ಹೊಸಕೋಟೆಯ ಸೌರ ಘಟಕಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಚಾಲನೆ

ವಿಜಯ ದರ್ಪಣ ನ್ಯೂಸ್…

ಹೊಸಕೋಟೆಯ ಸೌರ ಘಟಕಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಚಾಲನೆ

ಯಲಚಹಳ್ಳಿ ಕೆರೆಯಂಗಳದ ಸೌರ ಘಟಕದಲ್ಲಿ 7.3 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ

1383 ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ

ಹೊಸಕೋಟೆಯ 33 ಗ್ರಾಮಗಳ ರೈತರಿಗೆ ಅನುಕೂಲ

ಹೊಸಕೋಟೆ ಬೆಂ.ಗ್ರಾ‌.ಜಿಲ್ಲೆ , ಅ.30:-

ಪಿಎಂ ಕುಸುಮ್‌- ಸಿ ಯೋಜನೆಯಡಿ ಹೊಸಕೋಟೆಯ ಯಲಚಹಳ್ಳಿ ಕೆರೆ ಅಂಗಳದಲ್ಲಿ ಸ್ಥಾಪಿಸಲಾದ ಸೌರ ಘಟಕಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಚಾಲನೆ ನೀಡಿದರು.

ಯಲಚಹಳ್ಳಿಯ ಕೆರೆಯಂಗಳದಲ್ಲಿ ಸ್ಥಾಪಿಸಲಾಗಿರುವ ಸೌರ ಘಟಕವನ್ನು ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದ ಸಚಿವರು, “ಈ ಘಟಕದಲ್ಲಿ 7.3 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗಲಿದ್ದು, ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಮುಗಬಾಳ ಗ್ರಾಮ ಪಂಚಾಯ್ತಿಯ ಒಟ್ಟು 33 ಗ್ರಾಮಗಳ 1,383 ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ,”ಎಂದರು.

“ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆಯೇ ಸಮರ್ಪಕ ವಿದ್ಯುತ್ ಪೂರೈಸಲು ನೆರವಾಗುವ ಫೀಡರ್‌ ಮಟ್ಟದ ಸೌರೀಕರಣ ಯೋಜನೆಯಾದ ‘ಕುಸುಮ್‌- ಸಿ’ಗೆ ವೇಗ ನೀಡಿ ಶಕ್ತಿ ತುಂಬಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ. ಈ ಯೋಜನೆಯಿಂದ ರೈತರಿಗೆ 7 ಗಂಟೆಗಳ ಕಾಲ ವಿದ್ಯುತ್‌ ನೀಡಲು ಸಾಧ್ಯವಾಗಲಿದೆ. ಯಲಚಹಳ್ಳಿಯ ಈ ಸೌರ ಘಟಕದಿಂದ ಒಟ್ಟು 4 ಕೃಷಿ ಫೀಡರ್‌ಗಳು ಸೋಲಾರ್‌ ವಿದ್ಯುತ್‌ ವಿತರಣೆ ಜಾಲವಾಗಿ ಬದಲಾಗಲಿದೆ,” ಎಂದರು.

“ಕುಸುಮ್-ಸಿ ಯೋಜನೆ ರೈತರಿಗೆ ಅದರಲ್ಲೂ ಮುಖ್ಯವಾಗಿ ಬೆಂಗಳೂರಿನ ಗೇಟ್‌ವೇ ಎನಿಸಿಕೊಂಡಿರುವ ಹೊಸಕೋಟೆ ಗ್ರಾಮೀಣ ಭಾಗದ ಭಾಗದ ರೈತರಿಗೆ ವರದಾನವಾಗಿದೆ. ಯೋಜನೆ ಜಾರಿಗೊಳಿಸಲು ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡುತ್ತಿದೆ. ಸ್ಥಳೀಯ ಶಾಸಕರಾದ ಶರತ್‌ ಬಚ್ಚೇಗೌಡ ಅವರು ಆಸಕ್ತಿ ವಹಿಸಿ ಯೋಜನೆ ಅನುಷ್ಠಾನಗೊಳಿಸಿದ್ದಾರೆ. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಸರ್ಕಾರಿ ಭೂಮಿ ಲಭ್ಯವಿರದ ಸ್ಥಳಗಳಲ್ಲಿ ರೈತರೇ ಭೂಮಿಯನ್ನು ಗುತ್ತಿಗೆ ನೀಡುವ ಮೂಲಕ ವಾರ್ಷಿಕ ಆದಾಯಗಳಿಸಬಹುದಾಗಿದೆ. ಹಾಗಾಗಿ,ರೈತರು ಭೂಮಿ ನೀಡಲು ಮುಂದೆ ಬರಬೇಕು,” ಎಂದರು.

 

“ಕುಸುಮ್‌ ಸಿ ಯೋಜನೆಯಡಿ ಪ್ರತಿ ಎಕರೆ ಭೂಮಿಗೆ 25 ಸಾವಿರ ರೂ. ಅನ್ನು ಖಾಸಗಿ ವಿದ್ಯುತ್ ಉತ್ಪಾದಕರು ಪಾವತಿಸಬೇಕು. ಆ ಮೊತ್ತವನ್ನು ಜಿಲ್ಲಾಧಿಕಾರಿಗಳ ಬಳಿ ಇಟ್ಟು ಉಪ ಕೇಂದ್ರ ಇರುವ ಗ್ರಾಮದ ಸರ್ಕಾರಿ ಶಾಲೆ, ಅಂಗನವಾಡಿಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಖಾಸಗಿ ಭೂಮಿಯಾಗಿದ್ದರೆ, ನವೀಕರಿಸಬಹುದಾದ ಇಂಧನ ಸೇವಾ ಕಂಪನಿಯ ಡೆವಲಪರ್‌ಗಳು ಗುತ್ತಿಗೆಗೆ ತೆಗೆದುಕೊಂಡು, ಭೂಮಾಲೀಕರಿಗೆ ಎಕರೆಗೆ ಕನಿಷ್ಠ ₹25,000 ಪರಿಹಾರ ನೀಡುತ್ತಾರೆ,” ಎಂದು ಹೇಳಿದರು.

“ತಾಂತ್ರಿಕ ಸಾಧ್ಯತೆ ಇರುವ ವಿದ್ಯುತ್ ಉಪ ಕೇಂದ್ರಗಳ ಬಳಿ ಸೌರ ಘಟಕಗಳ ಸ್ಥಾಪಿಸಲಾಗುತ್ತದೆ. ಖಾಸಗಿಯವರು ಸೌರ ಘಟಕಗಳನ್ನು ಸ್ಥಾಪಿಸಿ, ವಿದ್ಯುತ್ ಉತ್ಪಾದಿಸುತ್ತಾರೆ. ಅದನ್ನು ಸರ್ಕಾರ ಖರೀದಿಸಿ ಆಯಾ ಫೀಡರ್‌ಗಳ ವ್ಯಾಪ್ತಿಯ ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಸುತ್ತದೆ. ಹಗಲು ವೇಳೆ ಸೌರ ವಿದ್ಯುತ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದರಿಂದ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಹಗಲು ಸಮರ್ಪಕ ವಿದ್ಯುತ್ ಲಭ್ಯವಾಗಲಿದೆ,” ಎಂದು ಸಚಿವರು ಹೇಳಿದರು.

“ಕುಸುಮ್‌- ಸಿ ಜತೆಗೆ ಪಂಪ್‌ಸೆಟ್‌ಗೆ ಅಗತ್ಯ ಇರುವ ವಿದ್ಯುತ್ತನ್ನು ಜಮೀನಿನಲ್ಲೇ ಉತ್ಪಾದಿಸಲು ನೆರವಾಗುವ ಪಿಎಂ ಕುಸುಮ್-ಬಿ ಯೋಜನೆಯ ಲಾಭವನ್ನು ರೈತರು ಪಡೆಯಬೇಕು. ಕೇಂದ್ರ ಸರ್ಕಾರವು ಯೋಜನೆಗೆ ಶೇ. 30ರಷ್ಟು ಸಹಾಯಧನ ಒದಗಿಸಿದರೆ, ರಾಜ್ಯ ಸರ್ಕಾರದ ಶೇ. 50ರಷ್ಟು ಸಬ್ಸಿಡಿ ನೀಡುತ್ತಿದೆ. ಫಲಾನುಭವಿಗಳು ಶೇ. 20ರಷ್ಟನ್ನು ಭರಿಸಿದರೆ ಸಾಕು. ಆನ್‌ಲೈನ್‌ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು,”ಎಂದರು.

120 ಹೊಸ ಸಬ್‌ಸ್ಟೇಷನ್‌
“ನಮ್ಮ ಸರ್ಕಾರ ಬಂದ ಸಂದರ್ಭದಲ್ಲಿ 8-9 ಸಾವಿರ ಮೆಗಾ ವ್ಯಾಟ್‌ನಷ್ಟಿದ್ದ ವಿದ್ಯುತ್‌ ಬೇಡಿಕೆ ಏಕಾಏಕಿ 18 ಸಾವಿರ ಮೆಗಾವ್ಯಾಟ್‌ಗೆ ಏರಿತು. ಆಗ ಅನ್ಯ ರಾಜ್ಯಗಳೊಂದಿಗೆ ವಿದ್ಯುತ್‌ ವಿನಿಮಯ ಒಪ್ಪಂದ ಮಾಡಿಕೊಂಡು ಜನರಿಗೆ ತೊಂದರೆ ಆಗದಂತೆ ನೋಡಿಕೊಂಡೆವು. ನಂತರದ ದಿನಗಳಲ್ಲಿ ಹಲವಾರು ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡು ವಿದ್ಯುತ್‌ ಉತ್ಪಾದನೆ ಹೆಚ್ಚಿಸಲಾಗಿದೆ. ಸದ್ಯ ವಿದ್ಯುತ್‌ ಕೊರತೆ ಇಲ್ಲ. ಆದರೆ, ಲೋಡ್‌ ಹೆಚ್ಚಳವಾಗಿ ಪೂರೈಕೆಯಲ್ಲಿ ಸಮಸ್ಯೆ ಆಗುತ್ತದೆ ಇದನ್ನು ಸರಿಪಡಿಸುವ ಉದ್ದೇಶದಿಂದ 120 ಹೊಸ ಸಬ್‌ಸ್ಟೇಷನ್‌ಗಳನ್ನು ನಿರ್ಮಿಸಲಾಗುವುದು,” ಎಂದು ವಿವರಿಸಿದರು.

ಸರ್ಕಾರಿ ಶಾಲೆ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಇದೇ ವೇಳೆ ಸಚಿ ಕೆ.ಜೆ.ಜಾರ್ಜ್ ಅವರು ವೋಲ್ವೊದ ಸಿಎಸ್‌ಆರ್‌ ನಿಧಿಯಡಿ 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ತಾವರೆಕೆರೆಯ ಸರ್ಕಾರಿ ಶಾಲಾ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು.

ಕಿಯೋನಿಕ್ಸ್‌ ಅಧ್ಯಕ್ಷರು ಹಾಗೂ ಹೊಸಕೋಟೆ ಶಾಸಕರಾದ ಶರತ್‌ ಕುಮಾರ್ ಬಚ್ಚೇಗೌಡ ಅವರು ಮಾತನಾಡಿ ಸಚಿವರು ನಮ್ಮ ಮನವಿಗೆ ಸದಾ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ. ಹೊಸಕೋಟೆ ಟೌನ್ ನಲ್ಲಿ ಭೂಗತ ಕೇಬಲ್ ಅಳವಡಿಕೆಗೆ ಸುಮಾರು 120 ಕೋಟಿ ಅನುದಾನ ಕೊಟ್ಟಿದ್ದಾರೆ. ಹೊಸಕೋಟೆಯಲ್ಲಿ 6 ವಿದ್ಯುತ್ ಉಪಕೇಂದ್ರ ಘಟಕ ಸ್ಥಾಪನೆಗೆ ಅವಕಾಶ ಕಲ್ಪಿಸಿದ್ದಾರೆ.

ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಭೂಮಿ ಕಳೆದುಕೊಂಡ ರೈತರಿಗೆ ಧನ್ಯವಾದಗಳು. ಸೌರ ವಿದ್ಯುತ್ ಘಟಕದಿಂದ ಹೊಸಕೋಟೆಯ ಮಹಾ ಜನತೆಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಸಹಕಾರಿ. ವಿದ್ಯುತ್ ಭರಿತ ರಾಜ್ಯ ಮಾಡಬೇಕು ಎಂಬುದು ನಮ್ಮ ಸರ್ಕಾರದ ಕನಸು, ನವೀಕರಿಸಬಹುದಾದ ಇಂಧನ ಬಳಕೆಗೆ ಕೂಡ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ಮಾದರಿ ಶಾಲೆ
ವೋಲ್ವೋ ಸಂಸ್ಥೆಯು ತಾವರೆಕೆರೆ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ 3.5 ಕೋಟಿ ರೂ.ಗಳ ಸಿಎಸ್ಆರ್ ಅನುದಾನದಡಿ ನೂತನ ಕಟ್ಟಡ ನಿರ್ಮಿಸುತ್ತಿದೆ.‌ ಒಂದನೇ ತರಗತಿಯಿಂದ 10 ನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಸಿಗಬೇಕು ಹಾಗೆಯೇ ಗುಣಮಟ್ಟದ ಶಿಕ್ಷಣ, ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಕ್ಕಳ ಉತ್ತಮ ಭವಿಷ್ಯ ರೂಪಿಸುವುದು ಇದರ ಉದ್ದೇಶ. ತಾವರೆಕೆರೆ ಶಾಲೆಯು ಮುಂದಿನ ದಿನಗಳಲ್ಲಿ ಮಾದರಿ ಶಾಲೆ ಆಗಲಿದೆ ಎಂದರು.

ಬೆಸ್ಕಾಂ ಎಂಡಿ ಎನ್ ಶಿವಶಂಕರ್, ಹೊಸಕೋಟೆ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಸುಬ್ಬರಾವ್, ಟಿಎಪಿಸಿಎಂಎಸ್ ಅಧ್ಯಕ್ಷ ಸುರೇಶ್, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ ಗೌಡ , ವೋಲ್ವೋ ಸಂಸ್ಥೆಯ ಸಿಎಸ್ಆರ್ ಮುಖ್ಯಸ್ಥ ಜಿವಿ ರಾವ್, ತಹಶೀಲ್ದಾರ್ ಸೋಮಶೇಖರ್, ಸ್ಥಳೀಯ ಜನಪ್ರತಿನಿಧಿಗಳು, ಇಂಧನ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.