ವಿಶ್ವಕರ್ಮರನ್ನು ಶ್ರೇಷ್ಠ ವಾಸ್ತುಶಿಲ್ಪಿಯಾಗಿ ವರ್ಣಿಸಲಾಗಿದೆ: ಶಾಸಕ ಬಿ.ಎನ್.ರವಿಕುಮಾರ್
ವಿಜಯ ದರ್ಪಣ ನ್ಯೂಸ್…
ವಿಶ್ವಕರ್ಮರನ್ನು ಶ್ರೇಷ್ಠ ವಾಸ್ತುಶಿಲ್ಪಿಯಾಗಿ ವರ್ಣಿಸಲಾಗಿದೆ: ಶಾಸಕ ಬಿ.ಎನ್.ರವಿಕುಮಾರ್
ಶಿಡ್ಲಘಟ್ಟ : ಋಗ್ವೇದ ಹಾಗೂ ಪುರಾಣಗಳಲ್ಲಿ ವಿಶ್ವಕರ್ಮರನ್ನು ಸರ್ವ ಶಕ್ತಿಶಾಲಿ ಕರ್ತೃ ಹಾಗೂ ಶ್ರೇಷ್ಠ ವಾಸ್ತುಶಿಲ್ಪಿಯಾಗಿ ವರ್ಣಿಸಲಾಗಿದೆ ಲಂಕಾ, ದ್ವಾರಕಾ, ಇಂದ್ರಪ್ರಸ್ಥದಂತಹ ಮಹಾನಗರಗಳನ್ನು ನಿರ್ಮಿಸಿದವರು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವಕರ್ಮರನ್ನು ದೇವತ್ವ ಪಡೆದ ದೈವಿಕ ವಾಸ್ತುಶಿಲ್ಪಿ
ಹಾಗೂ ಸೃಷ್ಟಿಕರ್ತರೆಂದು ಪೂಜಿಸಲಾಗುತ್ತಿದೆ ಎಂದು ಹೇಳಿದರು.
ವಿಶ್ವಕರ್ಮರು ಇಡೀ ಮನುಕುಲಕ್ಕೆ ನೀಡಿರುವ ಅವರ ಕೊಡುಗೆಯಿಂದಾಗಿ ಎಲ್ಲಾ ಸಮುದಾಯಗಳಿಗೂ ದೈವ ಸಮಾನರು , ಮನೆ-ಮಂದಿರಗಳ ನಿರ್ಮಾಣದಿಂದ ಹಿಡಿದು ಪ್ರತಿಯೊಂದು ಕಲೆಯಲ್ಲೂ ವಿಶ್ವಕರ್ಮ ಸಮಾಜದ ಅಪ್ರತಿಮ ಕೊಡುಗೆಯಿದೆ ಎಂದರು.
ತಹಶೀಲ್ದಾರ್ ಗಗನ ಸಿಂಧು ಮಾತನಾಡಿ ಸಾಂಸ್ಕೃತಿಕ ಪರಂಪರೆ, ಕಲೆ ಹಾಗೂ ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ ಎಂದರು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ ಮಾತನಾಡಿ , ಪ್ರತಿದಿನ ಜನರು ಬಳಸುವ ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟ, ಗೃಹೋಪಯೋಗಿ ವಸ್ತುಗಳು ಹಾಗೂ ಸ್ಮಾರಕಗಳಲ್ಲಿಯೂ ವಿಶ್ವಕರ್ಮರ ಕಲೆಯ ಅಸ್ತಿತ್ವ ಜೀವಂತವಾಗಿದೆ ಎಂದು ನುಡಿದರು.
ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಅಮರನಾರಾಯಣಚಾರಿ ಮಾತನಾಡಿ ಭವ್ಯ ಪರಂಪರೆಯುಳ್ಳ ಸಮಾಜ ವಿಶ್ವಕರ್ಮ ಸಮಾಜ ಅವರ ಜಯಂತಿಯನ್ನು ಶುದ್ಧತೆ, ಪ್ರತಿಭೆ ಮತ್ತು ಕಲಾ-ವೈಜ್ಞಾನಿಕ ಸಾಧನೆಗಳ ಮಾದರಿ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಸಮಾಜದ ಐದು ಪ್ರಮುಖ ಕಸುಬುಗಳ ಸಾಧಕರಾದ ಆಂಜನೇಯಾಚಾರಿ (ಚಿನ್ನ-ಬೆಳ್ಳಿ),ಮಂಜುನಾಥ್ (ಲೋಹ ಬೆಸುಗೆ) ,ನಂಜುಂಡಾಚಾರಿ (ಕಬ್ಬಿಣ),
ಸುಬ್ರಮಣ್ಯಾಚಾರಿ (ಶಿಲ್ಪ), ಮತ್ತು ವೆಂಕಟಾಚಾರಿ (ಬಡಗಿ) ಅವರನ್ನು ಸನ್ಮಾನಿಸಲಾಯಿತು.
ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿ ಮಟ್ಟದಲ್ಲಿ ಮೆಚ್ಚುಗೆ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಕೆ.ಎನ್.ಸುಬ್ಬಾರೆಡ್ಡಿ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿ ಸದಸ್ಯ ಲಕ್ಷ್ಮಣರಾಜು, ಶ್ರೀಕಾಳಿಕಾಂಬ ಕಮಠೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಮುನಿರತ್ನಾಚಾರಿ ,ಸುಂದರಾಚಾರಿ,ಭಕ್ತರಹಳ್ಳಿ ಮಂಜುನಾಥ್ ಮುಂತಾದವರು ಹಾಜರಿದ್ದರು.