ಸಾಮಾಜಿಕ ಹಾಗು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲು ಗೊಂಬೆಹಬ್ಬ
ವಿಜಯ ದರ್ಪಣ ನ್ಯೂಸ್……
ಮೈಸೂರಿನ ಅರಮನೆ ಸಂಪ್ರದಾಯವನ್ನು ಅನುಸರಿಸಿ
ಸಾಮಾಜಿಕ ಹಾಗು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲು ಗೊಂಬೆಹಬ್ಬ
ಶಿಡ್ಲಘಟ್ಟ : ಆಶ್ವಯುಜ ಶುದ್ಧ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ನಡೆಯುವ “ದಸರಾ ಹಬ್ಬ “ದ ಸಂದರ್ಭದಲ್ಲಿ ಮೈಸೂರಿನ ಅರಮನೆ ಸಂಪ್ರದಾಯವನ್ನು ಅನುಸರಿಸಿ ಸಾಮಾಜಿಕ ಹಾಗು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲು ಗೊಂಬೆಹಬ್ಬವನ್ನು ತಾಲ್ಲೂಕಿನಲ್ಲಿಯೂ ಹಲವಾರು ಮಂದಿ ಆಚರಿಸುವರು.
ತಾಲ್ಲೂಕಿನ ಮೇಲೂರಿನ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಕೆ.ರವಿ ಪ್ರಸಾದ್ ಅವರ ಮನೆಯಲ್ಲಿ ಕುಟುಂಬ ಸಮೇತ , ಪುರಾಣ ಕಥೆಗಳನ್ನು ಪುನಃ ಸೃಷ್ಟಿಸುವ ರೀತಿಯಲ್ಲಿ, ದಸರಾ ಗೊಂಬೆಗಳ ಮೂಲಕ ನಮ್ಮ ನಾಡಿನ ಜನಪದ, ಸಾಂಸ್ಕೃತಿಕ ವೈವಿಧ್ಯತೆಯನ್ನು ಸಾರುತ್ತಾರೆ.
ಸುಮಾರು ಮೂರು ತಲೆಮಾರುಗಳಿಂದ ಇವರ ಮನೆಯಲ್ಲಿನ ಈ ದಸರಾ ಗೊಂಬೆ ಹಬ್ಬದ ಆಚರಣೆ ನಡೆಸಿಕೊಂಡು ಬರಲಾಗಿದೆ, ವೈವಿಧ್ಯಮಯ ಗೊಂಬೆಗಳು, ಅವನ್ನು ಜೋಡಿಸಿಟ್ಟ ರೀತಿ ಅತ್ಯಂತ ಆಕರ್ಷಕವಾಗಿದೆ.
ದಸರಾ ಬಂತೆಂದರೆ ಗೊಂಬೆ ಕೂರಿಸುವ ಸಂಭ್ರಮ,
ಅಟ್ಟವೇರಿರುವ ಗೊಂಬೆ ತೆಗೆಯುವ ಉತ್ಸಾಹ, ಆ ಬೊಂಬೆಗಳಿಗೆ ಉಡುಗೆ ತೊಡಿಸಿ ಮಾಡುವ ಶೃಂಗಾರ, ಹಂತ ಹಂತವಾಗಿ ಬೊಂಬೆ ಜೋಡಿಸುವ ಸಡಗರ.
ಪಟ್ಟದ ಗೊಂಬೆ, ಅಮ್ಮನವರ ಮೂರ್ತಿ, ಬೆಣಚುಕಲ್ಲಿನ ಗಣಪತಿ, ಕಾಮಧೇನು, ಹುತ್ತದಲ್ಲಿ ಮಲಗಿರುವ ವೆಂಕಟೇಶ್ವರನಿಗೆ ಹಾಲು ನೀಡುತ್ತಿರುವ ಗೋಮಾತೆ, ರಾಘವೇಂದ್ರರು, ದಶಾವತಾರ, ಮುವ್ವತ್ತು ವರ್ಷಗಳ ಹಿಂದಿನ ರಾಮ ಮತ್ತು ಕೃಷ್ಣರ ಅಪರೂಪದ ಮೂರ್ತಿಗಳು, ಶೆಟ್ಟಪ್ಪ ಶೆಟ್ಟಮ್ಮ ಅವರ ಅಂಗಡಿಗೆ ದಿನಸಿ ತರುವ ಗಾಡಿ, ಹಣ್ಣು ತರುವವರು, ಈಶ್ವರನ ಅಭಿಷೇಕಕ್ಕೆ ಗಣಪತಿಯ ವಾದ್ಯಗೋಷ್ಠಿ, ರಾಮ ಗುಹನೊಂದಿಗೆ ವನವಾಸಕ್ಕೆ ತೆರಳುದ ದೃಶ್ಯ, ಶಬರಿ ರಾಮನಿಗೆ ಹಣ್ಣು ತಿನ್ನಿಸುವುದು, ರಾಮನ ತೊಡೆಯ ಮೇಲೆ ಮಲಗಿದ ಲಕ್ಷ್ಮಣ, ಸಂಜೀವಿನಿ ತರುತ್ತಿರುವ ಹನುಮಂತ, ಬೆಣ್ಣೆ ಕದಿಯುವ ಕೃಷ್ಣ, ಗೋಪಿಕಾ ಸ್ತ್ರೀಯರ ಜತೆ ಆಡುತ್ತಿರುವ ಕೃಷ್ಣ, ಮದುವೆ, ಮದುವೆ ಊಟ, ಹೆಣ್ಣಿನ ದೈನಂದಿನ ಕಾಯಕ, ಒಂಟೆ, ಕುದುರೆ, ಚನ್ನಪಟ್ಟಣದ ಬೊಂಬೆಗಳು, ವಿವಿಧ ದೇಶವಾಸಿಗಳ ದಿರಿಸುಗಳು, ಯೋಧರು, ಬುಡಕಟ್ಟು ಜನರು, ಮೈಸೂರು ಅರಮನೆ, ಬದರಿನಾಥ, ಕೇದಾರನಾಥ, ಅಯೋಧ್ಯೆಯ ಬಾಲರಾಮ, ಜಟಾಯು ಮತ್ತು ಶ್ರೀರಾಮರ ಮಿಲನ, ವಿವಿಧ ಕಸುಬುಗಳ ಜನರು, 82 ರೀತಿಯ ಕಾರುಗಳ ಬೊಂಬೆಗಳು, 42 ವಿಧದ ಗಣೇಶ ಮೂರ್ತಿಗಳು, ಗದ್ದೆಯಲ್ಲಿ ಬತ್ತದ ಪೈರು ಕೊಯ್ದು ಮಾಡುತ್ತಿರುವ ರೈತ ಕುಟುಂಬ, ಪುರಿ ಜಗನ್ನಾಥ, ಹೀಗೆ ಗೊಂಬೆಗಳನ್ನು ವಿಶಿಷ್ಟವಾಗಿ ಜೋಡಿಸಿದ್ದಾರೆ.
“ನಮ್ಮ ತಲೆಮಾರಿನ ಈ ಗೊಂಬೆಗಳೊಂದಿಗಿನ ನಂಟು, ಪ್ರೀತಿ ನನ್ನ ಸೊಸೆ ದಿವ್ಯಾ ಮತ್ತು ಮೊಮ್ಮಕ್ಕಳಾದ ಕುಶಲ ಮತ್ತು ಚಿರಾಗ್ ಅವರಿಗೂ ಮುಂದುವರೆದಿರುವುದು ಸಂತಸ ತಂದಿದೆ ಈ ಬಾರಿ ಆಸ್ಟ್ರೇಲಿಯಾದ ಮೆಲ್ಲೋರ್ನ್ ನಿಂದ ಮಗಳು ಸೌಭಾಗ್ಯಲಕ್ಷ್ಮಿ ಬಂದಿರುವುದು ಹಬ್ಬಕ್ಕೆ ಮತ್ತಷ್ಟು ಕಳೆಕಟ್ಟಿದೆ”
ನಮ್ಮ ಮನೆಯಲ್ಲಿ ಹೆಣ್ಣುಮಕ್ಕಳು ಗೊಂಬೆ ಜೋಡಿಸಿಟ್ಟಿದ್ದು, ಮನೆಗೆ ಬಂದವರಿಗೆ ಗೌರವದಿಂದ ಆದರಿಸಿ ಹಬ್ಬದ ಸಿಹಿ ತಿಂಡಿ ನೀಡುತ್ತಾರೆ ಎಂದು ಹಿರಿಯರಾದ ಅಶ್ವತ್ಥಮ್ಮ ಅವರು ಹೇಳಿದರು.
“ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವಂತಹ ಸಂಪ್ರದಾಯದಲ್ಲಿ ದಸರಾ ಹಬ್ಬವು ಕೂಡ ಒಂದು ,ದಸರಾ ಸಂದರ್ಭದಲ್ಲಿ ಹಲವಾರು ವರ್ಷಗಳಿಂದಲ್ಲೂ ಗೊಂಬೆಗಳನ್ನಿಡುವ ಸಂಪ್ರದಾಯ ನಮ್ಮನೆಯಲ್ಲಿದ್ದು ,ನಮ್ಮಜ್ಜಿ ಗೊಂಬೆ ಇಡುವುದನ್ನು ನಮಗೆ ಕಲಿಸಿಕೊಟ್ಟರು ,ಮಕ್ಕಳು ಜೊತೆಗೂಡುತ್ತಾರೆ ಎಲ್ಲರೂ ಕಲೆತು ಗೊಂಬೆಗಳನ್ನು ಜೋಡಿಸುವ ಸಂಭ್ರಮ ಸದಾ ನೆನಪಿನಲ್ಲಿ ಉಳಿಯುತ್ತದೆ” ಎಂದು ಮೇಲೂರು ಗ್ರಾಮ ಪಂಚಾಯಿತಿ ಸದಸ್ಯ ಎಂ.ಕೆ.ರವಿಪ್ರಸಾದ್ ಅವರು ವಿವರಿಸಿದರು.
ಶಿಡ್ಲಘಟ್ಟ ನಗರದ ಗೌಡರಬೀದಿಯ ಲತಾ ಮಂಜುನಾಥ್ ಅವರ ಮನೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ವಿವಿಧ ರೀತಿಯ ಗೊಂಬೆಗಳನ್ನು ಹೇಮನಂದಿನಿ ಮತ್ತು ಪದ್ಮಪ್ರಿಯಾ ಜೊತೆಗೂಡಿ ಜೋಡಿಸಿಟ್ಟಿರುವರು.
ಶರನ್ನವರಾತ್ರಿಯ ಮೊದಲ ದಿನದಿಂದ ಬೊಂಬೆ ಪ್ರದರ್ಶನ ನಿರಂತರವಾಗಿ ಒಂಬತ್ತು ದಿನವಿರುತ್ತದೆ, ಪಾಡ್ಯದಿಂದ ಪ್ರಾರಂಭವಾಗಿ ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಠಮಿ, ನವಮಿ ತನಕ ಒಂಬತ್ತು ದಿನಗಳು ಪೂಜೆ ನಡೆಸುತ್ತೇವೆ,ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪುರಾಣದ ಪರಿಚಯವನ್ನು ಗೊಂಬೆಗಳ ಮೂಲಕ ಮಾಡಿಕೊಡುವ ಪ್ರಯತ್ನವಿದು ಎಂದು ನಗರದ ದಿವ್ಯಾ ತಿಳಿಸಿದರು.