ವಿಜಯ ದರ್ಪಣ ನ್ಯೂಸ್…..
ಪೊಲೀಸರ ಭರ್ಜರಿ ಕಾರ್ಯಾಚರಣೆ: ವಶಪಡಿಸಿಕೊಂಡ 220 ಮೊಬೈಲ್ ವಾರಸುದಾರರಿಗೆ ಹಸ್ತಾಂತರ

ತಾಂಡವಪುರ ಏಪ್ರಿಲ್ 7 ಕಳೆದ ಒಂದು ತಿಂಗಳಲ್ಲಿ ಮೈಸೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ 220 ಮೊಬೈಲ್ ಫೋನ್ಗಳನ್ನು ಪತ್ತೆ ಮಾಡಲಾಗಿದ್ದು, 20ಲಕ್ಷ ರೂ. ಮೌಲ್ಯದ ಫೋನ್ಗಳನ್ನು ಮಂಗಳವಾರ ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು.
ಈ ಸಂಬಂಧ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಿಐಆರ್ ಪೋರ್ಟಲ್ನಲ್ಲಿ ಇ-ಲಾಸ್ಟ್ ಮೂಲಕ ದಾಖಲಾಗಿದ್ದ ಮೊಬೈಲ್ ಫೋನ್ಗಳನ್ನು ಪತ್ತೆ ಹಚ್ಚಲಾಗಿದೆ. ಕಳುವಾದ ಮೊಬೈಲ್ನಿಂದ ಯಾವುದೇ ಸಿಮ್ ಬಳಸುತ್ತಿದ್ದರೂ ಪತ್ತೆ ಮಾಡಬಹುದಾಗಿದೆ. ಸಾರ್ವಜನಿಕರು ಯಾವ ಸಂದರ್ಭದಲ್ಲಿ ಮೊಬೈಲ್ ಕಳೆದುಕೊಂಡರು ತಿಳಿಸುವಂತೆ ಹೇಳಿದರು.
ಓರ್ವ ಪೆಡ್ಲರ್ ಬಂಧನ: ಮೈಸೂರು ನಗರ ಪೊಲೀಸರು ಕುಖ್ಯಾತ ಗಾಂಜಾ ಪೆಡ್ಲರ್ ಒಬ್ಬನನ್ನು ಬಂಧಿಸಿ, ಆತನನ್ನು ಬಳ್ಳಾರಿ ಜೈಲಿಗೆ ಅಟ್ಟಿದ್ದಾರೆ. ಮಂಡಿ ಮೊಹಲ್ಲಾದ ನಿವಾಸಿ ಇರ್ಫಾನ್ ಪಾಷಾ ಅಲಿಯಾಸ್ ಬಟಾಣಿ ಬಂಧಿತ ಆರೋಪಿ. ಈತನ ವಿರುದ್ಧ ಮಾದಕ ವಸ್ತು ಮಾರಾಟ, ಸಂಗ್ರಹ, ಸಾಗಾಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಪಿಐಟಿ ಎನ್ಡಿಪಿಎಸ್-1988 ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಕಾಯ್ದೆಯಡಿ ಮೈಸೂರಿನಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ ಎಂದು ತಿಳಿಸಿದರು.
ರೂಢಿಗತ ಗಾಂಜಾ ಪೆಡ್ಲರ್ ಆಗಿದ್ದ ಇರ್ಫಾನ್ ಪಾಷಾ, ತನ್ನ 19ನೇ ವಯಸ್ಸಿನಿಂದಲೇ ಮಾದಕ ದ್ರವ್ಯಗಳ ಮಾರಾಟ, ಸಂಗ್ರಹ, ಸಾಗಣೆ, ಸರಬರಾಜು ಕೃತ್ಯಗಳಲ್ಲಿ ತೊಡಗಿದ್ದ. 2014ರಿಂದ 2025ರವರೆಗೆ ಈತನ ವಿರುದ್ಧ 9 ಪ್ರಕರಣಗಳು ದಾಖಲಾಗಿವೆ.
ಈ ಪೈಕಿ 6 ಪ್ರಕರಣಗಳಲ್ಲಿ ಜೈಲು ಶಿಕ್ಷೆಯೂ ಆಗಿದೆ. ಈತನಿಂದ ಒಟ್ಟು 28 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇರ್ಫಾನ್ ಪಾಷಾನ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ರೌಡಿಶೀಟ್ ಕೂಡ ತೆರೆದು ನಿಗಾ ವಹಿಸಲಾಗಿತ್ತು. ಆದರೂ ಈತ ತನ್ನ ದುಷ್ಕೃತ್ಯ ಮುಂದುವರಿಸಿದ್ದ. ಪೊಲೀಸರು ಭದ್ರತಾ ಪ್ರಕರಣವನ್ನೂ ದಾಖಲಿಸಿದ್ದರು.
ದಾಖಲಾಗುವ ಪ್ರಕರಣಗಳಲ್ಲಿ ಷರತ್ತು ಬದ್ಧ ಜಾಮೀನು ಪಡೆದು ಹೊರ ಬಂದು ನ್ಯಾಯಾಲಯದ ಷರತ್ತನ್ನು ಉಲ್ಲಂಘನೆ ಮಾಡಿದ್ದ. ಎನ್ಡಿಪಿಎಸ್ ಕಾಯ್ದೆಯಡಿ ಕ್ರಮ ವಹಿಸಿದ ಬಳಿಕವೂ ಚಟುಟಿಕೆಗಳನ್ನು ಮುಂದುವರಿದ್ದ ಹಿನ್ನೆಲೆಯಲ್ಲಿ ವಿಶೇಷ ಕಾನೂನು ಪಿಐಟಿ ಎನ್ಡಿಪಿಸ್-1988 ಕಾಯ್ದೆಯಡಿ ಏ.6ರಂದು ಬಂಧನ ಆದೇಶ ಹೊರಡಿಸಲಾಗಿತ್ತು.
ಆರೋಪಿಯನ್ನು ಬಂಧಿಸಿ ಬಳ್ಳಾರಿ ಕಾರಾಗೃಹದಲ್ಲಿ ಇಡಲಾಗಿದೆ ಎಂದು ವಿವರಿಸಿದರು. ಡಿಸಿಪಿಗಳಾದ ಡಾ.ಹರ್ಷ ಪ್ರಿಯಂವದ, ಕೆ.ಎಸ್.ಸುಂದರಾಜ್ ಇದ್ದರು.
ನಗರ ವ್ಯಾಪ್ತಿಯಲ್ಲಿ 30 ಪೆಡ್ಲರ್ಗಳನ್ನು ಗಡಿಪಾರು ಮಾಡಲಾಗಿದೆ. ವಿಮುಕ್ತಿ ಕಾರ್ಯಕ್ರಮದ ಮೂಲಕ ಜನರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ. ಮೈಸೂರು ನಗರದಲ್ಲಿ ಡ್ರಗ್ಸ್ ನಿರ್ಮೂಲನೆಗೆ ವಿಶೇಷ ಕಾರ್ಯಾಚರಣೆ ಮುಂದುವರಿದಿದೆ.

–ಸೀಮಾ ಲಾಟ್ಕರ್, ಆಯುಕ್ತೆ, ನಗರ ಪೊಲೀಸ್










