ವಿಜೇತ ತಂಡಗಳಿಗೆ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಬಹುಮಾನ ವಿತರಣೆ
ದೇವನಹಳ್ಳಿ: ಕುಂದಾಣ ಹೋಬಳಿಯ ಚಪ್ಪರಕಲ್ಲು ಬಳಿ ಜೆ.ಡಿ.ಎಸ್ ಪಕ್ಷದ ಸಹಯೋಗದೊಂದಿಗೆ ಎಂ.ಸಿ.ಸಿ. ಕ್ರಿಕೆಟರ್ಸ್ ವತಿಯಿಂದ ಆಯೋಜಿಸಲಾಗಿದ್ದ “ದೇವನಹಳ್ಳಿ-ದೊಡ್ಡಬಳ್ಳಾಪುರ ಮಟ್ಟದ ಭವ್ಯ ನಾಕ್ ಔಟ್ ಕ್ರಿಕೆಟ್ ಪಂದ್ಯಾವಳಿ”ಯ ಸಮಾರೋಪ ಸಮಾರಂಭ ಅತ್ಯಂತ ವೈಭವದಿಂದ ಜರುಗಿತು.
ಆಲೂರುದುದ್ದನಹಳ್ಳಿ ಹಾಗೂ ಮನಗೊಂಡನಹಳ್ಳಿ MCC ತಂಡಗಳ ನಡುವೆ ನಡೆದ ಅತ್ಯಂತ ರೋಮಾಂಚನಕಾರಿ ಅಂತಿಮ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ “ಮನಗೊಂಡನಹಳ್ಳಿ ಎಂ.ಸಿ.ಸಿ ತಂಡ”ವು ಜಯಭೇರಿ ಬಾರಿಸಿ, ಭವ್ಯ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಕೆ.ವಿ ಮಂಜುನಾಥ್ , ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್ ಮಹೇಶ್ ವಿಜೇತ ಮತ್ತು ರನ್ನರ್-ಅಪ್ ತಂಡಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, “ಗ್ರಾಮೀಣ ಭಾಗದ ಯುವ ಪ್ರತಿಭೆಗಳಿಗೆ ಇಂತಹ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿದ್ದು, ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ ಎಂ.ಸಿ.ಸಿ. ಕ್ರಿಕೆಟರ್ಸ್ ತಂಡ ಹಾಗೂ ಜೆ.ಡಿ.ಎಸ್ ಮುಖಂಡರು ಮತ್ತು ಕಾರ್ಯಕರ್ತರ ಶ್ರಮ ಶ್ಲಾಘನೀಯ” ಎಂದರು.
ಕುಂದಾಣ ಹೋಬಳಿ ಜೆಡಿಎಸ್ ಅಧ್ಯಕ್ಷ ಮನಗೊಂಡನಹಳ್ಳಿ ಜಗದೀಶ್ ಹಾಗೂ ಮುಖಂಡ ಲಕ್ಷ್ಮಣ್ ಅವರ ನೇತೃತ್ವದಲ್ಲಿ ಈ ಕ್ರೀಡಾಕೂಟ ಯಶಸ್ವಿಯಾಗಿ ಆಯೋಜನೆಗೊಂಡಿತ್ತು.
ಕಾರ್ಯಕ್ರಮದಲ್ಲಿ ದೇವನಹಳ್ಳಿ ಕ್ಷೇತ್ರದ ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮನೋಹರ್, ಯುವ ಘಟಕದ ಅಧ್ಯಕ್ಷ ಟಿ. ರವಿ, ಜೆಡಿಎಸ್ ಮುಖಂಡರಾದ ವೆಂಕಟೇಶ್ಮೂರ್ತಿ, ಕೆಂಪೇಗೌಡ, ರಘು, ಪ್ರಸನ್ನ, ಆನಂದ್, ಅಭಿ, ನಿಚ್ಚನ್, ಗೋಪಿ ಯಾದವ್, ಚಂದ್ರಣ್ಣ, ವಿಜೇತ ತಂಡದ ನಾಯಕ ಅಶೋಕ್, ರನ್ನರ್-ಅಪ್ ತಂಡದ ನಾಯಕ ಮದನ್ ಸೇರಿದಂತೆ ನೂರಾರು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.