ವಿಜಯ ದರ್ಪಣ ನ್ಯೂಸ್……
ಸರ್ಕಾರವು ಕೂಡಲೆ ಬರ ಘೋಷಣೆ ಮಾಡಿ ಬರ ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮಕ್ಕೆ ಮುಂದಾಗಬೇಕು

ಶಿಡ್ಲಘಟ್ಟ : ತಾಲ್ಲೂಕಿನಲ್ಲಿ ಈ ವರ್ಷ ಮುಂಗಾರು ಮಳೆಗಾಲದ ಅವಧಿಯಲ್ಲಿ ವಾಡಿಕೆ ಮಳೆ ಬೀಳದೆ ಇದುವರೆಗೂ ಮುಂಗಾರು ಮಳೆಗಾಲದ ಬಿತ್ತನೆಕಾರ್ಯ ಆಗಿಲ್ಲ ಹಾಗಾಗಿ ಸರ್ಕಾರವು ಕೂಡಲೆ ಬರ ಘೋಷಣೆ ಮಾಡಿ ಬರ ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮಕ್ಕೆ ಮುಂದಾಗಬೇಕೆಂದು ಜೀವಿಕ ಸಂಘಟನೆಯ ತಾಲ್ಲೂಕು ಸಂಚಾಲಕ ಪಿ.ಶ್ರೀನಿವಾಸ್ ಸರ್ಕಾರವನ್ನು ಆಗ್ರಹಿಸಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಶೇ ೭೦-೮೦ ಮಂದಿ ಕೃಷಿಯನ್ನು ನಂಬಿದ್ದು ಮಳೆಯ ಅಭಾವದಿಂದ ಈ ವರ್ಷ ಬಿತ್ತನೆ ಕಾರ್ಯ ನಡೆದೇ ಇಲ್ಲ ಎಂದರು. ಇದರಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ರಾಸುಗಳಿಗೆ ಮೇವಿನ ಕೊರತೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಾಗಾಗಿ ಬರ ಘೋಷಣೆ ಮಾಡಿ ಪಹಣಿ ಹೊಂದಿರುವ ಪ್ರತಿ ರೈತನಿಗೂ ೫೦ ಸಾವಿರ ಪರಿಹಾರ ನೀಡಬೇಕು, ಪ್ರತಿ ಗ್ರಾಮದಲ್ಲೂ ತೊಟ್ಟಿ ನಿರ್ಮಿಸಿ ಅದರಲ್ಲಿ ನೀರು ತುಂಬಿಸಿ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು, ರಾಮ್ಜಿ ನರೇಗಾದಲ್ಲಿ ಕೂಲಿ ದಿನಗಳನ್ನು ಹೆಚ್ಚಿಸಬೇಕು ಮತ್ತು ಕೂಲಿ ಹಣವನ್ನು ಕೂಡ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ನ್ಯಾಯ ಬೆಲೆ ಅಂಗಡಿಗಳ ಮೂಲಕ ಕೇವಲ ಅಕ್ಕಿ ರಾಗಿ ಮಾತ್ರವಲ್ಲದೆ ದಿನ ನಿತ್ಯ ಬಳಸುವ ದಿನಸಿ ಪದಾರ್ಥಗಳನ್ನು ರಿಯಾಯಿತಿ ದರದಲ್ಲಿ ರೈತರು, ಜನ ಸಾಮಾನ್ಯರಿಗೆ ವಿತರಬೇಕು, ಪ್ರತಿ ಹೋಬಳಿಯಲ್ಲೂ ಮೇವಿನ ಬ್ಯಾಂಕುಗಳನ್ನು ತೆರೆಯಬೇಕು ಎಂದು ಕೋರಿದರು.
ಬೆಳೆ ವಿಮೆ ಬಗ್ಗೆ ರೈತರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಿ ಎಲ್ಲ ರೈತರೂ ತಮ್ಮ ತಮ್ಮ ಬೆಳೆಗಳಿಗೆ ವಿಮೆ ಮಾಡಿಸುವಂತೆ ಮಾಡಬೇಕು ಮತ್ತು ವಿಮೆ ಕಟ್ಟಿದ ಎಲ್ಲ ರೈತರಿಗೂ ಬೆಳೆ ವಿಮೆ ಸಿಗುವಂತೆ ಸಂಬAಧಿಸಿದ ಎಲ್ಲ ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಎಸ್.ಗೊಲ್ಲಹಳ್ಳಿಯ ನರಸಿಂಹಪ್ಪ, ಲುಂಬಿನಿ ಎಜುಕೇಷನ್ ಅಂಡ್ ಡೆವಲಪ್ಮೆಂಟ್ ಟ್ರಸ್ಟ್ನ ಅಧ್ಯಕ್ಷ ಮೂರ್ತಿ ಮೈತ್ರಿ, ಜೀವಿಕ ಸಂಘಟನೆಯ ಮುನಿಯಪ್ಪ ಹಾಜರಿದ್ದರು.











