ಡಿಜಿಟಲ್ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ವೃದ್ಧಿಸುವ ಉದ್ದೇಶದಿಂದ ಆಹಾರ ಮೇಳವನ್ನು ಆಯೋಜನೆ 

ವಿಜಯ ದರ್ಪಣ ನ್ಯೂಸ್….

ಡಿಜಿಟಲ್ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ವೃದ್ಧಿಸುವ ಉದ್ದೇಶದಿಂದ ಆಹಾರ ಮೇಳವನ್ನು ಆಯೋಜನೆ

ಶಿಡ್ಲಘಟ್ಟ : ಹಣಕಾಸಿನ ಸಾಕ್ಷರತೆ, ಮಾರುಕಟ್ಟೆಯ ವಿಶ್ಲೇಷಣೆ, ತೆರಿಗೆ, ಕಾನೂನು ಮತ್ತು ಡಿಜಿಟಲ್ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ವೃದ್ಧಿಸುವ ಉದ್ದೇಶದಿಂದ ಕಾಲೇಜು ವಿದ್ಯಾರ್ಥಿಗಳಿಂದ ಆಹಾರ ಮೇಳವನ್ನು ಆಯೋಜಿಸಿದ್ದೇವೆ ಮಳ್ಳೂರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎನ್. ರಾಮಾಂಜಿನಪ್ಪ ತಿಳಿಸಿದರು.

ತಾಲ್ಲೂಕಿನ ಮಳ್ಳೂರಿನ ಸ್ವಾಮಿ ವಿವೇಕಾನಂದ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಆಹಾರ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾಣಿಜ್ಯ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಯಶಸ್ವಿಯಾಗಲು ಕೇವಲ ಪುಸ್ತಕ ಓದಿ ಕಲಿತ ಸಾಲದು, ಪ್ರಾಯೋಗಿಕ ವ್ಯವಹಾರ ಜ್ಞಾನ ಅತ್ಯಗತ್ಯ ಹಾಗು ಇಚ್ಚಾಶಕ್ತಿ ಬಹಳ ಮುಖ್ಯವಾಗಲಿದೆ ಎಂದು ಹೇಳಿದರು.

ಕೇವಲ ನಾಲ್ಕು ಗೋಡೆಗಳ ನಡುವೆ ಕುಳಿತು ಪಿಯುಸಿ ಮತ್ತು ಬಿಕಾಂ ವಿದ್ಯಾರ್ಥಿಗಳು ಪಾಠ ಕೇಳುವುದರಿಂದ ಬದುಕಿನಲ್ಲಿ ಯಶಸ್ವಿ ಆಗಲು ಸಾಧ್ಯವಿಲ್ಲ ವ್ಯಾಪಾರ-ವಹಿವಾಟು, ಆಯ-ವ್ಯಯ, ವ್ಯವಹಾರಜ್ಞಾನ, ಉದ್ಯಮಶೀಲತೆ, ಸಂವಹನ ಕಲೆ ಮುಂತಾದವುಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಆಹಾರ ಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಾವು ತೆರೆಯುವ ಅಂಗಡಿಯಲ್ಲಿ ತಯಾರಿಸುವ ಆಹಾರ ಪದಾರ್ಥಗಳಿಗೆ ಅವರೇ ಹಣವನ್ನು ಹೂಡಿ, ಅದರಲ್ಲಿ ಬರುವ ಲಾಭಾಂಶವನ್ನು ಹಂಚಿಕೊಳ್ಳುವರು ,ಇತರೇ ವಿದ್ಯಾರ್ಥಿಗಳು ಮತ್ತು ಪೋಷಕರು ಬಂದು ವ್ಯಾಪಾರ ಮಾಡುವರು, ಈ ಎಲ್ಲಾ ಲೆಕ್ಕಾಚಾರವನ್ನು ಪ್ರಾಧ್ಯಾಪರಿಗೆ ನೀಡಬೇಕು ಗುಣಮಟ್ಟ, ಶುಚಿತ್ವ, ರುಚಿ, ಬೆಲೆ ಮುಂತಾದ ಮಾನದಂಡಗಳ ಮೂಲಕ ಉತ್ತಮ ತಂಡಕ್ಕೆ ಬಹುಮಾನ ನೀಡುತ್ತೇವೆ ಎಂದು ಆಯೋಜನೆಯ ಮಹತ್ವದ ಬಗ್ಗೆ ವಿವರಿಸಿದರು.

ಆಹಾರ ಮೇಳವು ವಿದ್ಯಾರ್ಥಿಗಳಿಗೆ ಪಾಕ ಕಲೆ, ಪೌಷ್ಟಿಕಾಂಶ, ತಂಡದ ಕೆಲಸ ಮತ್ತು ಉದ್ಯಮಶೀಲತೆಯ ಪ್ರಾಯೋಗಿಕ ಜ್ಞಾನವನ್ನು ಒದಗಿಸುತ್ತವೆ, ವಿವಿಧ ಸಂಸ್ಕೃತಿಗಳ ಆಹಾರಗಳ ಪರಿಚಯ, ಆರೋಗ್ಯಕರ ಆಹಾರ ಪದ್ಧತಿ, ಸ್ವಚ್ಛತೆ, ಹಣಕಾಸಿನ ನಿರ್ವಹಣೆ, ಮತ್ತು ಸಂವಹನ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಇದರಿಂದ ಕಲಿಯಬಹುದು ಎಂದರು.

ಇದೇ ವೇಳೆ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ಸಾವಯವ ಪದಾರ್ಥಗಳಿಂದ ತಯಾರಿಸಿದ ತಿನಿಸುಗಳನ್ನು ಮಾರಾಟ ಮಾಡುವ ಮೂಲಕ ಗಮನ ಸೆಳೆದರು.

ಪ್ರೌಢಶಾಲೆ, ಪ್ರಾಥಮಿಕ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಮೇಳದಲ್ಲಿ ತಿನಿಸುಗಳನ್ನು ಕೊಳ್ಳುವ ಮೂಲಕ ಮೇಳದ ಕಳೆಯನ್ನು ಹೆಚ್ಚಿಸಿದ್ದರು.

ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಸದಸ್ಯರಾದ ಸಿ.ನಾರಾಯಣಸ್ವಾಮಿ, ಸಿ.ಎಂ.ದೇವರಾಜ್,, ಕೆ. ಮುನಿರೆಡ್ಡಿ, ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಿ.ಎಂ.ಸುರೇಶ್,ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಸುರೇಶ್, ಪ್ರೌಢಶಾಲೆ ಮುಖ್ಯಶಿಕ್ಷಕ ವಿ.ವೆಂಕಟೇಶ್, ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ಎಂ. ಕೆ.ನವೀನ್ ಕುಮಾರ್ ಇನ್ನೀತರರು ಹಾಜರಿದ್ದರು.

₹₹₹₹₹₹₹₹₹₹₹₹₹₹₹₹₹₹₹₹₹__₹₹₹₹₹₹

ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪಟ್ಟಾಭಿಷೇಕ ಮತ್ತು ವರ್ಧಂತಿ ಉತ್ಸವ

ಬೆಂಗಳೂರು : ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಫೆಬ್ರವರಿ 18 ರಿಂದ 24ರ ವರೆಗೆ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪಟ್ಟಾಭಿಷೇಕ ಮತ್ತು ವರ್ಧಂತಿ ಉತ್ಸವ ಜರುಗಲಿದೆ.

ಕಾರ್ಯಕ್ರಮಗಳು : (ಪ್ರವಚನಗಳು ಪ್ರತಿದಿನ ಸಂಜೆ 6-30ಕ್ಕೆ) ಕ್ರಮವಾಗಿ : ಶ್ರೀ ಖೇಡಾ ಪ್ರಮೋದಾಚಾರ್, ಶ್ರೀ ವೇದವ್ಯಾಸಾಚಾರ್, ಶ್ರೀ ರಘೋತ್ತಮಾಚಾರ್, ಶ್ರೀ ವೆಂಕಟನರಸಿಂಹಾಚಾರ್, ಡಾ|| ವಿನಾಯಕಾಚಾರ್, ಶ್ರೀ ದ್ವೈಪಾಯನಾಚಾರ್ ಜೋಶಿ ಮತ್ತು ಶ್ರೀ ಗುರುಪ್ರಸಾದಾಚಾರ್ ಹನಸೋಗೆ.

ಸಂಸ್ಥಾನ ಪೂಜೆ : ಫೆಬ್ರವರಿ 19, ಗುರುವಾರ- ಕುಂದಾಪುರ ಶ್ರೀ ವ್ಯಾಸರಾಜ ಮಠಾಧೀಶರಾದ ಶ್ರೀ ಶ್ರೀ ಲಕ್ಷ್ಮೀಂದ್ರತೀರ್ಥ ಶ್ರೀಪಾದಂಗಳವರಿಂದ. ಫೆಬ್ರವರಿ 22, ಭಾನುವಾರ-ತಂಬಿಹಳ್ಳಿ ಮಠದ ಶ್ರೀ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದಂಗಳವರಿಂದ ನಡೆಯಲಿದೆ.

ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-560003