ವಿಜಯ ದರ್ಪಣ ನ್ಯೂಸ್…..
ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ರಾಜಗೋಪುರ ನಿರ್ಮಾಣಕ್ಕೆ ಉತ್ತರ ಕಲ್ಲು ಪ್ರತಿಷ್ಠಾಪನೆಗೆ ಸಿದ್ಧತೆ

ತಾಂಡವಪುರ ಜೂನ್ 24: ಮೈಸೂರಿನ ವಿಜಯನಗರದ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪರಮಪೂಜ್ಯ ಬಾಷ್ಯಂ ಸ್ವಾಮೀಜಿಯವರ ಕನಸಾಗಿರುವ ರಾಜಗೋಪುರ ನಿರ್ಮಾಣ ಕಾರ್ಯ ಭಕ್ತರ ಸಹಕಾರದಿಂದ ಪ್ರಗತಿಯಲ್ಲಿದೆ.
ಫೆಬ್ರವರಿ 19ರಂದು ಗುದ್ದಲಿ ಪೂಜೆಯೊಂದಿಗೆ ಆರಂಭಗೊಂಡ ಈ ಮಹತ್ವದ ಯೋಜನೆಯ ಅಡಿಪಾಯ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಕಲ್ಲಿನ ಕೆಲಸ ಆರಂಭವಾಗಿದೆ.
ಇಂದು ರಾಜಗೋಪುರದ ಉತ್ತರಕಲ್ಲು ಕಲ್ಲನ್ನು ಪರಮಪೂಜ್ಯ ಬಾಶ್ಯಂ ಸ್ವಾಮೀಜಿಯವರ ಅಮೃತ ಹಸ್ತದಿಂದ ಪೂಜಿಸಲ್ಪಟ್ಟು ಕಾಮಗಾರಿಗೆ ಚಾಲನೆ ನೀಡಲಾಯಿತು,
ಕಲ್ಲಿನ ಕೆಲಸವು ಮುಂದಿನ ಐದು ರಿಂದ ಆರು ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಬಳಿಕ ವಿಗ್ರಹಗಳ ನಿರ್ಮಾಣ ಹಾಗೂ ಇಟ್ಟಿಗೆ-ಸಿಮೆಂಟ್ ಬಳಸಿ ಗೋಪುರ ನಿರ್ಮಾಣದ ಮುಂದಿನ ಹಂತದ ಕಾಮಗಾರಿ ಆರಂಭವಾಗಲಿದ್ದು, ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲು ಸುಮಾರು ಎರಡು ರಿಂದ ಮೂರು ವರ್ಷಗಳ ಕಾಲಾವಕಾಶ ಬೇಕಾಗಬಹುದು.
ಸುಮಾರು 80 ರಿಂದ 90 ಅಡಿ ಎತ್ತರದ ರಾಜಗೋಪುರ ನಿರ್ಮಾಣ ಮಾಡುವ ಸಂಕಲ್ಪವನ್ನು ಬಾಷ್ಯಂ ಸ್ವಾಮೀಜಿಯವರು ಹೊಂದಿದ್ದಾರೆ. ಭಕ್ತಾದಿಗಳ ಸಹಕಾರ ಹಾಗೂ ದಾನಿಗಳ ನೆರವಿನಿಂದ ಆರಂಭವಾಗಿರುವ ಈ ಯೋಜನೆ ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ಪೂರ್ಣಗೊಂಡು, ಕುಂಭಾಭಿಷೇಕದೊಂದಿಗೆ ಸಮಾಪ್ತಿಗೊಳ್ಳಬೇಕು ಎಂಬುದು ಎಲ್ಲರ ಆಶಯವಾಗಿದೆ.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಬಾಶ್ಯಂ ಸ್ವಾಮೀಜಿಯವರು, ವಿವಿಧ ಗಣ್ಯರು, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಲೋಕನಾಥ್ , ಶ್ರೀನಿವಾಸನ್ ಗುರೂಜೀ , ಗಣ್ಯರು,
ಪ್ರಮುಖ ದಾನಿಗಳು ಹಾಗೂ ಅನೇಕ ಭಕ್ತರು ಭಾಗವಹಿಸಿ ಆಶೀರ್ವಾದ ಪಡೆದರು. ದೇವಸ್ಥಾನದ ಈ ಮಹತ್ವದ ಯೋಜನೆ ಸಮಾಜಕ್ಕೆ ಮಾದರಿಯಾಗಲಿ ಎಂದು ಪ್ರಾರ್ಥಿಸಲಾಯಿತು.










