ಸರ್ವಜ್ಞರ ವಿಚಾರ, ಮೌಲ್ಯ ಅಳವಡಿಸಿಕೊಳ್ಳಿ: ಸಿ.ಎನ್.ಮಂಜೇಗೌಡ
ವಿಜಯ ದರ್ಪಣ ನ್ಯೂಸ್….
ಸರ್ವಜ್ಞರ ವಿಚಾರ, ಮೌಲ್ಯ ಅಳವಡಿಸಿಕೊಳ್ಳಿ: ಸಿ.ಎನ್.ಮಂಜೇಗೌಡ

ತಾಂಡವಪುರ ಫೆಬ್ರುವರಿ 20 ಸಂತ ಕವಿ ಸರ್ವಜ್ಞರ ವಿಚಾರಧಾರೆಗಳು ಹಾಗೂ ವಚನಗಳು, ತ್ರಿಪದಿಗಳಲ್ಲಿರುವ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕಬಹುದು ಎಂದು ವಿಧಾನ ಪರಿಷತ್ತಿನ ಶಾಸಕರಾದ ಸಿ.ಎನ್.ಮಂಜೇಗೌಡ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕರ್ನಾಟಕ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಸಂತ ಕವಿ ಸರ್ವಜ್ಞ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಸರ್ವಜ್ಞ ಎಂದರೆ ಎಲ್ಲವನ್ನು ತಿಳಿದವರು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಸರ್ವಜ್ಞರು ವಚನಗಳ ಮೂಲಕ ತ್ರಿಪದಿಯನ್ನು ರಚಿಸಿದ್ದಾರೆ. ಕಾಶಿ ವಿಶ್ವನಾಥನ ಆಶೀರ್ವಾದದಿಂದ ಸಂತ ಕವಿ ಸರ್ವಜ್ಞರು ಮಹಾನ್ ವ್ಯಕ್ತಿಯಾಗಿ ಜನಿಸಿದ್ದಾರೆ. ಧರ್ಮ, ನ್ಯಾಯ, ಸಂಸ್ಕೃತಿ ಹಾಗೂ ವಿದ್ಯೆಯ ಮಹತ್ವದ ಬಗ್ಗೆ ಸರ್ವಜ್ಞರು ಹಲವಾರು ಪ್ರಚಾರವನ್ನು ಮಾಡಿದ್ದಾರೆ. ಮುಂದಿನ ಪೀಳಿಗೆಗೆ ಒಬ್ಬ ಮಹಾನ್ ಕವಿಯ ಕಥೆಯನ್ನು ತಿಳಿಸಿ ಕೊಡಬೇಕಾಗಿದೆ. ನಗರದ ಬಡಾವಣೆಗಳಲ್ಲಿ ಹಾಗೂ ನಗರದ ವೃತ್ತಗಳಲ್ಲಿಸಂತ ಕವಿ ಸರ್ವಜ್ಞರಂತಹ ಮಹನೀಯರ ಹೆಸರನ್ನೀಡಬೇಕೆಂದು ಹೇಳಿದರು.
ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಾಯಕ ಶಿಕ್ಷಕ ಕೆ.ಎಸ್.ಮಧುಸೂಧನ್ ಮಾತನಾಡಿ ಪ್ರತಿನಿತ್ಯ ಪ್ರಪಂಚದಲ್ಲಿ ಹುಟ್ಟಿ ಬೆಳೆದು ಸಾಕಷ್ಟು ಜನ ಇದ್ದು ಹೋಗುತ್ತಾರೆ ಆದರೆ ಕೆಲವೇ ಬೆರಳಣಿಕೆಯಷ್ಟು ಜನರನ್ನು ಮಾತ್ರ ನಾವು ನೆನಪಿಸಿಕೊಳ್ಳುತ್ತೇವೆ ಇದರ ಜೊತೆಗೆ ತಲೆಮಾರುಗಳಿಂದ ನೆನಪಿಸಿಕೊಳ್ಳುತ್ತ ಬರುವ ಮಹಾನೀಯರುಗಳಲ್ಲಿ ಸಂತ ಕವಿ ಸರ್ವಜ್ಞರು ಸಹ ಒಬ್ಬರಾಗಿದ್ದಾರೆ ಎಂದು ಹೇಳಿದರು.
ಕುಂಬಾರ ಸಂಘದ ಅಧ್ಯಕ್ಷ ಎಚ್.ಎಸ್.ಪ್ರಕಾಶ್ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಅತಿಥಿಗಳಾದ ಕೆ.ಪಿ.ವೆಂಕಟೇಶ್, ಬಾಲಕೃಷ್ಣ, ಡಾ.ಗೌರಿ ಶೆಟ್ಟಿ, ವಾಸು, ಮಂಜುನಾಥ್, ಯಮುನಾ ನಾಗರಾಜ್, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
