ವಿಕಸಿತ ಭಾರತಕ್ಕೆ ಪೀಣ್ಯ ಕೈಗಾರಿಕೆಗಳ ಕೊಡುಗೆ ಅಗತ್ಯ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ವಿಜಯ ದರ್ಪಣ ನ್ಯೂಸ್……
ವಿಕಸಿತ ಭಾರತಕ್ಕೆ ಪೀಣ್ಯ ಕೈಗಾರಿಕೆಗಳ ಕೊಡುಗೆ ಅಗತ್ಯ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಬೆಂಗಳೂರು: ಜಗತ್ತಿಗೆ ಬೇಕಾದ ಬೇಡಿಕೆಯ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಬೇಕು ಕೌಶಲ್ಯ ಆಧಾರಿತ ಉದ್ಯೋಗ ಜಾಸ್ತಿಯಾಗಲಿದೆ. ನವೀಕರಿಸಬಹುದಾದ ಶಕ್ತಿ ಮತ್ತು ಎಐ ಟೆಕ್ನಾಲಜಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ’ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಪೀಣ್ಯ ಕೈಗಾರಿಕಾ ಸಂಘದ ಸಭಾಂಗಣದಲ್ಲಿ 2026 ರ ಕೇಂದ್ರ ಬಜೆಟ್ ಘೋಷಣೆ ನಂತರದ ಕೈಗಾರಿಕಾ ಸದಸ್ಯರೊಂದಿಗೆ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.
2047ಕ್ಕೆ ವಿಕಸಿತ ಭಾರತದ ಕಲ್ಪನೆ ಇಟ್ಟುಕೊಂಡು ಬಜೆಟ್ ನೀಡಲಾಗಿದೆ. ಏರ್ಪೋರ್ಸ್ ಮತ್ತು ಏರ್ ಕ್ರಾಫ್ಟ್ ಗೆ ಒತ್ತು ನೀಡಲಾಗಿದೆ. ದೇಶದ ಮೂರು ಕಡೆ ದೊಡ್ಡ ಕೆಮಿಕಲ್ ಪಾರ್ಕ್ ಮಾಡಲಾಗುತ್ತಿದೆ. ಕೌಶಲ್ಯಕ್ಕೆ ಹೆಚ್ಚು ಆದ್ಯತೆ ನೀಡಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಆರು ಪಟ್ಟು ಜಾಸ್ತಿಯಾಗಿದೆ ಹೆಚ್ಚು ಉತ್ಪಾದನೆ ದೇಶದಲ್ಲಿ ಆಗಬೇಕು. ಹೆಚ್ಚು ಹೆಚ್ಚು ರಫ್ತು ಆಗಬೇಕು. ಆತ್ಮ ನಿರ್ಭರತೆಯ ಮೂಲಕ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲಾಗಿದೆ ಎಂದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸಿಎಂ ಬದಲಾವಣೆಯ ಗೊಂದಲದ ಮಧ್ಯೆ ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ಕುಸಿದಿದೆ. ಅಭಿವೃದ್ಧಿ ಕುಂಠಿತವಾಗಿದೆ ಅನೇಕ ಕಡೆ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ನೀರಿನ ಸಮಸ್ಯೆ, ರಸ್ತೆ ಸಮಸ್ಯೆ ಜಾಸ್ತಿ ಇದೆ’,ಎಂದು ತಿಳಿಸಿದ ಅವರು, ಬಿಜೆಪಿ ಶಾಸಕ ಚಂದ್ರು ಲಮಾಣಿ ಲಂಚಾವತಾರದ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಲಂಚ ಪಡೆದದ್ದು ಸಾಬೀತಾದರೆ ಕಾನೂನು ಪ್ರಕಾರ ಅವರಿಗೆ ಶಿಕ್ಷೆಯಾಗುತ್ತೆ ಎಂದು ಹೇಳಿದರು.
ಇದೇ ವೇಳೆ ದಲಿತ ಸಿಎಂ ಕೂಗಿನ ಬಗ್ಗೆ ಮಾತನಾಡಿದ ಅವರು, ಸಿಎಂ ಬದಲಾವಣೆಯ ವಿಷಯ ಬಂದಾಗ ಮಾತ್ರ ದಲಿತ ಸಿಎಂ ವಿಷಯ ಮುನ್ನೆಲೆಗೆ ಬರುತ್ತದೆ, ಅವರಿಗೆ ದಲಿತ ಸಿಎಂ ಮಾಡುವ ಬದ್ಧತೆ ಇಲ್ಲ ಎಂದು ತಿಳಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ನಮ್ಮ ಕೈಗಾರಿಕೆಗಳ ಮುಂದಿನ ಭವಿಷ್ಯ ಎಐ, ರೋಬೋಟ್ ಟೆಕ್ನಾಲಜಿಯಲ್ಲಿ ಇರಲಿದೆ. ಇಎಸ್ಐ ಆಸ್ಪತ್ರೆ ಹಾಗೂ ಇಪಿಎಫ್ ಯೋಜನೆಗಳು ಎಲ್ಲಾ ಸಾರ್ವಜನಿಕರಿಗೂ ದೇಶದ ನಾಲ್ಕು ಕಡೆ ಆರಂಭವಾಗಲಿದೆ. ವಿಕಸಿತ ಭಾರತ ರೋಜಗಾರ್ ಯೋಜನೆ ಆರಂಭವಾಗಿವೆ. ಇನ್ನು ಅನೇಕ ಯೋಜನೆಗಳು, ಸಬ್ಸಿಡಿ ಲೋನುಗಳು ಲಭ್ಯವಿದೆ. ಕೈಗಾರಿಕೆಗಳ ಜಿ.ಎಸ್.ಟಿ ಮುಂತಾದ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಶಾಸಕ ಎಸ್ ಮುನಿರಾಜು ಮಾತನಾಡಿ, ಪ್ರಧಾನಿ ಮೋದಿ ಅವರ ಪರಿಕಲ್ಪನೆಯ ಮೇಕ್ ಇನ್ ಇಂಡಿಯಾ ಅಡಿ ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದ್ದು ನನ್ನ ಕ್ಷೇತ್ರದಲ್ಲಿ ಅತಿ ಹೆಚ್ಚು ಭಾಗ ಕೈಗಾರಿಕಾ ಪ್ರದೇಶವಿದ್ದು ಕೇಂದ್ರ ಸರ್ಕಾರದಲ್ಲಿ ನಮ್ಮ ರಾಜ್ಯದ ಸಚಿವರು ಇದ್ದು ಅವರ ಸಮಸ್ಯೆಗಳನ್ನು ಗಮನಕ್ಕೆ ತರುವ ಮೂಲಕ ಸಮಸ್ಯೆ ಬಗೆಹರಿಸಲು ಶ್ರಮಿಸುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಸಂಘದ ಅಧ್ಯಕ್ಷ ಡಿ.ಪಿ ದಾನಪ್ಪ ಅವರು ಕೇಂದ್ರ ಸಚಿವರಿಗೆ ಸಮಸ್ಯೆಗಳು ಮತ್ತು ಕೆಲವೊಂದು ಬೇಡಿಕೆಗಳ ಮನವಿ ಸಲ್ಲಿಸಿದರು. ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಪ್ರಹ್ಲಾದ್ ಜೋಶಿ ಬಗೆಹರಿಸುವ ಪ್ರಯತ್ನದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಪಿ ದಾನಪ್ಪ, ಹಿರಿಯ ಉಪಾಧ್ಯಕ್ಷ ಪಾಟೀಲ್ ಡಿ.ಎಚ್. ಉಪಾಧ್ಯಕ್ಷ ಚಂದ್ರಶೇಖರ್, ಜಂಟಿ ಕಾರ್ಯದರ್ಶಿ ಬಿ ತಿಮ್ಮಯ್ಯ, ಖಜಾಂಚಿ ಎ.ಪಿ. ಸೆಲ್ವಕುಮಾರ್, ಜಂಟಿ ಖಜಾಂಚಿ ರಂಗಸ್ವಾಮಿ ಎಂ.ಆರ್. ಗೌರವ ಕಾರ್ಯದರ್ಶಿ ಬೀರಪ್ಪ ಬಿ ಇದ್ದರು.
