ಮರಣವೇ ಮಹಾ ನವಮಿ…….
ವಿಜಯ ದರ್ಪಣ ನ್ಯೂಸ್….
ಮರಣವೇ ಮಹಾ ನವಮಿ…….
ಮೊನ್ನೆ ಅಹಮದಾಬಾದಿನ ವಿಮಾನ ನಿಲ್ದಾಣದ ಬಳಿ ನಡೆದ ಬೋಯಿಂಗ್ ಡ್ರೀಮ್ ಲೈನರ್ 787 ವಿಮಾನದ 265 ಕ್ಕೂ ಹೆಚ್ಚು ಜನರ ಸಾವಿನ ದುರ್ಘಟನೆ ನಮ್ಮ ಬದುಕಿಗೆ ಹೇಗೆಲ್ಲಾ ಪಾಠವಾಗಬಹುದು……..
ಏಕೆಂದರೆ ಆಧುನಿಕ ಕಾಲದಲ್ಲಿ ಅಪಘಾತಗಳೆಂಬುದು ಬಹುತೇಕ ಸಾಮಾನ್ಯ ಸಹಜ. ಅದರಿಂದ ತಪ್ಪಿಸಿಕೊಳ್ಳುವುದು ಕಷ್ಟ. ಹೇಗೆ ನಾವು ಸುರಕ್ಷಿತೆಗಾಗಿ, ಅಧೀಕೃತವಾಗಿ ಜೀವವಿಮೆ ಮತ್ತು ಆರೋಗ್ಯ ವಿಮೆ ಮಾಡಿಸಿಟ್ಟುಕೊಳ್ಳುತ್ತೇವೆಯೋ ಹಾಗೆಯೇ ಅನಧೀಕೃತವಾಗಿ ನಮ್ಮ ಬೆನ್ನ ಹಿಂದೆಯೇ ನೆರಳಿನಂತೆ ಸಾವು ಎಂಬ ಅಂತಿಮ ಸತ್ಯವೂ ಹಿಂಬಾಲಿಸುತ್ತಿರುತ್ತದೆ. ಬದುಕಿನ ಪ್ರಯಾಣದಲ್ಲಿ ಅದೂ ಸಹ ಜೊತೆಗಾರ…….
ಅದರಲ್ಲೂ ನಾವು ವಿದೇಶಕ್ಕೆ ಹೋಗಬೇಕಾದರೆ ಸಧ್ಯದಲ್ಲಿ ಇರುವ ಅತ್ಯಂತ ಸುಲಭ, ಸುರಕ್ಷಿತ ಪ್ರಯಾಣದ ಮಾರ್ಗವೆಂದರೆ ವಾಯುಯಾನ ಮಾತ್ರ. ಸಮುದ್ರ ಮತ್ತು ರಸ್ತೆ ತೀರಾ ಅವಾಸ್ತವಿಕ. ನೀವು ಅನಿವಾರ್ಯವಾಗಿ ವಿಮಾನದಲ್ಲಿ ಅದರಲ್ಲಿ ಸಂಚರಿಸಲೇಬೇಕು ಅಂತಹ ಸಂದರ್ಭದಲ್ಲಿ ಅಪರೂಪಕ್ಕೊಮ್ಮೆ ಈ ರೀತಿಯ ಅಪಘಾತವು ಕೂಡ ಆಕಸ್ಮಿಕ ಮತ್ತು ಅನಿರೀಕ್ಷಿತವೇ ಆದರು ಸಹಜವೇ ಆಗಿದೆ……
ಈಗ ಮುಖ್ಯ ವಿಷಯವೇನೆಂದರೆ , ಆ ವಿಮಾನ ಅಪಘಾತದಲ್ಲಿ ಸತ್ತ ಸುಮಾರು 265 ಕ್ಕೂ ಹೆಚ್ಚು ಜನರ ಕೌಟುಂಬಿಕ ಸಂಬಂಧಗಳು, ಪ್ರಯಾಣದ ಉದ್ದೇಶ, ಅವರ ಅವಲಂಬಿತರ ಭವಿಷ್ಯದ ಬದುಕು, ಮಡಿದ ಜನರ ಕನಸುಗಳು ಇವುಗಳನ್ನು ಮಾಧ್ಯಮಗಳ ಮೂಲಕ ನೋಡುತ್ತಿದ್ದರೆ, ಒಬ್ಬೊಬ್ಬರಿಗೆ ಒಂದೊಂದು ರೀತಿಯ ಭಾವನೆಗಳು ಉಕ್ಕುತ್ತವೆ. ಒಬ್ಬರಿಗೆ ಅಪ್ಪ ಇಲ್ಲವಾದರೆ, ಇನ್ನೊಬ್ಬರಿಗೆ ಅಮ್ಮ ಇಲ್ಲ, ಇನ್ನೊಬ್ಬರಿಗೆ ಮಗಳಿಲ್ಲ, ಮತ್ತೊಬ್ಬರಿಗೆ ಅಣ್ಣ ತಂಗಿ ಅಕ್ಕ ತಮ್ಮ ಇಲ್ಲ, ಮತ್ತೊಬ್ಬರಿಗೆ ಮೊಮ್ಮಗ ಇಲ್ಲ, ಇನ್ಯಾರಿಗೂ ಅಜ್ಜ ಅಜ್ಜಿ ಇಲ್ಲ, ಮತ್ಯಾರದೋ ಇಡೀ ಕುಟುಂಬವೇ ಇಲ್ಲ, ಇನ್ಯಾರೋ ತಾಯಿ ಕಾಣಲು ಹೋದ ಮಗಳಿಲ್ಲ, ಮಗಳು ಕಾಣಲು ಹೋದ ತಂದೆ ಇಲ್ಲ, ಹೆಂಡತಿ ಕಾಣಲು ಹೋದ ಗಂಡ ಇಲ್ಲ, ಗಂಡ ಕಾಣಲು ಹೋದ ಹೆಂಡತಿ ಇಲ್ಲ, ಮತ್ಯಾರೋ ಹೆಂಡತಿಯ ಚಿತಾಭಸ್ಮ ವಿಸರ್ಜಿಸಲು ಬಂದು ಆತನೇ ಇಲ್ಲ ಹೀಗೆ ನೂರಾರು ವ್ಯಥೆಗಳು……
ಇದರಿಂದ ಕೆಲವರಿಗೆ ನೋವಾಗಬಹುದು, ಕೆಲವರಿಗೆ ದುಃಖವಾಗಬಹುದು, ಕೆಲವರಿಗೆ ಆಘಾತವಾಗಬಹುದು, ಕೆಲವರಿಗೆ ಭಯವಾಗಬಹುದು, ಕೆಲವರಿಗೆ ಮಾನಸಿಕ ಒತ್ತಡ ಹೆಚ್ಚಾಗಬಹುದು, ಕೆಲವರಿಗೆ ವೈರಾಗ್ಯ ಮೂಡಬಹುದು, ಕೆಲವರಿಗೆ ಬದುಕಿನ ನಶ್ವರತೆ ಆವರಿಸಬಹುದು, ಕೆಲವರಿಗೆ ಸಂಬಂಧಗಳ ಪ್ರಾಮುಖ್ಯತೆ ಅರಿವಾಗಬಹುದು, ಕೆಲವರಿಗೆ ತಮ್ಮ ತಮ್ಮ ಗೆಳೆಯರು, ನೆಂಟರ ನೆನಪಾಗಬಹುದು, ಹಲವರಿಗೆ ಅನಾಥ ಪ್ರಜ್ಞೆ ಕಾಡಬಹುದು, ಇನ್ನೂ ಕೆಲವರಿಗೆ ಈ ರೀತಿಯ ಘಟನೆ ನಮಗೇ ಆದರೆ ಏನಾಗಬಹುದು ಎಂದೂ ಕಾಡಬಹುದು, ನಮ್ಮ ಹತ್ತಿರದವರು ಹೀಗೆಯೇ ಇಲ್ಲವಾದರೆ ಹೇಗಾಗಬಹುದು ಎನ್ನುವ ಕಲ್ಪನೆಗೂ ಜಾರಬಹುದು……
ಸಾಮಾನ್ಯವಾಗಿ ರಸ್ತೆ, ರೈಲು, ಅಗ್ನಿ, ಪ್ರವಾಹ, ಭೂಕಂಪ, ಸಾಂಕ್ರಾಮಿಕ ರೋಗ ಮುಂತಾದ ಅವಘಡಗಳು ಆಗಾಗ ನಡೆಯುತ್ತಲೇ ಇರುತ್ತದೆ. ಇದರಿಂದ ನಾವು ಕಲಿಯಬಹುದಾದ ಬಹುದೊಡ್ಡ ಪಾಠವೆಂದರೆ, ಎಲ್ಲಾ ಸಾಧ್ಯತೆಗಳನ್ನೂ ಒಳಗೊಂಡಿರುವ, ಬದುಕಿನಲ್ಲಿ ಅದನ್ನು ಸಹಜವಾಗಿ ಸ್ವೀಕರಿಸುವ ಸ್ಥಿತಪ್ರಜ್ಞ ಮನಸ್ಥಿತಿ. ಅಂದರೆ ಸಾವು ನೋವುಗಳು ಬದುಕಿನ ಅತ್ಯಂತ ಸ್ವಾಭಾವಿಕ, ಅನಿವಾರ್ಯ ವಿಧಿ. ಕಾಲ ಮತ್ತು ಸಮಯ ಮಾತ್ರ ಎಷ್ಟು ಮತ್ತು ಯಾವಾಗ ಎಂಬುದಷ್ಟೇ ನಿರ್ಧಾರವಾಗಬೇಕಾಗಿರುತ್ತದೆ……
ಇಂತಹ ಸಂದರ್ಭದಲ್ಲಿ ಒಂದಷ್ಟು ಜನ ಹಿಂದೆ, ಮತ್ತೊಂದಿಷ್ಟು ಜನ ಮುಂದೆ, ಕೆಲವೊಂದಿಷ್ಟು ಜನ ನಮ್ಮೊಂದಿಗೆ ಸಾಯುತ್ತಲೇ ಇರುತ್ತಾರೆ. ಸತ್ತವರು ಅಪರಿಚಿತರಾದರೆ ಒಂದಷ್ಟು ನಿರ್ಲಕ್ಷ್ಯ, ಸತ್ತವರು ಪರಿಚಿತರಾದರೆ ಸಣ್ಣಮಟ್ಟದ ವಿಷಾದ, ಸತ್ತವರು ನಮ್ಮವರೇ ಆದರೆ ಕೆಲದಿನಗಳ ದುಃಖ, ಮತ್ತೆ ಎಂದಿನಂತೆ ಸಹಜ ಸ್ಥಿತಿ. ನಮ್ಮ ಕರ್ತವ್ಯ ನೆನಪು ಮಾಡಿಕೊಂಡು ಮುನ್ನಡೆಯಬೇಕು. ಜೊತೆಗೆ ಸಾವು ಸದಾ ನಮ್ಮ ಬೆನ್ನ ಹಿಂದೆ ಇದೆ ಎಂಬ ಭಾವದೊಡನೆ ನಮ್ಮೊಳಗಿನ ಮಾನವೀಯತೆಯನ್ನು ಸದಾ ಜೀವಂತವಾಗಿಟ್ಟುಕೊಳ್ಳಬೇಕು…..
ತುಂಬಾ ಭ್ರಷ್ಟರಾಗಿದ್ದರೆ ಅದನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು. ತುಂಬಾ ಜಾತಿ ಧರ್ಮದ ಅಂದಾಭಿಮಾನಿಗಳಾಗಿದ್ದರೆ ಅದನ್ನೂ ಕಡಿಮೆ ಮಾಡಿಕೊಳ್ಳಬೇಕು. ಸಂಬಂಧಗಳ ಬಗ್ಗೆ ತೀವ್ರ ಭಾವನೆಗಳನ್ನು ಬೆಳೆಸಿಕೊಂಡಿದ್ದರೆ ಆ ತೀವ್ರತೆ ಅಥವಾ ಗಾಢತೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಮನೆ, ಆಸ್ತಿ, ವಾಹನ ಮುಂತಾದವುಗಳ ಬಗ್ಗೆ ಅತಿಯಾದ ಮೋಹವಿದ್ದರೆ ಅದನ್ನೂ ಕಡಿಮೆ ಮಾಡಿಕೊಳ್ಳಬೇಕು. ಒಟ್ಟಿನಲ್ಲಿ ಒಂದಷ್ಟು ಉದಾರವಾದ, ವಿಶಾಲವಾದ, ಸಮಗ್ರವಾದ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಆಗ ನಮಗೆ ಆ ಘಟನೆ ಆದಾಗ ಆಗಬಹುದಾದ ನೋವಿನ ತೀವ್ರತೆ ಕಡಿಮೆಯಾಗುತ್ತದೆ…..
ನಾವು ಎಷ್ಟು ಹೆಚ್ಚು ನೋವನ್ನು ಅನುಭವಿಸುತ್ತೇವೆಯೋ ಅಷ್ಟರಮಟ್ಟಿಗೆ ನಾವಿನ್ನು ಅಜ್ಞಾನಿಗಳು ಎಂದೇ ಭಾವಿಸಬೇಕು. ನೋವಿನ ತೀವ್ರತೆ ಕಡಿಮೆಯಾದರೆ ನಮ್ಮಲ್ಲೂ ಒಂದಷ್ಟು ಅರಿವು ಉಂಟಾಗಿದೆ ಎಂದು ಅರ್ಥೈಸಿಕೊಳ್ಳಬಹುದು. ಏಕೆಂದರೆ ಸಾವು ಬಹುತೇಕ ನಮ್ಮ ವ್ಯಾಪ್ತಿಗೆ ಮೀರಿದ್ದು. ಅದಕ್ಕಾಗಿ ಚಿಂತಿಸಿ ಫಲವಿಲ್ಲ. ಆದ್ದರಿಂದ ಈ ರೀತಿಯ ಆಘಾತಗಳು ನಮ್ಮನ್ನು ಹೆಚ್ಚು ಭಾದಿಸದಂತೆ ಕಾಪಾಡಿಕೊಳ್ಳುವ ಮನಸ್ಥಿತಿ ಸಾಧ್ಯವಾದಷ್ಟು ಬೆಳೆಸಿಕೊಳ್ಳೋಣ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451..Watsapp)
9844013068……