ಸಾಹಿತ್ಯ ಚೌಕಟ್ಟುಗಳನ್ನು ಮೀರಿ ಬೆಳೆಯುತ್ತಿದೆ :ಸಾಹಿತಿ ನಾಟಕಕಾರ ಡಾ.ನಾ.ದಾಮೋದರಶೆಟ್ಟಿ

ವಿಜಯ ದರ್ಪಣ ನ್ಯೂಸ್
ಬೆಂಗಳೂರು ನವೆಂಬರ್ 20:ಸಾಹಿತ್ಯ ಮನುಷ್ಯಕೇಂದ್ರಿತ ನೆಲೆಯಲ್ಲಿ ತನ್ನನ್ನು ತಾನು ಅರಳಿಸಿಕೊಳ್ಳುವ ಸಾಧನ. ಅದು ಪೂರ್ವನಿರ್ಧರಿತ ಮಾದರಿಯಲ್ಲಿಯೇ ಇರಬೇಕೆಂಬ ಕಟ್ಟುಪಾಡುಗಳಿಲ್ಲ. ಬದಲಾವಣೆ  ಜಗದ ನಿಯಮ
ಎನ್ನುವಂತೆ ಈ ಸೂತ್ರ ಕಥಾರಚನೆಗೂ ಅನ್ವಯಿಸುತ್ತದೆ. ಹಾಗಾಗಿ ಕತೆಗೊಂದು ಆರಂಭ, ಮಧ್ಯದಲ್ಲಿ ಹೀಗೇ ಇರಬೇಕೆಂಬ ನಿಯಮ ಅಂತ್ಯ   ಇಂತದ್ದೇ ನೆಲೆಯಲ್ಲಿ ಆಗಬೇಕೆಂಬ ಚೌಕಟ್ಟುಗಳನ್ನು ಮೀರಿ ಬೆಳೆಯುತ್ತಿದೆ ಎಂದು ಹಿರಿಯ ಸಾಹಿತಿ ನಾಟಕಕಾರ ಡಾ.ನಾ. ದಾಮೋದರಶೆಟ್ಟಿ ಅಭಿಪ್ರಾಯಪಟ್ಟರು.
ಕೃಷ್ಣಾಪುರದೊಡ್ಡಿಯ ಕೆ ಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಪ್ರಗತಿ ಗ್ರಾಫಿಕ್ಸ್ ಹಾಗೂ ಶ್ರೀನಿವಾಸ ಪುಸ್ತಕ ಪ್ರಕಾಶನ ಸಂಸ್ಥೆಗಳು ಸಂಯುಕ್ತವಾಗಿ ಎನ್ ಆರ್ ಕಾಲನಿಯ ಡಾ ಸಿ ಅಶ್ವತ್ಥ್ ಕಲಾಭವನದಲ್ಲಿ ಸಾಹಿತಿ ರಾಜೇಂದ್ರ ಬಿ. ಶೆಟ್ಟಿ ಅವರ ಅಮ್ಮ ಹಚ್ಚಿದ ದೀಪ, ಕತೆಯೊಂದಿಗೆ ಗಣಿತ, ದೆವ್ವಗಳ ನಾಡಿನಲ್ಲಿ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲ ಸಾಂಪ್ರದಾಯಿಕ ನೆಲೆಗಳನ್ನೂ ಮೀರಿ ರಾಜೇಂದ್ರ ಬಿ. ಶೆಟ್ಟರು ತಮ್ಮ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಕೆಲವೇ ಪದಗಳಲ್ಲಿ, ಕೆಲವೇ ವಾಕ್ಯಗಳಲ್ಲಿ ಬದುಕಿನ ತಲ್ಲಣಗಳು, ಪಲ್ಲಟಗಳು, ಅನೇಕ ರಹಸ್ಯಗಳನ್ನು ಹಿಡಿದಿಡುವ ಶಕ್ತಿಯುತ ಕತೆಗಳನ್ನು ರಚಿಸಿದ್ದಾರೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ಆದ್ಯತೆಗಳ ಮೇಲೆ ಜನಮುಖಿ ಕಾರ್ಯಗಳು ಸ್ಥಗಿತಗೊಂಡಿವೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಕಡೆಗಣನೆಗೆ ಒಳಗಾಗುತ್ತಿವೆ. ಪ್ರಕಾಶನಕ್ಷೇತ್ರ ಸಮೃದ್ಧವಾಗಿದ್ದರೂ ಪ್ರಕಾಶಕ ಲೇಖಕರ ನಡುವಿನ ಸಂಬAಧಗಳು ಗಟ್ಟಿಗೊಳ್ಳಬೇಕು ಮತ್ತು ಸೌಜನ್ಯಯುತ ವಾಗಿರಬೇಕು. ಆ ಮೂಲಕ ಹೊಸ ಹೊಸ ವಿಚಾರಧಾರೆಗಳನ್ನು ಸಹೃದಯರಿಗೆ ನೀಡಲು ಸಹಕಾರಿಯಾಗಬಲ್ಲದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹನಿಗವನ ಸಾಹಿತಿ ಡುಂಡಿರಾಜ್, ಕತೆಗಾರನಿಗೆ ತಾನೊಬ್ಬ ಕತೆಗಾರನೆಂಬ ಭ್ರಮೆ ಯಾವತ್ತೂ ಇರಬಾರದು. ಸಾಹಿತ್ಯೇತರ ಕ್ಷೇತ್ರದಿಂದ ಬಂದವರ ರಚನೆಗಳಲ್ಲಿ ಜಗತ್ತಿನ ಬೇರೆ ಬೇರೆ ವಿಚಾರಗಳ ಮಂಥನ ನಡೆದಿರುತ್ತದೆ. ಎಲ್ಲ ಗಡಿಗಳನ್ನೂ ಮೀರಿ ಸಮೃದ್ಧ ಸಾಹಿತ್ಯದ ರಚನೆಯನ್ನು ಅನ್ಯಕ್ಷೇತ್ರದ ಬರೆಹಗಾರರಲ್ಲಿ ಕಾಣಲು ಸಾಧ್ಯ. ಈ ಹಿನ್ನೆಲೆಯಲ್ಲಿ ಶೆಟ್ಟರ ಕೃತಿಗಳಲ್ಲಿ ಬಹುವಿಚಾರಗಳು ಅಡಕಗೊಂಡು ಕನ್ನಡ ಸಾಹಿತ್ಯ ಕ್ಷೇತ್ರ ಸಮೃದ್ಧವಾಗಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯವೆಸಗಿವೆ ಎಂದರು.
ಡಿಕೆವಿ ಭಾರತಿ ಪ್ರಾರ್ಥನೆ ಮಾಡಿದರು. ಶಿಕ್ಷಣ ತಜ್ಞ ಡಿ. ಮಲ್ಲಾರೆಡ್ಡಿ ದೆವ್ವಗಳ ನಾಡಿನಲ್ಲಿ ಕೃತಿ ಪರಿಚಯ ಮಾಡಿಕೊಟ್ಟರು. ಅಂಕಣಕಾರ ಎನ್. ರಾಮನಾಥ್ ಆರ್.ಬಿ. ಶೆಟ್ಟರ ಕತೆಯೊಂದಿಗೆ ಗಣಿತ ಪುಸ್ತಕದ ಕುರಿತು ಮಾತನಾಡಿದರು, ಕಟ್ಟೆಸತ್ಯ ಫೌಂಡೇಷನ್‌ನ ಎಸ್. ಸುಜಯ್, ಸಾಹಿತಿ, ನಟ, ಕಂಠದಾನ ಕಲಾವಿದ ಜಿ.ಪಿ. ರಾಮಣ್ಣ ಕಾರ್ಯಕ್ರಮ ನಿರ್ವಹಿಸುವರು. ಪರಂಪರಾ ಕಲ್ಚರಲ್ ಫೌಂಡೇಷನ್ ಮಧುಸೂಧನನಾಯಕ್ ವಂದಿಸಿದರು. ಕಾರ್ಯಕ್ರಮದ ನೇರಪ್ರಸಾರವು ಫೇಸ್‌ಬುಕ್ ಮತ್ತು ಯೂಟ್ಯೂಬ್ ಮೂಲಕ ಬುಕ್ ಬ್ರಹ್ಮದಿಂದ ನಡೆಯಿತು.