ವಿಜಯ ದರ್ಪಣ ನ್ಯೂಸ್….
ಕುರುಬರ ಸಂಘದ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಬೆಂಬಲಿತ ಅಭ್ಯರ್ಥಿಗಳಿಗೆ ಭರ್ಜರಿ ಜಯ
ಉತ್ತಮ ಕಾರ್ಯ ನಿರ್ವಹಿಸಿ ಸಮುದಾಯದವರ ಪ್ರೀತಿ ವಿಶ್ವಾಸ ಗಳಿಸಿ : ಎಂಟಿಬಿ ನಾಗರಾಜ್

ತಾವರೆಕೆರೆ : ಹೊಸಕೋಟೆ ತಾಲೂಕು ಕುರುಬರ ಸಂಘದ 2026ರಿಂದ ಐದು ವರ್ಷಗಳ ಅವಧಿಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಬೆಂಬಲಿತ ಅಭ್ಯರ್ಥಿಗಳು 15ಕ್ಕೆ 15 ಸ್ಥಾನಗಳಲ್ಲೂ ಭರ್ಜರಿ ಗೆಲುವು ಸಾಧಿಸುವ ಮೂಲಕ ಸಂಪೂರ್ಣ ಮೇಲುಗೈ ಸಾಧಿಸಿದ್ದಾರೆ.
ಚುನಾವಣೆಯಲ್ಲಿ ಜಯಗಳಿಸಿದ ವಿಜೇತ ಅಭ್ಯರ್ಥಿಗಳು ಎಂಟಿಬಿ ನಾಗರಾಜ್ ಅವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾಗಿ ತಮ್ಮ ಗೆಲುವಿನ ಸಂತಸವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಎಂಟಿಬಿ ನಾಗರಾಜ್ ಅವರು ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಸಂಘದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವಂತೆ ಸಲಹೆ ನೀಡಿದರು.
ಸಮುದಾಯದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಿರ್ದೇಶಕರು ಪ್ರಾಮಾಣಿಕವಾಗಿ ಹಾಗೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಸಂಘದ ಮೂಲಕ ಸಮುದಾಯದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ, ಯುವಕರು, ವಿದ್ಯಾರ್ಥಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಎಂಟಿಬಿ ನಾಗರಾಜ್ ತಿಳಿಸಿದರು.
ಚುನಾವಣೆಯಲ್ಲಿ ಜನರು ನೀಡಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದು ವಿಜೇತ ನಿರ್ದೇಶಕರ ಪ್ರಮುಖ ಕರ್ತವ್ಯವಾಗಿದೆ. ಯಾವುದೇ ಭೇದಭಾವವಿಲ್ಲದೆ ಸಮುದಾಯದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವ ಮೂಲಕ ಜನರ ಪ್ರೀತಿ, ವಿಶ್ವಾಸ ಹಾಗೂ ಗೌರವವನ್ನು ಗಳಿಸಬೇಕು ಎಂದು ಅವರು ಕರೆ ನೀಡಿದರು.
ಇದೇ ವೇಳೆ ನೂತನವಾಗಿ ಆಯ್ಕೆಯಾದ ನಿರ್ದೇಶಕರು ಎಂಟಿಬಿ ನಾಗರಾಜ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿ, ತಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಸಂಘದ ಅಭಿವೃದ್ಧಿ ಹಾಗೂ ಸಮುದಾಯದ ಹಿತಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
15ಕ್ಕೆ 15 ಸ್ಥಾನಗಳಲ್ಲಿ ಎಂಟಿಬಿ ನಾಗರಾಜ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿರುವುದು ಹೊಸಕೋಟೆ ತಾಲೂಕು ಕುರುಬರ ಸಂಘದಲ್ಲಿ ಅವರ ಬೆಂಬಲಿಗರ ಸಂಘಟನಾ ಶಕ್ತಿಯನ್ನು ಮತ್ತಷ್ಟು ಬಲಪಡಿಸಿರುವುದಾಗಿ ಕಾರ್ಯಕರ್ತರು ಹಾಗೂ ಸಮುದಾಯದ ಮುಖಂಡರು ಸಂತಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ನೂತನ ಸದಸ್ಯರಾದ ಮಂಜಣ್ಣ ಸಿ, ಸಿ ನಾಗರಾಜ್, ರಾಜೇಂದ್ರ, ಗ್ಯಾಸ್ ದೇವರಾಜ್, ಕೆಂಪಣ್ಣ, ರಘುವೀರ್, ರಾಮಾಂಜಿನಪ್ಪ, ಮಂಜುನಾಥ್ ಲಿಂಗಾಪುರ, ಮುನಿರಾಜು ಎಸ್ ಬಿ, ರಾಜಣ್ಣ ಎಂ ಆರ್, ಮಂಜುನಾಥ್ ಆರ್, ರಾಮಾಂಜನಿ, ಮರವೇ ಕೃಷ್ಣಪ್ಪ, ಶ್ರೀಕಾಂತ್ ಟಿ.ಜಿ, ಶ್ರೀನಿವಾಸ್ ಹಾಗೂ ಕಾರ್ಯಕರ್ತರು ಮುಖಂಡರುಗಳು ಹಾಜರಿದ್ದರು









