ವಿಜಯ ದರ್ಪಣ ನ್ಯೂಸ್….
ಕಾರ್ಯದರ್ಶಿಯಿಂದ ರೈತರ ಹಾಲಿನ ಹಣ ದುರುಪಯೋಗ’

ಗೌರಿಬಿದನೂರು: ತೊಂಡೇಭಾವಿ ಹಾಲಿನ ಡೈರಿಯಲ್ಲಿ ಕೆಲಸ ನಿರ್ವಹಿಸುವ ಕಾರ್ಯದರ್ಶಿಯು ರೈತರ ಹಣ ದುರುಪಯೋಗ ಮಾಡಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಹಾಲಿನ ಡೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಅಧಿಕಾರಿ ಮತ್ತು ಆಡಳಿತ ಮಂಡಳಿ ವಿರುದ್ಧ ರೈತರು ಆರೋಪಗಳ ಸುರಿಮಳೆಗೈದರು.
ತೊಂಡೇಭಾವಿ ಡೇರಿಯಲ್ಲಿ ಕಳೆದ ಏಳು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಚಂದ್ರಶೇಖರ್ ರೆಡ್ಡಿ ಎಂಬುವವರು ಯಾರ ಗಮನಕ್ಕೂ ಬಾರದೆ ಡೇರಿಯಲ್ಲಿನ ರೈತರ ಹಣವನ್ನು ದುರುಪಯೋಗ ಮಾಡಿಕೊಂಡು ಸ್ವಂತ ಕೆಲಸಗಳಿಗೆ ಬಳಸಿಕೊಂಡಿದ್ದಾರೆ. 5 ತಿಂಗಳಲ್ಲೇ ಲಕ್ಷಾಂತರ ಹಣ ಗುಳುಂ ಮಾಡಿರುವ ಇವರು ಕಳೆದ 7 ವರ್ಷಗಳಲ್ಲಿ ಇನ್ನೆಷ್ಟು ಹಣ ದುರುಪಯೋಗ ಪಡಿಸಿಕೊಂಡಿರಬೇಕು, ಈ ಬಗ್ಗೆ ತನಿಖೆ ಮಾಡಬೇಕಾದ ಅಧಿಕಾರಿಗಳು ಮಾತ್ರ ಸುಖಾಸುಮ್ಮನೆ ಡೇರಿಗೆ ಬಂದು ಹೋಗುತ್ತಿದ್ದಾರೆ.ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡೇರಿಯಲ್ಲಿ ರೈತರ ಮಕ್ಕಳಿಗೆ ನೀಡಬೇಕಾದ ಪ್ರೋತ್ಸಾಹ ಧನ ಸಹ ಕೆಲವೇ ಸಮುದಾಯಕ್ಕೆ ನೀಡುತ್ತಿದ್ದಾರೆ. ಆಡಳಿತ ಮಂಡಳಿಯವರು ಒಂದೇ ಕುಟುಂಬದವರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದಾರೆ. ಬೇರೆ ಸಮುದಾ ಯದವರಿಗೂ ಸಹ ಪ್ರೋತ್ಸಾಹ ಧನ ನೀಡಬೇಕು ಹಾಗೂ ಡೇರಿಯಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಎಂದು ಗ್ರಾಮಸ್ಥ ಯತೀಶ್ ಆಡಳಿತ ಮಂಡಳಿ ಮತ್ತು ಅಧಿಕಾರಿಗಳಿಗೆ ಅಗ್ರಹಿಸಿದರು.
ಸ್ಥಳಕ್ಕೆ ಬಂದ ಡೇರಿ ಚಂದ್ರಶೇಖರ್ ರೆಡ್ಡಿ, ಕಳೆದ 5 ತಿಂಗಳಿನಿಂದ 233696/- ರೂಪಾಯಿಗಳನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದೇನೆ. ಕಾಲಾವಕಾಶ ನೀಡಿದರೆ, ಹಣ ಹಿಂತಿರುಗಿಸುವುದಾಗಿ ಸಭೆಯಲ್ಲಿ ತಪ್ರೊಪ್ಪಿಕೊಂಡರು.
ಡೇರಿ ಅಧ್ಯಕ್ಷ ಮತ್ತು ಚಿಮುಲ್ ನಿರ್ದೇಶಕ ಕಾಂತರಾಜು ಮಾತನಾಡಿ, ಡೇರಿಯಲ್ಲಿ ರೈತರ ಮತ್ತು ಆಡಳಿತ ಮಂಡಳಿಯ ಗಮನಕ್ಕೆ ಬಾರದೆ ಕಾರ್ಯದರ್ಶಿ ಚಂದ್ರಶೇಖರ್ ರೆಡ್ಡಿ ರೈತರ ಹಣ ದುರುಪಯೋಗ ಮಾಡಿಕೊಂಡಿರುವುದನ್ನು ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಅವರು 15 ದಿನಗಳ ಒಳಗೆ ಹಣ ಹಿಂತಿರುಗಿಸಿ, ಬಳಿಕ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಉಪ ವ್ಯವಸ್ಥಾಪಕ ನರೇಂದ್ರ, ಸೂಪರ್ ವೈಸರ್ ಮಂಜುನಾಥ್, ಡೇರಿ ನಿರ್ದೇಶಕರು. ರೈತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.









