ವಿಜಯ ದರ್ಪಣ ನ್ಯೂಸ್……
ಡಿ. ದೇವರಾಜ ಅರಸು ಅವರ 111 ನೇ ಜನ್ಮದಿನಾಚರಣೆ
ಡಿ.ದೇವರಾಜ ಅರಸು ಅವರ ಆಶಯಗಳಿಗೆ ಧ್ವನಿಯಾಗೋಣ: ಡಿಸಿ ಡಾ. ಕೆ.ಎನ್ ಅನುರಾಧ

ಬೆಂಗಳೂರು ಗ್ರಾಮಾಂತರ ಜಿಲ್ಲೆ. ಆಗಸ್ಟ್,20:

ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಅವರು ಹೇಳಿದರು.
ದೇವನಹಳ್ಳಿ ಟೌನ್ ನ ಡಿ. ದೇವರಾಜ ಅರಸು ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಬಡವರ, ಹಿಂದುಳಿದವರ, ದೀನ ದಲಿತರ ಅಭಿವೃದ್ಧಿಗೆ ಶ್ರಮಿಸಿದ ನಾಯಕ ಡಿ.ದೇವರಾಜ ಅರಸು ಅವರು ರಾಜ್ಯದ ಅಭಿವೃದ್ಧಿಗೆ ಕೊಡುಗೆ ಅಪಾರವಾದುದು ಎಂದರು.
ಭೂ ಸುಧಾರಣೆ ಕಾಯ್ದೆ (ಉಳುವವನೇ ಭೂ ಒಡೆಯ) 1974ರಲ್ಲಿ ಕ್ರಾಂತಿಕಾರಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು, ಜಮೀನ್ದಾರರ ವಶದಲ್ಲಿದ್ದ ಜಮೀನನ್ನು ಅದನ್ನು ಉಳುತ್ತಿದ್ದ ಗೇಣಿದಾರರಿಗೆ ವಹಿಸಿಕೊಟ್ಟರು. ಇದರಿಂದ ಲಕ್ಷಾಂತರ ಬಡ ರೈತರಿಗೆ ಭೂಮಿಯ ಹಕ್ಕು ಸಿಕ್ಕಿತು.ಉಳುವವನೇ ಭೂ ಒಡೆಯ ಯೋಜನೆ ಮೂಲಕ ಹಿಂದುಳಿದ ಅದೆಷ್ಟೋ ಕುಟುಂಬಗಳಿಗೆ ಭೂಮಿ ಕಲ್ಪಿಸಿಕೊಟ್ಟರು. ಪಿಂಚಣಿ, ಶಿಕ್ಷಣ, ಮೀಸಲಾತಿ, ಆಹಾರ ಭದ್ರತೆ ಮುಂತಾದ ಹಲವು ಜನಪರ ಯೋಜನೆ ಜಾರಿಗೆ ತಂದರು.
ಜನರ ಸೇವೆಗೆ ಅಧಿಕಾರ
ಅಧಿಕಾರ ಸಿಕ್ಕಿರುವುದು ನಮ್ಮ ಸ್ವಾರ್ಥಕ್ಕೆ, ಅಥವಾ ನಮ್ಮ ಸೌಲಭ್ಯಕ್ಕೆ ಅಲ್ಲ ಬದಲಾಗಿ ಜನರ ಸೇವೆಗಾಗಿ ಅಧಿಕಾರಿ ಕೊಟ್ಟಿರುವುದು ಎಂದು ದೇವರಾಜ ಅರಸು ಅವರು ಹೇಳುತ್ತಿದ್ದರು. ಹಾಗಾಗಿ ಯಾವುದೇ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಸ್ಟೆಲ್ ವಾರ್ಡನ್ಗಳು ಸೇರಿದಂತೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಯಾವ ಉದ್ದೇಶಕ್ಕೆ ಜಾರಿಗೆ ತರಲಾಗಿದೆ ಅದೇ ಉದ್ದೇಶಕ್ಕೆ ಬಳಸಬೇಕು ಬೇರೆ ಉದ್ದೇಶಕ್ಕೆ ಬಳಸಬಾರದು. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಕೆಲಸ ಮಾಡಿ ಎಂದರು.
ಶೈಕ್ಷಣಿಕ ಮೀಸಲಾತಿಯಿಂದ ಐಎಎಸ್ ಹುದ್ದೆ ಲಭಿಸಿದೆ: ಸಿಇಒ
ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರು ಜಾರಿಗೆ ತಂದ ಶೈಕ್ಷಣಿಕ ಮೀಸಲಾತಿಯಿಂದ ಎಂಬಿಬಿಎಸ್ ಸೀಟು ಪಡೆಯಲು ಸಾಧ್ಯವಾಯಿತು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ಉಚಿತ ಕೋಚಿಂಗ್ ತರಬೇತಿಗೆ ಆಯ್ಕೆಯಾದೆ, ಬಳಿಕ ಕೆಎಎಸ್ ಪರೀಕ್ಷೆ ಬರೆದೆ ಅಲ್ಲಿಯೂ ಕೂಡ ಮೀಸಲಾತಿ ಮೂಲಕ ನನಗೆ ಹುದ್ದೆ ಸಿಕ್ಕಿ ಬಳಿಕ ಐಎಎಸ್ ಗೆ ಪದೋನ್ನತಿ ಹೊಂದಿದ್ದು ಈಗ ಸಿಇಒ ಆಗಿದ್ದೇನೆ. ಇವೆಲ್ಲವೂ ಕೂಡ ದೇವರಾಜ ಅರಸು ಅವರು ಜಾರಿಗೆ ತಂದ ಜನಪರ ಯೋಜನೆಗಳಿಂದ ಸಾಧ್ಯವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ನಿಮಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಹುದ್ದೆಗಳನ್ನು ಅಲಂಕರಿಸಿ ಎಂದು ಜಿ.ಪಂ ಸಿಇಒ ಡಾ. ವಾಸಂತಿ ಅಮರ್ ಹೇಳಿದರು.
ಕಾರ್ಯಕ್ರಮದಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಅವರು ಮಾತನಾಡಿ ಆರ್ಥಿಕ,ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಕೊಡುಗೆಯನ್ನು ನೀಡಿದ್ದಾರೆ. ಮೀಸಲಾತಿ, ವೃದ್ಧಾಪ್ಯ ವೇತನ ಸೇರಿದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ವಸತಿ ಶಾಲೆ, ವಸತಿ ನಿಲಯ ಸ್ಥಾಪನೆಗೆ ಮುನ್ನುಡಿ ಬರೆದರು ಎಲ್ಲಾ ವರ್ಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಸಾಮಾಜಿಕ ಕ್ರಾಂತಿಯ ಹರಿಕಾರ ಎಂದರು.
ಬೆಂಗಳೂರು ಉತ್ತರ ವಲಯ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಆಶಾ ಹೆಚ್ ಸುರೇಶ್ ಮಾತನಾಡಿ ಉಳುವವನೇ ಭೂ ಒಡೆಯ, ಹಿಂದುಳಿದ ವರ್ಗಗಳ ಆಯೋಗ ರಚನೆ, ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇಕಡಾವಾರು ಮೀಸಲಾತಿ ಜಾರಿಗೆ ತಂದರು. 1973ರ ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಅಧಿಕೃತವಾಗಿ ಹೆಸರು ಇಟ್ಟ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಬಡವರು, ಕೃಷಿ ಕಾರ್ಮಿಕರು ಮತ್ತು ಶೋಷಿತರು ಖಾಸಗಿ ಲೇವಾದೇವಿದಾರರಿಂದ ಪಡೆದಿದ್ದ ಸಾಲಗಳನ್ನು ಮನ್ನಾ ಮಾಡಲು ಋಣಮುಕ್ತ ಕಾಯ್ದೆಯನ್ನು ತಂದರು. ಮಾನವ ಹಕ್ಕುಗಳ ಗೌರವಾರ್ಥವಾಗಿ ತಲೆಯ ಮೇಲೆ ಮಲ ಹೊರುವ ಅಮಾನವೀಯ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಿದರು. ಗ್ರಾಮೀಣ ಪ್ರದೇಶದ ಬಡವರ ಮನೆಗಳಿಗೆ ಉಚಿತ ವಿದ್ಯುತ್ ದೀಪ ಒದಗಿಸುವ ‘ಭಾಗ್ಯಜ್ಯೋತಿ’ ಯೋಜನೆಯನ್ನು ಪ್ರಾರಂಭಿಸಿದರು. ಜೀತದಾಳುಗಳಾಗಿ ದುಡಿಯುತ್ತಿದ್ದ ಬಡ ಜನರನ್ನು ಜೀತ ಪದ್ಧತಿಯಿಂದ ಮುಕ್ತಗೊಳಿಸಿ ಅವರಿಗೆ ಪುನರ್ವಸತಿ ಕಲ್ಪಿಸಿದ್ದು ದೇವರಾಜ ಅರಸರು ಎಂದು ಉಪನ್ಯಾಸ ನೀಡಿದರು.

ಹಿಂದುಳಿದ ವರ್ಗಗಳ ಸಮಾಜದ ಪ್ರತಿಭಾವಂತ ಪಿಯುಸಿ, ಎಸ್ಸೆಸ್ಸೆಲ್ಸಿಯಲ್ಲಿ ಶೇ.95 ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪ್ರಬಂಧ, ಚಿತ್ರ ಕಲಾ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ, ದೇವರಾಜ ಅರಸು ವರ್ಗಗಳ ಒಕ್ಕೂಟದ ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಿದರು.
ಹಿಂದುಳಿದ ವರ್ಗಗಳ ಒಕ್ಕೂಟದಿಂದ ಹಿಂದುಳಿದ ವರ್ಗಗಳಡಿ 13 ಸಮಾಜಗಳಿದ್ದು, ಸಮುದಾಯ ಭವನ ನಿರ್ಮಾಣಕ್ಕೆ ಪ್ರತಿ ಸಮಾಜಕ್ಕೆ ಒಂದು ಎಕರೆ ಭೂಮಿ ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಯಶ್ರೀ ಹೆಂಡೇಗಾರ, ಸಾಮಾಜದ ಮುಖಂಡರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.










