ವಿಜಯ ದರ್ಪಣ ನ್ಯೂಸ್….
ಕೇಂದ್ರದ ನಾಲ್ಕು ಕಾರ್ಮಿಕ ಕಾಯಿದೆ ವಿರೋಧಿಸಿ ಪ್ರತಿಭಟನೆ

ತಾಂಡವಪುರ ಮೇ 12: ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಕಾರ್ಮಿಕರ ಹಿತಾಸಕ್ತಿ ಬಲಿಕೊಟ್ಟು, ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ನಿಯಮಾವಳಿಗಳನ್ನು ರೂಪಿಸಿ ಗೆಜೆಟ್ ಪ್ರಕಟಿಸಿರುವುದನ್ನು ವಿರೋಧಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಕಾರ್ಯಕರ್ತರು ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಾರ್ಮಿಕ ಸಂಘಟನೆಗಳು ಸೂಚಿಸಿದ ಯಾವುದೇ ತಿದ್ದುಪಡಿ ಪರಿಗಣಿಸದೆ ಮತ್ತು ಅವರೊಂದಿಗೆ ಯಾವುದೇ ಮಾತುಕತೆ ನಡೆಸದೆ ಸರ್ಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿದೆ. ದಶಕಗಳ ಕಾಲದ ಹೋರಾಟದ ಮೂಲಕ ಗಳಿಸಿದ್ದ ಕಾರ್ಮಿಕರ ಮೂಲಭೂತ ಹಕ್ಕು ಮತ್ತು ಸವಲತ್ತನ್ನು ಈ ಸಂಹಿತೆಗಳು ನಾಶ ಮಾಡುತ್ತವೆ ಎಂದು ದೂರಿದರು.
ಈ ಹೊಸ ನಿಯಮಗಳ ಮೂಲಕ ಬಂಡವಾಳಗಾರರು ಮಾಡುವ ಕಾನೂನು ಉಲ್ಲಂಘನೆಯನ್ನು ಕಾನೂನು ಬದ್ಧಗೊಳಿಸಲಾಗಿದೆ. ಇದರಿಂದ ಯುವಜನತೆಯ ಖಾಯಂ ಉದ್ಯೋಗದ ಕನಸು ಭಗ್ನಗೊಂಡು ಬದುಕು ಅತಂತ್ರವಾಗಲಿದೆ.
ಈ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಮೇಲೆ ಗುಲಾಮಗಿರಿ ಹೇರುವುದಲ್ಲದೆ, ಅವರ ಪ್ರತಿಭಟನೆಯ ಹಕ್ಕನ್ನೇ ಕಿತ್ತುಕೊಳ್ಳುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಕಾನೂನುಗಳು ಸಮವರ್ತಿ ಪಟ್ಟಿಯಲ್ಲಿ ಬರುವುದರಿಂದ, ಕರ್ನಾಟಕ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಈ ಸಂಹಿತೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಬಾರದು. ಸಂವಿಧಾನದ ಒಕ್ಕೂಟ ತತ್ವದಡಿ ರಾಜ್ಯದ ಶ್ರಮಜೀವಿಗಳ ಹಿತರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಈಗಾಗಲೇ ನಿರುದ್ಯೋಗ ಮತ್ತು ಬೆಲೆ ಏರಿಕೆ ತಾಂಡವವಾಡುತ್ತಿರುವಾಗ, ಕೇಂದ್ರ ಸರ್ಕಾರ ಕಾರ್ಮಿಕರ ಮೇಲೆ ಅಮಾನವೀಯ ಯುದ್ಧ ಸಾರಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಎಂ.ಅಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಕೆ.ಬಾಲಾಜಿರಾವ್ ಸೇರಿ ಹಲವರು ಭಾಗವಹಿಸಿದ್ದರು.










