ವಿಜಯ ದರ್ಪಣ ನ್ಯೂಸ್…..
ಉದಯೋನ್ಮುಖ ನೃತ್ಯ ಕಲಾವಿದೆ ಎಂ. ವಸುಧಾ ರಂಗಪ್ರವೇಶ

ನೃತ್ಯರಂಗದಲ್ಲಿ ಹಿರಿಯ ಗುರುಗಳಾಗಿ ಹೆಸರು ಮಾಡಿರುವ ವಿಜಯ್ ಬಹುಮುಖ ಪ್ರತಿಭೆಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಲ್ಪಟ್ಟಿದ್ದು ತಮ್ಮ ‘ರಾಜರಾಜೇಶ್ವರಿ ಕಲಾನಿಕೇತನ್’ ನೃತ್ಯಸಂಸ್ಥೆಯ ಮೂಲಕ ನೂರಾರು ನೃತ್ಯಪ್ರತಿಭೆಗಳನ್ನು ಬೆಳಕಿಗೆ ತಂದ ಕೀರ್ತಿ ಅವರದು. ಅವರ ನುರಿತ ಗರಡಿಯಲ್ಲಿ ಹೊರಹೊಮ್ಮಿರುವ ನೃತ್ಯಶಿಲ್ಪ ಎಂ ವಸುಧಾ ಕೂಡ ಬಹುಮುಖ ಪ್ರತಿಭೆ, ತಾಯಿ ಕೆ.ಬಿ.ಲೀಲಾವತಿ ಗೌಡ ಅವರ ನಿರಂತರ ಪ್ರೋತ್ಸಾಹದಿಂದ ಎಂ ವಸುಧಾ, ಎಂಜಿನಿಯರಿಂಗ್ ಪದವೀಧರೆಯಾಗಿದ್ದು, ಕಳೆದ 17 ವರ್ಷಗಳಿಂದ ನಿರಂತರ ನೃತ್ಯಾಭ್ಯಾಸ ಮಾಡುತ್ತಿದ್ದು, ನಾಡಿನ ಅನೇಕ ವೇದಿಕೆಗಳಲ್ಲಿ ತನ್ನ ಪ್ರತಿಭಾ ಪ್ರದರ್ಶನ ನೀಡಿದ್ದಾಳೆ. ಜೊತೆಗೆ ನೃತ್ಯ ಸಂಯೋಜನೆಯಲ್ಲಿ ಅನುಭವವುಳ್ಳ ವಸುಧಾ, ತನ್ನದೇ ಆದ ತನ್ನದೇ ಆದ ‘ತದ್ರೂಪ ನಾಟ್ಯ ಕಲಾ ಅಕಾಡೆಮಿ’ಯ ಮೂಲಕ ಅನೇಕ ನೃತ್ಯಾಕಾಂಕ್ಷಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾಳೆ..
ಕರ್ನಾಟಕ ಸರ್ಕಾರದ ಜ್ಯೂನಿಯರ್ ನೃತ್ಯ ಪರೀಕ್ಷೆಯಲ್ಲಿ ಮತ್ತು ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲದ ಮಾಧ್ಯಮ ಪೂರ್ಣ ಪರೀಕ್ಷೆಯಲ್ಲೂ ಜಯಶೀಲಳಾಗಿರುವ ಇವಳು ಪ್ರಸ್ತುತ ಡಾ. ವೀಣಾ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಉನ್ನತ ಅಭ್ಯಾಸದಲ್ಲಿ ತೊಡಗಿದ್ದಾಳೆ.
ಇದೀಗ ಎಂ ವಸುಧಾ ತಾನು ಕಲಿತಿರುವ ನೃತ್ಯ ಆಯಾಮಗಳ ಪ್ರದರ್ಶನಕ್ಕಾಗಿ ಏಪ್ರಿಲ್ 3ನೇ ತಾರೀಖು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಮಲ್ಲೇಶ್ವರದ ಸೇವಾಸದನದಲ್ಲಿ ವಿದ್ಯುಕ್ತವಾಗಿ ತನ್ನ ರಂಗಪ್ರವೇಶ ನೆರವೇರಿಸಿಕೊಳ್ಳಲಿದ್ದಾಳೆ. ಇವಳ ಕಲಾತ್ಮಕ ನಾಟ್ಯವಲ್ಲರಿಯನ್ನು ಕಣ್ಣುಂಬಿಕೊಳ್ಳಲು ಎಲ್ಲ ಕಲಾ ರಸಿಕರಿಗೂ ಆದರದ ಸ್ವಾಗತ.
ಕು ವಸುಧಾಗೆ ನೃತ್ಯ ಬಾಲ್ಯದ ಒಲವು. ಅವಳ ನೃತ್ಯ ಪ್ರತಿಭೆಗೆ ನೀರೆರೆದು ಪ್ರೋತ್ಸಾಹ ನೀಡಿದವರು ಅವಳ ತಾಯಿ ಲೀಲಾವತಿ ಗೌಡ ಭರತನಾಟ್ಯವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಲು ಮೊದಲಿಗೆ ಅವಳನ್ನು ನೃತ್ಯಗುರು. ವಿದ್ವಾನ್ ಕೋಲಾರ ರಮೇಶ್ ಅವರಲ್ಲಿ ಸೇರ್ಪಡೆಗೊಳಿಸಿದರು. ಅವರಲ್ಲಿ ಸಾಕಷ್ಟು ಪ್ರಾಥಮಿಕ ಅಭ್ಯಾಸವನ್ನು ಹದವಾಗಿ ಮಾಡಿ ಅಡಿಪಾಯವನ್ನು ಗಟ್ಟಿಗೊಳಿಸಿಕೊಂಡು ಮುಂದೆ ಹಲವಾರು ಗುರುಗಳ ಬಳಿ ಕಲಿತು ಪ್ರಸ್ತುತ 6 ವರ್ಷಗಳಿಂದ ಹಿರಿಯ ನೃತ್ಯಗುರು ಡಾ. ವೀಣಾ ಅವರಲ್ಲಿ ಉನ್ನತಾಭ್ಯಾಸ ಮತ್ತು ಮಾರ್ಗದರ್ಶನ ವನ್ನು ಪಡೆಯುತ್ತಿದ್ದಾರೆ.
ಎಂ ವಸುಧಾ ಶೃಂಗೇರಿಯ ದರ್ಶಿನಿ ಕಾಮೊಸಿಟ್ ಹೈಸ್ಕೂಲಿನಲ್ಲಿ ಶಾಲಾ ಅಭ್ಯಾಸ ಮಾಡಿ ಅಲ್ಲಿ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದು ಎನಿಸಿಕೊಂಡದ್ದಲ್ಲದೆ, ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಅನಂತರ ಬೆಂಗಳೂರಿನ ರಾಮಮೂರ್ತಿ ನಗರದ ಸೇಂಟ್ ಆನ್ ಪಿ. ಯೂ. ಕಾಲೇಜಿನಲ್ಲಿ ಓದಿ, ಯಲಹಂಕದ ಪ್ರೆಸಿಡೆನ್ಸಿ ಯೂನಿವರ್ಸಿಟಿಯಿಂದ ಇನ್ನರ್ಮೇಶನ್ ಸೈನ್ಸ್ ನಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪಡೆದ ಹೆಮ್ಮೆ ಇವರದು.

ನೃತ್ಯದ ಬಗ್ಗೆ ಅತೀವ ಒಲವುಳ್ಳ ಎಂ ವಸುಧಾಗೆ ನೃತ್ಯ ಸಾಧನೆಯ ಬಗ್ಗೆ ಕನಸಿನ ಜೊತೆ ಅಷ್ಟೇ ಬದ್ಧತೆ- ಪರಿಶ್ರಮ ಇದೆ ತಮ್ಮದೇ ಆದ ‘ತದ್ರೂಪ ನಾಟ್ಯ ಕಲಾ ಅಕಾಡೆಮಿ’ಗೆ ಸ್ಥಾಪಕಿ ಮತ್ತು ನಿರ್ದೆಶಕಿಯಾಗಿದ್ದು, ಅಲ್ಲಿ ಕಳೆದ 4 ವರ್ಷಗಳಿಂದ ನೂರಾರು ಜನರಿಗೆ ನೃತ್ಯ ಕಲಿಸುತ್ತಿದ್ದಾರೆ. ಸಿಂಧಿ ಹೈಸ್ಕೂಲಿನ ಮಕ್ಕಳಿಗಾಗಿ ‘ರಾಮಾಯಣ’ ನೃತ್ಯ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು.
ಇವರಿಗೆ ನೃತ್ಯ ಸಂಯೋಜನೆ ತುಂಬಾ ಆಸಕ್ತಿಯ ವಿಷಯ. ಇಪ್ಪತ್ತಕ್ಕೂ ಹೆಚ್ಚು ವಿಶಿಷ್ಟ ನೃತ್ಯ ಸಂಯೋಜನೆಗಳನ್ನು ಮಾಡಿರುವುದು ಇವರ ವೈಶಿಷ್ಟ್ಯ, ತಮ್ಮ ನೃತ್ಯಶಾಲೆಯ ವಾರ್ಷಿಕೋತ್ಸವವನ್ನು ‘ಸ್ವಯಂಭೂ ಡ್ಯಾನ್ಸ್ ಫೆಸ್ಟಿವಲ್’ ಶೀರ್ಷಿಕೆಯಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ ನೃತ್ಯರಂಗದಲ್ಲಿ ಸಂಪೂರ್ಣ ತೊಡಗಿಕೊಂಡು, ಈ ಕಲಾಪಯಣದಲ್ಲಿ ಸಾರ್ಥಕ ಹೆಜ್ಜೆಗಳನ್ನು ಮೂಡಿಸುವುದು ವಸುಧಾ ಕನಸು.
ವೈ.ಕೆ.ಸಂಧ್ಯಾ ಶರ್ಮ










