ಲೆಕ್ಕ…….

ವಿಜಯ ದರ್ಪಣ ನ್ಯೂಸ್….

ಲೆಕ್ಕ…….

ಲೆಕ್ಕ ಕೊಡಬೇಕಾಗಿಲ್ಲ ನಾವು ಯಾರಿಗೂ, ಯಾವುದಕ್ಕೂ, ನಮ್ಮ ಮನಸ್ಸಾಕ್ಷಿಗೆ ಹೊರತುಪಡಿಸಿ……

ಲೆಕ್ಕ ಕೊಡಲು ನಮ್ಮ ಬದುಕೇನು ಹಣಕಾಸು ಉದ್ಯಮವಲ್ಲ,
ತೆರಿಗೆ ಕಟ್ಟಲು ಜೀವನವೇನು ವ್ಯಾಪಾರವಲ್ಲ…….

ಹೊಟ್ಟೆಪಾಡಿನ ಕಾಯಕಕ್ಕೆ
ಲೆಕ್ಕ ಕೊಡುತ್ತಲೇ ಇದ್ದೇವೆ,
ತೆರಿಗೆ ಕಟ್ಟುತ್ತಲೇ ಇದ್ದೇವೆ,
ಆದರೆ ಮನುಷ್ಯ ಸಂಬಂಧಗಳಿಗೆ ಬೆಲೆ ಕಟ್ಟಲಾಗದು,
ತೆರಿಗೆ ವಿಧಿಸಲಾಗದು……,

ಈ ಜೀವನದಲ್ಲಿ ಅನೇಕ ಸಂಬಂಧಗಳನ್ನು ನಿಭಾಯಿಸಿದ್ದೇವೆ,
ಆ ಸಂಬಂಧಗಳ ಘನತೆ, ಗೌರವ, ಸ್ವಾಭಿಮಾನ ಕಾಪಾಡಿದ್ದೇವೆ,
ಆದರೆ ಅದಕ್ಕಾಗಿ ಯಾರಿಗೆ ಲೆಕ್ಕ ಕೊಡುವುದು,
ಯಾರು ಅದನ್ನು ಮಾಪನ ಮಾಡುತ್ತಾರೆ…….

ಈ ಸಮಾಜದ ಮಾನವೀಯ ಮೌಲ್ಯಗಳೊಂದಿಗೆ ಸಾಗುತ್ತಿದ್ದೇವೆ, ಬದುಕಿನಲ್ಲಿ ಸಂಘಷವೂ ನಡೆಯುತ್ತಿದೆ. ಆದರೆ ಲೆಕ್ಕ ಕೊಡುವುದು ಮಾತ್ರ ನಮ್ಮ ಮನಸ್ಸಾಕ್ಷಿಗೆ ಮಾತ್ರ.
ಬೇರೆ ಯಾರೂ ಅದನ್ನು
ನಿರ್ಧರಿಸಲು ಸಾಧ್ಯವಿಲ್ಲ…….

ಕೌಟುಂಬಿಕ ಮೌಲ್ಯಗಳು,
ಸಾಮಾಜಿಕ ಮೌಲ್ಯಗಳು,
ಪ್ರಾಕೃತಿಕ ಮೌಲ್ಯಗಳೊಂದಿಗೆ ಮುನ್ನಡೆಯುತ್ತಲೇ ಇದ್ದೇವೆ.
ಆದರೆ ಲೆಕ್ಕ ಮಾತ್ರ ಯಾರಿಗೂ ಕೊಡುವುದಿಲ್ಲ. ಏಕೆಂದರೆ ಈ ಲೆಕ್ಕ ನಮ್ಮ ಮನಸ್ಸಾಕ್ಷಿಯ ಎಣಿಕೆಗೆ
ಮಾತ್ರ ಸಿಗುವಂತದ್ದು……

ಯಾರೋ ಲೆಕ್ಕ ಕೇಳುತ್ತಾರೆ,
ಏನೋ ಲೆಕ್ಕ ಹೇಳುತ್ತಾರೆ,
ಅವರಿಗೆಲ್ಲ ಲೆಕ್ಕ ಕೊಡುತ್ತಾ ಇರಲು ನಾವೇನು ನಿಮ್ಮ ಆಸ್ತಿಯಲ್ಲ,
ನಮ್ಮ ಬದುಕು ನಮ್ಮ ಹಕ್ಕು….

ಲೆಕ್ಕ ಕೇಳುವವರದೇ ತಪ್ಪು ಲೆಕ್ಕವಾಗಿರಬಹುದಲ್ಲವೇ ?
ಅದಕ್ಕಾಗಿಯೇ ನಮ್ಮ ಲೆಕ್ಕ,
ಅದು ನಮ್ಮ ಮನಸ್ಸಿನ ಲೆಕ್ಕ,
ಅದಕ್ಕೆ ನಾವಷ್ಟೇ ಹೊಣೆ….

ನಮ್ಮ ಸುಖ ದುಃಖಗಳಿಗೂ,
ಕಷ್ಟ ನಷ್ಟಗಳಿಗೂ,
ಸೇವೆ, ಸ್ವಾರ್ಥ, ತ್ಯಾಗ, ಮೋಸ, ವಂಚನೆಗಳಿಗೂ, ನಾವು ಲೆಕ್ಕ ಕೊಡಬೇಕಾಗಿರುವುದು ನಮ್ಮ ಮನಸ್ಸಿಗೆ ಮಾತ್ರ,
ಮತ್ಯಾರಿಗೋ ಅಲ್ಲ…..

ನಮ್ಮ ಮಕ್ಕಳನ್ನು ಸಾಕಿ ಬೆಳೆಸಿದೆವು,
ನಮ್ಮ ಒಡಹುಟ್ಟಿದವರನ್ನು ಓದಿಸಿ, ಉದ್ಯೋಗ ಕೊಡಿಸಿ ಮದುವೆ ಮಾಡಿದೆವು,
ನಮ್ಮ ಗಂಡ – ಹೆಂಡತಿಗೆ ಸರ್ವಸ್ವವನ್ನು ಧಾರೆಯೆರೆದು ಬದುಕು ನೀಡಿದೆವು,
ನಮ್ಮ ಅಪ್ಪ ಅಮ್ಮನನ್ನು ಕೊನೆಯ ಉಸಿರಿರುವವರೆಗೂ ನೋಡಿಕೊಂಡೆವು,
ನಮ್ಮ ಗೆಳೆಯರಿಗೆ, ನಮ್ಮ ಸಮಾಜಕ್ಕೆ ಸಾಧ್ಯವಾದಷ್ಟು ಉಪಕಾರ ಮಾಡಿದೆವು, ಆದರೆ ಅದಕ್ಕಾಗಿ ನಾವು ಯಾರಿಗೂ ಲೆಕ್ಕ ಕೊಡಬೇಕಾಗಿಲ್ಲ, ನಮ್ಮ ಮನಸ್ಸಾಕ್ಷಿಗೆ ಹೊರತುಪಡಿಸಿ, ಏಕೆಂದರೆ ಬದುಕು ಒಂದು ಉದ್ಯಮವಲ್ಲ….

ಮಗ ಮಗಳು ಕೇಳುತ್ತಾಳೆ ನನಗೇನು ಮಾಡಿದೆ,
ಹೆಂಡತಿ – ಗಂಡ ಕೇಳುತ್ತಾಳೆ/ನೆ, ನನಗೇನು ಮಾಡಿದೆ,
ತಂದೆ ತಾಯಿ ಕೇಳುತ್ತಾರೆ ನಮಗೇನು ಮಾಡಿದೆ,
ಸ್ನೇಹಿತರು, ಸಮಾಜ ಕೇಳುತ್ತದೆ, ನಮಗೇನು ಮಾಡಿದೆ,

ಏನು ಮಾಡಿದೆ ಎಂಬುದು ನಮಗಷ್ಟೇ ಗೊತ್ತು, ಅದಕ್ಕಾಗಿ ನಮ್ಮ ಮನಸ್ಸಾಕ್ಷಿಗೆ ಮಾತ್ರ ನಾವು ಲೆಕ್ಕ ಕೊಡುತ್ತೇನೆ, ನಿಮಗಲ್ಲ.

ಏಕೆಂದರೆ, ಲೆಕ್ಕ ಕೊಡಲು ನಮ್ಮದು ತೋರಿಕೆಯ ಕೃತಕ ಬದುಕಲ್ಲ, ಮನಸ್ಸಾಕ್ಷಿಯ ಸಹಜ ಬದುಕು….

ಪ್ರೀತಿಯನ್ನು ಅಳೆಯುವ ಮಾಪನವಿದೆಯೇ,
ಪ್ರೇಮವನ್ನು ಅಳೆಯುವ ಅಳತೆಗೋಲಿದೆಯೇ,
ಸೇವೆಯನ್ನು ಅಳೆಯುವ ಮಾನದಂಡವಿದೆಯೇ,
ಕರುಣೆಯನ್ನು ಅಳೆಯುವ ಯಂತ್ರವಿದೆಯೇ,
ತ್ಯಾಗವನ್ನು ಅಳೆಯುವ ತಂತ್ರವಿದೆಯೇ, ಕ್ಷಮೆಯನ್ನು ಅಳೆಯುವ ಮಂತ್ರವಿದೆಯೇ….

ಹಾಗಾದರೆ ನಾವು ಲೆಕ್ಕ ಕೊಡುವುದು ಯಾರಿಗೆ, ಯಾಕಾಗಿ,
ನಾವು ವ್ಯಾಪಾರಿಗಳಲ್ಲ,
ನಾವು ಲೆಕ್ಕ ಕೊಡುವುದು ನಮ್ಮ ಮನಸ್ಸಾಕ್ಷಿಗೆ ಮಾತ್ರ,
ಅದೂ ಹಣದ ಲೆಕ್ಕವಲ್ಲ,
ಬದುಕಿನ ಲೆಕ್ಕ,
ಆತ್ಮಸಾಕ್ಷಿಯ ಲೆಕ್ಕ……

” ಯಾವ ಶಾಸ್ತ್ರ ಏನು ಹೇಳಿದರೇನು, ಎದೆಯದನಿಗೂ ಮಿಗಿಲಾದ ಶಾಸ್ತ್ರವಿಹುದೇ,…. ”
ಕುವೆಂಪು……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….