--Ads--

ಒಡಲಿನ ನೋವಿಗೆ ಮಡಿಲಿನ ಸಾಂತ್ವನ : ಜಯಶ್ರೀ .ಜೆ. ಅಬ್ಬಿಗೇರಿ

On: February 26, 2026 1:35 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಒಡಲಿನ ನೋವಿಗೆ ಮಡಿಲಿನ ಸಾಂತ್ವನ

ಮೊನ್ನೆ ಪೇಟೆಯಲ್ಲಿ ಗೆಳತಿ ಸುಮತಿ ಬಹಳ ದಿನಗಳ ನಂತರ ತನ್ನ ಮಗಳೊಂದಿಗೆ ಭೇಟಿಯಾದಳು. ಮುಖದಲ್ಲಿ ಮೊದಲಿದ್ದ ಗೆಲುವು ಕಾಣಲಿಲ್ಲ. ನಗೆಯೂ ಮುಖದಿಂದ ದೂರವೇ ಉಳಿದಿತ್ತು. ನಾನೇ ಒತ್ತಾಯಿಸಿ ಹೊಟೆಲ್ಲಿಗೆ ಕರೆದೊಯ್ದೆ ಸದಾ ಉತ್ಸಾಹದ ಕಾರಂಜಿಯಂತೆ ಚಿಮ್ಮುತ್ತಿದ್ದ ನೀನು ಇದೇಕೆ ಇಷ್ಟು ಸಪ್ಪಗಾಗಿ ಬಿಟ್ಟಿದ್ದಿಯಾ? ಎಂದಾಗ ಕಣ್ಣಂಚಿನಲ್ಲಿ ನೀರು ತಂದು ತನ್ನ ಪ್ರವರ ಬಿಚ್ಚಿಟ್ಟಳು. ಇಬ್ಬರೂ ದುಡಿತೀವಿ ಹೀಗಾಗಿ ಮನೆಯಲ್ಲಿ ಎಲ್ಲದಕ್ಕೂ ಆಳು. ಹಣಕ್ಕಂತೂ ಕೊರತೆಯಿಲ್ಲ.ಮುದ್ದಾದ ಮಗಳು ಮನೆಯಂಗಳದಲ್ಲಿ ನಲಿದಾಡ್ತಾಳೆ. ಇವರದೇ ಸಮಸ್ಯೆ ಆಗಿದೆ.ಎಂದಳು.

ಇಷ್ಟೆಲ್ಲಾ ಇರೋವಾಗ ನಿಮ್ಮ ಪತಿದೇವರದು ಏನು ಸಮಸ್ಯೆ ಎಂದು ಕುತೂಹಲದಿಂದ ಪ್ರಶ್ನಿಸಿದೆ ಅದಕ್ಕೆ ಸುಮತಿ,ಮೊದಲೆಲ್ಲ ಚೆನ್ನಾಗಿಯೇ ಇದ್ದ ರಮೇಶ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ಪಾರ್ಟಿ ಕ್ಲಬ್ ಪಬ್‌ನ್ನು ಮನರಂಜನೆಗೆಂದು ರೂಢಿಸಿಕೊಂಡು ಇತ್ತೀಚಿಗೆ ಅತಿಯೆನಿಸುವಷ್ಟು ಕುಡಿದು ಮನೆಗೆ ತಡರಾತ್ರಿ ಬಂದು ಸುಮ್ಮನೆ ಮಲಗಿ ಬಿಡ್ತಾರೆ. ಮೊದಲೇ ಮಾತು ಕಮ್ಮಿ ಈಗಂತೂ ಮನೆಯಲ್ಲಿ ಮಾತಿಲ್ಲ ಕತೆಯಿಲ್ಲ.ದಿನಕ್ಕೆ ಒಂದೊ ಎರಡೊ ಮಾತನಾಡಿದರೆ ಹೆಚ್ಚು ನಾನಾಗಲೇ ಮೇಲೆ ಬಿದ್ದು ಮಾತನಾಡಿಸಿದಾಗ ಹೂಂ ಹಾಂ ಅಷ್ಟೆ, ಸಿಟ್ಟಿಗೆದ್ದು ಜೋರಾಗಿ ಕಿರುಚಿದರೆ ಏನೂ ಪ್ರಯೋಜನವಿಲ್ಲ. ನನಗೇನಾಗಿಲ್ಲ ನಾನು ಇರೋದೆ ಹೀಗೆ ಮೊದಲಿನಿಂದ ಹೀಗೆ ಇದ್ದೀನಿ ನಿನಗೆ ಹಾಗೆನಿಸ್ತಿದೆ ಅಂತ ಹೇಳುತ್ತ ಜಾಗ ಖಾಲಿ ಮಾಡ್ತಾರೆ.ಸಂಬಂಧಿಕರ ಮದುವೆ ಮುಂಜವಿಗಂತೂ ಜಪ್ಪಯ್ಯ ಅಂದರೂ ಬರೋದಿಲ್ಲ. ಮಗಳ ಜೊತೆ ಮಾತು ಅಷ್ಟಕ್ಕಷ್ಟೆ, ದೈಹಿಕ ಸುಖ ಬೇಕೆಂದಾಗ ಬಳಿ ಬರುತ್ತಾರೆ.

ಇಂಥ ಮದುವೆಯಿಂದ ಪಡೆಯುತ್ತಿರುವದು ಏನೂ ಇಲ್ಲ. ನನ್ನಲ್ಲಿರುವ ಪ್ರೀತಿಯ ಭಾವನೆಗಳೆಲ್ಲ ಬತ್ತಿ ಹೋಗುತ್ತಿವೆ. ದಿನ ದಿನಕ್ಕೆ ಬದುಕು ಕ್ರೂರವೆನಿಸುತ್ತಿದೆ. ಏನು ಮಾಡಲೂ ತೋಚುತ್ತಿಲ್ಲ. ಕೋರ್ಟ್ ಕಛೇರಿ ಮೆಟ್ಟಿಲು ಹತ್ತಿದರೆ ಮನೆ ಮರ್ಯಾದೆ ಪ್ರಶ್ನೆ. ದಿನವೂ ವಿಷ ನುಂಗತಿದಿನಿ. ಮಗಳ ಮುಖ ನೋಡಿ ಅವರೊಂದಿಗೆ ದಿನ ದೂಡತಿದಿನಿ. ಎಂದಾಗ ಮಗಳು ಸುಮತಿಯ ಕಣ್ಮರೆಸುತ್ತ ಅವ್ವಾ,ಅಪ್ಪ ಮೊದಲಿನಿಂತೆ ಆಗ್ತಾರೆ ಬಿಡವ್ವ ನೀ ಆಳಬೇಡ ಎಂದಳು. ಸುಮತಿ ಮಗಳ ಕೆನ್ನೆಗೆ ಮುತ್ತಿಕ್ಕಿ ಕಿರುನಗೆ ಬೀರಿದಳು.

ತಾಯಿಯ ಖಾಸಗಿ ಜಗತ್ತು ಹೆಣ್ಣುಮಕ್ಕಳಿಗೆ ಹೆಚ್ಚು ಅರ್ಥವಾಗುತ್ತದೆ.ತಾಯಿ ಮಗಳ ನಡುವಿರುವ ಸಲುಗೆ, ಮುಕ್ತವಾಗಿ ಹಂಚಿಕೊಳ್ಳುವ ಮನದಾಳದ ಮಾತುಗಳು ಹೆಣ್ಣು ಹೆತ್ತ ತಾಯಂದಿರಿಗೆ ಅದರ ಸೌಖ್ಯ ತಿಳಿಯೋದು. ಹೆಣ್ಣು ಅಂದರೆ ಹುಣ್ಣು ಅಂತ ತಿಳಿಯೋ ಜನರೇ ಜಾಸ್ತಿ ಆದರೆ ಹೆಣ್ಣು ಮಕ್ಕಳು ತೋರುವ ಆತ್ಮೀಯತೆ ಆಪ್ತತೆ ಮನಸ್ಸಿಗೆ ಅತಿಯಾದ ಆನಂದ ಮತ್ತು ಹಿತ ನೀಡುವದಂತೂ ಖಚಿತ. ಎಷ್ಟೋ ಬಾರಿ ಗಂಡನೊಂದಿಗೆ ಹಂಚಿಕೊಳ್ಳಲಾಗದ ಮನದ ದುಗುಡಗಳನ್ನು ಅವ್ವನೊಂದಿಗೆ ಹಂಚಿಕೊಂಡು ನಿರಾಳವಾಗಿ ಮತ್ತೆ ಜೀವನೋತ್ಸಾಹ ತುಂಬಿಕೊಳ್ಳುತ್ತಾಳೆ.

ರಶ್ಮಿಗೆ ತಾಯಿಯೇ ಜಗತ್ತು ಮಗಳ ಬದುಕು ಹಸನಾಗಿರಲೆಂದು ಬಯಸುವ ತಾಯಿ ಮಗಳ ಬದುಕಿನಲ್ಲಿ ಸಣ್ಣ ಬಿರುಕು ಬಿಡುತ್ತಿದೆ ಎಂದು ತಿಳಿದರೆ ಎದೆ ಒಡೆದುಕೊಳ್ಳುತ್ತಾಳೆಂದು ರಶ್ಮಿ ಅತ್ತೆಯ ಮನೆಯಲ್ಲಿ ಕೊಡುವ ಕಿರುಕುಳಗಳನ್ನು ಗಂಡನ ವರ್ತನೆಯಲ್ಲಾದ ಬದಲಾವಣೆಯನ್ನು ಬಾಯಿಮುಚ್ಚಿ ಸಹಿಸಿಕೊಳ್ಳುತ್ತಿದ್ದಾಳೆ. ಕತ್ತಲ ಕೋಣೆಯಲ್ಲಿ ಕಣ್ಣಿರು ಹರಿಸುತ್ತಿದ್ದಾಳೆ. ಇದು ರಶ್ಮಿಯ ತಾಯಿಗೆ ತಿಳಿದಾಗ ದೇವರು ಒಳ್ಳೆಯವರನ್ನೇ ಪರೀಕ್ಷಿಸುತ್ತಾನೆ ಅಂತ ನೀನೇ ಹೇಳತಿದ್ದೆಲ್ಲವ್ವಾ ಈಗ ಕಷ್ಟದ ಕಾಲ ಮುಂದೊಂದು ದಿನ ಸುಖ ಬಂದೇ ಬರುತ್ತದೆ. ಎಂದು ನೊಂದ ತಾಯಿಗೆ ಸಾಂತ್ವನದ ಮಾತುಗಳನ್ನಾಡುತ್ತ ಉಕ್ಕಿ ಬರುವ ದುಃಖವನ್ನು ತಡೆಯುತ್ತಾಳೆ.

ಹೆಣ್ಣಿಗೆ ತವರೆಂದರೆ ಪಂಚ ಪ್ರಾಣ ಅದರ ನಂಟನ್ನು ಕಳೆದುಕೊಳ್ಳಲು ಅವಳಿಷ್ಟ ಪಡುವದಿಲ್ಲ. ಮಗಳನ್ನು ತಮ್ಮನಿಗೋ ಅಣ್ಣನ ಮಗನಿಗೋ ಧಾರೆಯೆರೆದು ತವರನ್ನು ಉಳಿಸಿಕೊಳ್ಳಲು ಹಂಬಲಿಸುತ್ತಾಳೆ. ಹೀಗೆ ತವರನ್ನು ಉಳಿಸಿಕೊಳ್ಳಲು ಶಾಂತಮ್ಮ ಮಗಳನ್ನು ಅಣ್ಣನ ಮಗನಿಗೆ ಕೊಟ್ಟು ತನ್ನ ತವರನ್ನು ಉಳಿಸಿಕೊಳ್ಳುವಲ್ಲಿ ಗೆದ್ದಿದ್ದಳು. ಅಳಿಯ ಬೇರೊಬ್ಬಳೊಂದಿಗೆ ಅನೈತಿಕ ಸಂಬಂಧದಲ್ಲಿ ತೊಡಗಿ ಮಗಳಿಗೆ ಕೊಡುವ ಚಿತ್ರ ಹಿಂಸೆ ಕಂಡು ಕಂಗಾಲಾಗಿದ್ದಾಳೆ. ತನ್ನ ಮಗಳ ಬಾಳನ್ನು ತಾನೇ ಹಾಳು ಮಾಡಿದನೆಂದು ನಿಂತ ನೆಲವೇ ಬಾಯಿ ಬಿಟ್ಟರೆ ಎಲ್ಲಿ ಹೋಗೋದು? ಎಂದು ಹಾಸಿಗೆ ಹಿಡಿದು ಕೊರಗುತ್ತಿರುವ ತಾಯಿಗೆ ಮದುವೆ ಅನ್ನೋದು ಸ್ವರ್ಗದಲ್ಲಾಗಿರುತ್ತದೆ ಇದರಲ್ಲಿ ನಿನ್ನದೇನು ತಪ್ಪಿಲ್ಲವ್ವಾ ಎಂದು ಶಾಂತಮ್ಮನಿಗೆ ಮಗಳು ಸವಿತಾ ತನ್ನ ದುಃಖವನ್ನೆಲ್ಲ ಮರೆಮಾಚಿ ಸುಖ ದುಃಖಗಳನ್ನು ಸಮನಾಗಿ ನೋಡಬೇಕೆಂದು, ಇಂದು ದುಃಖವಾದರೆ ನಾಳೆ ಸುಖ ಎಂದು ತತ್ವಜ್ಞಾನಿಯಂತೆ ಮಾತನಾಡುತ್ತ ಬೇಗನೆ ಹುಷಾರಾಗುವಂತೆ ಸೂಚಿಸುತ್ತಾಳೆ.

ಒಬ್ಬಳೇ ಮಗಳೆಂದು ತುಂಬಾ ಪ್ರೀತಿಯಿಂದ ಸಾಕಿ ಸಲುಹಿ ಮದುವೆ ಮಾಡಿ ಅಳಿಯನನ್ನು ಮನೆಗೆ ಕರೆ ತಂದ ರತ್ನಮ್ಮ ಅಳಿಯನಿಗೆ ದಿನನಿತ್ಯ ಹಾಲು ತುಪ್ಪ ಸುರಿದರೂ ಆತನ ದರ್ಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.ಮನೆಗೆ ಸಂಬಂಧಿಕರು ಆಪ್ತ ಸ್ನೇಹಿತರು ಬಂದರಂತೂ ದರ್ಪ ಅತಿರೇಕಕ್ಕೇರುತ್ತೆ. ಇದು ಮಗಳಿಗೂ ನುಂಗಲಾರದ ತುತ್ತಾಗಿದೆ. ಎಷ್ಟೋಸಾರಿ ಆತನ ವರ್ತನೆಗೆ ತಾಯಿ ಮಗಳ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಅಪ್ಪ ದುರ್ವ್ಯಸನದಲ್ಲಿ ಮುಳುಗಿರದಿದ್ದರೆ ಅಳಿಯನ ದರ್ಪಕ್ಕೆ ಕಡಿವಾಣ ಹಾಕಬಹುದಿತ್ತೆನೋ ಎಂದು ಮನದಲ್ಲೇ ಮರ ಮರ ಮರಗುತ್ತಾಳೆ.

ತನ್ನ ಒಡಲಿನಲ್ಲಿ ಬೆಂಕಿ ಇಟ್ಟುಕೊಂಡು ಕತ್ತಲಾದ ಬಾಳಿಗೆ ಬೆಳಕು ಬಂದೇ ಬರುತ್ತದೆಯೆಂದು ಭರವಸೆಯ ಮಾತನಾಡಿ ಅವ್ವನಿಗೆ ಸಂತೈಸುತ್ತಾಳೆ.

ಚೈನಿ ಚೆನ್ನಪ್ಪನ ಹಾಗೆ ಡ್ರೆಸ್‌ ಮಾಡಿಕೊಂಡು ಮೈತುಂಬ ಧಿಮಾಕು ತುಂಬಿಕೊಂಡು ನಯಾಪೈಸೆ ದುಡಿದು ತರಲಾರದೆ ಹೆಂಡತಿ ಕೂಲಿ ಮಾಡಿ ತಂದ ಹಣವನ್ನು ಲಪಟಾಯಿಸಿ ತನ್ನ ಶೋಕಿಗೆ ಬಳಸುತ್ತಾನೆ. ಭೀಮಪ್ಪ ಓದೋ ಮಕ್ಕಳಿಗೆ ಊರೆಲ್ಲ ಸಾಲ ಮಾಡಿ ಸಾಲ ತೀರಿಸೋ ಚಿಂತೆಗೆ ಗಂಗವ್ವನ ಕೈಯಲ್ಲಿ ಬಿರುಕು ಬಿಟ್ಟ ಗಾಯಗಳಾಗಿದ್ದರೂ ದಿನ ಬೆಳಗಾದರೆ ಕೂಲಿ ತಪ್ಪುವದಿಲ್ಲ. ಅವ್ವನ ಪಾಡು ಕಂಡು ಮಮ್ಮಲ ಮರಗುವ ಹದಿನಾಲ್ಕರ ಪೋರಿ ಗೌರಿ ನಾನು ಓದಿ ನಿನ್ನ ಕಷ್ಟವನ್ನು ನೀಗಿಸುತ್ತೇನೆಂದು ತಾಯಿಯ ಕಂಗಳಲ್ಲಿ ಆಶಾ ಕಿರಣ ಮೂಡಿಸಿ ಮುಖದಲ್ಲಿ ನಗು ತುಂಬುತ್ತಾಳೆ.

ಇವು ಕೆಲವು ಉದಾಹರಣೆಗಳಷ್ಟೆ ಇಂಥ ಒಡಲಿನ ನೋವುಗಳು ಸಮಾಜದಲ್ಲಿ ಭರಪೂರ ಎನ್ನುವಂತೆ ತುಂಬಿವೆ ತಾನುರಿದು ಇತರರಿಗೆ ಬೆಳಕು ನೀಡುವ ದೀಪದಂತೆ ದುಃಖದ ಬೆಂಕಿಯನ್ನು ತನ್ನ ಸೆರಗಲ್ಲಿ ಕಟ್ಟಿಕೊಂಡು ಒಡಲಲ್ಲಿ ಹುಟ್ಟಿ ಮಡಿಲಲ್ಲಿ ಬೆಳೆದ ಮಗಳು ತಾಯಿಗೆ ತಾಯಿಯಾಗಿ ಸಂತೈಸುವ ಪರಿ ಮಾನವ ಕುಲದ ಮನ ಕಲುಕುವಂಥದ್ದು. ತನ್ನಲ್ಲಿ ನೋವಿದ್ದರೂ ಒಡಲಿನ ನೋವಿಗೆ ಮಡಿಲಿನ ಸಾಂತ್ವನ ಹೇಳುತ್ತ ನಲಿವಿನ ಸಂತಸದ ಭರವಸೆ ತುಂಬುವ ಪರಿ ಮೆಚ್ಚುವಂಥದ್ದು.

ಲೇಖನ: ಜಯಶ್ರೀ .ಜೆ. ಅಬ್ಬಿಗೇರಿ

WhatsApp

Join Now

Telegram

Join Now

Instagram

Join Now