ವಿಜಯ ದರ್ಪಣ ನ್ಯೂಸ್…
AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವ : ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್

ಬೆಂಗಳೂರು, ಮೇ 26, “AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವದ ಕುರಿತಾಗಿದೆ”
ತಂತ್ರಜ್ಞಾನವು ಸಾರ್ವಜನಿಕ ಸೇವೆ ವಿತರಣೆ, ಆಡಳಿತಾತ್ಮಕ ಪ್ರತಿಕ್ರಿಯೆ ಮತ್ತು ಒಳಗೊಳ್ಳುವಿಕೆಯನ್ನು ಸುಧಾರಿಸುವ ಮೂಲಕ ಕರ್ನಾಟಕವನ್ನು AI ತಂತ್ರಜ್ಞಾನದ ಹಬ್ ಮಾತ್ರವಲ್ಲದೆ, ‘AI-ಸಕ್ರಿಯ ಆಡಳಿತ ರಾಜ್ಯ’ವನ್ನಾಗಿ ಮಾಡುವುದು ಸರ್ಕಾರದ ದೂರದೃಷ್ಟಿಯಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದರು.
ಕರ್ನಾಟಕ ಸರ್ಕಾರದ ಇ-ಆಡಳಿತ ಕೇಂದ್ರದಿಂದ ವತಿಯಿಂದ ದಿ ಲಲಿತ್ ಅಶೋಕ್ ಹೋಟೆಲ್ನಲ್ಲಿ ಹಮ್ಮಿಕೊಳ್ಳಲಾದ “AI CoE (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸೆಂಟರ್ ಆಫ್ ಎಕ್ಸಲೆನ್ಸ್) ಅನುಷ್ಠಾನ ಕಾರ್ಯಾಗಾರ” ವನ್ನು ಉದ್ಘಾಟಿಸಿ ಮಾತನಾಡುತ್ತಾ, ಆಡಳಿತದಲ್ಲಿ ಸ್ಕೇಲೆಬಲ್, ಸುರಕ್ಷಿತ ಮತ್ತು ನಾಗರಿಕ-ಕೇಂದ್ರಿತ AI ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಕುರಿತು ಚರ್ಚಿಸಲು ವಿವಿಧ ರಾಜ್ಯಗಳ ಹಿರಿಯ ಸರ್ಕಾರಿ ಅಧಿಕಾರಿಗಳು, ನೀತಿ ನಿರೂಪಕರು, ಉದ್ಯಮದ ಮುಖಂಡರು, ಶಿಕ್ಷಣ ತಜ್ಞರು, ನವೋದ್ಯಮಗಳು (Startups) ಮತ್ತು ಪರಿಸರ ವ್ಯವಸ್ಥೆಯ ಪಾಲುದಾರರು ಈ ಕಾರ್ಯಾಗಾರದಲ್ಲಿ ಒಟ್ಟಾಗಿ ಭಾಗವಹಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸುತ್ತಾ, AI ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಇ-ಆಡಳಿತ) ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅವರು ಮಾತನಾಡುತ್ತಾ, ಇ-ಆಡಳಿತ ಪರಿಸರ ವ್ಯವಸ್ಥೆಯ ನಾಲ್ಕು ವಿಭಾಗಗಳಾದ — ಇ-ಆಡಳಿತ ಕೇಂದ್ರ (CeG), ಸ್ಮಾರ್ಟ್ ಗವರ್ನೆನ್ಸ್ ಕೇಂದ್ರ (CSG), ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಕೇಂದ್ರ (KSRSAC), ಮತ್ತು ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ವಿತರಣೆ ನಿರ್ದೇಶನಾಲಯ (EDCS) ಗಳ ಜಂಟಿ ಪಾತ್ರವನ್ನು ಶ್ಲಾಘಿಸಿದರು. ಮರುಬಳಕೆ ಮಾಡಬಹುದಾದ AI ಸೇವೆಗಳು ಮತ್ತು ಬಹುಭಾಷಾ ಇಂಟರ್ಫೇಸ್ಗಳನ್ನು ಬೆಂಬಲಿಸಲು ‘ಕರ್ನಾಟಕ AI ಸ್ಟಾಕ್’ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದ ಅವರು, ‘ಸಾರಾಂಶ’, ‘ಕರ್ತವ್ಯ’, ‘ನಿರಂತರ’ ಮತ್ತು AI-ಆಧಾರಿತ ಕುಂದುಕೊರತೆ ನಿರ್ವಹಣಾ ವ್ಯವಸ್ಥೆಗಳನ್ನು ಉಲ್ಲೇಖಿಸಿ, ಕರ್ನಾಟಕದ ಶಕ್ತಿಯು ಕೇವಲ ತಂತ್ರಜ್ಞಾನ ಸೃಷ್ಟಿಯಲ್ಲಷ್ಟೇ ಇಲ್ಲ, ಅದನ್ನು ಜನಸಾಮಾನ್ಯರ ಒಳಿತಿಗಾಗಿ ಅನ್ವಯಿಸುವುದರಲ್ಲಿದೆ ಎಂದರು.
ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಅವರು, ಕರ್ನಾಟಕದಲ್ಲಿ ವಿವಿಧ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ 20 ಕ್ಕೂ ಹೆಚ್ಚು ‘ಸೆಂಟರ್ ಆಫ್ ಎಕ್ಸಲೆನ್ಸ್’ (CoE) ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಮೂರು AI ಗೆ ಮೀಸಲಾಗಿವೆ ಎಂದು ತಿಳಿಸಿದರು. ಐಐಟಿ ಧಾರವಾಡದಲ್ಲಿ ಮುಂಬರುವ ಕ್ವಾಂಟಮ್ ಮತ್ತು AI ಸೆಂಟರ್ ಆಫ್ ಎಕ್ಸಲೆನ್ಸ್, ಐಐಟಿ ಅಲುಮ್ನಿ ಸೆಂಟರ್ ಹಾಗೂ ಜೈವಿಕ ತಂತ್ರಜ್ಞಾನ ಕೇಂದ್ರಗಳ ಸಹಯೋಗದ ಕುರಿತು ಅವರು ಮಾಹಿತಿ ನೀಡಿದರು. ಅಲ್ಲದೆ, ತಂತ್ರಜ್ಞಾನ ವಲಯದಲ್ಲಿ ಕೌಶಲ್ಯವನ್ನು ಬಲಪಡಿಸಲು “ನಿಪುಣ ಕರ್ನಾಟಕ” (Nipuna Karnataka) ಉಪಕ್ರಮದ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು
ಇ-ಆಡಳಿತ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಟಿ. ಭೂಬಾಲನ್ ಅವರು ಗಣ್ಯರನ್ನು, ಇಂಡಿಯಾAI (IndiaAI) ಮಿಷನ್ನ ಪ್ರತಿನಿಧಿಗಳನ್ನು ಮತ್ತು ಭಾಗವಹಿಸಿದ್ದ ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ಸ್ವಾಗತಿಸುತ್ತಾ, ಈ ಕಾರ್ಯಾಗಾರವು ಸಾರ್ವಜನಿಕ ಆಡಳಿತ ಮತ್ತು ನಾಗರಿಕ-ಕೇಂದ್ರಿತ ಆಡಳಿತಕ್ಕಾಗಿ ಭವಿಷ್ಯದ ಸನ್ನದ್ಧ AI ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಈ ಕಾರ್ಯಾಗಾರದಲ್ಲಿ ಆಂಧ್ರಪ್ರದೇಶ, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳ ಪ್ರತಿನಿಧಿಗಳು ಹಾಗೂ ಇಂಡಿಯಾAI ಮಿಷನ್ನ ಅಧಿಕಾರಿಗಳು ಭಾಗವಹಿಸಿ, AI ಅಳವಡಿಕೆ ಮತ್ತು ಆಡಳಿತದಲ್ಲಿನ ನಾವೀನ್ಯತೆಗಳ ಕುರಿತು ತಮ್ಮ ರಾಜ್ಯಗಳ ದೂರದೃಷ್ಟಿ ಮತ್ತು ಕಾರ್ಯತಂತ್ರಗಳನ್ನು ಹಂಚಿಕೊಂಡರು.
ಕಾರ್ಯಾಗಾರದ ಭಾಗವಾಗಿ ನಡೆದ ಸಂವಾದಾತ್ಮಕ ಬ್ರೇಕ್ಔಟ್ ಸೆಷನ್ಗಳಲ್ಲಿ (Interactive breakout sessions), ಭಾಗವಹಿಸಿದ ರಾಜ್ಯಗಳು ಮತ್ತು ಇಂಡಿಯಾAI ತಂಡಗಳು ಜಂಟಿಯಾಗಿ CoE ನ ದೂರದೃಷ್ಟಿ, ಕಾರ್ಯತಂತ್ರದ ಸ್ತಂಭಗಳು, ಸಹಭಾಗಿತ್ವ ಮತ್ತು ಅನುಷ್ಠಾನದ ಮಾರ್ಗಸೂಚಿಗಳ ಕುರಿತು ಸುದೀರ್ಘ ಚರ್ಚೆ ನಡೆಸಿದವು. ಸಾರ್ವಜನಿಕ ಆಡಳಿತದಲ್ಲಿ ಜವಾಬ್ದಾರಿಯುತ AI ಅಳವಡಿಕೆಯನ್ನು ವೇಗಗೊಳಿಸಲು ಪ್ರಾಯೋಗಿಕ AI ಆಡಳಿತದ ಉಪಕ್ರಮಗಳನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೇ 26:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ 56 ಅಂಗನವಾಡಿ ಕಾರ್ಯಕರ್ತೆಯರು ಮತ್ತು 293 ಸಹಾಯಕಿಯರ ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲು ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಸ್ಥಳೀಯ ಅರ್ಹ ಮಹಿಳಾ ಅಭ್ಯರ್ಥಿಗಳು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಅಭ್ಯರ್ಥಿಗಳು ಆಯಾ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಿಂದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿದ ಅರ್ಜಿ ನಮೂನೆ ಮತ್ತು ಅಗತ್ಯ ದಾಖಲಾತಿಗಳನ್ನು ಮುಚ್ಚಿದ ಲಕೋಟೆಯಲ್ಲಿ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗೆ ಜೂ.30ರ ಸಂಜೆ 5:30 ರೊಳಗೆ ಸಲ್ಲಿಸಬಹುದಾಗಿದೆ.
ಖಾಲಿ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ ಇತ್ಯಾದಿ ಹೆಚ್ಚಿನ ವಿವರಗಳಿಗಾಗಿ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.











