ಭೂಮಿಗೆ ರಾಸಾಯನಿಕ ಗೊಬ್ಬರಗಳನ್ನು ಮಿತಿ ಮೀರಿ ಸುರಿದು ಭೂಮಿಯ ಫಲವತ್ತತೆ ಕ್ಷಾರ ಶಕ್ತಿಯನ್ನು ಹಾಳು ಮಾಡುತ್ತಿದ್ದೇವೆ.
ವಿಜಯ ದರ್ಪಣ ನ್ಯೂಸ್….
ಭೂಮಿಗೆ ರಾಸಾಯನಿಕ ಗೊಬ್ಬರಗಳನ್ನು ಮಿತಿ ಮೀರಿ ಸುರಿದು ಭೂಮಿಯ ಫಲವತ್ತತೆ ಕ್ಷಾರ ಶಕ್ತಿಯನ್ನು ಹಾಳು ಮಾಡುತ್ತಿದ್ದೇವೆ.
ಶಿಡ್ಲಘಟ್ಟ : ರೈತರಾದ ನಾವು ಹೆಚ್ಚು ಹೆಚ್ಚು ಬೆಳೆದು ಹೆಚ್ಚು ಲಾಭ ಮಾಡುವ ಧಾವಂತದಲ್ಲಿ ಭೂಮಿಗೆ ರಾಸಾಯನಿಕ ಗೊಬ್ಬರಗಳನ್ನು ಮಿತಿ ಮೀರಿ ಸುರಿದು ಭೂಮಿಯ ಫಲವತ್ತತೆ ಕ್ಷಾರ ಶಕ್ತಿಯನ್ನು ಹಾಳು ಮಾಡುತ್ತಿದ್ದೇವೆ ಎಂದು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿ ವಿಶ್ವನಾಥ್ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯಲ್ಲಿ ನಡೆದ “ವಿಕಸಿತ ಕೃಷಿ ಸಂಕಲ್ಪ ಅಭಿಯಾನ” ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ರಾಸಾಯನಿಕ ಗೊಬ್ಬರ ಹಾಕಿದ ಭೂಮಿಯಲ್ಲಿ ಬೆಳೆದ ಹಣ್ಣು ತರಕಾರಿಗಳನ್ನು ತಿಂದು ನಮ್ಮ ಆರೋಗ್ಯವನ್ನು ಕೂಡ ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದು ಆತಂಕ ಅವರು ವ್ಯಕ್ತಪಡಿಸಿದರು.
ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ ಈ ಭೂಮಿಯಲ್ಲಿ ಒಂದೇ ಒಂದು ಹಣ್ಣು ತರಕಾರಿಯನ್ನು ಬೆಳೆಯದ ಸ್ಥಿತಿಗೆ ಭೂಮಿ ತಲುಪುತ್ತದೆ ಹಾಗಾಗಿ ಈಗಿನಿಂದಲೆ ನಾವು ಸಾವಯವ ಕೃಷಿಗೆ ಮುಂದಾಗಬೇಕೆಂದು ಮನವಿ ಮಾಡಿದರು.
ಸಾವಯುವ ಕೃಷಿ ಮಾಡವುದರಿಂದ ಭೂಮಿಯ ಫಲವತ್ತತೆ ಹೆಚ್ಚುವುದಷ್ಟೆ ಅಲ್ಲ ಆ ಭೂಮಿಯಲ್ಲಿ ಬೆಳೆಯುವ ಹಣ್ಣು ಹಂಪಲು ತರಕಾರಿಗಳನ್ನು ಸೇವಿಸುವ ನಮ್ಮ ಆರೋಗ್ಯದ ದೃಷ್ಟಿಯಲ್ಲೂ ಒಳ್ಳೆಯದೆ ಎಂದು ಹೇಳಿದರು.
ಕಡಿಮೆ ವೆಚ್ಚ, ಉತ್ಕೃಷ್ಟ ಗುಣಮಟ್ಟದ ಹಣ್ಣು ತರಕಾರಿಗಳನ್ನು ಬೆಳೆಯಬಹುದು ಆದರೆ ಇದಕ್ಕೆ ತಾಳ್ಮೆ ಸಹನೆ ಮುಖ್ಯ, ಅಧಿಕಾರಿಗಳು, ತಜ್ಞರು ನೀಡುವ ನಿರ್ದೇಶನಗಳನ್ನು ಪಾಲಿಸಬೇಕು ಎಂದು ವಿವರಿಸಿದರು.
ತೋಟಗಾರಿಕಾ ವಿಜ್ಞಾನಿ ಪ್ರವೀಣ್ ಆರ್.ಕುಮಾರ್ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರ ಸಂಖ್ಯೆ ಹಾಗೂ ಪ್ರದೇಶದ ವಿಸ್ತೀರ್ಣವೂ ಹೆಚ್ಚುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಾನಾ ಬಗೆಯ ಹೂವು ಹಣ್ಣು ತರಕಾರಿ ಇನ್ನಿತರೆ ತೋಟಗಾರಿಕೆ ಬೆಳೆಗಳನ್ನು ವೈಜ್ಞಾನಿಕವಾಗಿ, ಹವಾಮಾನಕ್ಕೆ ಅನುಗುಣವಾಗಿ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಬೆಳೆದರೆ ಅಧಿಕ ಉತ್ಪನ್ನ ಮತ್ತು ಅಧಿಕ ಲಾಭವನ್ನು ಕೂಡ ಗಳಿಸಬಹುದು ಎಂದರು.
ಈ ಭಾಗದಲ್ಲಿ ಹವಾಮಾನಕ್ಕೆ ಅನುಗುಣವಾಗಿ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಬೆಳೆಯಬಹುದಾದ ತೋಟಗಾರಿಕೆ ಬೆಳೆಗಳ ವಿವರ, ಬೆಳೆಗಳ ಆರೈಕೆ, ನೀಡುವ ಗೊಬ್ಬರ, ಪ್ರಮಾಣದ ವಿವರಗಳನ್ನು ನೀಡಿದರು.
ಪ್ರಗತಿಪರ ರೈತ ಅಪ್ಪೇಗೌಡನಹಳ್ಳಿಯ ತ್ಯಾಗರಾಜ್ ಅವರು ಸುಸ್ಥಿರ ಕೃಷಿಗೆ ಸಾವಯುವ ಕೃಷಿ ಮಹತ್ವವನ್ನು ರೈತರಿಗೆ ಮನವರಿಕೆ ಮಾಡಿ ಪ್ರಮುಖವಾಗಿ ಜೀವಾಮೃತ, ಬೀಜಾಮೃತ, ಪಂಚಗವ್ಯ, ಹಸಿರೆಲೆ ಗೊಬ್ಬರದ ಮಹತ್ವ, ಮಣ್ಣು ಪರೀಕ್ಷೆ, ಪರಿಸರ ಸ್ನೇಹಿ ರೋಗ ಮತ್ತು ಕೀಟ ನಿರ್ವಹಣೆ, ಕೃಷಿ ವಿಶ್ವವಿದ್ಯಾಲಯದ ಬೀಜಗಳ ಆಯ್ಕೆ, ಬೀಜೋಪಚಾರ ಮತ್ತು ಇತರ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ರೈತರಿಗೆ ತಿಳಿಸಿಕೊಟ್ಟರು.
ಗೃಹ ವಿಜ್ಞಾನ ವಿಜ್ಞಾನಿ ಸೌಮ್ಯ ಹಿರೇಗೌಡರ್ ಮಾತನಾಡಿ, ತರಕಾರಿ ಬೆಳೆಗಳ ಕಟಾವು ಮತ್ತು ಸಂಸ್ಕರಣೆಯ ಬಗ್ಗೆ ವಿವರಿಸಿದರು. ಇದೇ ವೇಳೆ ಪ್ರಗತಿ ಪರ ರೈತ ಮುನೀಂದ್ರ ಸೇರಿದಂತೆ ಕೃಷಿ ಇಲಾಖೆ, ರೇಷ್ಮೆ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯ ಅಧಕಾರಿಗಳು ಇಲಾಖೆಯ ಯೋಜನೆಗಳ ಬಗ್ಗೆ ಮತ್ತು ಬೆಳೆ ವಿಮೆಯ ಬಗ್ಗೆ ರೈತರಿಗೆ ಮಾಹಿತಿಯನ್ನು ತಿಳಿಸಿದರು.