ವಿಜಯ ದರ್ಪಣ ನ್ಯೂಸ್….
ಇಬ್ಬರು ಭದ್ರತಾ ಸಿಬ್ಬಂದಿಯ ಜಗಳ ಕೊಲೆಯಲ್ಲಿ ಅಂತ್ಯ
ಪೋಲಿಸರು ದೂರು ದಾಖಲಿಸಿ ತನಿಖೆ

ಶಿಡ್ಲಘಟ್ಟ : ಹಂದಿ ಮಾಂಸದ ವಿಚಾರವಾಗಿ ಭಾನುವಾರ ರಾತ್ರಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ವಾಗ್ವಾದ ತಾರಕಕ್ಕೇರಿದ ಸಮಯದಲ್ಲಿ ದಿವಾನ್ ಸಿಂಗ್ ಆಯುಧದಿಂದ ಹಲ್ಲೆ ನಡೆಸಿದ ಪರಿಣಾಮ ಪಂಕಜ್ ಬರ್ಮನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಚಿಂತಾಮಣಿ ತಾಲ್ಲೂಕಿನ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶ ವ್ಯಾಪ್ತಿಗೆ ಬರುವ ಹಲಸೂರು ದಿನ್ನೆ ಗ್ರಾಮ ಸಮೀಪದ ‘ಮಿರಾಕಲ್ ಡ್ರಿಂಕ್ಸ್ ಲಿಮಿಟೆಡ್’ ಸಂಸ್ಥೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಅಸ್ಸಾಂನ ಬಕ್ಕಾ ಜಿಲ್ಲೆಯ ಬಾರ್ಖೋಟಾ ಗ್ರಾಮದ ನಿವಾಸಿ ಪಂಕಜ್ ಬರ್ಮನ್ (50) ಮೃತರು,ಪಶ್ಚಿಮ ಬಂಗಾಳ ಮೂಲದ ದಿವಾನ್ ಸಿಂಗ್ (55) ಕೊಲೆ ಆರೋಪಿ ಎಂದು ಗುರುತಿಸಲಾಗಿದೆ ,ಇಬ್ಬರೂ ಮಿರಾಕಲ್ ಡ್ರಿಂಕ್ಸ್ ಲಿಮಿಟೆಡ್ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಿಡ್ಲಘಟ್ಟ ಹಾಗೂ ಚಿಂತಾಮಣಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಬಳಿಕ ಪರಾರಿಯಾಗಲು ಯತ್ನಿಸಿದ್ದ ಆರೋಪಿ ದಿವಾನ್ ಸಿಂಗ್ ಅನ್ನು ಚಿಂತಾಮಣಿ-ಶ್ರೀನಿವಾಸಪುರ ರಸ್ತೆಯ ಮಾಡಿಕೆರೆ ಕ್ರಾಸ್ ಬಳಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ತನಿಖೆ ನಡೆಯುತ್ತಿದ್ದು, ಹಂದಿ ಮಾಂಸದ ವಿಚಾರ ಮಾತ್ರವಲ್ಲದೆ ವೈಯಕ್ತಿಕ ಹಾಗೂ ಸೈಕಲ್ ಸಂಬಂಧ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ ಎಂದು ಶಿಡ್ಲಘಟ್ಟ ಪೊಲೀಸ್ ಇನ್ಸ್ಪೆಕ್ಟರ್ ಆನಂದ್ ಕುಮಾರ್ ಅವರು ತಿಳಿಸಿದ್ದಾರೆ.











