ಶ್ರೀರಾಮನ ದರ್ಶನಕ್ಕೆ ತೆರಳುವ ಭಕ್ತರಿಗೆ  ಅಯೋಧ್ಯೆಯ ಕುರಿತು ಒಂದಿಷ್ಟು ಮಾಹಿತಿಗಳು…

ವಿಜಯ ದರ್ಪಣ ನ್ಯೂಸ್

ಶ್ರೀರಾಮನ ದರ್ಶನಕ್ಕೆ ತೆರಳುವ ಭಕ್ತರಿಗೆ 
ಅಯೋಧ್ಯೆಯ ಕುರಿತು ಒಂದಿಷ್ಟು ಮಾಹಿತಿಗಳು…

ಮೊದಲಿಗೆ….

ಅಯೋಧ್ಯೆ ದೊಡ್ಡ ನಗರವೇನಲ್ಲ.
ಫೈಜಾ಼ಬಾದ್ ಎಂಬ ನಗರದ ಹೊರವಲಯದಲ್ಲಿ, ಕೇವಲ ಐದು ಕಿಮೀ ಸುತ್ತಳತೆಯಲ್ಲಿರೋ, ಒಂದೇ ದಿನದೊಳಗೆ ಬರಿಗಾಲಲ್ಲೇ ಇಡೀ ಊರನ್ನು ಅಳೆದು ಮುಗಿಸಬಹುದಾದಂತಹ ಪುಟ್ಟ ಊರು ಇದು. ಹಾಗಾಗಿ ತೀರಾ ಐಷಾರಾಮಿ ಸೌಲಭ್ಯಗಳ ನಿರೀಕ್ಷೆಯನ್ನಿಟ್ಟುಕೊಳ್ಳಬೇಡಿ….

ನೋಡುವ ಸ್ಥಳಗಳು :

ಅಯೋಧ್ಯೆಯಲ್ಲಿ ಮೊದಲ ದರ್ಶನ ಹನುಮಂತನಿಗೇ ಅನ್ನೋ ನಂಬಿಕೆಯಿರೋ ಕಾರಣ, ಮೊದಲು…

1. ಹನುಮಾನ್ ಗಢಿ ಮಂದಿರ ತಲುಪಿ ದರ್ಶನ ಮುಗಿಸಿ. ಇಲ್ಲಿಂದ ಹೊರ ಬಂದು ರಾಜಪಥ ಮಾರ್ಗದಲ್ಲಿ ಎಡಕ್ಕೆ ಚಲಿಸಿದಲ್ಲಿ ನೋಡಬೇಕಿರೋ ಅಷ್ಟೂ ಜಾಗಗಳೂ ಇದೇ ಹಾದಿಯಲ್ಲಿ ಸಿಗುತ್ತವೆ. ಹಾಗಾಗಿ ಗೈಡುಗಳ ಅವಶ್ಯಕತೆಯೂ ಇಲ್ಲ…

2. ರಾಜದ್ವಾರ ಮಂದಿರ ( ಹನುಮಾನ್ ಮಂದಿರದ ಎದುರಲ್ಲೇ ಇದೆ)

3. ಭರತ ಮಿಲಾಪ್ ಮಂದಿರ. ( 50mtr ಅಂತರ)

4. ದಶರಥ ಮಹಲ್ ( 200mtr ಅಂತರ)

5. ರಾಮಜನ್ಮಭೂಮಿ ಶ್ರೀರಾಮ ಮಂದಿರ ( 500mtr ದೂರದಲ್ಲಿದೆ)

6. ಅರಬಿಂದೋ‌ ಆಶ್ರಮ. (ಶ್ರೀರಾಮಮಂದಿರದ Exit ಗೇಟ್ ಬಳಿ )

7. ಸುಗ್ರೀವ ಕಿಲಾ ಮಂದಿರ. ( ಶ್ರೀರಾಮಮಂದಿರದ ಪ್ರವೇಶ ದ್ವಾರದಿಂದ 400mtr)

8. ಕನಕಭವನ ( ಸೀತೆಗೆ ಕೈಕೇಯಿ ಉಡುಗೊರೆಯಾಗಿ ನೀಡಿದ ಮಹಲು. ದಶರಥ ಮಹಲಿನಿಂದ 200mtr ).

9. ಚೋಟಿ‌ ದೇವ್‌ಕಾಲಿ ದೇವಸ್ಥಾನ.(900mtr from ಹನುಮಾನ್ ಗಢಿ)

10. ರಾಮ್ ಕೀ ಪೈಡಿ, ಸರಯೂ ಘಾಟ್… (ಹನುಮಾನ್ ಮಂದಿರದಿಂದ 2km).

11. ಗುಪ್ತಾರ್ ಘಾಟ್ (ಅಯೋಧ್ಯೆಯಿಂದ 10km ದೂರದಲ್ಲಿ ಸರಯೂ ನದಿ ದಂಡೆಯಲ್ಲಿರೋ ಈ ಘಾಟಿನಲ್ಲಿಯೇ ಜಲಸಮಾಧಿಯಾಗುವ ಮೂಲಕ ಶ್ರೀರಾಮ ತನ್ನ ಅವತಾರವನ್ನು ಮುಗಿಸಿದ್ದು ).

12. ಬಡಿ‌ ದೇವ್‌ಕಾಲಿ ಮಂದಿರ, ಅಯೋಧ್ಯೆಯ ಕುಲದೇವತೆ. ( ಹನುಮಾನ್ ಗಢಿಯಿಂದ 5km )

ಕೆಲವೊಂದು ಗಮನಿಸಬೇಕಾದ ಅಂಶಗಳು…

ಬಹುತೇಕ ಜನರೆಲ್ಲಾ ಬೆಳಗ್ಗಿನ ಸಮಯದಲ್ಲಿ ದರ್ಶನ ಮುಗಿಸಿ ಊರುಗಳಿಗೆ ತೆರಳೋದ್ರಿಂದಾಗಿ, ಅಯೋಧ್ಯೆಯಲ್ಲಿಯೇ ತಂಗುವುದಾದಲ್ಲಿ ಸಂಜೆಯ ನಂತರದ ದರ್ಶನದ ಆಯ್ಕೆ ಮಾಡಿಕೊಳ್ಳೋದು ಉತ್ತಮ.
ಜನಸಂದಣಿ ಕಡಿಮೆಯಿರುತ್ತದೆ…

ಸಾಮಾನ್ಯವಾಗಿ ಶ್ರೀರಾಮನ ದರ್ಶನಕ್ಕೆ ಕನಿಷ್ಟ ಎರಡು ಫ ಘಂಟೆಗಳು ತೆಗೆದುಕೊಳ್ಳುತ್ತದೆ.

ತುಂಬಾ  ಬಿಗಿಭದ್ರತೆ ಇರುವ ಕಾರಣ, ಮೊಬೈಲ್, ಇಯರ್ ಫೋನ್, ಚಾರ್ಜರ್ ಕೇಬಲ್, ಸ್ಮಾರ್ಟ್ ವಾಚ್, ಪವರ್‌ಬ್ಯಾಂಕ್ ಇತ್ಯಾದಿ
ಎಲೆಕ್ಟ್ರಾನಿಕ್ ವಸ್ತುಗಳು, ಬ್ಯಾಗುಗಳು ಇತ್ಯಾದಿಗಳನ್ನು ಶ್ರೀರಾಮಮಂದಿರದೊಳಗೆ ಬಿಡುವುದಿಲ್ಲ. ಹಾಗಾಗಿ ಇವ್ಯಾವುದೂ ನಿಮ್ಮ ಜೊತೆಗೆ ಕೊಂಡೊಯ್ಯಬೇಡಿ. ಅಲ್ಲಿ ಲಾಕರ್ ಗಳ ಸೌಲಭ್ಯವಿದ್ದರೂ ಇದಕ್ಕಾಗಿಯೇ ಗಂಟೆಗಟ್ಟಲೆ ಕಾಯಬೇಕಿಲ್ಲಿ.

ಪ್ರಸಾದಗಳು ನಮ್ಮಲ್ಲೆಲ್ಲಾ ಸಿಗುವಂತೆ ದೇವಸ್ಥಾನದ ಒಳಗೆಲ್ಲಾ ಕೌಂಟರ್‌ಗಳಲ್ಲಿ ಸಿಗೋದಿಲ್ಲ. ಹೊರಗಡೆಯಿರೋ ಅಂಗಡಿಗಳಲ್ಲಿ ಲಾಡು ಇತ್ಯಾದಿ ಖರೀದಿಸಿ ಕೊಂಡೊಯ್ದಲ್ಲಿ ಅದನ್ನು ದೇವರಿಗೆ ಸಮರ್ಪಿಸಿ ನಿಮಗೇ ವಾಪಸ್ ಕೊಡುತ್ತಾರೆ.
ಹೀಗೆ ಖರೀದಿಸುವಾಗ ಪಾದರಕ್ಷೆಗಳನ್ನೆಲ್ಲಾ ಆ ಅಂಗಡಿಗಳಲ್ಲೇ ಬಿಟ್ಟು, ಬರಿಗಾಲಲ್ಲೇ ಅಷ್ಟೂ ದರ್ಶನ ಮುಗಿಸಿ ಬಂದು ಧರಿಸೋದು ಉತ್ತಮ.

ದಶರಥಮಹಲ್ ಹಾಗೂ ಕನಕಭವನ ಮಧ್ಯಾಹ್ನ 12ರಿಂದ 4pm ವರೆಗೂ ಮುಚ್ಚಿರುತ್ತವೆ.

ಸರಯೂ ಘಾಟಿನಲ್ಲಿ ಸಂಜೆ ಸೂರ್ಯಾಸ್ತದ ಸಮಯದಲ್ಲಿ ಸರಯೂ ಆರತಿ, ಇದು ಮುಗಿಯುತ್ತಿದ್ದಂತೆಯೇ ಎದುರಲ್ಲಿರೋ ರಾಮ್ ಕೀ ಪೈಡಿಯಲ್ಲಿ ಕಾರ್ಯಕ್ರಮಗಳಿರುತ್ತವೆ.

ಹನುಮಾನ್ ಗಢಿ/ಶ್ರೀರಾಮ ಮಂದಿರದಿಂದ ಸರಯೂ ಘಾಟಿಗೆ ತೆರಳಲು ಶೇರಿಂಗ್ ಆಟೋಗಳು ಲಭ್ಯವಿದೆ.

ವಸತಿ ವ್ಯವಸ್ಥೆ :

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಿಂದ ಕೂಗಳತೆ ದೂರದಲ್ಲೇ, ಪೇಜಾವರ ಮಠದ ಮಾಧವಾಶ್ರಮ, ಬಿರ್ಲಾ ಧರ್ಮಶಾಲಾ, ರಾಮ್ ಸಿಂಧೂ ಧರ್ಮಶಾಲಾ, ಜಾನಕಿಮಹಲ್ ಧರ್ಮಶಾಲಾ ಸೇರಿದಂತೆ ನೂರಕ್ಕೂ ಹೆಚ್ಚು ಧರ್ಮಶಾಲೆಗಳಿದ್ದು ಉಚಿತ ಅಥವಾ ಅತೀಕಡಿಮೆ ಬೆಲೆಯಲ್ಲಿ ಇಲ್ಲೆಲ್ಲಾ ಉಳಿದುಕೊಳ್ಳೋ ವ್ಯವಸ್ಥೆಯಿದೆ. ಜೊತೆಗೇ ಇಲ್ಲೆಲ್ಲಾ AC / Non Ac ರೂಮುಗಳೂ ಲಭ್ಯವಿದ್ದು, Yatradham . org ನಲ್ಲಿ ಆನ್ ಲೈನ್ ಬುಕಿಂಗ್ ಕೂಡಾ ಸಾಧ್ಯವಿದೆ..
ಒಂದಿಷ್ಟು ಉತ್ತಮ ದರ್ಜೆಯ ಹೋಟೆಲ್ ಗಳ ನಿರೀಕ್ಷೆಯಿದ್ದಲ್ಲಿ ಆನ್ ಲೈನಲ್ಲಿ ಮುಂಗಡ ಬುಕಿಂಗ್ ಮಾಡದೆ ಹೋಗಬೇಡಿ.
ಇದಲ್ಲದೆ ಈಗ ಹೊಸದಾಗಿ ನಗರದ ಹೊರವಲಯಗಳಲ್ಲಿ ಟೆಂಟ್ ಸಿಟಿಗಳೂ ನಿರ್ಮಾಣವಾಗಿದ್ದು ಇಲ್ಲಿಯೂ ಉಳಿಯಬಹುದಾಗಿದೆ…
🙏🙏🙏🙏🙏
✍🏼 ಸುಧೀರ್ ಸಾಗರ್.