ವಿಜಯ ದರ್ಪಣ ನ್ಯೂಸ್….
ವಿಜಯಪುರದಲ್ಲಿ ಅವೈಜ್ಞಾನಿಕ ಕಾಮಗಾರಿಯ ಆರೋಪ

ವಿಜಯಪುರ: ವಿಜಯಪುರ ಪಟ್ಟಣದಲ್ಲಿ, ಮಾಡುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ, ಅವೈಜ್ಞಾನಿಕವಾಗಿದೆ. ಈ ಕುರಿತು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಧಿಕಾರಿಗಳ ಬೇಜಾವಾಬ್ದಾರಿ ವರ್ತನೆಯಿಂದಾಗಿ ಪಟ್ಟಣದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದ್ದು, ಮೂರು ದಿನಗಳ ಒಳಗಾಗಿ ಅಧಿಕಾರಿಗಳು ಬಂದು ಪರಿಶೀಲನೆ ಮಾಡದೇ ಹೋದರೆ, ಪುರಸಭೆಯ ಮುಂದೆ ಅನಿರ್ಧಿಷ್ಟಾವಧಿ ದರಣಿ ನಡೆಸುವುದಾಗಿ ಕರವೇ ಮುಖಂಡರು ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖಂಡ ಪುರ ಕೃಷ್ಣಪ್ಪ ಅವರು, ಲೋಕೋಪಯೋಗಿ ಇಲಾಖೆಯಿಂದ ಮಾಡುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿಯು ಅವೈಜ್ಞಾನಿಕವಾಗಿ ಮಾಡಿದ್ದಾರೆ ರಸ್ತೆಯನ್ನು ತಗ್ಗು ಮಾಡಿ, ಚರಂಡಿಗಳನ್ನು ಎತ್ತರ ಮಾಡಿದ್ದಾರೆ. ಇದರಿಂದ ಮಳೆಯ ನೀರು ಹರಿಯದೇ ರಸ್ತೆಗಳಲ್ಲಿ ಹರಿಯುತ್ತಿದೆ. ವಿದ್ಯುತ್ ಕಂಬಗಳನ್ನು ಚರಂಡಿಯಿಂದ ಹೊರಗೆ ಹಾಕುವುದನ್ನು ಬಿಟ್ಟು, ಪಾದಚಾರಿ ಮಾರ್ಗದಲ್ಲಿ ಹಾಕುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಕಾಮಗಾರಿ ಆರಂಭಗೊಂಡು ಎರಡು ವರ್ಷಗಳು ಪೂರ್ಣಗೊಂಡರೂ ರಸ್ತೆಗಳ ಅಗಲೀಕರಣ ಕಾಮಗಾರಿ ಮುಗಿದಿಲ್ಲ ಎಂದು ಆರೋಪಿಸಿದರು.
ಕರ್ನಾಟಕ ದಲಿತ ಜನಸೇನೆ ರಾಜ್ಯಾಧ್ಯಕ್ಷ ಟಿ.ಭರತ್ ಮಾತನಾಡಿ, ಕಾಮಗಾರಿಗಳು ನಡೆಯುವ ವೇಳೆ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ ನಿರ್ಲಕ್ಷ್ಯ ತೋರಿಸುತ್ತಿರುವುದರಿಂದ ಇಂತಹ ಪರಿಸ್ಥಿತಿ ಏರ್ಪಡುತ್ತಿದೆ. ಕಾಮಗಾರಿ ಮಾಡುವ ಮೊದಲು ಜನರು ಎಷ್ಟು ಸಮಸ್ಯೆ ಎದುರಿಸಿದ್ದರೋ ಕಾಮಗಾರಿ ಮಾಡಿದ ನಂತರ ಎರಡರಷ್ಟು ಸಮಸ್ಯೆ ಎದುರಿಸುವಂತಾಗಿದೆ. ಒಂದೊಂದು ಕಡೆ, ಒಂದೊಂದು ಅಳತೆಯಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಿ, ನಮ್ಮ ಮನವಿ ಪಡೆದುಕೊಳ್ಳಬೇಕು, ಇಲ್ಲವಾದರೆ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದರು. ಕರವೇ ಮುಖಂಡ ಮಹೇಶ್ ಕುಮಾರ್, ಮಾತನಾಡಿದರು. ಕರವೇ ಪದಾಧಿಕಾರಿಗಳು ಹಾಜರಿದ್ದರು.








