ವಿಜಯ ದರ್ಪಣ ನ್ಯೂಸ್….
ಅಭಯ ಶನೇಶ್ವರ ಸ್ವಾಮಿ ಸನ್ನಿಧಿಯಲ್ಲಿ 510 ಕೆಜಿ ತರಕಾರಿಗಳಿಂದ ಶಾಕಂಬರಿ ಅಲಂಕಾರ
ಶನೇಶ್ವರ ಸ್ವಾಮಿಯ 25ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕಡೆಯ ಶ್ರಾವಣ ಶನಿವಾರದ ಪ್ರಯುಕ್ತ ವಿಶೇಷ ಪೂಜೆ

ತಾವರೆಕೆರೆ : ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದ ಸುಪ್ರಸಿದ್ಧ ಶ್ರೀ ಕ್ಷೇತ್ರ ಅಭಯ ಶನೇಶ್ವರ ಸ್ವಾಮಿ ಸನ್ನಿಧಿಯಲ್ಲಿ 25ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕಡೆಯ ಶ್ರಾವಣ ಶನಿವಾರದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.
ಈ ವಿಶೇಷ ಸಂದರ್ಭದಲ್ಲಿ ಶ್ರೀ ಶನಿಮಹಾತ್ಮ ಸ್ವಾಮಿಗೆ 510 ಕೆಜಿಗೂ ಅಧಿಕ ವಿವಿಧ ಬಗೆಯ ತರಕಾರಿಗಳನ್ನು ಬಳಸಿ ಶಾಕಂಬರಿ ಅಲಂಕಾರ ಮಾಡಲಾಗಿತ್ತು. ಸುಮಾರು 35ಕ್ಕೂ ಹೆಚ್ಚು ಬಗೆಯ ತರಕಾರಿಗಳನ್ನು ಬಳಸಿಕೊಂಡು ಸ್ವಾಮಿಯ ಮೂರ್ತಿಗೆ ವಿಶಿಷ್ಟ ಹಾಗೂ ಆಕರ್ಷಕ ರೀತಿಯಲ್ಲಿ ಅಲಂಕಾರ ಮಾಡಲಾಗಿದ್ದು, ಅಲಂಕಾರವು ಭಕ್ತರ ಕಣ್ಮನ ಸೆಳೆಯುವಂತಿತ್ತು.
ಸೌತೆಕಾಯಿ, ಬದನೆಕಾಯಿ, ಟೊಮೆಟೊ, ಕ್ಯಾರೆಟ್, ಬೀಟ್ರೂಟ್, ಬೀನ್ಸ್, ಮೂಲಂಗಿ, ಕುಂಬಳಕಾಯಿ ಸೇರಿದಂತೆ ವಿವಿಧ ಬಣ್ಣ, ಆಕಾರ ಹಾಗೂ ಗಾತ್ರದ ತರಕಾರಿಗಳನ್ನು ಸೃಜನಾತ್ಮಕವಾಗಿ ಜೋಡಿಸಿ ಶಾಕಂಬರಿ ಅಲಂಕಾರ ಮಾಡಲಾಗಿತ್ತು. ತರಕಾರಿಗಳ ವೈವಿಧ್ಯಮಯ ಬಣ್ಣಗಳಿಂದ ಸ್ವಾಮಿಯ ಸನ್ನಿಧಿ ಮತ್ತಷ್ಟು ವೈಭವಯುತವಾಗಿ ಕಂಗೊಳಿಸಿತು.

ಶಾಕಂಬರಿ ಅಲಂಕಾರಕ್ಕೆ ವಿಶೇಷ ಧಾರ್ಮಿಕ ಮಹತ್ವವಿದ್ದು, ಪ್ರಕೃತಿಯ ಸಮೃದ್ಧಿ, ಅನ್ನದಾತನಾದ ಭೂಮಿ ಹಾಗೂ ಸಮಸ್ತ ಜೀವಿಗಳ ಒಳಿತಿಗಾಗಿ ಪ್ರಾರ್ಥಿಸುವ ಸಂಕೇತವಾಗಿ ಈ ಅಲಂಕಾರವನ್ನು ಭಕ್ತಿಯಿಂದ ನೆರವೇರಿಸಲಾಯಿತು.
ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ಡಿ.ಎಲ್. ವೀರ ಬ್ರಹ್ಮಚಾರ್ ಗುರುಜಿಗಳ ದಿವ್ಯ ಸಾನಿಧ್ಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು, ಅಭಿಷೇಕ, ಅರ್ಚನೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಬಳಿಕ ಗುರುಜಿಗಳು ಭಕ್ತರನ್ನುದ್ದೇಶಿಸಿ ಮಾತನಾಡಿ, ಶ್ರೀ ಶನಿಮಹಾತ್ಮ ಸ್ವಾಮಿಯ ಆರಾಧನೆಯ ಮಹತ್ವ, ಶಾಕಂಬರಿ ಅಲಂಕಾರದ ವಿಶೇಷತೆ ಹಾಗೂ ಕ್ಷೇತ್ರದ ಧಾರ್ಮಿಕ ಪರಂಪರೆಯ ಕುರಿತು ವಿವರಿಸಿದರು.
ಶ್ರಾವಣ ಮಾಸದ ಪ್ರಯುಕ್ತ ಪ್ರತಿವಾರವೂ ನಾನಾ ಬಗೆಯ ಅಲಂಕಾರಗಳಿಂದ ಪೂಜಿಸಲ್ ಪಡುತ್ತಿತ್ತು. ಕಡೆ ಶನಿವಾರದ ಪ್ರಯುಕ್ತ ನೂರಾರು ಸಂಖ್ಯೆಯ ಭಕ್ತ ಸಮೂಹ ಭಾಗವಹಿಸಿ ಸ್ವಾಮಿಯ ವಿಶೇಷ ಅಲಂಕಾರವನ್ನು ವೀಕ್ಷಿಸಿ ಆಶೀರ್ವಾದ ಪಡೆದರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ದೇವಾಲಯದ ಅರ್ಚಕ ವೃಂದದವರು ಹಾಗೂ ಗ್ರಾಮಸ್ಥರು ತಾಲೂಕಿನ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತ ಸಮೂಹ ಪೂಜ ಕಾರ್ಯಕ್ರಮದಲ್ಲಿ ಹಾಜರಿದ್ದರು.









