ವಿಜಯ ದರ್ಪಣ ನ್ಯೂಸ್…..
ಹಸಿದವರಿಗೆ ಅನ್ನ ನೀಡುವ ಮಹತ್ವದ ಹೆಜ್ಜೆ: ದಾಸೋಹ ಕುಟೀರ ಆರಂಭ

ತಾವರೆಕೆರೆ : ಕರುನಾಡ ಪ್ರಜಾ ಸೇವಾ ಟ್ರಸ್ಟ್ ವತಿಯಿಂದ ಹೊಸಕೋಟೆ ಮಾಜಿ ಶಾಸಕರಾಗಿದ್ದ ದಿವಂಗತ ಚನ್ನಬೈರೇಗೌಡ ಅವರ ಜ್ಞಾಪಕಾರ್ಥವಾಗಿ, ಎಚ್.ಎಂ. ಸುಬ್ಬರಾಜು ಅವರ ನೇತೃತ್ವದಲ್ಲಿ ಹೊಸಕೋಟೆ ನಗರದ ತಾಲೂಕು ಕಚೇರಿ ಆವರಣದಲ್ಲಿ ದಾಸೋಹ ಕುಟೀರ ವನ್ನು ಆರಂಭಿಸಲಾಯಿತು.
ತಾಲೂಕು ಕಚೇರಿಗೆ ಪ್ರತಿನಿತ್ಯ ವಿವಿಧ ಸರ್ಕಾರಿ ಕೆಲಸ-ಕಾರ್ಯಗಳಿಗಾಗಿ ದೂರದ ಊರುಗಳಿಂದ ಆಗಮಿಸುವ ಸಾರ್ವಜನಿಕರು ಕೆಲವೊಮ್ಮೆ ಊಟದ ವ್ಯವಸ್ಥೆಯಿಲ್ಲದೆ ಹಸಿವಿನಿಂದ ತೆರಳುವ ಪರಿಸ್ಥಿತಿ ಎದುರಾಗುತ್ತದೆ. ಇದನ್ನು ಮನಗಂಡು, ಸಾರ್ವಜನಿಕರಿಗೆ ನೆರವಾಗುವ ಉದ್ದೇಶದಿಂದ ಈ ದಾಸೋಹ ವ್ಯವಸ್ಥೆಯನ್ನು ಆರಂಭಿಸಲಾಗಿದೆ.
ದಾಸೋಹ ಕುಟೀರ’ದಲ್ಲಿ ಪ್ರತಿದಿನ ಮಧ್ಯಾಹ್ನ 1 ಗಂಟೆಯಿಂದ 2 ಗಂಟೆಯವರೆಗೆ ಸಾರ್ವಜನಿಕರಿಗೆ ಉಚಿತವಾಗಿ ದಾಸೋಹದ ವ್ಯವಸ್ಥೆ ಮಾಡಲಾಗುತ್ತದೆ. ತಾಲೂಕು ಕಚೇರಿಗೆ ಆಗಮಿಸುವ ಯಾವುದೇ ಸಾರ್ವಜನಿಕರು ಹಸಿವಿನಿಂದ ತೆರಳಬಾರದು ಎಂಬುದು ಈ ಸೇವೆಯ ಪ್ರಮುಖ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಎಂ. ಸುಬ್ಬರಾಜು, ದಿವಂಗತ ಚನ್ನಬೈರೇಗೌಡ ಅವರ ಜನಪರ ಸೇವಾ ಮನೋಭಾವವನ್ನು ಸ್ಮರಿಸಿಕೊಂಡು, ಅವರ ಜ್ಞಾಪಕಾರ್ಥವಾಗಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶದಿಂದ ದಾಸೋಹ ಕುಟೀರ ಆರಂಭಿಸಲಾಗಿದೆ ಎಂದು ತಿಳಿಸಿದರು. ಹಸಿದವರಿಗೆ ಅನ್ನ ನೀಡುವುದು ಅತ್ಯಂತ ಶ್ರೇಷ್ಠವಾದ ಸೇವೆಯಾಗಿದ್ದು, ಈ ಸೇವೆ ನಿರಂತರವಾಗಿ ಮುಂದುವರಿಯಲಿದೆ ಎಂದರು.
ಸಾರ್ವಜನಿಕ ಸೇವೆಯೊಂದಿಗೆ ಮಾನವೀಯತೆಯನ್ನು ಬೆಸೆಯುವ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ತಾಲೂಕು ಕಚೇರಿಗೆ ಆಗಮಿಸುವ ಬಡವರು, ವೃದ್ಧರು ಹಾಗೂ ವಿವಿಧ ಕೆಲಸಗಳಿಗಾಗಿ ಬರುವ ಸಾರ್ವಜನಿಕರಿಗೆ ‘ದಾಸೋಹ ಕುಟೀರ’ ಸಹಕಾರಿಯಾಗಲಿದೆ.
ಕಾರ್ಯಕ್ರಮದಲ್ಲಿ ವಿ ವಿಜಯ್ ಕುಮಾರ್, ಎಚ್ಟಿ ಸುಭಾಷ್ ಗೌಡ, ವಿ ವಿ ಸದಾನಂದ, ಎನ್ ಕೆ ಲಕ್ಷ್ಮಣ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಣ್ಣ, ಕೆಪಿಸಿಸಿ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಹರೀಶ್ ಚಕ್ರವರ್ತಿ, ಬಿ ಎಂ ಆರ್ ಡಿ ಸದಸ್ಯ ಸುರೇಶ್, ಟೌನ್ ಬ್ಯಾಂಕ್ ಅಧ್ಯಕ್ಷ ಬಲ್ಪ್ ಮಂಜುನಾಥ್, ಗೋಪಿ, ಹಾಗೂ ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.










