ತಾವರೆಕೆರೆ: ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರು ಗ್ರಾಮದ ಶ್ರೀ ಕ್ಷೇತ್ರ ಸುಪ್ರಸಿದ್ದ ಅಭಯ ಶನೈಶ್ಚರ ಸ್ವಾಮಿ ದೇವಾಲಯದಲ್ಲಿ ಆಷಾಢ ಮಾಸದ ಮೊದಲ ಶನಿವಾರದ ಅಂಗವಾಗಿ ಶನಿ ಮಹಾತ್ಮ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ-ಶ್ರದ್ಧೆಯಿಂದ ನೆರವೇರಿದವು.
ಆಷಾಢಮಾಸದ ಮೊದಲ ಶನಿವಾರದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಂಡವು. ಶನಿ ಮಹಾತ್ಮ ಸ್ವಾಮಿಗೆ ಎಣ್ಣೆ ಅಭಿಷೇಕ, ಆರ್ಚನೆ, ವಿಶೇಷ ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.
ವಿವಿಧ ಬಗೆಯ ಬಣ್ಣಬಣ್ಣದ ಹೂವುಗಳಿಂದ ಅಲಂಕೃತಗೊಂಡಿದ್ದ ಶನೇಶ್ವರ ಸ್ವಾಮಿಯ ದಿವ್ಯ ದರ್ಶನ ಪಡೆಯಲು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು.
ದೇವಾಲಯದ ಆವರಣದಲ್ಲಿ ದಿನವಿಡೀ ಭಕ್ತರ ಸಂಚಾರ ಕಂಡುಬಂದಿದ್ದು, ಶಿಸ್ತಿನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶ್ರೀ ಡಾ.ಡಿ.ಎಲ್.ವೀರಬ್ರಹ್ಮಚಾರ್ ಗುರೂಜಿಗಳು ಮಾತನಾಡಿ, ಆಷಾಢ ಮಾಸದ ಮೊದಲ ಶನಿವಾರವು ಶನಿ ಆರಾಧನೆಗೆ ಅತ್ಯಂತ ಪವಿತ್ರ ಮತ್ತು ವಿಶೇಷ ಮಹತ್ವ ಹೊಂದಿದ ದಿನವಾಗಿದೆ. ಈ ದಿನ ಭಕ್ತಿ, ಶ್ರದ್ಧೆಯಿಂದ ಶನಿ ದೇವರನ್ನು ಆರಾಧಿಸಿದರೆ ಜೀವನದಲ್ಲಿನ ಕಷ್ಟ-ಕಾರ್ಪಣ್ಯಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.
ಶನಿ ದೇವರು ನ್ಯಾಯದ ಅಧಿಪತಿ ಯಾಗಿದ್ದು, ಸತ್ಯರ್ಮ ಮಾಡುವವರಿಗೆ ಸದಾ ಶುಭಫಲವನ್ನು ಅನುಗ್ರಹಿಸುತ್ತಾನೆ. ಆದ್ದರಿಂದ ಪ್ರತಿಯೊಬ್ಬರೂ ಧರ್ಮದ ಮಾರ್ಗದಲ್ಲಿ ನಡೆದು ಸತ್ಯ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವದಿಂದ ಬದುಕಿದರೆ ದೇವರ ಕೃಪೆಗೆ ಪಾತ್ರರಾಗಬಹುದು ಎಂದು ತಿಳಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮಸ್ಥರು, ಭಕ್ತರು ಹಾಗೂ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿ ಶನೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆಯನ್ನೂ ದೇವಾಲಯದ ವತಿಯಿಂದ ಮಾಡಲಾಗಿತ್ತು.
ಭಜನ-ಪ್ರವಚನ-ಸಂಕೀರ್ತನ
ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಮತ್ತು ಶ್ರೀ ಮಾತಾಜಿ ಅಲಸೂರಮ್ಮ ರಾಘವೇಂದ್ರ ಸೇವಾ ಟ್ರಸ್ಟ್ ಇವುಗಳ ಸಂಯುಕ್ತಾಶ್ರಯದಲ್ಲಿ ಜುಲೈ 7 ರಿಂದ 10ರ ವರೆಗೆ ಜರುಗುವ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳು ಈ ರೀತಿ ಇವೆ : ಭಜನಾ ಕಾರ್ಯಕ್ರಮ (ಪ್ರತಿದಿನ ಸಂಜೆ 6 ರಿಂದ 7) : ಜುಲೈ 7-ವಿದ್ಯಾರಣ್ಯಪುರದ ಶ್ರೀಸುಶಮೀಂದ್ರ ಭಜನಾ ಮಂಡಳಿ, ಜುಲೈ 8-ಜಕ್ಕೂರಿನ ಶ್ರೀ ವಿಜಯ ವಿಠಲ ಭಜನಾ ಮಂಡಳಿ, ಜುಲೈ 9-ಬೊಮ್ಮಸಂದ್ರದ ಶ್ರೀ ವಿಜಯ ವಿಠಲ ಭಜನಾ ಮಂಡಳಿಯ ಸದಸ್ಯರಿಂದ ಭಜನಾಮೃತ ನಡೆಯಲಿದೆ. ಪ್ರವಚನ ಕಾರ್ಯಕ್ರಮ (ಪ್ರತಿದಿನ ಸಂಜೆ 7 ರಿಂದ 8) : ಜುಲೈ 7 ರಿಂದ 9ರ ವರೆಗೆ ಶ್ರೀ ಕಂಬಾಲೂರು ವಿಜಯವಿಠಲಾಚಾರ್ “ಭಾಗವತ ಸಾರೋದ್ಧಾರ” ವಿಷಯವಾಗಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ.
ಹರಿನಾಮ ಸಂಕೀರ್ತನೆ : ಜುಲೈ 10, ಶುಕ್ರವಾರ ಸಂಜೆ 6-30ಕ್ಕೆ “ಹರಿನಾಮ ಸಂಕೀರ್ತನೆ”. ಶ್ರೀಮತಿ ರಂಜಿತಾ ಪ್ರಸಾದ್ ಗಾಯನಕ್ಕೆ ಶ್ರೀ ಎಂ.ಎನ್. ಸತ್ಯನಾರಾಯಣ ಪಿಟೀಲು ವಾದನದಲ್ಲಿ ಮತ್ತು ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಮೃದಂಗ ವಾದನದಲ್ಲಿ ಸಹಕರಿಸಲಿದ್ದಾರೆ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಮುಖ್ಯರಸ್ತೆ, 3ನೇ ಬ್ಲಾಕ್, ಬಿಇಎಲ್ ಲೇಔಟ್, ವಿದ್ಯಾರಣ್ಯಪುರ, ಬೆಂಗಳೂರು-560097