ಮಹನೀಯರ ಬೆಳಗಿನ ಸಂದೇಶಗಳು……

ವಿಜಯ ದರ್ಪಣ ನ್ಯೂಸ್….

ಮಹನೀಯರ                          ಬೆಳಗಿನ ಸಂದೇಶಗಳು……

ಬೆಳಗಿನ ಶುಭೋದಯ, ರಾತ್ರಿಯ ಶುಭ ರಾತ್ರಿಗಳು, ವಿವಿಧ ಸಂದರ್ಭಗಳ ಶುಭಾಶಯ ಸಂದೇಶಗಳು……..

ಸಾಮಾಜಿಕ ಜಾಲತಾಣಗಳ ಅಭಿವೃದ್ಧಿಯೊಂದಿಗೆ ಮೊಬೈಲ್ ಹೊಂದಿರುವ ಅನೇಕರು ದಿನದ ವಿವಿಧ ಸಮಯದಲ್ಲಿ ಮುಖ್ಯವಾಗಿ ಬೆಳಗಿನ ಹೊತ್ತು ಸ್ನೇಹಿತರುಗಳಿಗೆ, ಹಿತೈಷಿಗಳಗೆ, ಪ್ರೀತಿ ಪಾತ್ರರಿಗೆ ಕಳುಹಿಸುವ ಬಹುತೇಕ Good Morning, Good night Message ಗಳು, ಮಹಾನ್ ವ್ಯಕ್ತಿಗಳು ಹೇಳಿರುವ Quotation ಗಳನ್ನು ಒಳಗೊಂಡಿರುತ್ತದೆ………

ಬುದ್ದ, ಬಸವ, ಯೇಸು, ಪೈಗಂಬರ್, ಗುರುನಾನಕ್, ಮಹಾವೀರ, ಚಾಣಕ್ಯ, ಅಂಬೇಡ್ಕರ್, ಗಾಂಧಿ, ರೂಮಿ, ಖಲೀಲ್ ಗಿಬ್ರಾನ್, ಕಾರ್ಲ್ ಮಾರ್ಕ್ಸ್, ಸ್ವಾಮಿ ವಿವೇಕಾನಂದ, ಪರಮಹಂಸ, ಸರ್ವಜ್ಞ, ದಲೈಲಾಮ, ಅಬ್ದುಲ್ ಕಲಾಂ, ಭಗವದ್ಗೀತೆ, ಖುರಾನ್, ಬೈಬಲ್, ಶರಣರು, ದಾಸರು, ಸೂಫಿ ಸಂತರು ಹೀಗೆ ಅನೇಕರ ವಾಣಿಗಳು ನಮಗಿಷ್ಟವಾಗಿವೆ ಎಂದು ಹಾಕುತ್ತೇವೆ.

ಒಂದು ಹಂತಕ್ಕೆ ಇದೆಲ್ಲಾ ಒಳ್ಳೆಯದೆ. ಎಂತೆಂಥಹ ಅತ್ಯುತ್ತಮ ಸಂದೇಶಗಳು ಮತ್ತು ಅವು ಕೊಡುವ ಅರ್ಥಗಳು ‌ಆ ಕ್ಷಣಕ್ಕೆ ನಮ್ಮಲ್ಲಿ ಅರಿವಿನ ಮಟ್ಟವನ್ನು ಹೆಚ್ಚಿಸುತ್ತದೆ. ಸ್ಪೂರ್ತಿ ನೀಡುತ್ತದೆ. ಕೆಲವೊಮ್ಮೆ ಆ ದಿನವನ್ನು ಹೆಚ್ಚು ಅರ್ಥಪೂರ್ಣವಾಗಿ ಕಳೆಯಲು ಸಹಾಯ ಮಾಡುತ್ತದೆ.

ಆದರೆ ಈ ಸಂದೇಶಗಳು ಕೇವಲ ಯಾಂತ್ರಿಕವಾಗದೆ ಅದನ್ನು ಹೇಳಿರುವವರನ್ನು ನಾವು ಹೇಗೆ ಅರ್ಥಮಾಡಿಕೊಂಡಿದ್ದೇವೆ, ಅದನ್ನು ಹೇಗೆ ಅಳವಡಿಸಿಕೊಂಡಿದ್ದೇವೆ, ಆ ಸಂದೇಶಗಳ ಸಾಮಾಜಿಕ ಪ್ರಸ್ತುತತೆ ಏನು ಎಂಬುದನ್ನು ಅದರೊಂದಿಗೆ ಹೇಳಬೇಕಾಗುತ್ತದೆ ಮತ್ತು ಯೋಚಿಸಬೇಕಾಗುತ್ತದೆ. ಇಲ್ಲದಿದ್ದರೆ ಅದೊಂದು ಕಾಟಾಚಾರದ ಒಣ ಸಂದೇಶವಾಗುತ್ತದೆ.

ಏಕೆಂದರೆ ಕಾಲದ ನಿರಂತರತೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿರುತ್ತದೆ. ಕೆಲವು ಈಗಲೂ ಪ್ರಸ್ತುತವಾದರೆ, ಕೆಲವು ಸವಕಲು ನಾಣ್ಯಗಳು, ಮತ್ತೆ ಕೆಲವು ಬದಲಾವಣೆಯಾಗಬೇಕಿದ್ದರೆ ಒಂದಷ್ಟು ಅಪಾಯಕಾರಿಯೂ ಹೌದು. ಎಲ್ಲಾ ಕಾಲಕ್ಕೂ ಸಲ್ಲುವ ಸಾರ್ವತ್ರಿಕ ಸತ್ಯಗಳೂ ಇರುತ್ತದೆ.

ಈ ಎಲ್ಲಾ ವ್ಯಕ್ತಿಗಳು ತಾವು ಜೀವಿಸಿದ್ದ ಕಾಲದ ಸ್ಥಿತಿಗತಿಗೆ ಅನುಗುಣವಾಗಿ ಒಂದಷ್ಟು ದೂರದೃಷಿಯಿಂದ ತಮ್ಮ ಅನುಭಾವಿಕ ಚಿಂತನೆಗಳನ್ನು ದಾಖಲಿಸಿರುತ್ತಾರೆ. ಅದು ಈಗ ಎಷ್ಟರ ಮಟ್ಟಿಗೆ ಅಳವಡಿಕೆಗೆ ಯೋಗ್ಯ ಎಂದು ಯೋಚಿಸಬೇಕಾಗುತ್ತದೆ.

ಏಕೆಂದರೆ ಆಗ ರಾಜಪ್ರಭುತ್ವ ಈಗ ಪ್ರಜಾಪ್ರಭುತ್ವ, ಆಗ ಕಾಲ್ನಡಿಗೆ ಅಥವಾ ಕುದುರೆ ಈಗ ವಿಮಾನಯಾನ, ಆಗ ಪಾರಿವಾಳ ಇಲ್ಲವೇ ದೂತ ಸಂದೇಶ ವಾಹಕಗಳು, ಈಗ ಇಂಟರ್ ನೆಟ್ ಮೊಬೈಲ್ ( ಸ್ವಲ್ಪ Techniques ಗೊತ್ತಾದರೆ Fake Photoshop! A I !??), ಆಗ ಜಾತಿಗಳ ಶ್ರೇಷ್ಠತೆ ಈಗ ಸ್ವಲ್ಪ ಶಿಥಿಲತೆ, ಆಗ ಪ್ರಾಮಾಣಿಕತೆ ಈಗ ಭ್ರಷ್ಟತೆ, ಆಗ ಹೆಣ್ಣು ಎರಡನೇ ದರ್ಜೆ ಈಗ ಆಕೆಯೇ ಎಲ್ಲದರಲ್ಲೂ First Class ( ? ), ಆಗ ದೇವರು ದೊಡ್ಡವನು ಈಗ ಹಣ ಅಧಿಕಾರ ಇದ್ದವನೇ ದೇವರು, ಹೀಗೆ ನಾನು ರೀತಿಯ ಬದಲಾವಣೆಗಳಾಗಿವೆ. ಎಲ್ಲವೂ ಸಂಕೀರ್ಣವಾಗಿದೆ.

ಇದನ್ನು ಸೂಕ್ಷ್ಮವಾಗಿ ಗಮನಿಸಬೇಕು.
ಅಪ್ಪ ಹಾಕಿದ ಆಲದ ಮರವೆಂದು ನೇಣು ಹಾಕಿಕೊಳ್ಳದೆ , ಚಿನ್ನದ ಸೂಜಿಯೆಂದು ಕಣ್ಣಿಗೆ ಚುಚ್ಚಿಕೊಳ್ಳದೆ ಈಗಿರುವ ನಿಮ್ಮ ಜ್ಞಾನದ ಮಿತಿಯಲ್ಲಿ ಒಂದಷ್ಟು ವಿವೇಚನೆಯಿಂದ ನಮಗೆ ಸರಿ ಎಂಬುದನ್ನು ಸ್ವೀಕರಿಸಿ. ಕೆಲವನ್ನು ಬದಲಾವಣೆ ಮಾಡಿಕೊಳ್ಳಬೇಕು ಇಷ್ಟವಿಲ್ಲದಿದ್ದರೆ ತಿರಸ್ಕರಿಸಬೇಕು.

ಅನುಭವದ ಆಧಾರದ ಮೇಲೆ ಎಲ್ಲಾ ಉತ್ತಮ ಅಂಶಗಳನ್ನು ಸೇರಿಸಿ ಹೊಸ ಸಾಮಾಜಿಕ ಮನೋಸ್ಥಿತಿ ನಿರ್ಮಿಸಿಕೊಳ್ಳುವ ಪ್ರಯತ್ನವನ್ನೂ ಮಾಡಬೇಕು. ಆ ಕಾರಣಕ್ಕಾಗಿ ಮಹಾತ್ಮರ Quote ಗಳಿಗೆ ನಮ್ಮ ಆಂತರಿಕ ಮತ್ತು ಬಾಹ್ಯ ಪ್ರತಿಕ್ರಿಯೆ ಮುಖ್ಯವಾಗುತ್ತದೆ.

ಏಕೆಂದರೆ ಈ ಕ್ಷಣದಲ್ಲಿ ನಾವು ಜೀವಿಸುತ್ತಿರುವುದು ಈಗ ಬದುಕಿರುವ ನಮ್ಮ ಸುತ್ತಮುತ್ತಲಿನ ಜನರೊಂದಿಗೆಯೇ ಹೊರತು, ಆ ಮಾಹಾತ್ಮರ ಒಡನಾಟದಲ್ಲಿ ಅಲ್ಲ ಆದರೆ ಅವರ ನೆನಪುಗಳೊಂದಿಗೆ …………….

ವರ್ತಮಾನದ ನಮ್ಮ ನಡುವಿನ ಜನರ ಮಾನಸಿಕ ಸ್ಥಿತಿ, ಅವರ ಒಳಿತು ಕೆಡುಕುಗಳು, ಅವರೊಂದಿಗಿನ ಸಂಪರ್ಕ ಸಮನ್ವಯ, ಸಂಬಂಧಗಳ ಬೆಸುಗೆ, ಆತ್ಮೀಯತೆ ಮುಖ್ಯವಾಗಬೇಕೆ ಹೊರತು ಅವರು ಎಷ್ಟೇ ದೊಡ್ಡ ವ್ಯಕ್ತಿಗಳಾದರು ಗತಿಸಿಹೋದ ಮಹಾನ್ ವ್ಯಕ್ತಿಗಳಿಗಿಂತ ಬದುಕಿರುವ ಜನರೇ ನಮ್ಮ ಆದ್ಯತೆಯಾಗಬೇಕು..

ಆದರೆ ಇಂದಿನ ದಿನಗಳಲ್ಲಿ ಇತಿಹಾಸವನ್ನು ಹೊಗಳುತ್ತಾ ಅಥವಾ ಟೀಕಿಸುತ್ತಾ ಪ್ರಸ್ತುತ ಸನ್ನಿವೇಶಗಳನ್ನು ಗೊಂದಲಮಯ ಮಾಡುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಭೂತ‌ ಭವಿಷ್ಯತ್ ಕಾಲಕ್ಕಿಂತ ವರ್ತಮಾನವೇ ನಮಗೆ ಮುಖ್ಯವಾಗಬೇಕು. ಈಗಿನ ಜೀವನ ವಿಧಾನವೇ ಮುಖ್ಯವಾಗಬೇಕು. ಅದಕ್ಕೆ ತಕ್ಕಂತೆ ಮಹನೀಯರ ಸಂದೇಶಗಳನ್ನು ನಾವು ಅಳವಡಿಸಿಕೊಳ್ಳಬೇಕು……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451….
9844013068……