ವಿಜಯ ದರ್ಪಣ ನ್ಯೂಸ್….
ಗ್ರಾಮೀಣ ಭಾಗದ ಜನರಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸಬೇಕಾಗಿದೆ: ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ

ಸಂಸ್ಕೃತಿಯೊಂದರ ಉಳಿವು ಪ್ರಾದೇಶಿಕ ವೈವಿಧ್ಯತೆಯ ನೆಲೆಯಲ್ಲಿ ತೆರೆದುಕೊಳ್ಳುತ್ತದೆ. ಗ್ರಾಮೀಣ ಭಾಗದ ಜನರಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸಬೇಕಾಗಿದೆ.. ವೈವಿಧ್ಯಮಯ ಜಾಲತಾಣಗಳ ಜಾಲದಲ್ಲಿ ಸಿಲುಕಿರುವ ಜನಸಮುದಾಯವನ್ನು ನಮ್ಮ ಪರಂಪರೆಯೆಡೆಗೆ ಸೆಳೆಯಬೇಕಾದ್ದು ನಮ್ಮ ಹೊಣೆಯಾಗಬೇಕು ಎಂದು ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ಅಭಿಪ್ರಾಯ ಪಟ್ಟರು.
ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪ್ರತೀ ತಿಂಗಳ ನಾಲ್ಕನೇ ಶನಿವಾರದಂದು ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದ ಕೆ.ಎಸ್. ಮುದ್ದಪ್ಪ, ಚಿಕ್ಕಮ್ಮ ರಂಗಮoದಿರದಲ್ಲಿ ಹಮ್ಮಿಕೊಳ್ಳುತ್ತಿರುವ ತಿಂಗಳ ತಳಿರು ಸರಣಿಯ ನಾಲ್ಕನೇ ಕಾರ್ಯಕ್ರಮ `ನಾಟ್ಯಾಂಜಲಿ’ ಉದ್ಘಾಟಿಸಿ ಮಾತನಾಡಿದರು.
ಜನಜೀವನದ ಭಾಗವಾಗಿದ್ದ ಕಲೆ ಇಂದು ವ್ಯಾಪಾರದ ಸರಕಾಗಿದೆ. ಆಧುನಿಕತೆ ಎಲ್ಲವನ್ನೂ ಆಪೋಶನ ಮಾಡಿಕೊಳ್ಳುತ್ತಿದೆ. ವಿಶ್ವ ಜಾನಪದ ದಿನವಾದ ಇಂದು ಜಾನಪದವನ್ನು ಹುಡುಕಬೇಕಾದ ಪರಿಸ್ಥಿತಿ ಬಂದೊದಗಿದೆ. ಕಿಲಾಡಿ ಕಲಾವಿದರ ಅಬ್ಬರದಲ್ಲಿ ಮೂಲದ ಕಲಾವಿದರು ಮೂಲೆಗುಂಪಾಗಿ ನಮ್ಮ ಕಲಾವೈಭವ ಮಸುಕಾಗುತ್ತಿದೆ. ಮಕ್ಕಳ ಪ್ರತಿಭೆಯನ್ನು ಕೇವಲ ಹೊಸ ಹೊಸ ನೋಟಗಳೆಡೆ ಸೆಳೆಯುವುದರ ಜೊತೆಗೆ ಪರಂಪರೆಯ ಕೊಂಡಿಗಳನ್ನು ಸೇರಿಸಿ ಬೆಸೆಯಬೇಕಾದ ಅವಶ್ಯಕತೆಯಿದೆ ಎಂದರು.
ಮಾನವ ಉಗಮದಿಂದ ಅಭಿಜಾತವಾಗಿ ಬಂದ ಕಲೆಗಳು ಕಣ್ಮರೆಯಾಗುತ್ತಿರುವುದು ವಿಷಾದದ ಸಂಗತಿ. ಕಾಲಕ್ಕೆ ತಕ್ಕಂತೆ ಪರಿಷ್ಕಾರಗೊಳ್ಳುವುದು ತಪ್ಪಲ್ಲ ಆದರೆ ಅವುಗಳ ಮಹತ್ವವನ್ನು ಶಾಲಾ ಪಠ್ಯಗಳಲ್ಲಿ ಸೇರಿಸಿ, ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಗುರುತರ ಹೊಣೆಗಾರಿಕೆಯನ್ನು ಸಂಬಂಧಿಸಿದವರು ಮನಗಾಣಬೇಕಾಗಿದೆ ಎಂದು ಹೇಳಿದರು.

ಬೆಂಗಳೂರಿನ ಶ್ರೀ ಶಾಂತಲಾ ಡ್ಯಾನ್ಸ್ ಅಂಡ್ ಮ್ಯೂಸಿಕ್ ಅಕಾಡೆಮಿ ನೃತ್ಯಗುರು ವಿದುಷಿ ಅಶ್ವಿನಿ ಜೆ. ಮಾತನಾಡಿ ಸಂಗೀತ, ಸಾಹಿತ್ಯ, ಸಂಸ್ಕೃತಿ, ಮನುಷ್ಯ ಬದುಕಿನ ಅವಿಭಾಜ್ಯ ಅಂಗಗಳು. ಅವುಗಳ ಸಂಪರ್ಕದಿoದ ಉಂಟಾಗುವ ಅನುಭವ ಬೇರೆ. ಮನಸ್ಸಿನ ಎಲ್ಲ ಚಿಂತೆಗಳನ್ನೂ ದೂರಮಾಡುವ ಶಕ್ತಿ ಸಾಂಸ್ಕೃತಿಕ ಕ್ಷೇತ್ರಕ್ಕಿದೆ. ನಿರ್ಮಲವಾದ ನಿಸರ್ಗದ ನಡುವಿನ ಇಂಥ ವಾತಾವರಣದಲ್ಲಿ ಯಾವುದೇ ಕಲೆಯ ಪ್ರದರ್ಶನವೂ ಹೊಸ ಅನುಭೂತಿಯನ್ನು ಉಂಟುಮಾಡುತ್ತದೆ ಎಂದರು.
ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ವಿದುಷಿ ನೃತ್ಯಗುರು ಅಶ್ವಿನಿ ಜೆ. ಅವರನ್ನು ಕೆ.ಎಸ್.ಎಂ. ಟ್ರಸ್ಟ್ ಪರವಾಗಿ ಅಭಿನಂದಿಸಲಾಯಿತು
ನಾಟ್ಯಾಂಜಲಿ ಕಾರ್ಯಕ್ರಮದಲ್ಲಿ ರಮ್ಯಾ ಚೆಲುವ ಮೂರ್ತಿ, ವೇದಶ್ರೀ, ಶಿಖರ ಎಸ್, ಮೌಲ್ಯಶ್ರೀ, ದೀಪ್ತಿ ಶ್ರೀನಿವಾಸ್, ಮಾನ್ಸಿ ಸಂತೋಷ್, ಮಾನ್ಯತಾ, ಆರ್ನಾ ಸಂದೀಪ್, ಭಾನುಪ್ರಿಯ, ಶಿವಾನಿ ಎನ್, ವೈಷ್ಣವಿ ಏನ್, ಮನಸ್ವಿ, ರುಚಿತ, ಲೋಕ ಪ್ರಿಯ ವೈವಿಧ್ಯಮಯ ನೃತ್ಯಗಳನ್ನು ಪ್ರದರ್ಶಿಸಿದರು. ಸಮಾಜ ಸೇವಕ ಮಹದೇವು, ರಂಗಸಂಗೀತ ನಿರ್ದೇಶಕ ಗಜಾನನ ಟಿ. ನಾಯ್ಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.











