ಬೀದಿ ಬದಿ ವ್ಯಾಪಾರಿಗಳನ್ನು ಬಲವಂತವಾಗಿ ತೆರವುಗೊಳಿಸುವಂತಿಲ್ಲ : ಸಿ. ರಂಗಸ್ವಾಮಿ
ವಿಜಯ ದರ್ಪಣ ನ್ಯೂಸ್…..
ಬೀದಿ ಬದಿ ವ್ಯಾಪಾರಿಗಳನ್ನು ಬಲವಂತವಾಗಿ ತೆರವುಗೊಳಿಸುವಂತಿಲ್ಲ : ಸಿ. ರಂಗಸ್ವಾಮಿ

ಶಿಡ್ಲಘಟ್ಟ : ಬೀದಿ ಬದಿ ವ್ಯಾಪಾರಿಗಳು ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ, ಎಲ್ಲಾ ವರ್ಗದವರೂ ಸೇರಿ ಬೀದಿ ಬದಿ ವ್ಯಾಪಾರಿ ಎಂಬ ಒಂದೇ ಗುರುತನ್ನು ಹೊಂದಿದ್ದೇವೆ ಬೀದಿ ಬದಿ ವ್ಯಾಪಾರಿಗಳನ್ನು ಬಲವಂತವಾಗಿ ತೆರವುಗೊಳಿಸುವಂತಿಲ್ಲ ಎಂದು ಭಾರತದ ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ಹೈಕೋರ್ಟ್ ಸ್ಪಷ್ಟ ಆದೇಶ ನೀಡಿವೆ ಎಂದು ಬೀದಿ ಬದಿಯ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಸಿ.ರಂಗಸ್ವಾಮಿ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಏರ್ಪಡಿಸಿದ್ದ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಹಾಗೂ ಸಂಘದ 6ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಅವರು ಮಾತನಾಡಿದರು.
ಮಹಾರಾಷ್ಟ್ರದ ಪ್ರಕರಣವೊಂದರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ದಂತೆ 92ನೇ ಕಾಯಿದೆಯಡಿ ಸುಪ್ರೀಂ ಕೋರ್ಟ್ ವ್ಯಾಪಾರಿಗಳ ಪರವಾಗಿ ತೀರ್ಪು ನೀಡಿದೆ ಈ ಕಾಯಿದೆಯಡಿ ಪ್ರತಿಯೊಬ್ಬ ವ್ಯಾಪಾರಿಯೂ ಕಾನೂನು ಬದ್ದವಾಗಿ, ಭಯವಿಲ್ಲದೆ ವ್ಯಾಪಾರ ನಡೆಸಬಹುದು ಎಂದು ಹೇಳಿದರು.
ಬೀದಿ ಬದಿ ವ್ಯಾಪಾರಿಗಳು ಜಾಗೃತರಾಗಿ ಸಂಘಟಿತರಾದಾಗ ಮಾತ್ರ ಸರ್ಕಾರದಿಂದ ಸಿಗುವಂತಹ ಎಲ್ಲಾ ಸವಲತ್ತುಗಳು ಸಕಾಲದಲ್ಲಿ ಸಿಗಲು ಸಾಧ್ಯ ಈ ನಿಟ್ಟಿನಲ್ಲಿ ನಮ್ಮ ಸಂಘದಿಂದ ಜಾಗೃತಿ ಮೂಡಿಸುವ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ಬೀದಿ ಬದಿಯ ಅನೇಕ ಮಂದಿ ವ್ಯಾಪಾರಸ್ಥರು ಅನಕ್ಷರಸ್ಥರಾಗಿದ್ದು ಜಾಗೃತಿಯ ಕೊರತೆಯಿಂದ ಹಲವಾರು ಸವಲತ್ತುಗಳು ಸಕಾಲಕ್ಕೆ ಸಿಗುತ್ತಿಲ್ಲ ಎನ್ನುವ ಬೇಸರದ ನಡುವೆಯೂ ಬೀದಿ ಬದಿಯ ವ್ಯಾಪಾರಿಗಳ ತಾಲೂಕು, ಜಿಲ್ಲಾ ಸಂಘ ರಚನೆಯಾದ ಮೇಲೆ ಸಮಸ್ಯೆಗಳು ಒಂದೊಂದಾಗಿ ನಿವಾರಣೆಯಾಗುತ್ತಿವೆ ಎಂದು ವಿವರಿಸಿದರು.
ದೇಶಾದ್ಯಂತ ಸುಮಾರು 1 ಕೋಟಿ ಬೀದಿ ಬದಿ ವ್ಯಾಪಾರಿಗಳು ನೋಂದಾಯಿತರಾಗಿದ್ದು, ರಾಜ್ಯದಲ್ಲಿ 4.80 ಲಕ್ಷ ಮಂದಿ ಇದ್ದಾರೆ ಶಿಡ್ಲಘಟ್ಟದಲ್ಲಿ ಒಟ್ಟು 1,180 ಮಂದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬೀದಿ ಬದಿ ವ್ಯಾಪಾರಿಗಳಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿವೆ ವಿಶೇಷವಾಗಿ “ಪ್ರಧಾನಮಂತ್ರಿ ಸ್ವನಿಧಿ ಯೋಜನೆ”ಯಡಿ ಎಂಟು ವಿಭಿನ ಯೋಜನೆಗಳಿದ್ದು, ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಪಡೆಯಬಹುದು, ಕೇವಲ 12 ರೂ.ಗಳು ಮತ್ತು 440 ರೂ.ಗಳ ಪ್ರೀಮಿಯಂ ನಲ್ಲಿ ಸರ್ಕಾರವೇ ವಿಮೆ ಸೌಲಭ್ಯ ಒದಗಿಸುತ್ತಿದೆ, ವ್ಯಾಪಾರಿಗಳು ಈ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಕಾವ್ಯಶ್ರೀ, ಬೀದಿ ಬದಿ ವ್ಯಾಪಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀರಾಮ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ, ಮಾನವ ಹಕ್ಕುಗಳ ಸಮಿತಿ ಸಂಸ್ಥಾಪಕ ಅಧ್ಯಕ್ಷ ಸಿ.ಎಂ.ಬೈರೇಗೌಡ, ನಗರಸಭೆ ಅಧಿಕಾರಿ ಸುಧಾ, ಮುಖಂಡರಾದ ಡಾ. ಸತ್ಯನಾರಾಯಣರಾವ್, ವಿಸ್ಡಂ ನಾಗರಾಜ್, ಮಧುಲತಾ, ರೈತ ಸಂಘದ ರವಿಪ್ರಕಾಶ್, ಪ್ರದೀಪ್(ದೀಪು) ಹಾಗು ಬೀದಿ ವ್ಯಾಪಾರಿಗಳ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.
