ವಿಜಯ ದರ್ಪಣ ನ್ಯೂಸ್….
ಮುಮ್ಮಡಿ ನಿರ್ವಾಣ ಸ್ವಾಮಿಗಳಿಗೆ ಭಕ್ತಿಪೂರ್ವಕವಾಗಿ ಭಾವಪೂರ್ಣ ಶ್ರದ್ಧಾಂಜಲಿ

ಸಮಾಜದ ಸರ್ವತೋಮುಖ ಪ್ರಗತಿಗಾಗಿ ತಮ್ಮ ಸರ್ಕಾರಿ ಉದ್ಯೋಗವನ್ನು ತ್ಯಜಿಸಿದ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಕೊಡುಗೆ ಸ್ಮರಣೀಯ
ಕನಕಪುರದ ಶ್ರೀ ದೇಗುಲ ಮಠದ ಹಿರಿಯ ಶ್ರೀಗಳವರಾದ ಮುಮ್ಮಡಿ ನಿರ್ವಾಣ ಸ್ವಾಮಿಗಳು ಇಂದು ಬಯಲಲ್ಲಿ ಬಯಲಾಗಿದ್ದಾರೆ. ಶ್ರೀ ಇಮ್ಮಡಿ ಮಹಾಲಿಂಗ ಸ್ವಾಮಿಗಳ ಕರಕಮಲ ಸಂಜಾತರಾಗಿ ಶ್ರೀ ಮಠದ 13ನೇ ಪೀಠಾಧಿಪತಿಗಳಾಗಿದ್ದ ಶ್ರೀಗಳದು ಎತ್ತರವಾದ ನಿಲುವು, ಮುಖದಲ್ಲಿ ಸ್ನಿಗ್ಧವೂ-ಮುಗ್ಧವೂ ಆದ ಮಂದಹಾಸ, ನಿರಾಡಂಬರ ವ್ಯಕ್ತಿತ್ವ ಪ್ರತಿಯೊಬ್ಬರಲ್ಲೂ ಆತ್ಮೀಯಭಾವವನ್ನುಂಟು ಮಾಡಿ, ಭಕ್ತರನ್ನು ಬರಮಾಡಿಕೊಳ್ಳುವ ಅವರ ಸಹಜ ನಡವಳಿಕೆಗಳಿಂದ ಶ್ರೀಗಳು ಕಾವಿಧಾರಿಗಳಲ್ಲಿ ಅಗ್ರಂಪಂಕ್ತಿಯಲ್ಲಿ ನಿಲ್ಲುತ್ತಾರೆ. ಇಂತಹ ವಿಶಿಷ್ಟ ವ್ಯಕ್ತಿತ್ವದಿಂದ ಕೂಡಿರುವ ಶ್ರೀಗಳು ಮಠಕ್ಕೆ ಬಂದ ಭಕ್ತ ವೃಂದವನ್ನು ಪ್ರೀತಿ, ಹಸನ್ಮುಖ ಭಾವನೆಗಳಿಂದ ಮಾತನಾಡಿಸಿ ಹರಸುತ್ತಿದ್ದುದನ್ನ
ಮರೆಯಲಾಗದು.
ಭೂ ನ್ಯಾಯ ಮಂಡಳಿಯಲ್ಲಿ ವೃತ್ತಿಯಲ್ಲಿದ್ದ ಶ್ರೀಗಳು ತಮ್ಮ ವೈಯುಕ್ತಿಕ ಬದುಕನ್ನು ಉದ್ಧರಿಸಿಕೊಳ್ಳುವದಕ್ಕಿಂತ ಸಮಾಜದ ಸರ್ವತೋಮುಖ ಉದ್ಧಾರ ಮಾಡಬೇಕು ಎಂಬ ಇಚ್ಛಾಶಕ್ತಿಯಿಂದಾಗಿ ಸರ್ಕಾರಿ ಉದ್ಯೋಗವನ್ನು
ತ್ಯಜಿಸಿ ಶ್ರೀ ಮಠದ ಮೂಲಕ ಸಮಾಜದ ಜನರಿಗೆ ಸಂಸ್ಕಾರ, ಸಂಸ್ಕೃತಿ, ಶಿಕ್ಷಣ, ಕೃಷಿ, ಉದ್ಯೋಗ, ಅಧ್ಯಾತ್ಮ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಕೂಡಾ ಅಸಾಧಾರಣ ಸಾಧನೆಗಳನ್ನು ಮಾಡುವ ಮೂಲಕ ನಾಡಿನ ಸಾಂಸ್ಕೃತಿಕ ಆರ್ಥಿಕ ಪ್ರಗತಿಗೆ ಕೊನೆಯ ಉಸಿರಿರುವವರೆಗೂ ಶ್ರಮಿಸಿದ್ದಾರೆ.
ಮೂಲತಃ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದಲ್ಲಿ ಶ್ರೀ ವೀರಭದ್ರಪ್ಪ ಮತ್ತು ಶ್ರೀಮತಿ ತಾಯಮ್ಮ ದಂಪತಿಗಳಿಗೆ ಮಗನಾಗಿ
ದಿನಾಂಕ 20.05.1943ರಂದು ಜನಿಸಿದ ಶ್ರೀಗಳ ಪೂರ್ವಾಶ್ರಮದ ಹೆಸರು ಶಿವರುದ್ರ ಸ್ವಾಮಿಗಳು ದಿನಾಂಕ 02.02.1977ರಿಂದ ಶ್ರೀ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮಿಗಳು ಎಂಬ ಅಭಿದಾನ ದಿಂದ ಶ್ರೀ ಮಠದ ಪೀಠಕ್ಕೆ ಬಂದು ಮಠದ ಔನ್ನತ್ಯಕ್ಕೆ ಹಗಲಿರುಳು ದುಡಿದು ಶ್ರೀ ದೇಗುಲ ಮಠವನ್ನು ಇಡೀ ರಾಜ್ಯದಲ್ಲಿ ಮಾತ್ರವಲ್ಲದೆ ನೆರೆಹೊರೆಯ ಭಾಷಿಕರು ಗುರುತಿಸಿ ಹೆಮ್ಮೆ ಪಡುವ ಮಟ್ಟಕ್ಕೆ ಬೆಳೆಸಿದ್ದು ಶ್ರೀಗಳ ಅಭೂತ ಪೂರ್ವ ಸಾಧನೆ
ಶ್ರೀಗಳು ದೇಹ ತ್ಯಜಿಸಿದ್ದು ಅವರು ಮಾಡಿರುವ ಸಮಾಜಮುಖಿ ಕೆಲಸಗಳಿಂದ ಶ್ರಿ ಮಠದ ಭಕ್ತರು ಹಾಗು ನಾಡಿನ ಜನರ ಹೃನ್ಮನದಲ್ಲಿ ಸದಾ ಸ್ಮರಣೀಯರಾಗಿದ್ದಾರೆ.
ಪರಮಪೂಜ್ಯರಿಗೆ ಭಕ್ತಿಪೂರ್ವಕವಾಗಿ ಭಾವಪೂರ್ಣ ಶ್ರದ್ಧಾಂಜಲಿ









