ವಿಜಯ ದರ್ಪಣ ನ್ಯೂಸ್….
“ದೆಹಲಿಯಲ್ಲಿ ಮೇಕೆದಾಟು ಅಸ್ತ್ರ – ಸುಪ್ರೀಂ ಕೋರ್ಟ್ ಹಿರಿಯ ವಕೀಲ ಶ್ಯಾಮ್ ದಿವಾನ್ ಜೊತೆ ಸಚಿವ ಚಲುವರಾಯಸ್ವಾಮಿ ಮಹತ್ವದ ಸಮಾಲೋಚನೆ”

ನವದೆಹಲಿ, : ರಾಜ್ಯದ ಹಿತಾಸಕ್ತಿಯ ಪ್ರಮುಖ ಅಂತಾರಾಜ್ಯ ನದಿ ನೀರು ಹಂಚಿಕೆ ವ್ಯಾಜ್ಯಗಳು ಮತ್ತು ನೀರಾವರಿ ಯೋಜನೆಗಳ ಕುರಿತು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಸೋಮವಾರ ನವದೆಹಲಿಯಲ್ಲಿ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯವಾದಿ ಶ್ಯಾಮ್ ದಿವಾನ್ ಅವರ ಕಚೇರಿಯಲ್ಲಿ ಮಹತ್ವದ ಕಾನೂನು ಸಮಾಲೋಚನಾ ಸಭೆ ನಡೆಸಿದರು.
ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಮೂರ್ತಿ ಕುಲಕರ್ಣಿ, ಐಎಸ್ಡಬ್ಲ್ಯೂ ಮುಖ್ಯ ಎಂಜಿನಿಯರ್ ನಂದೀಶ್, ಸುಪ್ರೀಂ ಕೋರ್ಟ್ನ AOR ನಿಶಾಂತ್ ಪಾಟೀಲ್ ಹಾಗೂ ರಾಜ್ಯದ ಕಾನೂನು ತಂಡದ ಹಿರಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಮುಖ್ಯವಾಗಿ ಕಾವೇರಿ ನದಿ ನೀರು ವಿವಾದದ ಐತಿಹಾಸಿಕ ಹಿನ್ನೆಲೆ, ಪ್ರಸ್ತುತ ಜಲಾನಯನ ಪ್ರದೇಶದಲ್ಲಿನ ನೈಜ ನೀರಿನ ಪರಿಸ್ಥಿತಿ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ಕೈಗೊಳ್ಳಬೇಕಾದ ಮುಂದಿನ ಕಾನೂನಾತ್ಮಕ ಕ್ರಮಗಳ ಕುರಿತು ವಿಸ್ತೃತ ಸಮಾಲೋಚನೆ ನಡೆಸಲಾಯಿತು.
ಇದೇ ವೇಳೆ ಮೇಕೆದಾಟು ಯೋಜನೆಯ ಮಹತ್ವವನ್ನು ಪ್ರಸ್ತಾಪಿಸಿದ ಸಚಿವರು, ಪ್ರಸ್ತುತ ಹವಾಮಾನ ವೈಪರೀತ್ಯ ಹಾಗೂ ಪರಿಸರದಲ್ಲಿನ ಏರುಪೇರುಗಳಿಂದಾಗಿ ಮಳೆಯ ಪ್ರಮಾಣ ಕ್ಷೀಣಿಸಿರುವ ಇಂತಹ ಸಂಕಷ್ಟದ ಸಂದರ್ಭದಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಾಣವು ಎರಡೂ ರಾಜ್ಯಗಳ ರೈತರಿಗೆ ಮತ್ತು ಸಾರ್ವಜನಿಕರಿಗೆ ಎಷ್ಟು ಫಲಪ್ರದ ಮತ್ತು ಉಪಯುಕ್ತ ಎಂಬುದಕ್ಕೆ ಇಂದಿನ ಪರಿಸ್ಥಿತಿಗಿಂತ ದೊಡ್ಡ ನಿದರ್ಶನ ಮತ್ತೊಂದಿಲ್ಲ ಎಂದು ಹಿರಿಯ ವಕೀಲರಿಗೆ ಮನವರಿಕೆ ಮಾಡಿಕೊಟ್ಟರು.
ಜೊತೆಗೆ ಕೃಷ್ಣಾ ಮೇಲ್ದಂಡೆ ಯೋಜನೆ (UKP) ಗೆ ಸಂಬಂಧಿಸಿದಂತೆ ಮುಳುಗಡೆ ಪ್ರದೇಶದ ಸವಾಲುಗಳು, ಭೂಸ್ವಾಧೀನ, ಪರಿಹಾರ ವಿತರಣೆ, ಸಂಧಾನ ಪ್ರಕ್ರಿಯೆ ಹಾಗೂ ನ್ಯಾಯಾಲಯದಲ್ಲಿನ ಕಾನೂನು ವ್ಯಾಜ್ಯಗಳ ತ್ವರಿತ ಇತ್ಯರ್ಥಕ್ಕೆ ರೂಪಿಸಬೇಕಾದ ಕಾರ್ಯತಂತ್ರಗಳ ಕುರಿತು ಗಂಭೀರ ಚರ್ಚೆ ನಡೆಸಲಾಯಿತು. ನೆರೆ ರಾಜ್ಯಗಳೊಂದಿಗಿನ ಜಲವಿವಾದಗಳಲ್ಲಿ ಕರ್ನಾಟಕದ ಹಕ್ಕೊತ್ತಾಯ ಮತ್ತು ರೈತರ ಹಿತರಕ್ಷಣೆ ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ನಲ್ಲಿ ಮಂಡಿಸಬೇಕಾದ ಪ್ರಬಲ ವಾದಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.









