ವಿಜಯ ದರ್ಪಣ ನ್ಯೂಸ್….
ಸಹಕಾರ ಬ್ಯಾಂಕ್ ಗಳಲ್ಲಿ ರೈತರಿಗೆ ಬಡ್ಡಿರಹಿತ ಸಾಲ ಸೌಲಭ್ಯ:ಸಚಿವ ಮುನಿಯಪ್ಪ

ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆ.30.
ಸಹಕಾರ ಬ್ಯಾಂಕ್ ಗಳಲ್ಲಿ ರೈತರಿಗೆ ಬಡ್ಡಿ ರಹಿತ ಸಾಲ ಸೌಲಭ್ಯವಿದ್ದು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದರು.
ದೇವನಹಳ್ಳಿ ಟೌನ್ ನ ಟಿಎಪಿಸಿಎಂಎಸ್ ಆವರಣದಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ರೈತ ಸದಸ್ಯರ ಹೊಸ ಕೆಸಿಸಿ ಬೆಳೆ ಸಾಲ, ಸ್ವಸಹಾಯ ಗುಂಪು ಸಾಲ ಹಾಗೂ ಮಧ್ಯಮಾವಧಿ ಸಾಲಗಳ ಚೆಕ್ ವಿತರಿಸಿ ಮಾತನಾಡಿದ ಸಚಿವರು
ರೈತರು ಈ ದೇಶದ ಬೆನ್ನೆಲುಬು, ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸಹಕಾರ ಬ್ಯಾಂಕ್ ಗಳು ರೈತರ ಜೀವನಾಡಿ, ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್ ಗಳ ಮೂಲಕ 124 ಕೋಟಿ ಸಾಲ ಮಂಜೂರು ಮಾಡಲಾಗಿದೆ. ದೇವನಹಳ್ಳಿ ಕ್ಷೇತ್ರದಲ್ಲಿ 9 ಕೋಟಿ ಮೊತ್ತದ ಸಾಲವನ್ನು ರೈತರಿಗೆ ನೀಡಲಾಗುತ್ತಿದೆ. ಬಡ್ಡಿ ರಹಿತ ಸಾಲ ಇದಾಗಿದ್ದು ಸಾಲವನ್ನು ಸದುಪಯೋಗ ಪಡೆದುಕೊಂಡು ಒಳ್ಳೆಯ ಉದ್ದೇಶಕ್ಕೆ ಬೆಳೆಸಿಕೊಳ್ಳಿ ಎಂದರು.
ರೈತರ ಕ್ಷೇಮ ಕಾಪಾಡುವುದು ಸರ್ಕಾರದ ಕರ್ತವ್ಯ, ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದ ನಮ್ಮ ಸರ್ಕಾರವು ಸಹಕಾರ ಕ್ಷೇತ್ರ ಕ್ಕೆ ಹೆಚ್ಚಿನ ಒತ್ತು ನೀಡಿ ರೈತರ ಹಿತ ಕಾಪಾಡಲಿದೆ. ಪ್ರಜಾ ಸೇವೆ ಇಲಾಖೆ ಮೂಲಕ ಪ್ರಜೆಗಳ, ರೈತರ ಸಮಸ್ಯೆ ಬಗೆಹರಿಸಲು ಜಿಲ್ಲೆಯಾದ್ಯಂತ ಪ್ರಜಾ ಸೇವಾ ಅಭಿಯಾನ ಕೈಗೊಳ್ಳಲಾಗುತ್ತದೆ. ರೈತರು, ಸಾರ್ವಜನಿಕರು ಕಚೇರಿಗೆ ಅಲೆಯುವುದನ್ನು ಬಗೆಹರಿಸಲು ಸ್ಥಳದಲ್ಲೇ ಪರಿಹಾರ ಒದಗಿಸಲು ಪ್ರಜಾ ಸೇವಾ ಇಲಾಖೆ ಕೆಲಸ ಮಾಡಲಿದೆ ಎಂದು ಸಚಿವರು ಹೇಳಿದರು.
ರಾಜ್ಯಾದ್ಯಂತ 175 ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕು ಎಂದು ಘೋಷಿಸಲಾಗಿದೆ. ಬರ ಪೀಡಿತ ತಾಲ್ಲೂಕಿಗೆ ದೊಡ್ಡಬಳ್ಳಾಪುರ ಸೇರಿಸಲು ವರದಿ ನೀಡಲಾಗುವುದು. ರಾಜ್ಯಾದ್ಯಂತ ಬರ ನಿರ್ವಹಣೆಗೆ ಸಮರ್ಪಕ ಮೇವು, ಕುಡಿಯುವ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜನರ ಗುಳೆ ತಪ್ಪಿಸಲು ವಿಬಿಜಿರಾಂಜಿ ಕಾಯ್ದೆ ಮೂಲಕ ವಿವಿಧ ಕಾಮಗಾರಿ ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ತಯಾರಿ ಮಾಡಿಕೊಂಡಿದೆ ಎಂದರು.
ಎಂಎಲ್ಸಿ ರವಿ ಮಾತನಾಡಿ ನಬಾರ್ಡ್ ನಿಂದ ಮುಂಚೆ ಸಹಕಾರ ಬ್ಯಾಂಕ್ ಗಳಿಗೆ ಸಾಲ ಬರುತ್ತಿತ್ತು, ಈಗ ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿಲ್ಲಿಸಿದೆ. ಪ್ರಸ್ತುತ ರಾಜ್ಯ ಸರ್ಕಾರವೇ ರೈತರಿಗೆ ಬಡ್ಡಿ ರಹಿತ ಸಾಲ ನೀಡುತ್ತಿದೆ. ರಾಜ್ಯಾದ್ಯಂತ ಸಹಕಾರ ಸಂಘಗಳ ಮೂಲಕ 1200 ರಿಂದ 1300 ಕೋಟಿ ಸಾಲ ರೈತರಿಗೆ ನೀಡಲಾಗಿದೆ. ಸಾಲದ ಮೇಲಿನ ಬಡ್ಡಿಯನ್ನು ಸರ್ಕಾರ ಹಾಗೂ ಸಹಕಾರ ಸಂಘಗಳು ಪಾವತಿಸುತ್ತಿದ್ದು ಶೇ. 2-3% ಹೊರೆ ಸಹಕಾರ ಸಂಘಗಳ ಮೇಲೆ ಬೀಳಲಿದೆ. ಆದರೂ ಕೂಡ ನಾವು ರೈತರಿಗೆ ಸಾಲ ನೀಡಲಿದ್ದೇವೆ, ಇತರೆ ಸಾಲಗಳನ್ನು ಕಡಿಮೆ ಬಡ್ಡಿದರದಲ್ಲಿ ನೀಡಲಾಗುವುದು. ರೈತರ ಹಿತ ಕಾಪಾಡಲು ನಾವು ಬದ್ಧರಾಗಿದ್ದೇವೆ. ದೇವನಹಳ್ಳಿ ಕ್ಷೇತ್ರದ ವೆಂಕಟಗಿರಿಕೋಟೆ ಹಾಗೂ ಬೂದಿಗೆರೆಯಲ್ಲಿ ಶಾಖೆ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಇಂದಿನ ಸಾಲ ಮಂಜೂರಾತಿ ಮೊತ್ತ
ಬೆಂಗಳೂರು ಜಿಲ್ಲಾ ಕೇಂದ್ರ ಬ್ಯಾಂಕ್ ವತಿಯಿಂದ ದೇವನಹಳ್ಳಿ, ವಿಜಯಪುರ, ಚಪ್ಪರದಕಲ್ಲು ಶಾಖೆಗಳಿಗೆ ಮಂಜೂರಾದ ಸಾಲದ ಮೊತ್ತ.
* ಹೊಸ ಕೆಸಿಸಿ ಸಾಲ ಮೊತ್ತ -4,82,44,000/-
* ಎಂಟಿಎಲ್ ಸಾಲ ಮೊತ್ತ 4,05,14,000/-
* ಸ್ವಸಾಹಯ ಗುಂಪು ಸಾಲ ಮೊತ್ತ-45,00,000/-
* ಒಟ್ಟು 9,32,58,000/-
ಬಳಿಕ ದೇವನಹಳ್ಳಿ ಟೌನ್ ನ ಬಿಬಿ ರಸ್ತೆಯಲ್ಲಿ ದೇವನಹಳ್ಳಿ ತಾಲ್ಲೂಕು ಗ್ರಾಮೋದ್ಯೋಗ ಕಸುಬುದಾರರ ಕೈಗಾರಿಕಾ ವಿವಿಧ್ಧೊದ್ದೇಶ ಸಹಕಾರ ಸಂಘ ನಿಯಮಿತ ಇವರ ವತಿಯಿಂದ ಸಂಘದ 2ನೇ ಅಂತಸ್ತಿನ ಕಟ್ಟಡದ ಉದ್ಘಾಟನೆ ಹಾಗೂ ಖಾದಿ ಮಳಿಗೆಯನ್ನು ಗಣ್ಯರೊಂದಿಗೆ ಸಚಿವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದರು ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ನಾರಾಯಣಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರಾಜಣ್ಣ, ಬಮೂಲ್ ನಿರ್ದೇಶಕ ಮುನಿರಾಜು, ಮುಖಂಡರಾದ ಶಾಂತಕುಮಾರ್, ಕೆಸಿ ಮಂಜುನಾಥ್, ಸಹಕಾರ ಬ್ಯಾಂಕ್ ನಿರ್ದೇಶಕರಾದ ರಮೇಶ್, ರಾಜ್ ಕುಮಾರ್, ಜನಪ್ರತಿನಿಧಿಗಳು, ರೈತರು ಉಪಸ್ಥಿತರಿದ್ದರು.











