ಅಂಗನವಾಡಿ ಕೇಂದ್ರದಲ್ಲಿ  ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳಲ್ಲಿ ಶುಚಿತ್ವ, ರುಚಿ ಕಾಪಾಡಿಕೊಳ್ಳಿ : ಜಿ.ಪಂ. ಉಪ ಕಾರ್ಯದರ್ಶಿ ಅತಿಕ್ ಪಾಷ 

ವಿಜಯ ದರ್ಪಣ ನ್ಯೂಸ್….

ಅಂಗನವಾಡಿ ಕೇಂದ್ರದಲ್ಲಿ  ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳಲ್ಲಿ ಶುಚಿತ್ವ, ರುಚಿ ಕಾಪಾಡಿಕೊಳ್ಳಿ : ಜಿ.ಪಂ. ಉಪ ಕಾರ್ಯದರ್ಶಿ ಅತಿಕ್ ಪಾಷ

ಶಿಡ್ಲಘಟ್ಟ : ಮಕ್ಕಳ ಆರೈಕೆ ಕೆಲಸ ಬಹಳ ಸೂಕ್ಷ್ಮ, ಅಂಗನವಾಡಿ ಕಾರ್ಯಕರ್ತೆಯರ ಹೆಚ್ಚು ಜವಾಬ್ದಾರಿಯು ಆಗಿದೆ ಹಾಗಾಗಿ ಅಂಗನವಾಡಿ ಕೇಂದ್ರದಲ್ಲಿ ಸ್ವಚ್ಚತೆ, ನೈರ್ಮಲ್ಯ ಕಾಪಾಡಿಕೊಂಡು ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳಲ್ಲಿ ಶುಚಿತ್ವ, ರುಚಿ ಕಾಪಾಡಿಕೊಳ್ಳಿ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಿ ಎಂದು ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಅತಿಕ್ ಪಾಷ ಸೂಚನೆ ನೀಡಿದರು.

ತಾಲ್ಲೂಕಿನಲ್ಲಿ ಮನೇಗಾ ಸೇರಿದಂತೆ ವಿವಿಧ ಯೋಜನೆಗಳಡಿ ವಿವಿಧೆಡೆ ನಡೆಯುತ್ತಿರುವ ಕಾಮಗಾರಿ, ಅಂಗನವಾಡಿ ಕೇಂದ್ರ, ಡಿಜಿಟಲ್ ಲೈಬ್ರರಿ, ಕೂಸಿನ ಮನೆ, ಗ್ರಾಮ ಪಂಚಾಯತಿ ಸಭಾಂಗಣ, ಉದ್ಯಾನವನ ಪರಿಶೀಲಿಸಿ ಅವರು ಮಾತನಾಡಿದರು.

ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಅಥವಾ ಇನ್ನಾವುದೇ ಆಹಾರ ಪದಾರ್ಥಗಳ ಬಗ್ಗೆ ಬಹಳ ಗಮನಿಸಬೇಕು, ಮಕ್ಕಳ ಆರೋಗ್ಯ ವಿಚಾರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜಾಗ್ರತೆ ವಹಿಸಬೇಕು ಎಂದರು.

ಯಾವುದೇ ಕಾಮಗಾರಿ ಆಗಲಿ, ಸಕಾಲಕ್ಕೆ ಮುಗಿಸುವ ಜತೆಗೆ ಗುಣಮಟ್ಟ ಕಾಪಾಡಿಕೊಳ್ಳಬೇಕು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕಾಲಕಾಲಕ್ಕೆ ಪರಿಶೀಲಿಸಿ ಗುಣಮಟ್ಟದ ಬಗ್ಗೆ ನಿಗಾ ವಹಿಸುವ ಮತ್ತು ವರದಿ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.

ಮಳಮಾಚನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎನ್‌ಆರ್‌ಎಲ್‌ಎಂ ಕಟ್ಟಡ, ಡಿಜಿಟಲ್ ಲೈಬ್ರರಿ ಕೇಂದ್ರ, ಸಭಾಂಗಣ, ತಾದೂರು ಮಾದರಿ ಅಂಗನವಾಡಿ ಕೇಂದ್ರ, ಮಳೆ ನೀರು ಕೊಯ್ಲು ಕಾಮಗಾರಿ, ನಾಗಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ನಡಿಪಿನಾಯಕನಹಳ್ಳಿ ಗ್ರಾಮದ ಉದ್ಯಾನವನ, ಜಂಗಮಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಉದ್ಯಾನವನ, ಪ್ರಾಥಮಿಕ ಆರೋಗ್ಯ ಕೇಂದ್ರ, ಡಿಜಿಟಲ್ ಲೈಬ್ರರಿ, ಗ್ರಾಮ ಪಂಚಾಯತಿ ಸಭಾಂಗಣ, ಕುಂಭಿಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಳನಾಯಕನಹಳ್ಳಿಯ ಅಡುಗೆ ಕೋಣೆ, ಕೂಸಿನ ಮನೆ, ಲೈಬ್ರರಿ ಕೇಂದ್ರ, ಮಾದರಿ ಅಂಗನವಾಡಿ ಕೇಂದ್ರವನ್ನು ಅವರು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಇಒ ಆರ್. ಹೇಮಾವತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಮಳಮಾಚನಹಳ್ಳಿ, ಜಂಗಮಕೋಟೆ, ನಾಗಮಂಗಲ, ಕುಂಭಿಗಾನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳು, ಜಿಲ್ಲಾ ಪಂಚಾಯತಿ ವ್ಯವಸ್ಥಾಪಕ ಮದನ್, ಜಿಲ್ಲಾ ಯೋಜನಾಧಿಕಾರಿ ನಾರಾಯಣಯಸ್ವಾಮಿ, ಜಿಲ್ಲಾ ಸಮಾಲೋಚಕ ಎಸ್‌ಬಿಎಂಜಿ ಕೃಷ್ಣಪ್ಪ, ತಾಂತ್ರಿಕ ಸಂಯೋಜಕ ನಾಗೇಂದ್ರ ಮುಂತಾದವರು ಹಾಜರಿದ್ದರು.