--Ads--

ಉದ್ಯಾನಗಳ ಶೇ.5 ಭೂ ಬಳಕೆ ಮಸೂದೆ ವಾಪಸ್‌, ಬಿಜೆಪಿಯ ಹೋರಾಟಕ್ಕೆ ಮತ್ತೊಂದು ಜಯ: ಪ್ರತಿಪಕ್ಷ ನಾಯಕ ಆರ್‌.ಅಶೋಕ

On: September 3, 2026 4:57 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಉದ್ಯಾನಗಳ ಶೇ.5 ಭೂ ಬಳಕೆ ಮಸೂದೆ ವಾಪಸ್‌, ಬಿಜೆಪಿಯ ಹೋರಾಟಕ್ಕೆ ಮತ್ತೊಂದು ಜಯ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಬೆಂಗಳೂರು, ಸೆಪ್ಟೆಂಬರ್‌ 3

ಕಾಂಗ್ರೆಸ್‌ ಸರ್ಕಾರ ಉದ್ಯಾನಗಳಲ್ಲಿ ಶೇ.5 ರಷ್ಟು ಭೂಮಿಯನ್ನು ಮೂಲಸೌಕರ್ಯಕ್ಕೆ ಬಳಸುವ ಮಸೂದೆ ಹಿಂಪಡೆದಿರುವುದು ಬಿಜೆಪಿಯ ಹೋರಾಟಕ್ಕೆ ಸಿಕ್ಕ ಮತ್ತೊಂದು ಜಯ. ಮುಂದೆಯೂ ಉದ್ಯಾನಗಳನ್ನು ಬಳಸುವುದಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾರ್ಕ್‌ ಉಳಿಸಿ, ಬೆಂಗಳೂರು ರಕ್ಷಿಸಿ ಎಂಬ ಅಭಿಯಾನ ಮಾಡುವುದಾಗಿ ಬಿಜೆಪಿ ವತಿಯಿಂದ ಘೋಷಣೆ ಮಾಡಲಾಗಿತ್ತು. ಈಗ ರಾಜ್ಯ ಕಾಂಗ್ರೆಸ್‌ ಸರ್ಕಾರ ಉದ್ಯಾನಗಳಲ್ಲಿ ಶೇ.5 ರಷ್ಟು ಭೂಮಿಯನ್ನು ಮೂಲಸೌಕರ್ಯಕ್ಕೆ ಬಳಸುವ ಮಸೂದೆ ಹಿಂಪಡೆದಿದೆ. ಈ ಮೂಲಕ, ಒಂದೇ ತಿಂಗಳಲ್ಲಿ ಬಿಜೆಪಿಗೆ ಎರಡು ಜಯ ಸಿಕ್ಕಿದೆ. ಇದು ಶಾರ್ಟ್‌ ಟರ್ಮ್‌ ಮುಖ್ಯಮಂತ್ರಿ ಮತ್ತು ಯೂ ಟರ್ನ್‌ ಸರ್ಕಾರ. ಈ ಮೊದಲು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಮಾಡಿದ ಬಿ.ನಾಗೇಂದ್ರ ಅವರ ರಾಜೀನಾಮೆ ಪಡೆಯಲಾಗಿತ್ತು. ಈಗ ಉದ್ಯಾನಗಳನ್ನು ವಾಣಿಜ್ಯೀಕರಣ ಮಾಡಲು ಹೊರಟಿದ್ದ ಸರ್ಕಾರ, ಬಿಜೆಪಿಯ ಹೋರಾಟದ ಎಚ್ಚರಿಕೆಯಿಂದ ಮಸೂದೆಯನ್ನು ವಾಪಸ್‌ ಪಡೆದಿದೆ. ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸುವ ಅಗತ್ಯವೇ ಇಲ್ಲ. ಉದ್ಯಾನಗಳ ಜಾಗ ನುಂಗುವುದಕ್ಕೆ ನಾವು ಅವಕಾಶ ನೀಡುವುದಿಲ್ಲ. ಇದು ಬೆಂಗಳೂರನ್ನು ಪ್ರೀತಿಸುವ, ಗಾರ್ಡನ್‌ ಸಿಟಿ ಉಳಿಸುವ ಜನರಿಗೆ ಸಿಕ್ಕಿರುವ ಜಯ ಎಂದರು.

ಪ್ರತಿಯೊಂದರಲ್ಲೂ ಯೂ ಟರ್ನ್‌ ಮಾಡುವ ಮುಖ್ಯಮಂತ್ರಿಗಳಿಗೆ ಇಂತಹ ಸಲಹೆಗಳನ್ನು ಯಾರು ನೀಡುತ್ತಿದ್ದಾರೆ? ಉದ್ಯಮಿ ಗೌತಮ್‌ ಅದಾನಿಗೆ ಸುರಂಗ ರಸ್ತೆ ಯೋಜನೆ ನೀಡಲು ಉದ್ಯಾನಗಳನ್ನು ನಾಶ ಮಾಡಲು ಮುಂದಾಗಿದ್ದರು. ಬೆಂಗಳೂರಿನಲ್ಲಿ 1,523 ಉದ್ಯಾನಗಳಿವೆ. 240 ಎಕರೆ ವಿಸ್ತೀರ್ಣ ಇರುವ ಲಾಲ್‌ಬಾಗ್‌ನಲ್ಲಿ ಶೇ.5 ರಷ್ಟು ಭೂಮಿ ಎಂದರೆ 12 ಎಕರೆಯಾಗುತ್ತದೆ. 192 ಎಕರೆ ವಿಸ್ತೀರ್ಣ ಇರುವ ಕಬ್ಬನ್‌ ಉದ್ಯಾನದಲ್ಲಿ ಶೇ.5 ರಷ್ಟು ಭೂಮಿ ಎಂದರೆ 10 ಎಕರೆಯಾಗುತ್ತದೆ. ಲಾಲ್‌ಬಾಗ್‌ ನಿರ್ಮಿಸಿದ ಪುಣ್ಯಾತ್ಮರು ಬೆಂಗಳೂರು ಉದ್ಯಾನ ನಗರಿಯಾಗಬೇಕೆಂಬ ಗುರಿ ಇಟ್ಟುಕೊಂಡಿದ್ದರು. ಆಗಿನ ಕಾಲದ ಆಡಳಿತಗಾರರಿಗೆ ಹಸಿರು ಉಳಿಸುವ ಜ್ಞಾನವಿತ್ತು. ಆದರೆ ಈಗಿನ ಮುಖ್ಯಮಂತ್ರಿಗೆ ಹಸಿರು ಕಾಣಿಸದೆ ಕೇವಲ ರಿಯಲ್‌ ಎಸ್ಟೇಟ್‌ ಮಾತ್ರ ಕಾಣುತ್ತಿದೆ ಎಂದು ಟೀಕಿಸಿದರು.

ಈ ಕ್ರಮ ಮುಂದಿನ ಪೀಳಿಗೆಗೆ ಮಾರಕವಾಗುತ್ತಿತ್ತು. ಈಗ ಶೇ.5 ರಷ್ಟು ಇರುವ ಭೂ ಬಳಕೆ ಮುಂದೆ ಶೇ.10 ಆಗುತ್ತಿತ್ತು. 1975 ರಲ್ಲಾದ ಉದ್ಯಾನಗಳ ಸಂರಕ್ಷಣೆ ಅಧಿನಿಯಮದಲ್ಲಿ ಹಸಿರು ಹೆಚ್ಚಬೇಕು, ರಾಜ್ಯದಲ್ಲಿ ಶೇ.30 ಕ್ಕಿಂತ ಅಧಿಕ ಹಸಿರು ಇರಬೇಕು ಎಂಬ ಉದ್ದೇಶವಿದೆ. ಹಸಿರು ಕಡಿಮೆಯಾದಂತೆ ನಗರದಲ್ಲಿ ಪ್ರವಾಹ ಹೆಚ್ಚಿದೆ. ಎಚ್‌ಎಸ್‌ಆರ್‌ ಲೇಔಟ್‌, ಜಯನಗರ, ಹೆಬ್ಬಾಳ ಮೊದಲಾದ ಪ್ರದೇಶಗಳು ಮಳೆಯಿಂದ ಮುಳುಗುತ್ತಿದೆ. ಸುರಂಗ ರಸ್ತೆ ಯೋಜನೆ ಜಾರಿಯಾದರೆ ಇಡೀ ನಗರ ಮುಳುಗಡೆಯಾಗಲಿದೆ. ರಾಜಕಾಲುವೆಯ ಹೂಳು ತೆಗೆಯದೆ, ಒಳಚರಂಡಿ ವ್ಯವಸ್ಥೆ ಸರಿಪಡಿಸದೆ ಸುರಂಗ ರಸ್ತೆ ಯೋಜನೆ ಜಾರಿ ಮಾಡಲಾಗುತ್ತಿದೆ. ಇದರಿಂದಾಗಿ ರಸ್ತೆಗಳು ಸ್ಟೋರೇಜ್‌ ಟ್ಯಾಂಕ್‌ಗಳಾಗಲಿವೆ ಎಂದರು.

ಉದ್ಯಾನಗಳನ್ನು ಇನ್ನಷ್ಟು ಹೆಚ್ಚಿಸುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಘೋಷಣೆ ಮಾಡಬೇಕಿತ್ತು. ಅದನ್ನು ಬಿಟ್ಟು ಉದ್ಯಾನಗಳನ್ನು, ಮರಗಳನ್ನು ನಾಶ ಮಾಡುತ್ತಿದ್ದಾರೆ. ಬೆಂಗಳೂರಿನ ಜನರು ಇದರಿಂದ ರೊಚ್ಚಿಗೆದ್ದಿದ್ದಾರೆ. ನಾವು ಹೋರಾಟವನ್ನು ಘೋಷಣೆ ಮಾಡಿದ್ದಕ್ಕೆ ಜನರಿಂದ ಬೆಂಬಲ ಸಿಕ್ಕಿದೆ. ಎಲ್ಲ ಶಾಸಕರು, ಮಾಜಿ ಕಾರ್ಪೊರೇಟರ್‌ಗಳು ಉದ್ಯಾನಗಳಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದರು. 5 ಲಕ್ಷ ಸಹಿ ಸಂಗ್ರಹದ ಗುರಿ ಇತ್ತು. ಯೋಗ ಕ್ಲಬ್‌, ನಗೆಕೂಟಗಳನ್ನು ಸಂಪರ್ಕಿಸಲಾಗಿತ್ತು. ಇದು ದೊಡ್ಡ ಹೋರಾಟವಾಗುತ್ತಿತ್ತು. ಇದರಿಂದ ಬೆದರಿದ ಸರ್ಕಾರ ಮಸೂದೆ ಹಿಂಪಡೆದಿದೆ. ಇನ್ನು ಮುಂದೆಯೂ ಮತ್ತೆ ಈ ಮಸೂದೆ ತರಬಾರದು ಎಂದರು.

ಏಳು ದಿನ ಅಧಿವೇಶನ ಬೇಕಿದೆ

ಬರಗಾಲಕ್ಕೆ ಪರಿಹಾರ, ನೈಸ್‌ ಟೋಲ್‌, ಗೃಹಲಕ್ಷ್ಮಿ ಹಣ ಬಾಕಿ, ಕಸ್ತೂರಿ ರಂಗನ್‌ ವರದಿ ಮೊದಲಾದ ವಿಷಯಗಳು ಚರ್ಚೆಯಾಗಬೇಕಿದೆ. ಆದ್ದರಿಂದ ಮೂರು ದಿನಗಳ ಬದಲು ಏಳು ದಿನಗಳ ಅಧಿವೇಶನ ನಡೆಸಬೇಕು. ಈ ಎಲ್ಲ ವಿಷಯಗಳ ಬಗ್ಗೆ ಸುದೀರ್ಘವಾದ ಚರ್ಚೆ ಮಾಡಬೇಕು ಎಂದು ಆಗ್ರಹಿಸಿದರು.

ಬರಗಾಲದ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಇನ್ನೂ ಕಾಂಗ್ರೆಸ್‌ ಸರ್ಕಾರ ವರದಿ ಸಲ್ಲಿಸಿಲ್ಲ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕಿಲ್ಲ. ರೈತರು ಈಗಾಗಲೇ ಎಲ್ಲ ಕಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್‌ ಹಳ್ಳಿಗಳಿಗೆ ಹೋಗಿ ಹೊಲದಲ್ಲಿ ಕುಳಿತು ಫೋಟೋ ಸೆಶನ್‌ ಮಾಡುತ್ತಿದ್ದಾರೆ. ಅದರ ಬದಲು ಪರಿಹಾರ ನೀಡಿ ರೈತರು ಪ್ರತಿಭಟಿಸದಂತೆ ಮಾಡಬೇಕಿದೆ. ಎರಡೂವರೆ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇಡೀ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಒಬ್ಬ ಮಾಜಿ ಯೋಧ ಕೃಷಿ ಜಮೀನಿಗೆ ಆಗ್ರಹಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದು, ಈಗ ಯೋಧ ಐಸಿಯುನಲ್ಲಿದ್ದಾರೆ. ಆದರೆ ಸಚಿವ ಡಾ.ಜಿ.ಪರಮೇಶ್ವರ್‌ ಇನ್ನೂ ಗೊತ್ತಿಲ್ಲ, ವರದಿ ತರಿಸುತ್ತೇನೆ ಎನ್ನುತ್ತಿದ್ದಾರೆ. ಜಮೀನು ಎಂದಾಕ್ಷಣ ಅದು ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಅದಕ್ಕೆ ಇನ್ನೂ ಉತ್ತರ ನೀಡಿಲ್ಲ. ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿದ ಯೋಧನನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದು ಸರಿಯಲ್ಲ ಎಂದರು.

ಸಮಾಜ ಕಲ್ಯಾಣ ಇಲಾಖೆಯಲ್ಲಾಗಿರುವ ಭ್ರಷ್ಟಾಚಾರವನ್ನು ಮಾಧ್ಯಮಗಳು ಬಯಲು ಮಾಡಿದೆ. ಈ ಬಗ್ಗೆಯೂ ನಾವು ಹೋರಾಟ ಮಾಡುತ್ತೇವೆ. ಆರೋಗ್ಯ ಸಚಿವ ಯು.ಟಿ.ಖಾದರ್‌ ಹೋಟೆಲ್‌ಗಳಲ್ಲಿ ಪರೀಕ್ಷೆ ಮಾಡಿದಂತೆಯೇ ಹಾಸ್ಟೆಲ್‌ಗಳಲ್ಲಿ ಆಹಾರ ಪರೀಕ್ಷೆ ಮಾಡಬೇಕು. ಈ ಬಗ್ಗೆ ಸರ್ಕಾರ ಬೆಳಕು ಚೆಲ್ಲಬೇಕು. ಅದನ್ನು ಬಿಟ್ಟು ಹೋಟೆಲ್‌ಗಳಿಗೆ ಮಾತ್ರ ಭೇಟಿ ನೀಡುತ್ತಿದ್ದಾರೆ. ಕೇವಲ ಫೈವ್‌ ಸ್ಟಾರ್‌ ಕಡೆ ಹೋಗುವುದಲ್ಲ, ಬಡ ವಿದ್ಯಾರ್ಥಿಗಳ ಕಡೆಗೂ ಗಮನ ನೀಡಲಿ ಎಂದು ಒತ್ತಾಯಿಸಿದರು.

WhatsApp

Join Now

Telegram

Join Now

Instagram

Join Now