ ನೆರೆದ ಭಕ್ತರ ಮನಸೂರೆಗೊಂಡರು.
ಸಂಸ್ಥೆಯ ಗುರು ಶ್ರೀಮತಿ ಮೋನಿಷಾ ನವೀನ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶ್ರೀಕೃಷ್ಣನ ಬಾಲಲೀಲೆ ಸಾರುವ ನೃತ್ಯರೂಪಕಗಳನ್ನು ಅತ್ಯಂತ ಭಕ್ತಿಭಾವದಿಂದ ಪ್ರಸ್ತುತಪಡಿಸಿದರು. ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯ ವಿದ್ಯಾರ್ಥಿಗಳವರೆಗೂ ಎಲ್ಲರ ನೃತ್ಯದಲ್ಲಿ ಲಯ, ಭಾವ, ತಾಳಗಳ ಸಮ್ಮಿಲನ ಎದ್ದು ಕಾಣುತ್ತಿತ್ತು.
ಕೃಷ್ಣನ ಕುರಿತಾದ ದೇವರನಾಮ, ಭಜನೆಗಳಿಗೆ ಹೆಜ್ಜೆ ಹಾಕಿದ ಮಕ್ಕಳ ಪ್ರದರ್ಶನವು ದೇವಸ್ಥಾನಕ್ಕೆ ಆಗಮಿಸಿದ್ದ ನೂರಾರು ಭಕ್ತರಿಗೆ ವಿಶೇಷ ಅನುಭೂತಿ ನೀಡಿತು.
ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ಆಡಳಿತ ಮಂಡಳಿಯವರು, “ಇಂತಹ ಆಧ್ಯಾತ್ಮಿಕ ಸಂದರ್ಭದಲ್ಲಿ ಮಕ್ಕಳಿಂದ ಇಂತಹ ಭಕ್ತಿಪೂರ್ಣ ನೃತ್ಯ ಪ್ರದರ್ಶನ ನಮ್ಮ ದೇವಸ್ಥಾನದಲ್ಲಿ ನಡೆದಿರುವುದು ಸಂತಸದ ವಿಷಯ. ನಾಟ್ಯ ಸನ್ನಿಧಿ ಸಂಸ್ಥೆಯ ಕಾರ್ಯ ಶ್ಲಾಘನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗುರು ಮೋನಿಷಾ ನವೀನ್ ಅವರು ಮಾತನಾಡಿ, “ಕೃಷ್ಣ ಜನ್ಮಾಷ್ಟಮಿಯಂತಹ ಪವಿತ್ರ ದಿನದಂದು ಆನಂದ ಗೋವಿಂದನ ಸನ್ನಿಧಿಯಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಪ್ರದರ್ಶನ ನೀಡುವ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ. ನಮ್ಮ ಸಂಸ್ಥೆಯು ಕೇವಲ ನೃತ್ಯವನ್ನು ಮಾತ್ರವಲ್ಲದೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡುತ್ತಿದೆ” ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಮತ್ತು ಗುರುಗಳನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.










