ವಿಜಯ ದರ್ಪಣ ನ್ಯೂಸ್…..
ನಗರದ ಗೌಡನ ಕೆರೆಯ ಅಂಗಳದಲ್ಲಿ ನೂರಾರು ಔಷಧಿ ಬಾಟಲಿ, ಸಿರಪ್, ಅವಧಿ ಮೀರಿದ ಔಷಧ ಪತ್ತೆ

ಶಿಡ್ಲಘಟ್ಟ : ನಗರದ ಗೌಡನ ಕೆರೆಯಲ್ಲಿ ನೂರಾರು ಔಷಧಿ ಬಾಟಲಿ, ಸಿರಪ್, ಅವಧಿ ಮೀರಿದ ಔಷಧ ಹಾಗೂ ಒಆರ್ಎಸ್ ಪೊಟ್ಟಣಗಳ ಪತ್ತೆಯಾಗಿದೆ.
ಎಂದಿನಂತೆ ಜಾನುವಾರು ಮೇಯಿಸಲು ಹೋಗಿದ್ದವರಿಗೆ ಜಾಲಿ ಮರದ ಪೊದೆಗಳ ನಡುವೆ ವೈದ್ಯಕೀಯ ತ್ಯಾಜ್ಯ ಸುರಿದಿರುವುದು ಕಂಡುಬಂದಿದೆ.
ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಯೋಜನೆಗೆ ಸಂಬಂಧಿಸಿದ ಒಆರ್ಎಸ್ ಪೊಟ್ಟಣ ಕಂಡು ಬಂದಿವೆ ಜತೆಗೆ ಕೆಲವು ಔಷಧಗಳ ಲೇಬಲ್ಗಳಲ್ಲಿ ಬ್ಯಾಚ್ ಸಂಖ್ಯೆ, ಪ್ರಮಾಣ ಹಾಗೂ ತಯಾರಿಕಾ ವಿವರಗಳು ಗೋಚರಿಸುತ್ತಿವೆ.
ದೊಡ್ಡ ಪ್ರಮಾಣದ ಔಷಧ ಮತ್ತು ವೈದ್ಯಕೀಯ ಬಳಕೆಯ ವಸ್ತುಗಳು ಒಂದೇ ಸ್ಥಳದಲ್ಲಿ ಪತ್ತೆಯಾಗಿರುವುದು ಅನುಮಾನ ವ್ಯಕ್ತವಾಗಿದೆ ಆದರೆ, ಈ ತ್ಯಾಜ್ಯವನ್ನು ಯಾರು ಸುರಿದಿದ್ದಾರೆ ಎಂಬುದು ತಿಳಿಸಿಲ್ಲ.
ಜಾನುವಾರುಗಳು ನಿತ್ಯ ಮೇಯುವ ಕೆರೆಯಂಗಳಲ್ಲಿ ವೈದ್ಯಕೀಯ ತ್ಯಾಜ್ಯದ ರಾಶಿ ಪತ್ರೆಯಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ, ಗೌಡನ ಕೆರೆಯಲ್ಲಿ ತ್ಯಾಜ್ಯ ಸುರಿಯುತ್ತಿರುವುದು ಇದೇ ಮೊದಲ ಬಾರಿಯಲ್ಲ ,ಈ ಹಿಂದೆ ಜೈವಿಕ ಮತ್ತು ಆಸ್ಪತ್ರೆ ತ್ಯಾಜ್ಯ ಸುರಿಯುತ್ತಿರುವ ಕುರಿತು ವರದಿಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ಆದರೂ, ಇದೀಗ ಮತ್ತೆ ವೈದ್ಯಕೀಯ ತ್ಯಾಜ್ಯ ಪತ್ತೆಯಾಗಿದೆ,ಪತ್ತೆಯಾಗಿರುವ ತ್ಯಾಜ್ಯದ ಮೂಲವನ್ನು ಪತ್ತೆಹಚ್ಚಿ, ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು. ಕೆರೆಯಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯುವವರನ್ನು ಪತ್ತೆಹಚ್ಚಲು ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.








