--Ads--

ವಿಚಾರಗಳು ವಿಶಾಲವಾದರೆ ಜೀವನವೇ ಸ್ವರ್ಗ

On: June 17, 2026 2:44 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….

ವಿಚಾರಗಳು ವಿಶಾಲವಾದರೆ ಜೀವನವೇ ಸ್ವರ್ಗ

ಲೇಖನ: ಜಯಶ್ರೀ.ಜೆ. ಅಬ್ಬಿಗೇರಿ

9449234142

ಏನೋ ಹೊಸದೊಂದನ್ನು ಖರೀದಿಸಬೇಕೆಂದು ತುಂಬಾ ಹಂಬಲಿಸುತ್ತೇವೆ. ಕೈಯಲ್ಲಿ ಕಾಸಿಲ್ಲದೇ ಒದ್ದಾಡುತ್ತೇವೆ. ನಾನೊಬ್ಬ ದುರದೃಷ್ಟ ಜೀವಿ ಎಂದು ನಮ್ಮನ್ನು ನಾವೇ ಬೈದುಕೊಳ್ಳುತ್ತೇವೆ. ದುಡ್ಡಿದ್ದವರೆಲ್ಲ ಮೋಜು ಮಸ್ತಿ ಮಾಡುವುದನ್ನು ಕಂಡು ಒಳಗೊಳಗೆ ನೊಂದುಕೊಳ್ಳುತ್ತೇವೆ. ನನ್ನಪ್ಪ ನನಗಾಗಿ ಹಣ ಮಾಡಿಟ್ಟಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಕೊಳ್ಳುವುದೂ ಇದೆ. ಕೆಲವೊಮ್ಮೆ ಕಣ್ಣೀರು ಸುರಿಸುವುದೂ ಇದೆ. ಮನದಲ್ಲಿ ಉದಯಿಸುವ ವಿಚಾರಗಳನ್ನು ಹೀಗೆ ಪಟ್ಟಿ ಮಾಡುತ್ತ ಹೋದರೆ ಹನುವiನ ಬಾಲದಂತಾಗುತ್ತದೆ. ಒಂದಂತೂ ನಿಜ ಇವೆಲ್ಲ ಏನೂ ಮಾಡಲಾಗದಂಥ ಮನಸ್ಥಿತಿಯಲ್ಲಿರುವ ವಿಚಾರಗಳು. ಬಲ್ಲವರು ಹೇಳುವಂತೆ ‘ಜಾಣತನ ಎಲ್ಲರ ಆಸ್ತಿ.’ ಅದನ್ನು ಜಾಸ್ತಿ ಬಳಸಿಕೊಳ್ಳದಿರುವುದೇ ಬಹುತೇಕ ಸಮಸ್ಯೆಗಳ ಮೂಲ. ನಾನು ನನ್ನದೆಂಬ ಸ್ವಾರ್ಥ ಪರ ದುರ್ವಿಚಾರಗಳ ನಿಯಂತ್ರಿಸಿದರೆ ಭಾವನೆಗಳು ಉದ್ವೇಗಗಳು ನಿಯಂತ್ರಣದಲ್ಲಿರುತ್ತವೆ. ಸನ್ನಿವೇಶಗಳು ನಮ್ಮ ಕೈಯಲ್ಲಿಲ್ಲ ನಿಜ. ಆದರೆ ಅವುಗಳಿಗೆ ಪ್ರತಿಸ್ಪಂದಿಸುವುದು ನಮ್ಮ ಕೈಯಲ್ಲಿದೆ. ಪ್ರತಿಸ್ಪಂದನ ನಮ್ಮ ಮನದ ಬಿಂಬ.

ಕೇಳುವ ವಿಚಾರಗಳಿರಲಿ
ದುರ್ವಿಚಾರಗಳಿಗೆ ಬೀಳುವುದು ಎಂದರೆ ಅಮೂಲ್ಯವಾದ ಬದುಕನ್ನು ಭ್ರಮೆಯ ಕೈಗೆ ನೀಡಿದಂತೆಯೇ ಸರಿ. ಇಂಥ ದೋಷಪೂರಿತ ಭ್ರಮೆಗಳಿಂದ ಹೊರಬಂದು ಬದುಕನ್ನು ಹೊಳೆಯುವಂತೆ ಮಾಡುವುದು ನಮ್ಮ ಬುದ್ಧಿವಂತಿಕೆಯಲ್ಲೇ ಇದೆ. ಪ್ರಬುದ್ಧ ವಿಚಾರಗಳಲ್ಲಿದೆ. ನಾವು ಮಾಡುವ ವಿಚಾರಗಳಿಂದ, ಕೇಳುವ ವಿಚಾರಗಳಿಂದ ಪ್ರಭಾವಿತರಾಗುತ್ತೇವೆ. ‘ನಮ್ಮ ಕಕ್ಷೆಯೊಳಗೆ ಬರುವ ಪ್ರತಿಯೊಬ್ಬ ಸಹಯೋಗಿಯು
ತಮ್ಮೊಂದಿಗೆ ನಾವು ಕಲ್ಪಿಸಿಕೊಳ್ಳಲಾಗದ, ವಿಚಿತ್ರ ಹಾಗೂ ಸಂಕೀರ್ಣ ವಿಶ್ವವನ್ನು ಹೊತ್ತು ತರುತ್ತಾರೆ. ಅವರ ಅಗತ್ಯಗಳು ಆಕಾಂಕ್ಷೆಗಳು ಆಸೆಗಳು ವಿವರಗಳು ಮತ್ತು ಸೂಕ್ಷ್ಮತೆಗಳನ್ನು ಕೇಳಿಸಿಕೊಂಡು ನಾವು ಅವರ ವಿಶ್ವವನ್ನು ನಮ್ಮದಾಗಿಸಿಕೊಳ್ಳುತ್ತೇವೆ. ಆಗ ನಾವಿಬ್ಬರೂ ಹಿಂದಿನಂತಿರುವುದಿಲ್ಲ.’ ಎಂದಿದ್ದಾನೆ ವಿಖ್ಯಾತ ಡಿಸೈನರ್ ಬ್ರೂಸ್ ಮಾವ್. ನಾವು ಭೇಟಿಯಾಗುವ ಪ್ರತಿ ವ್ಯಕ್ತಿಯಲ್ಲೂ ನಮಗೆ ಗೊತ್ತಿರದ ಕನಿಷ್ಟ ಪಕ್ಷ ಒಂದು ಹೊಸ ವಿಚಾರ ಇದ್ದೇ ಇರುತ್ತದೆ. ಅದನ್ನು ತಿಳಿದು ನಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬೇಕು.ತನ್ಮೂಲಕ ಪ್ರಗತಿಯ ಹಾದಿಯಲ್ಲಿ ನಡೆಯಬೇಕು.
ವಿಚಾರ ಭೇದಗಳನ್ನು ಮೆಟ್ಟಿ
ಮೃತ ಮೀನುಗಳು ಮಾತ್ರ ನೀರು ಹರಿಯುವ ದಿಕ್ಕಿನಲ್ಲಿ ಹರಿಯುತ್ತವೆ ಎಂಬುದನ್ನು ಮರೆಯುವಂತಿಲ್ಲ. ಎತ್ತೆತ್ತಲೋ ವಿಚಾರಗಳನ್ನು ಹರಿಯಲು ಬಿಡದೆ, ಸುಲಭವಾದ ದಿಕ್ಕಿನಲ್ಲಿ ಸಲೀಸಾಗಿ ವಿಚಾರಗಳನ್ನು ಹರಿಸದೇ ಸೃಜನಶೀಲತೆಯಿಂದ ಸ್ವಲ್ಪ ದಿಕ್ಕು ಬದಲಿಸಿದರೆ ಹೊಳೆಯುವ ವಿಚಾರಗಳು ಅತ್ಯದ್ಭುತ ಎನ್ನುವುದೂ ಅಪ್ಪಟ ಸತ್ಯ. .ಶರಶ್ಚಂದ್ರರು ಹೇಳಿದಂತೆ ಕಮಲವನ್ನು ಕೊಯ್ದುಕೊಳ್ಳಲು ಹೋದರೆ ಕೆಸರು ಹತ್ತುವುದು ಸಹಜ. ಅಂತೆಯೇ ಅನ್ಯರಲ್ಲಿರುವ ವಿಚಾರಗಳು ವಿಭಿನ್ನ.ವಿಭಿನ್ನ ಸ್ವರದಲ್ಲಿ ಸುಸ್ವರವನ್ನು ನಿರ್ಮಿಸಿ ಏಕಸ್ವರವನ್ನು ನುಡಿಸುವುದು ಒಲುಮೆಯ ಶ್ರದ್ಧೆಯಿಂದ ಶ್ರಮವಹಿಸಿದರೆ ಖಂಡಿತ ಸಾಧ್ಯ. ಸಂಬಂಧಗಳಲ್ಲಿರುವ ವಿಚಾರ ಭೇದಗಳನ್ನು ಮೆಟ್ಟಿ ನಿಲ್ಲಬೇಕು. ನೆಮ್ಮದಿಯ, ಒಗ್ಗಟ್ಟಾದ ಸೌಹಾರ್ದಯುತ ಬದುಕು ಕಟ್ಟಿಕೊಳ್ಳುವುದು ಸುಲಲಿತವಾದ ವಿಚಾರದ ಹದಗಳಲ್ಲಿದೆ.

ಹಿರಿಮೆ ಗರಿಮೆಗಳಲಿ
‘ನಿನ್ನ ಹೊಟ್ಟೆ ಹಸಿದಿರದಿದ್ದರೆ ಸುಮ್ಮನೆ ಅಡುಗೆಗೆ ಹೆಸರಿಡಬೇಡ.’ ಎಂದಿದ್ದಾರೆ ಕವಿ ರವೀಂದ್ರರು. ಅಂತೆಯೇ ದುರ್ವಿಚಾರಗಳ ಮಡಿಲಲ್ಲಿ ಬಿದ್ದು ಸುವಿಚಾರಗಳಿಗೆ ಹೆಸರಿಡಬಾರದು. ನಮ್ಮ ಹಿರಿಮೆ ಗರಿಮೆಗಳು ಸೋಲು ಗೆಲುವು ಬಡತನ ಸಿರಿತನ ಎಲ್ಲವೂ ವಿಚಾರಗಳನ್ನೇ ಅವಲಂಬಿಸಿದೆ. ಸ್ವರ್ಗ ನರಕಗಳು ನಮ್ಮ ವಿಚಾರದ ರಚನೆಗಳಲ್ಲದೇ ಮತ್ತೇನಲ್ಲ. ‘ಮನವೆಂಬ ಮನೆಯಲ್ಲಿ ದೊಡ್ಡದಾಗಿ ಆಲೊಚಿಸಿ ಅದನ್ನು ಕ್ರಿಯೆಗಿಳಿಸಿದವರು ಮಾತ್ರ ದೊಡ್ಡವರೆನಿಸಿಕೊಂಡಿದ್ದಾರೆ.’ ಎಂಬುದನ್ನು ನೆನಪಿನಲ್ಲಿಡಬೇಕು.ಇದನ್ನೇ ಬಸವಣ್ಣನವರು ತಮ್ಮ ಒಂದು ವಚನದಲ್ಲಿ ತುಂಬಾ ಸುಂದರವಾಗಿ ತಿಳಿ ಹೇಳಿದ್ದಾರೆ.
’ಮನೆ ನೋಡಾ ಬಡವರು; ಮನ ನೋಡಾ ಘನ ಸಂಪನ್ನರು!
ಧನ ನೋಡಾ ಬಡವರು; ಘನ ಮನ ಸಂಪನ್ನರು’
ಸ್ನೇಹದ ಅಲೆಯಲ್ಲಿ ಎಲ್ಲಿ ನೋಡಿದಲೆಲ್ಲ ಅರಿಷಡ್ವರ್ಗಗಳದ್ದೇ ಅಟ್ಟಹಾಸ. ಮನುಷ್ಯನ ಆರು ಆಂತರಿಕ ವೈರಿಗಳು. ಜೀವ ತಿನ್ನುವ ಇವುಗಳು ನಮ್ಮನ್ನು ಹಿಂಡಿ ಹಿಪ್ಪಿ ಮಾಡುತ್ತವೆ. ಕಾಮ, ಕ್ರೋಧ, ಮೋಹ, ಮದ ಮತ್ತು ಮತ್ಸರಗಳು ದುರ್ವಿಚಾರಗಳ ಉತ್ಪಾದನೆಗಳಲ್ಲದೇ ಮತ್ತೇನು? ಮೊದಲನೆಯ ಹೆಜ್ಜೆಯಾಗಿ ದುರ್ವಿಚಾರಗಳನ್ನು ಪತ್ತೆ ಹಚ್ಚಬೇಕು. ಮನದಲ್ಲಿನ ಕಸ ತೆಗೆದು ಹೊರ ಚೆಲ್ಲಬೇಕು. ಅರಿಷಡ್ವರ್ಗಗಳನ್ನು ಹತ್ತಿಕ್ಕಿಲು ಮನಸಾರೆ ಯತ್ನಿಸುವುದನು ರೂಢಿಸಿಕೊಳ್ಳಬೇಕು. ಕಾಣದ ಕೇಳದ ವಿಚಾರಗಳು ಕಿವಿಗೆ ಬಿದ್ದಾಗ ಗಾಬರಿಯಲ್ಲಿ ಬಿದ್ದು ಒದ್ದಾಡಬಾರದು. ಜಗದಲ್ಲಿ ಯಾರೂ ಇಲ್ಲದಂತೆ ಒಂಟಿತನದಲ್ಲಿ ನರಳಬಾರದು. ವಿಚಾರವಂತರೊಂದಿಗೆ ಚರ್ಚಿಸಿ ಹೃದಯದಲ್ಲಿ ಸುವಿಚಾರಗಳ ಹೂಗಳನು ಅರಳಿಸಬೇಕು. ಕಹಿ ನೀಡಿದ ವಿಚಾರಗಳನ್ನೇ ಮನದಲ್ಲಿ ಬೇರೂರಿಸಿಕೊಂಡರೆ ಮನಸ್ಸು ಭಾರವಾಗುವುದು. ಭಾರವಾದ ಮನಸ್ಸು ಪ್ರಬಲ ವಿಚಾರಗಳನ್ನು ಹೊರ ಹಾಕದು. ವಿಚಾರಗಳನ್ನು ಹದಕ್ಕೆ ತರಲು ಅತಿ ಶೀಘ್ರ ವಿಧಾನವೆಂದರೆ ನಮಗೆ ನಾವೇ ಸರಿಯಾದ ಪ್ರಶ್ನೆಗಳನ್ನು ಕೇಳಿಕೊಳ್ಳುವುದು. ವಿಚಾರಗಳು ವಿಶಾಲವಾದರೆ ಜೀವನವೇ ಸ್ವರ್ಗ ಸದೃಶವಾಗುತ್ತದೆ. ಹೊಸ ಹೊಸ ಸಾಧ್ಯತೆಗಳತ್ತ ಹೆಜ್ಜೆ ಹಾಕಲು ಅನುವು ಮಾಡಿಕೊಡುವುದು. ಸ್ನೇಹದ ಸಮ್ಮೋಹದ ಅಲೆಗಳಲ್ಲಿ ತೇಲಿಸುವುದು.
ವೈಚಾರಿಕ ಬೋಧನೆ ಇರಲಿ
ಬಿಡುವಿಲ್ಲದ ದುನಿಯಾದಲ್ಲಿ ಏಕಾಂಗಿತನದ ನೋವು ಕಾಡುವುದೆಂದರೆ ಅಚ್ಚರಿಯೆನಿಸುವುದು. ಆದರೂ ಅದು ನಿಜ. ಏಕಾಂತದ ನೋವಲ್ಲಿ,ವೈಫಲ್ಯಗಳ ರಾಶಿಯಲ್ಲಿ ಸಿಲುಕಿಕೊಂಡಿರುವ ಜೀವಗಳಲ್ಲಿ ದೌರ್ಬಲ್ಯದ ವಿಚಾರಗಳೇ ತುಂಬಿಕೊಂಡಿರುತ್ತವೆ. ಸಣ್ಣ ಪುಟ್ಟದ್ದಕ್ಕೆ ದೊಡ್ಡದಾಗಿ ತಲೆ ಕೆಡಿಸಿಕೊಳ್ಳುವ ಮನೋವೃತ್ತಿ ಆಗಿರಲಿ ಮುಷ್ಟಿಯನ್ನು ಬಿಗಿ ಹಿಡಿದಾಗ ಯೋಚಿಸಲಾರ.’ ಎಂಬುದನು ನೆನಪಿಡಿ. ‘ವಿಸ್ಮಯಗಳು ಪ್ರತಿದಿನ ಉಂಟಾಗುತ್ತವೆ. ಆದರೆ ಅವು ನಮ್ಮ ವಿಚಾರಗಳನ್ನು ಅವಲಂಬಿಸಿರುತ್ತವೆ.’ ಆದ್ದರಿಂದ ದುರ್ಬಲ ವಿಚಾರಗಳು ಸಲ್ಲ. ಇಂಥ ಮನೋ ಮಾಲಿನ್ಯವನ್ನೇ ಪತಂಜಲಿಯವರು ಅಂತರಾಯಗಳು ಎಂದು ಕರೆದಿರುವರು. ಗಿಡದಲ್ಲಿ ಹೂವು ಮುಳ್ಳು ಒಟ್ಟಿಗೆ ಬೆಳೆಯುವುದಿಲ್ಲವೇ? ಹಾಗೆಯೇ ಸುವಿಚಾರಗಳೊಂದಿಗೆ ದುರ್ವಿಚಾರಗಳು ಸಾಮಾನ್ಯ. ಆದರೂ ವಿಶಿಷ್ಟ ಸರಳ ವೈಚಾರಿಕ ಬೋಧನೆಗಳಿಂದ ಏಕಾಂತದ ನೋವಿನ ಗಾಯ ಮಾಯವಾಗುವುದು
ವಿಚಾರ ಶಕ್ತಿಯಿಂದ ಎದುರಿಸಿ
ಮಹಾನ ನಾಯಕರು ಹಿನ್ನಡೆಗಳಿಲ್ಲದ ವೈಫಲ್ಯಗಳಿಲ್ಲದ ಜೀವನವನ್ನು ಎಂದೂ ಬಯಸಲಿಲ್ಲ. ಬದುಕಿನ ಅನಿರೀಕ್ಷಿತ ದಾರಿಗಳಲ್ಲಿ ಸವಾಲುಗಳನ್ನು ವಿಚಾರ ಶಕ್ತಿಯಿಂದ ಎದುರಿಸಿದರು.ವಿಚಾರಗಳು ಸರಿಯಾದ ದಿಶೆಯಲ್ಲಿ ಸಾಗಿದರೆ ಸಾಮಾನ್ಯನೂ ಸವಾಲುಗಳೊಂದಿಗೆ ಸಲೀಸಾಗಿ ಸೆಣಸಾಡಬಲ್ಲ. ಅಸಾಮಾನ್ಯ ಸಾಧಕನಾಗಬಲ್ಲ ಎಂಬುದನು ಇತಿಹಾಸದ ಪುಟಗಳಲ್ಲಿ ಓದುತ್ತೇವೆ. ದುರ್ವಿಚಾರಗಳನ್ನು ತಡೆಯುವ ಪ್ರಯತ್ನದಲ್ಲಿ ತಮ್ಮ ಜೀವನವನ್ನೇ ಸವೆಸಿದ ಮಹಾನ ನಾಯಕರನ್ನೂ ಕಾಣುತ್ತೇವೆ. ವಿಚಾರಗಳಿಗಿರುವ ಶಕ್ತಿಯ ಅರಿವಿನ ಕೊರತೆ, ದೊಡ್ಡ ದೊಡ್ಡ ಕೆಲಸ ಕಾರ್ಯಗಳಲ್ಲೂ ದೈನಂದಿನ ಉದಾಸೀನತೆ,ನಮ್ಮನ್ನು ವೈಚಾರಿಕವಾಗಿ ಕುಸಿಯುವಂತೆ ಮಾಡುತ್ತಿದೆ. ಸುಂದರ ಬದುಕನ್ನು ಹೀನಾಯಗೊಳಿಸುತ್ತಿದೆ.
ಕೊನೆ ಹನಿ
ವೈಎನ್ಕೆಯವರು ಹೇಳಿದಂತೆ ‘ಬಾಳಿನಲ್ಲಿ ಶಾಶ್ವತ ಯಾವುದು ಎಂದರೆ ಬದಲಾವಣೆ ಮಾತ್ರ.’ ಜೀವನ ನಿಂತ ನೀರಲ್ಲ. ಎಲ್ಲ ವಿಚಾರವಂತರಿಗೂ ಆನಂದದ ರಹಸ್ಯ ತಿಳಿದಿದೆ. ವಿಚಾರಗಳು ನಮಗೆ ನಾವ್ಯಾರೆಂದು ತಿಳಿಸುತ್ತವೆ. ವಿಚಾರಗಳಲ್ಲಿ ಅಪಾರ ಶಕ್ತಿಯಿದೆ. ಅಗಾಧ ಸಾಧ್ಯತೆಗಳಿವೆ. ಎಂಬುದು ನಮಗೆಲ್ಲ ಇತಿಹಾಸದಿಂದ ಮನದಟ್ಟಾಗಿದೆ. ವಿಚಾರಗಳ ಕುರಿತಾದ ನಿರ್ಲಕ್ಷ್ಯ ಬದುಕನ್ನು ಅಸಮತೋಲನದಲ್ಲಿ ಬಂಧಿಸುತ್ತದೆ. ಇದೆಲ್ಲವನ್ನು ನಮ್ಮ ಶರಣರು ಸಂತರು ಋಷಿಗಳು ಮುನಿಗಳು ಸಾವಿರಾರು ವರ್ಷಗಳ ಕೆಳಗೆ ಅರಿತಿದ್ದರು. ದುರ್ವಿಚಾರಗಳ ದೌರ್ಬಲ್ಯವನ್ನು ಮೆಟ್ಟಿ ನಿಂತರು.ನಮಗೆಲ್ಲ ಮಾದರಿಯಾದರು. ಬೆಳೆಯಲು ಹೊಳೆಯಲು ಔದಾರ್ಯ ಮೆರೆಯಲು ಸ್ವಯಂ ನಾಯಕತ್ವವನ್ನು ಸಾಧಿಸಲು ಸುವಿಚಾರಗಳು ತುಂಬಾ ಪ್ರಯೋಜನಕಾರಿ. ಬದುಕಿನ ಕತ್ತಲಲ್ಲಿ ಸುವಿಚಾರಗಳ ಬೆಳದಿಂಗಳು ಸುರಿಯೋಣ. ಅರ್ಥಪೂರ್ಣ ಜೀವನವನು ಸ್ವರ್ಗ ಸದೃಶವಾಗಿಸೋಣ.

WhatsApp

Join Now

Telegram

Join Now

Instagram

Join Now