ವಿಜಯ ದರ್ಪಣ ನ್ಯೂಸ್…..
ಮಹದೇವ ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮದ ಫ್ರೆಶೋತ್ಸವ ಕಾರ್ಯಕ್ರಮ: ಹೊಸ ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತ

ತಾವರೆಕೆರೆ : ಹೊಸಕೋಟೆ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಮಹದೇವ ಪದವಿ ಪೂರ್ವ ಕಾಲೇಜು ವತಿಯಿಂದ 2026ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಮುಗಿಸಿ ನೂತನವಾಗಿ ಪ್ರಥಮ ಪಿ.ಯು.ಸಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ ಫ್ರೆಶೋತ್ಸವ (ಸ್ವಾಗತ ಸಮಾರಂಭ) ಕಾರ್ಯಕ್ರಮವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಮಹದೇವ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ರಾಮಾಂಜಿನಿ, “ವಿದ್ಯಾರ್ಥಿಗಳು ಶಾಲಾ ಹಂತವನ್ನು ಮುಗಿಸಿ ಕಾಲೇಜು ಹಂತಕ್ಕೆ ಕಾಲಿಡುವುದು ಜೀವನದ ಮಹತ್ವದ ತಿರುವು. ಇಲ್ಲಿ ಸಿಗುವ ಸ್ವಾತಂತ್ರ್ಯವನ್ನು ಸದುಪಯೋಗಪಡಿಸಿಕೊಂಡು, ಶ್ರದ್ಧೆ ಮತ್ತು ಪರಿಶ್ರಮದಿಂದ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು” ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹೊಸಕೋಟೆ ಡಿ.ವೈ.ಎಸ್.ಪಿ ಮಲ್ಲೇಶ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, “ಯುವ ಜನತೆ ಮೊಬೈಲ್ ಮತ್ತು ದುಶ್ಚಟಗಳಿಂದ ದೂರರಿದ್ದು, ಗುರಿಯತ್ತ ಗಮನ ಹರಿಸಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣವೊಂದೇ ನಮ್ಮನ್ನು ಯಶಸ್ಸಿನ ಹಾದಿಗೆ ಕೊಂಡೊಯ್ಯುವ ಪ್ರಬಲ ಅಸ್ತ್ರ. ವಿದ್ಯಾರ್ಥಿಗಳು ಕಾನೂನನ್ನು ಗೌರವಿಸಿ, ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು” ಎಂದು ಸಲಹೆ ನೀಡಿದರು.
ಇಂದಿನ ಯುವ ಪೀಳಿಗೆಯು ಮಾದಕ ವಸ್ತುಗಳ (ಡ್ರಗ್ಸ್) ದುಷ್ಪರಿಣಾಮಗಳಿಗೆ ಬಲಿಯಾಗುತ್ತಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.ಯುವ ಜನತೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಬದಲಾಗಿ, ಉತ್ತಮ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿ ದೇಶದ ಆಸ್ತಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ರಾಮನಾಥ ಮಾತನಾಡಿ, ಸಂಸ್ಥೆಯ ಶೈಕ್ಷಣಿಕ ಪರಂಪರೆ ಮತ್ತು ಶಿಸ್ತಿನ ಬಗ್ಗೆ ವಿವರಿಸುತ್ತಾ, ಹೊಸ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಸಿಗುವ ಸೌಲಭ್ಯಗಳು ಮತ್ತು ಪಠ್ಯೇತರ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ ಶುಭ ಹಾರೈಸಿದರು. ಕಾಲೇಜಿನಲ್ಲಿ ಸಿಗುವ ಶೈಕ್ಷಣಿಕ ವಾತಾವರಣ ಮತ್ತು ಸೌಲಭ್ಯಗಳ ಕುರಿತು ತಿಳಿಸಿ, ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸ್ಪಷ್ಟವಾಗಿಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಸಾಗುವಂತೆ ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ನೂತನ ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಿದರು. ಭರತನಾಟ್ಯ, ಜನಪದ ನೃತ್ಯ ಹಾಗೂ ದೇಶಭಕ್ತಿ ಗೀತೆಗಳಿಗೆ ತಕ್ಕಂತೆ ನರ್ತಿಸುವ ಮೂಲಕ ನೆರೆದಿದ್ದ ಅತಿಥಿಗಳು ಹಾಗೂ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಾಮಾಂಜಿನಿ, ಕಾರ್ಯದರ್ಶಿ ಮತ್ತು ಪ್ರಾಂಶುಪಾಲರಾದ ರಾಮನಾಥ, ಡಿವೈಎಸ್ಪಿ ಮಲ್ಲೇಶ್, ನಗರಸಭೆ ಆಯುಕ್ತರಾದ ನೀಲಾಲೋಚನ ಪ್ರಭು, ನಿವೃತ್ತ ಉಪ ನಿರ್ದೇಶಕರಾದ ರಾಮಕೃಷ್ಣಪ್ಪ, ನಿವೃತ್ತ ಪ್ರಾಂಶುಪಾಲರಾದ ಚಂದ್ರ ಮರಕಲ, ಟ್ರಸ್ಟ್ ನ ಸದಸ್ಯರಾದ ಹರೀಶ್ ,ಮಯೂರ್ ,ನವನೀಶ ರೆಡ್ಡಿ ,ಲಿಖಿತ್ ರಾಜ್ ನಂದ, ಟಾಪ್ ಕೋಚ್ ಅಕಾಡೆಮಿ ಅಧ್ಯಾಪಕರಾದ ಜಗದೀಶ್ ಹಾಗೂ ವಿದ್ಯಾರ್ಥಿಗಳು ಪೋಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.









