ಮನೆ ನಿವೇಶನಕ್ಕಾಗಿ  ಕಾಫಿ ಎಸ್ಟೇಟ್ ಪರಿವರ್ತನೆ ಆರೋಪ: ತನಿಖೆಗೆ ಕೊಡವ ರಾಷ್ಟ್ರೀಯ ಸಮಿತಿ ಒತ್ತಾಯ

ವಿಜಯ ದರ್ಪಣ ನ್ಯೂಸ್ 

ಮನೆ ನಿವೇಶನಕ್ಕಾಗಿ  ಕಾಫಿ ಎಸ್ಟೇಟ್ ಪರಿವರ್ತನೆ ಆರೋಪ: ತನಿಖೆಗೆ ಕೊಡವ ರಾಷ್ಟ್ರೀಯ ಸಮಿತಿ ಒತ್ತಾಯ.

ಕೊಡಗು :ಜಿಲ್ಲೆಯ ಸಿದ್ದಾಪುರ ಬಳಿ ಸುಮಾರು 2,400 ಎಕರೆ ಕಾಫಿ ಎಸ್ಟೇಟ್ ನ್ನು ವಸತಿ ನಿವೇಶಕ್ಕಾಗಿ ಪರಿವರ್ತನೆ ಆರೋಪವನ್ನು ಕೊಡವ ರಾಷ್ಟ್ರೀಯ ಸಮಿತಿ (ಸಿಎನ್ ಸಿ) ಖಂಡಿಸಿದೆ.

ಇಷ್ಟು ದೊಡ್ಡ ಪ್ರಮಾಣದ ಭೂಪರಿವರ್ತನೆಯನ್ನು ನಿಷೇಧಿಸುವಂತೆ ಕೋರುವ ಮನವಿ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಮತ್ತಿತರ ರಾಜ್ಯಗಳಿಗೆ ಸಮಿತಿ ರವಾನಿಸಿದೆ. ಸಿದ್ದಾಪುರದ ಕಾವೇರಿ ಜಲಾನಯನ ಸಮೀಪವಿರುವ 2,400 ಎಕರೆ ಖಾಸಗಿ ಬಿಬಿಟಿಸಿ ಕಾಫಿ ಎಸ್ಟೇಟ್ ನ್ನು ಶೀಘ್ರದಲ್ಲೇ ಮನೆ ನಿವೇಶನಗಳಾಗಿ ಪರಿವರ್ತಿಸಲಾಗುತ್ತಿದೆ. ಹಸಿರು ಹೊದಿಕೆಯನ್ನು ಹೆಚ್ಚಿಸಿದ್ದ ಕಾಫಿ ಎಸ್ಟೇಟ್ ಅನ್ನು ಶೀಘ್ರದಲ್ಲೇ ಕತ್ತರಿಸಿ ನೆಲಸಮಗೊಳಿಸಿ ವಸತಿ ನಿವೇಶನಗಳಿಗೆ ದಾರಿ ಮಾಡಿಕೊಡಲಾಗುತ್ತಿದೆ ಎಂದು ಸಮಿತಿ ಹೇಳಿದೆ.

ಅತ್ಯಂತ ಕಡಿಮೆ ದರಕ್ಕೆ ಕಾಫಿ ಎಸ್ಟೇಟ್ ಖರೀದಿಸಲಾಗಿದ್ದು, ಈಗ 20 ಪಟ್ಟು ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ. ಇದನ್ನು ಮನೆ ನಿವೇಶನಗಳಾಗಿ ಪರಿವರ್ತಿಸಲಾಗುತ್ತಿದ್ದು, ಜಿಲ್ಲೆಯ ಹೊರಗಿನ ಹೂಡಿಕೆದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿನ ಸಂಪೂರ್ಣ ಪರಿಸರ ವ್ಯವಸ್ಥೆಯು ಕಳೆದುಹೋಗಲಿದ್ದು, ಹೆಚ್ಚಿದ ಮಾನವ ದಟ್ಟಣೆಯು ನೀರಿನ ಕೊರತೆಗೆ ಕಾರಣವಾಗುತ್ತದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್‌ಯು ನಾಚಪ್ಪ ವಿವರಿಸಿದರು.

ಮನವಿ ಪತ್ರದಲ್ಲಿ ಭೂಮಿಯ ಇತಿಹಾಸ ಹಾಗೂ ಅದು ಈಗ ಭೂಮಾಫಿಯಾಗೆ ಹೇಗೆ ಕಳೆದುಹೋಗುತ್ತಿದೆ ಎಂಬುದನ್ನು ವಿವರಿಸಿದ್ದಾರೆ.

“ಕಕ್ಕಬೆಯಲ್ಲಿರುವ ಇಗ್ಗುತಪ್ಪ ದೇಗುಲದ ಬಳಿ ಇನ್ನೂ 300 ಎಕರೆ ಭೂಮಿಯನ್ನು ಖರೀದಿಸಲಾಗುತ್ತಿದ್ದು, ಇದನ್ನೂ ಮನೆ ನಿವೇಶನಗಳಾಗಿ ಪರಿವರ್ತಿಸಲಾಗುತ್ತಿದೆ. ಇದು ಪ್ರಾಚೀನ ತೊರೆಗಳು, ಕಾವೇರಿ ನದಿ ಮತ್ತು ಅದರ ಉಪನದಿಗಳ ಅಸ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ ಎಂದು ನಾಚಪ್ಪ ವಿಶ್ಲೇಷಿಸಿದರು. ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಈ ಅಕ್ರಮ ರಿಯಲ್ ಎಸ್ಟೇಟ್ ಮಾಫಿಯಾ ಬಗ್ಗೆ ಕಠಿಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

“2,400 ಎಕರೆ ಕಾಫಿ ತೋಟವನ್ನು ವಸತಿ ನಿವೇಶನವನ್ನಾಗಿ ಪರಿವರ್ತಿಸುವುದರಿಂದ ಕೊಡಗಿನ ಪರಿಸರಕ್ಕೆ ಧಕ್ಕೆ ಉಂಟಾಗಲಿದೆ. ಇದನ್ನು ಕೂಡಲೇ ನಿಲ್ಲಿಸಬೇಕು ಮತ್ತು ಇಂತಹ ಅಕ್ರಮದಲ್ಲಿ ಭಾಗಿಯಾಗಿರುವ ರಿಯಲ್ ಎಸ್ಟೇಟ್ ವ್ಯಕ್ತಿಗಳು, ಜಿಲ್ಲಾಡಳಿತ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳನ್ನು ಶಿಕ್ಷಿಸಬೇಕು ಎಂದು ಒತ್ತಾಯಿಸಿದರು. ಮಹಿಳೆಯರ ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಪ್ರವಾಸಿಗರಿಗೆ ಜಿಲ್ಲೆಯ ಸಂಸ್ಕೃತಿಯನ್ನು ಪರಿಚಯಿಸಲು ಸಹಾಯ ಮಾಡಲು ಜಿಲ್ಲೆಯಲ್ಲಿ ಹೋಂ ಸ್ಟೇಗಳನ್ನು ಪ್ರಾರಂಭಿಸಲಾಗಿದೆ ಎಂದ ಅವರು, ಜಿಲ್ಲೆಯ ಪರಿಸರ ವ್ಯವಸ್ಥೆಯನ್ನು ನಾಶಪಡಿಸುತ್ತಿರುವ ಪ್ರವಾಸೋದ್ಯಮದ ಅನಿಯಂತ್ರಿತ ಬೆಳವಣಿಗೆಯ ವಿರುದ್ಧ ಧ್ವನಿ ಎತ್ತಿದರು.

ಬಿಬಿಟಿಸಿ ಕಾಫಿ ಎಸ್ಟೇಟ್‌ಗೆ ಸಂಬಂಧಿಸಿದ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದು, ಕಠಿಣ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈಗಾಗಲೇ ಮಾನವ-ಪ್ರಾಣಿ ಸಂಘರ್ಷ ಎದುರಿಸುತ್ತಿರುವ ಪರಿಸರ ಸೂಕ್ಷ್ಮ ವಲಯ ಮಾಲ್ದಾರೆ ವನ್ಯಜೀವಿ ವಲಯದಲ್ಲಿ ಕಾಫಿ ತೋಟವೂ ಸೇರಿದೆ. ಈ ತೋಟವನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸುವುದರಿಂದ ವನ್ಯಜೀವಿ ಸಂಘರ್ಷ ಮತ್ತಷ್ಟು ಹೆಚ್ಚುತ್ತದೆ ಎಂದು ಅವರು ಆರೋಪಿಸಿದರು.

—-ರಾಜ್ ಕುಶಾಲಪ್ಪ