ಕುರ್ಚಿ………

ವಿಜಯ ದರ್ಪಣ ನ್ಯೂಸ್….

ಕುರ್ಚಿ………

ಅಧಿಕಾರವೆಂಬ ಅಮಲು  ಮತ್ತೇರಿ ವಿಧವಿಧದ ಕುರ್ಚಿಗಾಗಿ ಕೆಲವು ವ್ಯಕ್ತಿಗಳು ಮುಗಿ ಬೀಳುವುದು ನೋಡಿದಾಗ ಅನಿಸಿದ್ದು………

ಕುರ್ಚಿ ಬೇಕೆ ಕುರ್ಚಿ………

” ಆ ” ಮಾಯಾ ಕುರ್ಚಿ…..

ಏರಲು ದೈವ ಬಲ ಬೇಕಂತೆ ” ಆ ” ಕುರ್ಚಿ.
ಕೂರಲು ಜನ ಬಲ ಬೇಕಂತೆ ” ಆ ” ಕುರ್ಚಿ.
ಪಡೆಯಲು ಹಣ ಬಲ ಬೇಕಂತೆ ” ಆ ” ಕುರ್ಚಿ.
ಗಳಿಸಲು ಜಾತಿ ಬಲ ಬೇಕಂತೆ ” ಆ ” ಕುರ್ಚಿ.

ಮಾನ ಮರ್ಯಾದೆ ಬಿಡಬೇಕಂತೆ ” ಆ ” ಕುರ್ಚಿ ಸಿಗಲು.
ಹೋಮ ಹವನ ಮಾಡ ಬೇಕಂತೆ ” ಆ ” ಕುರ್ಚಿ ಹೊಂದಲು.
ತಲೆ ಹಿಡಿಯಲು ತಲೆ ಹೊಡೆಯಲು ಸಿದ್ದರಿರಬೇಕಂತೆ ” ಆ ” ಕುರ್ಚಿ ಗೆಲ್ಲಲು.
ಜುಟ್ಟು ಹಿಡಿಯಲು, ಕೈ ಮುಗಿಯಲು, ಕಾಲು ಕಟ್ಟಲು ಗೊತ್ತಿರಬೇಕಂತೆ
” ಆ ” ಕುರ್ಚಿ ನಿಮ್ಮದಾಗಲು.

ಸಾಮಾನ್ಯರಿಗೆ ಸಿಗದಂತೆ
” ಆ ” ಕುರ್ಚಿ.
ಏಳು ಜನ್ಮದ ಪುಣ್ಯ ಬೇಕಂತೆ ” ಆ ” ಕುರ್ಚಿ .
ಹೋರಾಟಕ್ಕೂ ದೊರೆಯುವುದಂತೆ ” ಆ ” ಕುರ್ಚಿ.
ಮಾರಾಟಕ್ಕೂ ಇದೆಯಂತೆ ” ಆ ” ಕುರ್ಚಿ.

ಮುಳ್ಳಿನ ಆಸನವಂತೆ ” ಆ ” ಕುರ್ಚಿ.
ಸುಳ್ಳಿನ ಅರಮನೆಯಂತೆ
” ಆ ” ಕುರ್ಚಿ.
ಜನಗಳ ಬೆವರಿನ ವಾಸನೆಯಂತೆ ” ಆ ” ಕುರ್ಚಿ .
ರಕ್ತದ ಕಲೆಗಳ ನೆನಪುಗಳಂತೆ ” ಆ ” ಕುರ್ಚಿ.

ಬೆನ್ನಿಗಿರಿಯುವ ಕಲೆ ಇರಬೇಕಂತೆ ” ಆ ” ಕುರ್ಚಿ.
ಎದೆ ಬಗೆಯುವ ಧೈರ್ಯ ಬರಬೇಕಂತೆ
” ಆ ” ಕುರ್ಚಿ.
ಮುಖವಾಡ ತೊಡುವ ಮನಸ್ಸಿರಬೇಕಂತೆ
” ಆ ” ಕುರ್ಚಿ.
ವಂಚಿಸುವ ತಲೆಯಿರಬೇಕಂತೆ ” ಆ ” ಕುರ್ಚಿ.

ವರ್ಣನೆಗೆ ನಿಲುಕದಂತೆ
” ಆ ” ಕುರ್ಚಿ‌
ಪದಗಳಿಗೆ ಸಿಗದಂತೆ ” ಆ ” ಕುರ್ಚಿ.
ಭಾವನೆಗಳಿಗೆ ಕರಗದಂತೆ ” ಆ ” ಕುರ್ಚಿ.
ಕನಸುಗಳಿಗೆ ಎಟುಕದಂತೆ ” ಆ ” ಕುರ್ಚಿ.

ಕೋಟಿ ಕೋಟಿ ಜನರ ಜೀವನ ನಿರ್ಧರಿಸುವ ” ಆ ” ಕುರ್ಚಿ
ಯಾವುದು ಬಲ್ಲಿರಾ ? ಬಲ್ಲಿರಾ ?….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451….
9844013068……